Advertisement

ಪ್ಲಾಸ್ಟಿಕ್‌ ರಹಿತ ನಾಗರಪಂಚಮಿ ಸಾಧ್ಯವೆ? ಹೀಗೊಂದು ಚಿಂತನೆ…

08:15 AM Jul 26, 2017 | Team Udayavani |

– ಸಾಮಗ್ರಿಗಳನ್ನು ಪ್ಲಾಸ್ಟಿಕ್‌ ರಹಿತವಾಗಿ ಸಂಗ್ರಹಿಸಲು ಪ್ರಯತ್ನಿಸೋಣ

Advertisement

– ಇಷ್ಟಾಗಿಯೂ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾದರೆ ವಿಲೇವಾರಿ ಮಾಡೋಣ

ಉಡುಪಿ: ಊಟ ಎಲ್ಲರಿಗೆ ಬೇಕಾದರೂ ಕೃಷಿ ಮಾಡಬೇಕೆನ್ನಿಸುವುದಿಲ್ಲ, ನೀರು ಎಲ್ಲರಿಗೆ ಬೇಕಾದರೂ ಅದಕ್ಕೆ ಅಗತ್ಯವಾದ ಅರಣ್ಯ ರಕ್ಷಿಸಬೇಕೆಂದು ಹಂಬಲಿಸುವುದಿಲ್ಲ, ಪಾಲು ಎಲ್ಲರಿಗೂ ಬೇಕು, ಆದರೆ ಅದನ್ನು ಪಾಲಿಸಬೇಕೆಂಬ ಛಲ ಇರುವುದಿಲ್ಲ, ನೆರಳು, ಶುದ್ಧ ಗಾಳಿ ಯಾರಿಗೆ ಬೇಡ? ಆದರೆ ಮರಗಳನ್ನು ರಕ್ಷಿಸಬೇಕೆಂಬ ಹಂಬಲ ಇರುವುದಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ. ಇದರ ಪಟ್ಟಿಗೆ ಇನ್ನೂ ಕೆಲವನ್ನು ಸೇರಿಸಬಹುದು. ಪ್ಲಾಸ್ಟಿಕ್‌ ಕೆಟ್ಟದ್ದೆಂದು ಯಾರಿಗೆ ಗೊತ್ತಿಲ್ಲ? ಆದರೆ ಅದನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಬಹುದೆಂದೂ ಚಿಂತಿಸುವುದಿಲ್ಲ. ನಾಗನ ಬನ ಹೇಗಿರಬೇಕೆಂದು ಗೊತ್ತಿದ್ದರೂ ಪುಂಖಾನುಪುಂಖ ಭಾಷಣ ಮಾಡಿದರೂ ಅದನ್ನು ಹಾಗೆ ಇರಲು ಬಿಡುತ್ತಿಲ್ಲ.

ಶ್ರಾವಣ ಮಾಸ ಆರಂಭವಾಗಿದೆಯಷ್ಟೆ. ನಾಡಿನ ಪ್ರಥಮ ಹಬ್ಬನಾಗರ ಪಂಚಮಿ ಗುರುವಾರ ನಡೆಯುತ್ತಿದೆ. ಜನರು ಸೇರುತ್ತಿದ್ದಾರೆಂದರೆ ಯಾವುದನ್ನಾದರೂ ನಿರೀಕ್ಷಿಸದೆ ಇರಬಹುದು, ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ನಿರೀಕ್ಷಿಸದೆ ಇರಲು ಸಾಧ್ಯವಿಲ್ಲ. ಜನಜಂಗುಳಿಗೂ ಅಂದರೆ ಹಬ್ಬಕ್ಕೂ ಪ್ಲಾಸ್ಟಿಕ್‌ಗೂ ಅಷ್ಟೊಂದು ಗಾಢ ಸ್ನೇಹ ಏರ್ಪಟ್ಟಿದೆ ಅಥವಾ ಪರೋಕ್ಷವಾಗಿ ಸರಕಾರ, ಪ್ರತ್ಯಕ್ಷವಾಗಿ ಜನರು ಅದರ ಗಂಭೀರತೆಯನ್ನು ಮರೆತು ಸಂಬಂಧವನ್ನು ಏರ್ಪಡಿಸಿಕೊಂಡಿದ್ದಾರೆ. ನಾಗರ ಪಂಚಮಿ ಎಂದಾಕ್ಷಣ ಮನೆ ತೋಟದಲ್ಲಿ ಬೆಳೆದ ಎಳನೀರು, ಮನೆಯ ದನದ ಹಾಲು, ಮನೆಯಲ್ಲಿ ಸಂಗ್ರಹಿಸಿದ ಅರಸಿನ ಹುಡಿ, ತಮ್ಮ ಗದ್ದೆಯಲ್ಲಿ ಬೆಳೆದ ಅಕ್ಕಿ, ತಮ್ಮ ಹಿತ್ತಲಲ್ಲಿ ಬೆಳೆದ ಬಾಳೆ ಹಣ್ಣು, ತಮ್ಮದೇ ಪರಿಸರದಲ್ಲಿ ಉಚಿತವಾಗಿ ಬೆಳೆದು ನಿಂತ ಕೇದಗೆ ಹೂವು… ಹೀಗೆ ಹೇಳುವಾಗ ‘ತಮ್ಮದೇ’ ಅನ್ನುವ ಶಬ್ದವನ್ನು ಮರೆಮಾಚಿ ಉಳಿದಂತೆ ಮುಂದೆ ಬರುವ ವಸ್ತುಗಳ ಕಡೆಗೇ ಗಮನ ಹರಿಯುತ್ತದೆಯಲ್ಲವೆ? ಒಂದಾನೊಂದು ಕಾಲದಲ್ಲಿ ಎಂದು ಹೇಳುವುದಕ್ಕಿಂತ ಕೆಲವೇ ವರ್ಷಗಳ ಹಿಂದೆ ಇದೆಲ್ಲ ಸಾಮಗ್ರಿಗಳಲ್ಲಿ ಸ್ವಾವಲಂಬಿಗಳಾಗಿದ್ದೆವು. ಈಗ ಕರೆನ್ಸಿ ನೋಟುಗಳನ್ನು ಕೊಟ್ಟು ಸಾಮಗ್ರಿಗಳನ್ನು ಖರೀದಿಸುವಲ್ಲಿ ಶಕ್ತರಾಗಿದ್ದೇವೆ. ಮುಂದೆ ಮುಂದೆ ಹೋದಂತೆ ನೋಟುಗಳಿವೆ, ಸಾಮಗ್ರಿಗಳೇ ಇಲ್ಲವೆಂಬ ಸ್ಥಿತಿಗೆ ಬರುವವರೆಗೆ ಈ ಸಾಮಗ್ರಿಗಳ ಸ್ವಾವಲಂಬಿತನದ ಮಹತ್ವ ತಿಳಿವಳಿಕೆಗೆ ಬರುವುದಿಲ್ಲ. 

ಈ ಎಲ್ಲ ಸಾಮಗ್ರಿಗಳನ್ನು ನಾವು ಅಂಗಡಿಗಳಿಂದ ಖರೀದಿಸುತ್ತಿದ್ದೇವೆ. ಇವುಗಳನ್ನೆಲ್ಲ ಖರೀದಿಸುವಾಗ ಅನಗತ್ಯವಾದ ಪ್ಲಾಸ್ಟಿಕ್‌ಗಳನ್ನೂ ಖರೀದಿಸುತ್ತಿದ್ದೇವೆ. ಇವುಗಳನ್ನೆಲ್ಲ ಕೊಂಡೊಯ್ದು ನಾಗನ ಬನಕ್ಕೆ ಕೊಟ್ಟರೆ ಸಾಕು ಎಂಬ ಪ್ರಜ್ಞೆ ಮಾತ್ರ ಇದೆ. ಇವೆಲ್ಲ ಪ್ಲಾಸ್ಟಿಕ್‌ ತ್ಯಾಜ್ಯ ಏನಾಗುತ್ತದೆ? ಎಲ್ಲ ಕಡೆಯ ತ್ಯಾಜ್ಯ ಸೇರಿದರೆ ಏನಾದೀತು ಎಂಬ ಬಗ್ಗೆ ಕಿಂಚಿತ್‌ ಪ್ರಜ್ಞೆಯೂ ಇಲ್ಲ. ಇಷ್ಟು ಪ್ರಜ್ಞೆ ಬೆಳೆದರೂ ನಮ್ಮೊಳಗೆ ಸಾಕಷ್ಟು ಬೆಳವಣಿಗೆಯಾಗಿದೆ ಎಂದರ್ಥ.

Advertisement

ಸ್ವತ್ಛತೆಯಿಂದ ಸ್ವಾವಲಂಬನೆ ಕಡೆಗೆ…
ಎರಡು ವರ್ಷಗಳಿಂದ ‘ಉದಯವಾಣಿ’ ನಾಗರಪಂಚಮಿ ಹಬ್ಬದ ಸಮಯದಲ್ಲಿ ಸ್ವಚ್ಛತಾ ಅಭಿಯಾನದ ಬಗೆಗೆ ವಿಶೇಷ ಸುದ್ದಿ ಮಾಡಿದಾಗ ಜನರು ಜಾಗೃತರಾದರು. ತಮ್ಮ ನಾಗನ ಬನಗಳಲ್ಲಿ ಶೇಖರವಾದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕಾರ್ಯಕರ್ತರು ಸ್ವಯಂ ಆಸಕ್ತಿ ತಾಳಿದರು. ಕಳೆದ ವರ್ಷ ನಿಂತಲ್ಲಿಯೇ ಈ ವರ್ಷವೂ ನಿಂತರೆ ಬೆಳವಣಿಗೆ ಆಗಲಿಲ್ಲ ಎಂಬ ಅರ್ಥ ಬರುತ್ತದೆ. ಈ ವರ್ಷ ಒಂದು ಹಂತಕ್ಕೆ ಮುಂದೆ ಹೋಗೋಣ. ಸಾಮಗ್ರಿಗಳನ್ನು ಖರೀದಿಸುವಾಗಲೇ ಪ್ಲಾಸ್ಟಿಕನ್ನು ಹೊರದೂಡಲು ಸಾಧ್ಯವೆ ಎಂದು ಪ್ರಯತ್ನಿಸಬೇಕು. ಎಣ್ಣೆಯಂತಹ ದ್ರವ ಪದಾರ್ಥಗಳನ್ನು ಮರುಬಳಸುವ ಬಾಟಲಿಗಳಲ್ಲಿ ಸಂಗ್ರಹಿಸಿ ಮರುಬಳಸಬೇಕು. ಎಲ್ಲ ಸಾಮಗ್ರಿಗಳನ್ನು ಕೊಂಡೊಯ್ಯಲು ಬೀಣಿ ಚೀಲ/ ವಸ್ತ್ರದ ಚೀಲಗಳನ್ನು ಬಳಸಬಹುದು. ಉಳಿದುದಕ್ಕೆ ಕಾಗದದ ಪೊಟ್ಟಣಗಳನ್ನು ಬಳಸಬಹುದು. ಪ್ಲಾಸ್ಟಿಕ್‌ನ್ನು ಬಳಸದೆ ನಿರ್ವಾಹವೇ ಇಲ್ಲವೆಂಬ ಸ್ಥಿತಿ ಬಂದರೆ ಆ ಸಾಮಗ್ರಿಗಳನ್ನು ಬಿಟ್ಟೇ ಬಿಡುವ ನಿರ್ಧಾರ ತಳೆಯಬಹುದು. ಏಕೆಂದರೆ ಆ ವಸ್ತುವಿಲ್ಲದೆಯೂ ನಾಗರ ಪಂಚಮಿ ಹಬ್ಬ ಆಚರಿಸಿದರೆ ದೋಷವೇನೂ ಆಗದು. ಇಷ್ಟೆಲ್ಲ ಪ್ರಯತ್ನದ ನಡುವೆಯೂ ಸಂಗ್ರಹವಾದ ತ್ಯಾಜ್ಯಗಳನ್ನು ಕಳೆದ ವರ್ಷದಂತೆ ವಿಲೇವಾರಿ ಮಾಡಲು ಮರೆಯಬಾರದು. 

ಈ ವರ್ಷ ಇಷ್ಟರಮಟ್ಟಿಗೆ ಒಂದು ಹೆಜ್ಜೆ ಮುಂದೆ ಹೋದರೆ, ಮುಂದಿನ ವರ್ಷಗಳಲ್ಲಿ ನಾಗನ ಬನಗಳಲ್ಲಿ ಬೆಳೆದ ಮರಗಳನ್ನು ಕಡಿಯದೆ ಇರುವ, ಪರಿಸರದಲ್ಲಿ ದೊಡ್ಡ ದೊಡ್ಡ ಮರಗಳನ್ನು ಕಂಡಾಗ ಒಂದು ಕ್ಷಣ ಅಲ್ಲಿ ನಿಂತು ಅದು ಸಮಾಜಕ್ಕೆ ಸಲ್ಲಿಸಿದ ಕೊಡುಗೆ, ಅದರ ಇತಿಹಾಸವನ್ನು ಅವಲೋಕಿಸುವ, ಅವುಗಳ ಉತ್ತರಾಧಿಕಾರಿ ಗಿಡಗಳನ್ನು ನೆಡುವ, ಸಾಧ್ಯವಾದಷ್ಟು ಎಲ್ಲ ಸಾಮಗ್ರಿಗಳನ್ನು ತಮ್ಮದೇ ಜಾಗದಲ್ಲಿ ಬೆಳೆದು ಸ್ವಾವಲಂಬಿಗಳಾಗುವ ಪ್ರಜ್ಞೆ ಬೆಳೆಸಿಕೊಳ್ಳಲು ಪ್ಯಯತ್ನಿಸಬೇಕು. ಈ ವರ್ಷವೇ ಇವುಗಳಿಗೆ ಮುನ್ನುಡಿ ಬರೆದರೂ ಕೇವಲ ನಾಗರ ಪಂಚಮಿ ಸಾಧನೆಯಲ್ಲ, ಪ್ರಕೃತಿ- ವಿಶ್ವ ಸಾಧನೆಯಲ್ಲಿ ಬಹಳ ದೊಡ್ಡ ಹೆಜ್ಜೆ ಇಟ್ಟಂತೆ….

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next