Advertisement

ನಿರಂತರ ಮಳೆಗೆ ಠುಸ್ಸೆಂದ ಪಟಾಕಿ ಸೇಲ್‌

12:17 PM Oct 16, 2017 | |

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ದೀಪಾವಳಿ ವೇಳೆ ಪಟಾಕಿ ಸದ್ದು ಕ್ಷೀಣಿಸಿದೆ. ಹೀಗಾಗಿ ಪಟಾಕಿ ವಹಿವಾಟೂ ಇಳಿಮುಖವಾಗಿದೆ. ಅದರಲ್ಲೂ ಈ ಬಾರಿ ಸತತ ಮಳೆಯಿಂದಾಗಿ ಒಟ್ಟು ವಹಿವಾಟಿನಲ್ಲಿ ಶೇ.30ರಷ್ಟು ಕುಸಿತ ಕಂಡು ಬಂದಿದೆ. ಈ ಬಾರಿ ಸುರಿಯುತ್ತಿರುವ ಮಳೆ, ಪಟಾಕಿ ಮಾರಾಟಕ್ಕೆ ತಣ್ಣೀರೆರಚಿದೆ.

Advertisement

ಇನ್ನೊಂದೆಡೆ, ಹೈಕೋರ್ಟ್‌ ಇತ್ತೀಚೆಗೆ ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಸೂಚಿಸಿದ್ದು, ಇದು ಕೂಡ ಪಟಾಕಿ ಚಿಲ್ಲರೆ ಮಾರಾಟಕ್ಕೆ ಕಡಿವಾಣ ಬಿದ್ದಂತಾಗಿದೆ. ಮತ್ತೂಂದೆಡೆ, ಜನರಲ್ಲಿ ಪರಿಸರ ಕುರಿತು ಜಾಗೃತಿ ಹೆಚ್ಚುತ್ತಿದ್ದು, ಪಟಾಕಿ ಸುಡುವುದರಿಂದ ವಾಯು, ಶಬ್ದ ಮಾಲಿನ್ಯ ಹೆಚ್ಚಾಗಿ, ವೃದ್ಧರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಪಟಾಕಿ ವಹಿವಾಟು ಕುಸಿತಕ್ಕೆ ಕಾರಣವೆನ್ನಬಹುದು. 

ಯಾವುದೇ ರೀತಿಯ ಪಟಾಕಿಯ ಆಯಸ್ಸು ಕೇವಲ ಒಂದು ತಿಂಗಳು ಮಾತ್ರ. ಆದರೆ ಒಣ ಪ್ರದೇಶದಲ್ಲಿ ಸಂಗ್ರಹಿಸಿಟ್ಟರೆ ಮೂರು ತಿಂಗಳವರೆಗೂ ಕಾಪಾಡಬಹುದು. ಆಗ ಶೇ.70ರಿಂದ 80ರಷ್ಟು ಮಾತ್ರ ಉಳಿಯುತ್ತವೆ. ಕಳೆದ ಎರಡು ತಿಂಗಳಿನಿಂದ ಮಳೆ ಸುರಿಯುತ್ತಲೇ ಇದ್ದು, ಇದೀಗ ಮಳೆ ಪ್ರಮಾಣ ಹೆಚ್ಚಾಗಿದೆ. ಪಟಾಕಿ ಸಂಗ್ರಹಿಸಿಡಲು ಕಷ್ಟವಾಗಿದೆ. ಹಾಗೆಯೇ ರಾಜ್ಯದ ವಿವಿಧ ಮೂಲೆಗಳಿಂದ ಹೊಸೂರು, ಶಿವಕಾಶಿಯಲ್ಲಿ ಪಟಾಕಿ ಖರೀದಿಗೆಂದು ಹೋಗುವ ವ್ಯಾಪಾರಸ್ಥರು, ಪಟಾಕಿ ಚೀಟಿ ಹಾಕಿಕೊಂಡವರ ಪ್ರಮಾಣ ಕೂಡ ಕಡಿಮೆಯಾಗಿದೆ.

ಭಾರೀ ರಿಯಾಯಿತಿ: “ಶಿವಕಾಶಿಯಲ್ಲಿ ಪಟಾಕಿ ಬಾಕ್ಸ್‌ ಮೇಲಿನ ಎಂಆರ್‌ಪಿ ದರಕ್ಕಿಂತ ಶೇ.40ರಿಂದ 80ರಷ್ಟು ರಿಯಾಯಿತಿ ಕೊಡುತ್ತಾರೆ. ಒಂದು ಸಾವಿರ ರೂ.ಮೌಲ್ಯದ ಎಂಆರ್‌ಪಿ ದರವಿರುವ ಬಾಕ್ಸ್‌ ಕೇವಲ 250-300 ರೂ.ಗಳಲ್ಲಿ ಸಿಗುತ್ತದೆ. ಆದ್ದರಿಂದ ಇಲ್ಲಿಗೆ ಬರುವವರು ಲಕ್ಷಾಂತರ ರೂ.ಮೌಲ್ಯದ ಪಟಾಕಿ ಖರೀದಿಸುತ್ತಿದ್ದರು.

ಈ ಬಾರಿ ಮಳೆಯ ಕಾರಣದಿಂದ ಶೇ.25ರಿಂದ 30ರಷ್ಟು ವಹಿವಾಟು ಕಡಿಮೆಯಾಗಿದೆ,’ ಎನ್ನುತ್ತಾರೆ ಹೊಸೂರಿನ ಪಟಾಕಿ ವ್ಯಾಪಾರಿ ರಾಘವೇಂದ್ರ. ಶಿವಕಾಶಿ ಮತ್ತು ಹೊಸೂರು, ಒರಿಸ್ಸಾಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿವಿಧ ವರ್ಣರಂಜಿತ ಪಟಾಕಿಗಳು ಬಂದಿವೆ. ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸಿದ ಭೂಚಕ್ರ, ಚಿಕ್ಕ ರಾಕೆಟ್‌, ಹಾವಿನ ಮೊಟ್ಟೆ, ಸುಸುರು ಬತ್ತಿ, ಹನುಮಂತನ ಬಾಲ ಹೀಗೆ ವಿವಿಧ ವಿನ್ಯಾಸದ ಬಣ್ಣ, ಬಣ್ಣದ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ.

Advertisement

ಹೂವಿನ ಕುಂಡದ ಸುಮಾರು 5 ಬಗೆಯ ಬಾಕ್ಸ್‌ಗಳು ಬಂದಿವೆ. ಬಾಣ ಬಿರುಸುಗಳು, ಫ್ಯಾನ್ಸಿ ಎಕ್ಸ್‌ಫೋ ರಾಕೆಟ್‌ಗಳು, ಮ್ಯಾಜಿಕ್‌ ಪೆನ್ಸಿಲ್‌, ರೋಮನ್‌ ಕ್ಯಾಂಡಲ್‌, ಆಟಂಬಾಂಬ್‌ ಹೀಗೆ ಸುಮಾರು 269ಕ್ಕೂ ಹೆಚ್ಚು ವಿವಿಧ ಪಟಾಕಿಗಳು ಮಾರುಕಟ್ಟೆಗೆ ಬಂದಿದ್ದರೂ ಕೇಳುವವರೇ ಇಲ್ಲದಂತಾಗಿದೆ. 

ಸಂಗ್ರಹಿಸಿಡುವುದೇ ಹರಸಾಹಸ: ಯಾವುದೇ ರೀತಿಯ ಪಟಾಕಿಯ ಆಯಸ್ಸು ಕೇವಲ ಒಂದು ತಿಂಗಳು ಮಾತ್ರ. ಆದರೆ ಒಣ ಪ್ರದೇಶದಲ್ಲಿ ಸಂಗ್ರಹಿಸಿಟ್ಟರೆ ಮೂರು ತಿಂಗಳವರೆಗೂ ಕಾಪಾಡಬಹುದು. ಆಗ ಶೇ.70ರಿಂದ 80ರಷ್ಟು ಮಾತ್ರ ಉಳಿಯುತ್ತವೆ. ಕಳೆದ ಎರಡು ತಿಂಗಳಿನಿಂದ ಮಳೆ ಸುರಿಯುತ್ತಲೇ ಇದ್ದು, ಇದೀಗ ಮಳೆ ಪ್ರಮಾಣ ಹೆಚ್ಚಾಗಿದೆ. ಪಟಾಕಿ ಸಂಗ್ರಹಿಸಿಡಲು ಕಷ್ಟವಾಗಿದೆ.

ಹಾಗೆಯೇ ರಾಜ್ಯದ ವಿವಿಧ ಮೂಲೆಗಳಿಂದ ಹೊಸೂರು, ಶಿವಕಾಶಿಯಲ್ಲಿ ಪಟಾಕಿ ಖರೀದಿಗೆಂದು ಹೋಗುವ ವ್ಯಾಪಾರಸ್ಥರು, ಪಟಾಕಿ ಚೀಟಿ ಹಾಕಿಕೊಂಡವರ ಪ್ರಮಾಣ ಕೂಡ ಕಡಿಮೆಯಾಗಿದೆ. ಜತೆಗೆ “ಮೈದಾನಗಳಲ್ಲಿ ಮಳಿಗೆಗಳನ್ನು ಹಾಕಿದರೂ ಮಳೆಯ ಕಾರಣಕ್ಕೆ ಬೇಗನೆ ಮೆತ್ತಗೆ ಆಗುತ್ತವೆ ಎಂಬ ಭಯವಿದೆ. ಅ.13ರಿಂದಲೇ ಪಟಾಕಿ ವ್ಯಾಪಾರ ಆರಂಭವಾಗಿದ್ದು, ಅ.22ರವರೆಗೂ ಇರುತ್ತದೆ.

ಗ್ರಾಹಕರು ಮಳೆಯಿಂದ ಹೊರಗೆ ಬರುತ್ತಿಲ್ಲ. ಕಳೆದ ಎರಡೂರು ವರ್ಷ 15ರಿಂದ 20 ಲಕ್ಷ ರೂ.ಗಿಂತ ಅಧಿಕ ವಹಿವಾಟು ನಡೆಸಿದ್ದೆವು. ಈಬಾರಿ ಅದರ ಕಾಲು ಭಾಗದ ವಹಿವಾಟೂ ಆಗಿಲ್ಲ,’ ಎಂದು ಪಟಾಕಿ ವ್ಯಾಪಾರಿ ಸೆಲ್ವರಾಜು ಬೇಸರ ವ್ಯಕ್ತಪಡಿಸಿದ್ದಾರೆ. 

ಹಣ ಉಳಿತಾಯಕ್ಕೆ ಪಟಾಕಿ ಚೀಟಿ: “ಪಟಾಕಿ ಚೀಟಿ ಹಾಕಿಕೊಂಡವರು ಪಟಾಕಿಗೆ ಬದಲು ಗೃಹೋಪಯೋಗಿ ವಸ್ತುಗಳನ್ನು ಇಲ್ಲವೇ ಹಣವನ್ನು ಹಿಂದಿರುಗಿಸುವಂತೆ ಕೇಳುತ್ತಾರೆ. ಹಿಂದೆ ಪಟಾಕಿ ಬಾಕ್ಸ್‌ಗಾಗಿಯೇ ಚೀಟಿ ಹಾಕುತ್ತಿದ್ದರು. ಈಗ ಸ್ಟೀಲ್‌ ಪಾತ್ರೆಗಳು, ಬಟ್ಟೆ ಇತ್ಯಾದಿಗಳನ್ನು ಕೊಡುತ್ತಿದ್ದೇವೆ. ಈ ಮೂಲಕ ಮಹಿಳೆಯರು ಸ್ವಲ್ಪ ಮಟ್ಟಿನಲ್ಲಿ ಹಣ ಉಳಿತಾಯಕ್ಕೆ ಇದೊಂದು ಮಾರ್ಗವಷ್ಟೇ,’ ಎನ್ನುತ್ತಾರೆ ಕಳೆದ ಎಂಟು ವರ್ಷಗಳಿಂದ ಪಟಾಕಿ ಚೀಟಿ ನಡೆಸುತ್ತಿರುವ ಹೌಸಿಂಗ್‌ ಬೋರ್ಡ್‌ ಸಮೀಪದ ತಿಮ್ಮೇನಹಳ್ಳಿಯ ಲೀಲಾವತಿ ಶೇಖರಪ್ಪ.

2016ರಲ್ಲಿ ಪಟಾಕಿ ಮಾರಾಟದಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗಿದ್ದು, ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೂ ಪಟಾಕಿ ಖರೀದಿಸುತ್ತಿದ್ದವರ ಸಂಖ್ಯೆ ಇಳಿಮುಖವಾಗಿದೆ. ಆದ್ದರಿಂದ ಪಟಾಕಿ ಉದ್ಯಮ ನಷ್ಟ ಅನುಭವಿಸಿದ್ದು, ಈ ವರ್ಷ ಏನಾಗುತ್ತದೋ ಎಂಬ ಚಿಂತೆ ಕಾಡುತ್ತಿದೆ.
-ತಂಗದೊರೈ, ಪಟಾಕಿ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next