Advertisement

ಕಾಂಗ್ರೆಸ್‌ನ ಎಂಟು ಶಾಸಕರಿಗೆ ಟಿಕೆಟ್‌ ಅನುಮಾನ

12:06 AM Mar 19, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ನ ಹಾಲಿ 69 ಶಾಸಕರ ಪೈಕಿ 8 ಮಂದಿಗೆ ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗುವುದು ಬಹುತೇಕ ಅನುಮಾನ. ಈ 8 ಕ್ಷೇತ್ರಗಳಲ್ಲೂ ಗೆಲ್ಲುವ ಅಭ್ಯರ್ಥಿಗಳ ಶೋಧ ಪ್ರಕ್ರಿಯೆ ಮುಂದುವರಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಹೀಗಾಗಿ ದಿಲ್ಲಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸಭೆಯು ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿದೆ.

Advertisement

ಬೆಂಗಳೂರಿನ ಪುಲಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ, ಕಲಬುರಗಿ ಉತ್ತರದ ಖನೀಜ್‌ ಫಾತಿಮಾ, ಕುಂದಗೋಳದ ಕುಸುಮಾ ಶಿವಳ್ಳಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಪಾವಗಡದ ವೆಂಕಟರಮಣಪ್ಪ, ಲಿಂಗಸುಗೂರಿನ ಡಿ.ಎಸ್‌.ಹೂಲಗೇರಿ, ಅಫ‌ಜಲಪುರದ ಎಂ.ವೈ.ಪಾಟೀಲ್‌ ಹಾಗೂ ಹರಿಹರದ ರಾಮಪ್ಪ ಅವರಿಗೆ ವಿವಿಧ ಕಾರಣಗಳಿಂದ ಟಿಕೆಟ್‌ ನೀಡದಿರುವ ತೀರ್ಮಾನಕ್ಕೆ ಬರಲಾಗಿದೆ. ವಯಸ್ಸು, ಅನಾರೋಗ್ಯ, ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರದೇ ಇರುವುದು, ಕ್ಷೇತ್ರ ಮಟ್ಟದಲ್ಲಿ ಜನಸಂಪರ್ಕದ ಕೊರತೆ ಹಾಗೂ ಈ ಸಲ ಮತ್ತೆ ಟಿಕೆಟ್‌ ನೀಡಿದರೆ ಸೋಲಬಹುದೆಂಬ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್‌ ನಿರಾಕರಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮೇಯರ್‌ ಸಂಪತ್‌ರಾಜ್‌ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಶಾಸಕ ಪ್ರಸನ್ನಕುಮಾರ್‌ ಪರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಗೊಂದಲ ಏರ್ಪಟ್ಟು ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಅದೇ ರೀತಿ ಪಾವಗಡದಲ್ಲಿ ವೆಂಕಟರಮಣ್ಣ ಬದಲಿಗೆ ಪುತ್ರ ಅಥವಾ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅವರಿಗೆ ಟಿಕೆಟ್‌ ಕೊಡಬೇಕೋ ಎಂಬ ವಿಷಯದಲ್ಲೂ ಸಹಮತ ಮೂಡಿಲ್ಲ. ಸಭೆಯಲ್ಲಿದ್ದ ಬಹುತೇಕರು ಚಂದ್ರಪ್ಪ ಪರವಾಗಿ ಧ್ವನಿಗೂಡಿಸಿದ್ದಾರೆ.
ಎಂ.ವೈ.ಪಾಟೀಲ್‌ ಸಹ ತಮ್ಮ ಪುತ್ರನಿಗೆ ಟಿಕೆಟ್‌ ಕೇಳಿದ್ದರೆ, ಹರಿಹರದಿಂದ ರಾಮಪ್ಪ ಬದಲಿಗೆ ಕುರುಬ ಸಮುದಾಯದಿಂದ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಖನೀಜ್‌ ಫಾತಿಮಾ ಹಾಗೂ ಕುಸುಮಾ ಶಿವಳ್ಳಿಗೆ ಮತ್ತೆ ಟಿಕೆಟ್‌ ಕೊಡಬೇಕೋ ಬೇಡವೋ ಎಂಬುದರ ಬಗ್ಗೆಯೂ ಗೊಂದಲ ಉಂಟಾಗಿದೆ. ಹೀಗಾಗಿ 8 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇತ್ಯರ್ಥವಾಗಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹಾಲಿಗಳಲ್ಲಿ ಆತಂಕ ಮನೆ ಮಾಡಿದೆ.

ಬೆಂಗಳೂರಿನಲ್ಲೇ ಅಭ್ಯರ್ಥಿಗಳ ಕೊರತೆ
ರಾಜಧಾನಿ ಬೆಂಗಳೂರಿನಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳ ಕೊರತೆ ಉಂಟಾಗಿರುವುದರ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒಟ್ಟು 28 ಕ್ಷೇತ್ರಗಳಲ್ಲಿ 18 ರಿಂದ 20 ಕಡೆ ಗೆಲ್ಲುವ ಸಾಮರ್ಥ್ಯವಿದ್ದರೂ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವ ಪ್ರಬಲ ಅಭ್ಯರ್ಥಿಗಳೇ ಇಲ್ಲದಿರುವುದು ಕಾಂಗ್ರೆಸ್‌ಗೆ ತಲೆ ನೋವಾಗಿದೆ. ಶುಕ್ರವಾರದ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಚರ್ಚೆ ಸಂದರ್ಭದಲ್ಲಿ ಸ್ವತಃ ರಾಹುಲ್‌ ಗಾಂಧಿ ಅವರೇ ರಾಜಧಾನಿಯಲ್ಲೇ ಕಾಂಗ್ರೆಸ್‌ ಈ ರೀತಿಯಾದರೆ ಹೇಗೆ? ಇಷ್ಟು ವರ್ಷಗಳ ಕಾಲ ಸ್ಥಳೀಯವಾಗಿ ಏಕೆ ಸಮರ್ಥರನ್ನು ಬೆಳೆಸಿಲ್ಲ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೆ.ಆರ್‌.ಪುರಂ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಬೆಳೆಸಲು ಏಕೆ ಸಾಧ್ಯವಾಗಿಲ್ಲ. ಇತರೆಡೆಯೂ ಏಕೆ ಇದುವರೆಗೆ ನಮಗೆ ಸಮರ್ಥರು ದೊರೆತಿಲ್ಲ ಎಂಬುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರೆಂದು ತಿಳಿದುಬಂದಿದೆ.

ಯಶವಂತಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಪದ್ಮನಾಭನಗರ, ರಾಜರಾಜೇಶ್ವರಿನಗರ, ಚಿಕ್ಕಪೇಟೆ, ರಾಜಾಜಿನಗರ, ಸಿವಿ.ರಾಮನ್‌ನಗರ, ಮಲ್ಲೇಶ್ವರಂ, ಮಹಾಲಕ್ಷ್ಮೀಲೇಔಟ್‌, ದಾಸರಹಳ್ಳಿ, ಕೆ.ಆರ್‌.ಪುರ ಹಾಗೂ ಯಲಹಂಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಜತೆಗೆ 20 ಟಾರ್ಗೆಟ್‌ ತಲುಪುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next