ಚೆನ್ನೈ: ಮನೆಯವರು ಇಷ್ಟಪಟ್ಟ ವರನನ್ನು ತನ್ನ ಸ್ನೇಹಿತರು ಒಪ್ಪದೆ ಇರುವ ಕಾರಣಕ್ಕೆ 20ರ ಹರೆಯದ ಯುವತಿಯೊಬ್ಬಳು ಮದುವೆ ರದ್ದು ಮಾಡಿ ತನ್ನ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ತಮಿಳುನಾಡಿನ ರಾಣಿಪೇಟ್ನಲ್ಲಿ ಶುಕ್ರವಾರ(ಡಿ.1 ರಂದು) ನಡೆದಿದೆ.
ಯುವತಿಯ ಪೋಷಕರು, ತನ್ನ ಮಗಳಿಗೆ 30 ವರ್ಷದ ಸೋದರ ಸಂಬಂಧಿಯನ್ನು ಇಷ್ಟಪಟ್ಟು ಮದುವೆ ಮಾಡಿಸಲು ಸಿದ್ದರಾಗಿದ್ದರು. ಮೊದಲು ಯುವತಿ ಅಪ್ಪ – ಅಮ್ಮ ನೋಡಿದ ವರ ಎನ್ನುವ ಕಾರಣಕ್ಕೆ ಮದುವೆಗೆ ಒಪ್ಪಿದ್ದಾಳೆ. ಅದರಂತೆ ನ.29 ರಂದು ಗ್ರಾಮದ ದೇವಸ್ಥಾನವೊಂದರಲ್ಲಿ ಮದುವೆ ನಿಗದಿಪಡಿಸಲಾಗಿತ್ತು.
ಇನ್ನೇನು ಮದುವೆಗೆ ಎರಡು ದಿನ ಇರುವಾಗ (ನವೆಂಬರ್ 27 ರಂದು) ಯುವತಿ ತನಗೆ ಈ ಮದುವೆ ಬೇಡ ಎಂದಿದ್ದಾಳೆ. ಈ ಬಗ್ಗೆ ಅರಕೋಣಂನ ಮಹಿಳಾ ಪಿಎಸ್ ನ್ನು ಸಂಪರ್ಕಿಸಿ, ತನ್ನ ಸ್ನೇಹಿತರು ವರನನ್ನು ಇಷ್ಟಪಡದ ಕಾರಣ ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ. ತನಗಿಂತ 10 ವರ್ಷ ದೊಡ್ಡವನಾದ ತನ್ನ ಸೋದರಸಂಬಂಧಿಯನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಯುವತಿ ಹೇಳಿದ್ದಾಳೆ.
ಈ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಬೇರೊಬ್ಬರನ್ನು ಪ್ರೀತಿಸುತ್ತಿದ್ದಾಳೆ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದಾರೆ. ಆದರೆ ಪೋಷಕರು ಆಯ್ಕೆ ಮಾಡಿದ ಹುಡುಗನನ್ನು ಬಿಟ್ಟು ಬೇರೆ ಯಾರನ್ನಾದರೂ ಮದುವೆಯಾಗಲು ಸಿದ್ಧ ಎಂದು ಹೇಳಿಕೊಂಡಿದ್ದಾಳೆ.
ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ಮಾತುಕತೆ ನಡೆಸಿದ್ದಾರೆ. ಆದರೆ ಅದು ಆಹ್ವಾನಿಸಿದರೂ ಪ್ರಯೋಜನವಾಗಲಿಲ್ಲ. ಯುವತಿ ತನ್ನ ಪೋಷಕರ ಮನೆಯವರೊಂದಿಗೆ ಹೋಗಲು ನಿರಾಕರಿಸಿದ ನಂತರ ಪೊಲೀಸರು ಅವಳನ್ನು ವಾಲಾಜಪೇಟೆಯ ಸರ್ಕಾರಿ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ.
ಆದರೆ ಕೆಲ ಸಮಯದ ಬಳಿಕ ಯುವತಿ ಮನಸ್ಸು ಬದಲಾಯಿಸಿ ಪೋಷಕರ ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಮನೆಗೆ ಹೋದ ಬಳಿಕ ಶುಕ್ರವಾರ ಮುಂಜಾನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸದ್ಯ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.