Advertisement

ತುಂಗಾರತಿಗೆ 3 ತಿಂಗಳಿನಿಂದ ತಡೆ!

05:24 PM Apr 08, 2022 | Niyatha Bhat |

ತೀರ್ಥಹಳ್ಳಿ: ಪುರೋಹಿತರ ನಡುವೆ ಉಂಟಾದ ಗೊಂದಲದಿಂದ ಪಟ್ಟಣದ ತುಂಗಾ ತೀರದಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಆದೇಶದಂತೆ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದ್ದ ತುಂಗಾರತಿಗೆ 3 ತಿಂಗಳಿಂದ ತಡೆ ಉಂಟಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ಕ್ಷೇತ್ರದಲ್ಲಿ ಗಂಗಾ ಆರತಿ ಮಾಡಿದ್ದ ಹಾಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪವಿರುವ ತುಂಗಾ ನದಿಯ ದಡದಲ್ಲಿ ಭಾರತದ ಅನೇಕ ಕಡೆಗಳಲ್ಲಿ ಸೈಕಲ್ಲಿನಲ್ಲಿ ಪ್ರಯಾಣ ಮಾಡಿ ಪಾಂಡಿತ್ಯ ಪಡೆದ ಬೊಮ್ಮಸಯ್ಯನ ಅಗ್ರಹಾರದ ಕಾಶಿ ಶೇಷಾದ್ರಿ ದೀಕ್ಷಿತ್‌ ಅವರ ನೇತೃತ್ವದಲ್ಲಿ ತುಂಗಾ ಆರತಿಯನ್ನು ವಿಶೇಷ ರೀತಿಯಲ್ಲಿ ವಾದ್ಯ ಘೋಷ, ಬಾಗಿನ ಅರ್ಪಣೆ ಹಾಗೂ ತುಂಗಾರತಿಗೆ ಬಂದ ಸಾರ್ವಜನಿಕರಿಂದ ಆರತಿ ಬೆಳಗುವುದರ ಮೂಲಕ ಪ್ರಾರಂಭ ಮಾಡಲಾಗಿತ್ತು.

ಇದಕ್ಕೆ ತಾಲೂಕಿನ ಜನಪ್ರತಿನಿ ಧಿಗಳಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಯಿತು. ದಕ್ಷಿಣಾಯಣ ಪುಣ್ಯ ಕಾಲ, ಕರ್ಕಾಟಕ ಸಂಕ್ರಮಣದ ದಿನದಂದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಗೆ ಕಾಶಿ ದೀಕ್ಷಿತ್‌ ಅವರ ಅರ್ಚಕ ನೇತೃತ್ವದಲ್ಲಿ ತುಂಗಾರತಿ ಮಾಡಲಾಗಿತ್ತು. ತೀರ್ಥಹಳ್ಳಿ ತಹಶೀಲ್ದಾರ್‌, ಪುತ್ತಿಗೆ ಮಠ, ಶೃಂಗೇರಿ ಮಠ ಹಾಗೂ ಆಸ್ತಿಕರ ಸಹಯೋಗದೊಂದಿಗೆ ತುಂಗಾ ನದಿಗೆ ತುಂಗಾರತಿಯು ಪ್ರಾರಂಭವಾಗಿ ತುಂಗಾರತಿಯನ್ನು ವರ್ಷ ಪೂರ್ತಿ ಮುಂದುವರಿಸಿಕೊಂಡು ಹೋಗಲಿದ್ದಾರೆ ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿ ಬಂದಿತ್ತು.

ಪುತ್ತಿಗೆ ಮಠದ ಸಮೀಪವಿರುವ ತುಂಗಾ ದಂಡೆಯಲ್ಲಿ, ಪ್ರತಿ ದಿನವೂ ತುಂಗಾರತಿಯು ಮುಂದುವರಿಯಿತು. ತುಂಗಾರತಿಗೆ ತಹಶೀಲ್ದಾರ್‌ ಡಾ| ಶ್ರೀಪಾದ್‌ ಅವರ ವಿಶೇಷ ಆಸಕ್ತಿ ಇತ್ತು. ತಿಂಗಳಿಗೆ ಓರ್ವ ಅರ್ಚಕರ ನೇತೃತ್ವದಲ್ಲಿ ತುಂಗಾರತಿಯು ಮುಂದುವರಿಯಲಿದ್ದು, ಊರಿನ ಜನರ, ಆಸ್ತಿಕರ ಸಹಕಾರವನ್ನು ಅರ್ಚಕ ವೃಂದದವರನ್ನು ಡಾ| ಶ್ರೀಪಾದ್‌ ಅವರು ಕೋರಿದ್ದರು. ಆದರೆ ತಾಲೂಕು ಆಡಳಿತ ಮೊದಲಿಗೆ ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ನಂತರ ಇದರ ಬಗ್ಗೆ ಗಮನ ವಹಿಸದ ಕಾರಣ ಸತತವಾಗಿ 6 -8 ತಿಂಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬಂದಿದ್ದ ತುಂಗಾರತಿ ಕಾರ್ಯಕ್ರಮಕ್ಕೆ ಸತತ 3 ತಿಂಗಳಿನಿಂದ ಬ್ರೇಕ್‌ ಬಿದ್ದಿದೆ.

ಕಾಶಿ ದೀಕ್ಷಿತ್‌ ಅವರು ಈ ತುಂಗಾ ಆರತಿಯನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು. ಆದರೆ ನಂತರದಲ್ಲಿ ತುಂಗಾರತಿ ಮಾಡಲು ತಮ್ಮ ಸಮಯ ಬಂದಾಗ ಕೆಲವೊಂದು ಅರ್ಚಕರು ಇದರ ಬಗ್ಗೆ ಆಸಕ್ತಿ ವಹಿಸಲಿಲ್ಲವೋ ಅಥವಾ ಇದಕ್ಕೆ ತಾಲೂಕು ಆಡಳಿತ ಗಮನ ವಹಿಸದೇ ನಿರ್ಲಕ್ಷ್ಯ ವಹಿಸಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ತೀರ್ಥಹಳ್ಳಿಯ ತುಂಗಾ ಆರತಿ ಕಾರ್ಯಕ್ರಮಕ್ಕೆ ಬ್ರೇಕ್‌ ಬಿದ್ದಿದೆ. ಮತ್ತೂಮ್ಮೆ ತೀರ್ಥಹಳ್ಳಿಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಮುಂದುವರಿಯಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

-ಶ್ರೀಕಾಂತ್ ವಿ. ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next