Advertisement

Timed Out ಇದೇ ಮೊದಲಲ್ಲ; ಸಂಧಿವಾತದಿಂದ ಬಳಲುತ್ತಿದ್ದ ಬ್ಯಾಟರ್ ಗೆ ಔಟ್ ಕೊಟ್ಟಿದ್ದ ಅಂಪೈರ್

05:45 PM Nov 07, 2023 | Team Udayavani |

ಐಸಿಸಿ ಏಕದಿನ ವಿಶ್ವಕಪ್ ನ ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ವಿಚಿತ್ರ ಘಟನೆಯೊಂದು ನಡೆದಿತ್ತು. ಶ್ರೀಲಂಕಾದ ಹಿರಿಯ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಅವರು ಟೈಮ್ ಔಟ್ ಆಗಿ ಒಂದೂ ಎಸೆತ ಎದುರಿಸದೆ ಪೆವಿಲಿಯನ್ ಗೆ ಮರಳಬೇಕಾಯಿತು. ಕ್ರಿಕೆಟ್ ನಿಯಮದ ಹೊರತಾಗಿ ಅಲ್ಲದಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆಯಿತು. ಅದೂ ವಿಶ್ವಕಪ್ ವೇದಿಕೆಯಲ್ಲಿ.

Advertisement

ಎಂಸಿಸಿ ಯ ಟೈಮ್ ಔಟ್ ಕಾನೂನು ಹೀಗಿದೆ: ಕಾನೂನು 40.1.1 ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿಯ ನಂತರ, ಒಳಬರುವ ಬ್ಯಾಟರ್ ದಿನದಾಟ ಮುಗಿಯದ ಹೊರತು, ಎರಡು ನಿಮಿಷದೊಳಗೆ ಚೆಂಡನ್ನು ಸ್ವೀಕರಿಸಲು ಸಿದ್ಧರಾಗಿರಬೇಕು ಅಥವಾ ಸ್ಟ್ರೈಕ್ ನ ಇತರ ಬ್ಯಾಟರ್ ಸಿದ್ಧವಾಗಿರಬೇಕು. ಈ ಅವಶ್ಯಕತೆಯನ್ನು ಪೂರೈಸದಿದ್ದರೆ, ಒಳಬರುವ ಬ್ಯಾಟರ್ ಸಮಯ ಮೀರಿದ ಕಾರಣ ಔಟ್ ಎಂದು ಪರಿಗಣಿಸಲಾಗುತ್ತದೆ.

1980 ರ ಕೋಡ್‌ ನಲ್ಲಿ ಔಟ್ ವಿಧಾನವಾಗಿ ಟೈಮ್ಡ್ ಔಟ್ ಅನ್ನು ಕಾನೂನುಗಳಿಗೆ ಸೇರಿಸಲಾಯಿತು. 2000 ರ ಕೋಡ್‌ನಲ್ಲಿ ಇದನ್ನು ಮೂರು ನಿಮಿಷಗಳಿಗೆ ಪರಿಷ್ಕರಿಸಲಾಯಿತು, ಆದರೂ ಈ ವಿಶ್ವಕಪ್‌ ನಲ್ಲಿ ಆಟದ ಪರಿಸ್ಥಿತಿಗಳು ಒಳಬರುವ ಬ್ಯಾಟ್ಸ್‌ಮನ್‌ ಗೆ ಕೇವಲ ಎರಡು ನಿಮಿಷಗಳನ್ನು ನೀಡುತ್ತದೆ. 1775ರ ಕ್ರಿಕೆಟ್‌ ನ ಮೊದಲ ಮುದ್ರಿತ ನಿಯಮಗಳಲ್ಲಿ ಅಂಪೈರ್‌ಗಳು “ಒಬ್ಬ ವ್ಯಕ್ತಿಯು ಔಟಾಗುವಾಗ ಎರಡು ನಿಮಿಷಗಳು ಒಳಗೆ ಬರಲು” ಅವಕಾಶ ನೀಡಬೇಕಾಗಿತ್ತು.

ಸೋಮವಾರದ ಘಟನೆಗೆ ಮೊದಲು ಐದು ಬಾರಿ ಟೈಮ್ ಔಟ್ ನಿದರ್ಶನಗಳಿಗೆ ಕ್ರಿಕೆಟ್ ಸಾಕ್ಷಿಯಾಗಿದೆ. ಇವೆಲ್ಲವೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನಡೆದಿರುವುದು.

15 ವರ್ಷದ ಬಳಿಕ ನಿರ್ಧಾರ!

Advertisement

ದಕ್ಷಿಣ ಆಫ್ರಿಕಾದ ಆ್ಯಂಡ್ರ್ಯೂ ಜೋರ್ಡಾನ್ ಅವರನ್ನು ಪಂದ್ಯ ನಡೆದು 15 ವರ್ಷಗಳ ಬಳಿಕ ಟೌಮ್ಡ್ ಔಟ್ ಎಂದು ಘೋಷಿಸಲಾಗಿದೆ. 1987 ರ ದೇಶೀಯ ಪಂದ್ಯದಲ್ಲಿ, ಪೂರ್ವ ಪ್ರಾಂತ್ಯದ ಪರ ಜೋರ್ಡಾನ್ ಅವರು ಪೋರ್ಟ್ ಎಲಿಜಬೆತ್‌ ನಲ್ಲಿ ಟ್ರಾನ್ಸ್‌ವಾಲ್ ವಿರುದ್ಧ ಆಡುತ್ತಿದ್ದರು. ದಿನದಾಟದ ಅಂತ್ಯಕ್ಕೆ ಅಜೇಯರಾಗಿದ್ದ ಜೋರ್ಡಾನ್ ಮರುದಿನ ಆಟ ಮುಂದುವರಿಸಬೇಕಿತ್ತು. ಆದರೆ ಭಾರೀ ಮಳೆಯ ಕಾರಣ ರಸ್ತೆಗಳು ಜಲಾವೃತಗೊಂಡಿದ್ದರಿಂದ ಮರುದಿನ ಜೋರ್ಡಾನ್ ಸಕಾಲದಲ್ಲಿ ಮೈದಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಅವರನ್ನು ಔಟ್ ಎಂದು ಘೋಷಿಸಲಾಯಿತು. ಇದು ವರ್ಣಭೇದ ನೀತಿಯ ಯುಗದಲ್ಲಿ ಬಿಳಿಯರಲ್ಲದ ಆಟಗಾರರಿಗಾಗಿ ದಕ್ಷಿಣ ಆಫ್ರಿಕಾದ ಮಂಡಳಿಯು ಆಯೋಜಿಸಿದ ಆಟವಾಗಿತ್ತು. 2000 ರ ದಶಕದ ಆರಂಭದಲ್ಲಿ, ವರ್ಣಭೇದ ನೀತಿಯನ್ನು ರದ್ದುಗೊಳಿಸಿದ ನಂತರ ಈ ಪಂದ್ಯಕ್ಕೆ ಪ್ರಥಮ ದರ್ಜೆಯ ಸ್ಥಾನಮಾನ ನೀಡಿ ಗುರುತಿಸಲಾಯಿತು. ಹೀಗಾಗಿ 15 ವರ್ಷಗಳ ಬಳಿಕ ಜೋರ್ಡಾನ್ ಅವರನ್ನು ‘ಟೈಮ್ಡ್-ಔಟ್’ ಎಂದು ದಾಖಲಿಸಲಾಗಿದೆ.

ಪಟ್ಟಾಂಗಕ್ಕೆ ಬಲಿಯಾದ ಬ್ಯಾಟರ್

ಜೋರ್ಡಾನ್ ಅವರ ಟೈಮ್ ಔಟ್ ಘಟನೆಗೆ ಮೊದಲೇ ಭಾರತದಲ್ಲಿ ಟೈಮ್ಡ್ ಔಟ್ ಮೂಲಕ ಬ್ಯಾಟರ್ ವಿಕೆಟ್ ಕಳೆದುಕೊಂಡಿದ್ದರು. ತ್ರಿಪುರಾದ ಹೇಮುಲಾಲ್ ಯಾದವ್ ಅವರು ವಿಚಿತ್ರ ಕಾರಣಕ್ಕೆ ಔಟ್ ಆಗಿದ್ದರು. ಹೇಮುಲಾಲ್ ಅವರು ಅಂದು ಬೌಂಡರಿ ಲೈನ್ ಹೊರಗೆ ಮಾತನಾಡುತ್ತಾ ನಿಂತಿದ್ದರು ಎಂದು ಔಟ್ ನೀಡಲಾಗಿತ್ತು.

ಒಡಿಶಾ ವಿರುದ್ಧದ ಪಂದ್ಯದಲ್ಲಿ ತ್ರಿಪುರಾದ ಒಂಬತ್ತು ವಿಕೆಟ್ ಬಿದ್ದಾಗ ಹೇಮುಲಾಲ್ ಯಾದವ್ ಬೌಂಡರಿ ಹೊರಗೆ ನಿಂತಿದ್ದರು. ಈ ವೇಳೆಗೆ ಅಂಪೈರ್ ಗಳು ಡ್ರಿಂಕ್ಸ್ ಗೆ ಕರೆದರು. ಹೀಗಾಗಿ ಯಾದವ್ ತಂಡದ ಮ್ಯಾನೇಜರ್ ಜತೆಗೆ ಮಾತನಾಡುತ್ತಾ ಬೌಂಡರಿಯಾಚೆಯೇ ನಿಂತಿದ್ದರು. ಅದೇನು ಗಹನವಾದ ಚರ್ಚೆಯಿತ್ತು ಗೊತ್ತಿಲ್ಲ, ಆದರೆ ಒಡಿಶಾ ಆಟಗಾರರು ಔಟ್ ಮನವಿ ಮಾಡಿದರು. ಅಂಪೈರ್ ಗಳು ಹೇಮುಲಾಲ್ ಯಾದವ್ ಅವರನ್ನು ಟೈಮ್ಡ್ ಔಟ್ ಎಂದು ತೀರ್ಪು ನೀಡಿದರು. ಅದಕ್ಕೆ ಹಿರಿಯರು ಹೇಳಿದ್ದು ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದು!

ಇದು ಮೊದಲ ಪ್ರಸಂಗ

ಇದು ಒಂದು ಅಪರೂಪದಲ್ಲಿ ಅಪರೂಪದ ಪ್ರಕರಣ. 1919ರ ಪ್ರಕರಣವಿದು. ಆಟದ ಬೆಳಿಗ್ಗೆ ಸಸೆಕ್ಸ್ ಕೇವಲ 10 ಆಟಗಾರರನ್ನು ಹೊಂದಿತ್ತು. ಅವರ ಮಾಜಿ ಆಟಗಾರ ಹೆರಾಲ್ಡ್ ಹೇಗೇಟ್ (34 ವರ್ಷಗಳು) ಅವರನ್ನು ಕಂಡು ತಂಡವು ತಮ್ಮಲ್ಲಿ ಆಡುವಂತೆ ಕೇಳಿಕೊಂಡರು. ಹೇಗೇಟ್ ಅವರು ಮೊದಲ ವಿಶ್ವಯುದ್ಧದ ಸಮಯದಲ್ಲಿ ಕಂದಕದಲ್ಲಿದ್ದರಿಂದ ಸಂಧಿವಾತದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಬೌಲಿಂಗ್ ಬ್ಯಾಟಿಂಗ್ ಮಾಡದೆ ಲೆಕ್ಕಭರ್ತಿಗೆ ಸಸೆಕ್ಸ್ ತಂಡಕ್ಕೆ ಸೇರಿದರು.

ಎರಡನೇ ಇನ್ನಿಂಗ್ಸ್‌ ನಲ್ಲಿ ಸಸೆಕ್ಸ್‌ನ ಒಂಬತ್ತನೇ ವಿಕೆಟ್ ಪತನವಾದಾಗ, ಸ್ಕೋರ್‌ಗಳು ಸಮವಾಗಿದ್ದವು. ಈ ಕ್ಷಣದ ಮಹತ್ವವನ್ನು ಅರಿತುಕೊಂಡ ಹೇಗೇಟ್ ಬ್ಯಾಟಿಂಗ್‌ ಗೆ ಹೊರಡಲು ಆರಂಭಿಸಿದರು. ಎರಡನೇ ದಿನದಲ್ಲಿ ನೀಲಿ ಸರ್ಜ್ ಸೂಟ್‌ ತೊಟ್ಟು ಪೆವಿಲಿಯನ್‌ ನಲ್ಲಿ ಕುಳಿತಿದ್ದ ಹೇಗೇಟ್, ತಂಡಕ್ಕಾಗಿ ಮೈದಾನಕ್ಕೆ ಹೋಗಲು ಬಹಳ ಪ್ರಯತ್ನವನ್ನು ಮಾಡಿದರೆಂದು ಡೇವಿಡ್ ಫೂಟ್ ತನ್ನ ಪುಸ್ತಕ ‘ಸನ್‌ಶೈನ್, ಸಿಕ್ಸ್ ಮತ್ತು ಸೈಡರ್’ ನಲ್ಲಿ ವಿವರಿಸುತ್ತಾರೆ. ಆದರೆ ಸಮಯ ಕಳೆಯುತ್ತಲೇ ಇತ್ತು. ಎದುರಾಳಿ ಸೋಮರ್‌ಸೆಟ್ ಆಟಗಾರರು ಮನವಿ ಮಾಡಿದಾಗ, ಹೇಗೇಟ್ ಅವರನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದು ವಿಸ್ಡನ್ ಸ್ಕೋರ್‌ ಕಾರ್ಡ್‌ ನಲ್ಲಿ ‘ಟೈಮ್ಡ್ ಔಟ್’ ಎಂದು ದಾಖಲಾಗಿಲ್ಲ ಆದರೆ ‘ಗೈರಾಗಿ ಔಟ್’ ಎಂದು ದಾಖಲಾಗಿದೆ.

ವಿಮಾನ ತಡವಾಗಿದ್ದಕ್ಕೆ ಔಟ್!

2002-03ರಲ್ಲಿ ನಡೆದ ಘಟನೆಯಿದು. ವೆಸ್ಟ್ ಇಂಡೀಸ್ ವೇಗಿ ವೆಸ್ಬರ್ಟ್ ಡ್ರೇಕ್ಸ್ ಅವರು ದಕ್ಷಿಣ ಆಫ್ರಿಕಾದಲ್ಲಿ ದೇಶಿಯ ಕ್ರಿಕೆಟ್ ಆಡುತ್ತಿದ್ದರು. ಫ್ರೀ ಸ್ಟೇಟ್ ವಿರುದ್ಧದ ಪಂದ್ಯದಲ್ಲಿ ಅವರು ಬಾರ್ಡರ್ ತಂಡಕ್ಕೆ ಆಡುತ್ತಿದ್ದರು. ಆದರೆ ಆ ಅವರು ದುರದೃಷ್ಟಕರ ರೀತಿಯಲ್ಲಿ ಅವರನ್ನು ಔಟ್ ಎಂದು ಘೋಷಿಸಲಾಯಿತು. ಯಾಕೆಂದರೆ ಆ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿಯೇ ಇರಲಿಲ್ಲ. ಅದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ಪರ ಆಡುತ್ತಿದ್ದ ಅವರು ಸಮಯಕ್ಕೆ ಸರಿಯಾಗಿ ದಕ್ಷಿಣ ಆಫ್ರಿಕಾಕ್ಕೆ ಬರಬಹುದೆಂದು ಭಾವಿಸಿದ್ದರು. ಆದರೆ ಅವರ ವಿಮಾನವು ತುಂಬಾ ವಿಳಂಬವಾಗಿತ್ತು ಹೀಗಾಗಿ ಅವರು ಯೋಜಿಸಿದಂತೆ ಸಮಯಕ್ಕೆ ಆಗಮಿಸಲಿಲ್ಲ. ಹೀಗಾಗಿ ಅವರನ್ನು ಔಟ್ ಎಂದು ತೀರ್ಮಾನಿಸಲಾಯಿತು. ಆ ದಿನ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೂ, ಅವರು ಎರಡನೇ ದಿನದಲ್ಲಿ ಎರಡು ವಿಕೆಟ್ ಗಳನ್ನು ಪಡೆದಿದ್ದರು.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next