Advertisement

Lok Sabha Elections ಕಾಂಗ್ರೆಸ್‌ ಸೋಲು; ಪ್ರತಿಷ್ಠೆ, ಒಳಒಪ್ಪಂದ, ಗುಂಪುಗಾರಿಕೆ ಕಾರಣ

12:46 AM Jul 12, 2024 | Team Udayavani |

ಬೆಂಗಳೂರು: ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಆಡಳಿತ ಪಕ್ಷವಾಗಿದ್ದೂ ಕಾಂಗ್ರೆಸ್‌ ರಾಜ್ಯದಲ್ಲಿ ಅನುಭವಿಸಿದ ತೀವ್ರ ಹಿನ್ನಡೆಯ ಹಿಂದಿನ ಗುಟ್ಟನ್ನು ನಾಯಕರು ಗುರು ವಾರ ಸತ್ಯಶೋಧನ ಸಮಿತಿ ಮುಂದೆ ಬಿಚ್ಚಿಟ್ಟರು. ಗುಂಪುಗಾರಿಕೆ, ಹೊಂದಾಣಿಕೆ ರಾಜಕಾರಣ, ಪ್ರತಿಷ್ಠೆ, ಒಗ್ಗಟ್ಟಿನ ಕೊರತೆ ಕಾರಣ ಎಂದು ದೂರಿರುವುದಾಗಿ ತಿಳಿದುಬಂದಿದೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ತತ್‌ಕ್ಷಣವೇ ಗ್ಯಾರಂಟಿಗಳನ್ನು ಜಾರಿ ಗೊಳಿಸಿತ್ತು.

ನಾಯಕರು ಹೇಳಿದವರಿಗೇ ಟಿಕೆಟ್‌ ನೀಡಲಾಗಿತ್ತು. ಆದರೂ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫ‌ಲವಾಗಿತ್ತು. ಇದರ ಪರಾಮರ್ಶೆಗಾಗಿ ಎಐಸಿಸಿ ನೇಮಿಸಿದ್ದ ಮಧುಸೂದನ್‌ ಮಿಸ್ತ್ರಿ ನೇತೃತ್ವದ ಸತ್ಯಶೋಧನ ಸಮಿತಿಯು ಇಡೀ ದಿನ ಸಚಿವರು, ಶಾಸಕರ ಸಹಿತ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಕರೆದು ಆಯಾ ಕ್ಷೇತ್ರಗಳಲ್ಲಿ ಆಗಿರುವ ಹಿನ್ನಡೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿತು.

ಈ ವೇಳೆ ನಾಯಕರ ಒಣಪ್ರತಿಷ್ಠೆಗಳು, ಸ್ಥಳೀಯ ಮಟ್ಟದಲ್ಲಿ ಒಳಒಪ್ಪಂದಗಳು, ವಿಧಾನಸಭಾ ಚುನಾವಣೆ ವೇಳೆ ಕಂಡುಬಂದ ಒಗ್ಗಟ್ಟಿನ ಮಂತ್ರ ಲೋಕಸಭಾ ಚುನಾವಣೆಯಲ್ಲಿ ಕಾಣಿಸದೆ ಇದ್ದುದು, ಪಕ್ಷಾಂತರಿಗಳಿಗೆ ಮಣೆ ಹಾಕಿದ್ದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ್ದರ ಸಹಿತ ಹಲವು ಸಂಗತಿಗಳು ಸತ್ಯಶೋಧನ ಸಮಿತಿ ನಡೆಸಿದ ಮೊದಲ ದಿನದ ಪರಾಮರ್ಶೆಯಲ್ಲಿ ಹೊರಬಂದವು ಎನ್ನಲಾಗಿದೆ.

ಗುಂಪುಗಾರಿಕೆಯೂ ಬಯಲು
ಕೆಲವು ಕಡೆ ಬಿಜೆಪಿ-ಜೆಡಿಎಸ್‌ ಮೈತ್ರಿ, ಮೋದಿ ಅಲೆ ಪರಿಣಾಮ ಬೀರಿದ್ದರೆ ಹಲವೆಡೆ ತಮ್ಮವರೇ ಎದುರಾಳಿಗಳೊಂದಿಗೆ ಕೈಮಿಲಾಯಿಸಿ ಸೋಲಿಗೆ ತಂತ್ರ ಹೆಣೆದರು. ಪಕ್ಷದ ಆಚೆಗೆ ಸಮುದಾಯಗಳ ಸಮೀಕರಣ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿತು ಎಂದು ನಾಯಕರು ಸಮಿತಿ ಮುಂದೆ ವರದಿ ಒಪ್ಪಿಸಿದ್ದಾರೆ. ಈ ಮೂಲಕ ಬಹುತೇಕರು ತಮ್ಮ ಸೋಲಿಗೆ ನಿರೀಕ್ಷೆಯಂತೆ ಇತರರ ಮೇಲೆ ಆಪಾದನೆ ಹೊರಿಸಿದ್ದಾರೆ. ಕೆಲವರು ತಮ್ಮ ವಿರೋಧಿಗಳ ಮೇಲೆ ದೂರು ಹೇಳುವುದಕ್ಕೆ ಪರಾಮರ್ಶನ ಸಭೆಯನ್ನು ವೇದಿಕೆ ಮಾಡಿಕೊಂಡರು. ಇದರೊಂದಿಗೆ ಪಕ್ಷದಲ್ಲಿನ ಗುಂಪುಗಾರಿಕೆಗಳು ಕೂಡ ಬಯಲಾದವು ಎಂದು ತಿಳಿದುಬಂದಿದೆ.

Advertisement

ಎದುರಾಳಿಯನ್ನು ಸೋಲಿಸುವುದಕ್ಕಿಂತ ಪಕ್ಷದಲ್ಲೇ ಒಬ್ಬರು ಮತ್ತೂಬ್ಬರನ್ನು ಹಣಿಯುವುದರಲ್ಲಿ ತಲ್ಲೀನರಾಗಿದ್ದರು. ವಿಶೇಷವಾಗಿ ಟಿಕೆಟ್‌ ವಂಚಿತರು, ಅವರ ಬೆನ್ನಿಗೆ ನಿಂತಿದ್ದ ಶಾಸಕರು ಮತ್ತು ಬೆಂಬಲಿಗರು ಅಂತರ ಕಾಯ್ದುಕೊಂಡರು. ಕೋಲಾರದಂತಹ ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಅಂತಹ ಕಡೆ ಪ್ರತಿಷ್ಠೆಗಳಿಂದ ಸೋಲು ಅನುಭವಿಸಬೇಕಾಯಿತು. ಜತೆಗೆ ಬಣಗಳ ಒಳಜಗಳ ವಿಪಕ್ಷಗಳಿಗೆ ಆಹಾರವಾಯಿತು. ಅದನ್ನು ವಿವಿಧ ರೂಪದಲ್ಲಿ ಜನರಿಗೆ ತಲುಪಿಸುವಲ್ಲಿಯೂ ಎದುರಾಳಿಗಳು ಯಶಸ್ವಿಯಾದರು ಎಂಬುದಾಗಿ ಕೆಲವು ನಾಯಕರು ಸಮಿತಿಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಪ್ರತ್ಯೇಕವಾಗಿ ತೆರಳಿ ಅಭಿಪ್ರಾಯಗಳನ್ನು ಒಪ್ಪಿಸಿದರೆ, ಪಕ್ಷದ ಹಿರಿಯ ನಾಯಕರು ತಂಡವಾಗಿ ಅಭಿಪ್ರಾಯ ಮಂಡಿಸಿದರು. ಜಿಲ್ಲಾಧ್ಯಕ್ಷರನ್ನು ಮಾತ್ರ ಒಟ್ಟಿಗೆ ಸೇರಿಸಿ ಅಭಿಪ್ರಾಯ ಪಡೆಯಲಾಯಿತು. ಮೊದಲ ದಿನ ಬಹುತೇಕ ಉತ್ತರ ಕರ್ನಾಟಕದ ನಾಯಕರು ಸಮಿತಿಯನ್ನು ಭೇಟಿ ಮಾಡಿದರು ಎನ್ನಲಾಗಿದೆ.

ಮೊದಲ ದಿನ ಯಾರೆಲ್ಲ ಭೇಟಿ?
ಮೊದಲ ದಿನ ಭೇಟಿಯಾದವರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ಎಂ.ಬಿ. ಪಾಟೀಲ್‌, ಶಿವರಾಜ ತಂಗಡಗಿ, ಕೆ.ಎಚ್‌. ಮುನಿಯಪ್ಪ, ಬೈರತಿ ಸುರೇಶ್‌, ಕೆ.ಎನ್‌. ರಾಜಣ್ಣ, ರಹೀಂಖಾನ್‌, ಆರ್‌.ಬಿ. ತಿಮ್ಮಾಪುರ, ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಮೇಲ್ಮನೆ ಮಾಜಿ ಸದಸ್ಯ ವಿ.ಆರ್‌. ಸುದರ್ಶನ್‌, ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿದ್ದ ಪ್ರೊ| ರಾಜೀವ್‌ಗೌಡ, ಶಾಸಕ ಶಿವಲಿಂಗೇಗೌಡ, ನಸೀರ್‌ ಅಹಮದ್‌, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪ್ರಮುಖರಾಗಿದ್ದರು.

ಸರಕಾರ, ಪಕ್ಷ ಜತೆಗೆ ಸಮನ್ವಯ ಇಲ್ಲ: ದೂರು
ಅಧಿಕಾರಕ್ಕೆ ಬಂದಾಗಿನಿಂದಲೂ ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯ ಇಲ್ಲ. ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸ ಲಾಗಿದೆ. ಈ ಧೋರಣೆ ಮುಂದುವರಿದರೆ 2018ರ ವಿಧಾನಸಭಾ ಚುನಾವಣ ಫ‌ಲಿತಾಂಶ 2028ರ ಚುನಾವಣೆಯಲ್ಲಿ ಪುನರಾವರ್ತನೆ ಆಗಲಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರು ಎಐಸಿಸಿ ಸತ್ಯಶೋಧನ ಸಮಿತಿಗೆ ದೂರು ನೀಡಿದ್ದಾರೆ.

ಆರೋಪಗಳೇನು?
-ನಿಗಮ-ಮಂಡಳಿಗಳ ನೇಮಕಕ್ಕೆ ಪರಿಗಣಿಸಿಲ್ಲ
-ಗ್ಯಾರಂಟಿ ಅನುಷ್ಠಾನ ಸಮಿತಿ ಆಯ್ಕೆಗೆ ಕೇಳಿಲ್ಲ
-ತಮಗೆ ಬೇಕಾದವರಿಗೆ ಸಚಿವರಿಂದ ಕೆಲಸ
-ಕಾಂಗ್ರೆಸ್‌ ಜಿಲ್ಲಾ ಘಟಕವನ್ನು ಪರಿಗಣಿಸಲು ಮನವಿ

ಚುನಾವಣೆಯಲ್ಲಿ ಪಕ್ಷ ಎಲ್ಲಿ ಎಡವಿದೆ ಎಂಬ ಬಗ್ಗೆ ಪರಾಮರ್ಶೆ ನಡೆಯುತ್ತಿದೆ. ನಾನು 4 ವಿಭಾಗಗಳ ವರದಿ ಸಲ್ಲಿಸಲಿದ್ದೇನೆ. ಆಗಿರುವ ತಪ್ಪುಗಳನ್ನು ಸರಿಪಡಿಸಿ ಕೊಳ್ಳಲಾಗುವುದು.
– ಡಿ.ಕೆ. ಶಿವಕುಮಾರ್‌,
ಡಿಸಿಎಂ, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next