Advertisement

ಶ್ರೀನಿ ಬೀರಬಲ್‌ಗೆ ಉಪ್ಪಿ ಸಾಥ್‌

06:00 AM Dec 21, 2018 | Team Udayavani |

ಅಂತೂ ಇಂತೂ “ಬೀರ್‌ಬಲ್‌’ ಬರುವ ಸೂಚನೆ ಕೊಟ್ಟಿದ್ದಾನೆ. ಇತ್ತೀಚೆಗೆ ನಟ ಉಪೇಂದ್ರ ಅವರು ಚಿತ್ರದ ಟೀಸರ್‌ ಮತ್ತು ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಅಂಶ ಹೊಂದಿರುವ ಚಿತ್ರ. ನಾಯಕ ಶ್ರೀನಿ ಈ ಚಿತ್ರದ ನಿರ್ದೇಶಕರೂ ಹೌದು. ಶ್ರೀನಿ ಮಾತಿಗೆ ಸದಾ ಮುಂದು. ಟೀಸರ್‌ ಮತ್ತು ಟ್ರೇಲರ್‌ ಬಿಡುಗಡೆ ವೇಳೆ ಅವರ ಮಾತಿನ ಮೋಡಿ ಕೂಡ ಸಾಗಿದ್ದು ವಿಶೇಷ. ಒಂದಷ್ಟು ಸಂಭಾಷಣೆಯನ್ನು ಒಂದೇ ಉಸಿರಿಗೆ ಹೇಳುವ ಮೂಲಕ ತನ್ನೊಳಗಿನ ಪ್ರತಿಭೆ ಹೊರಹಾಕುತ್ತಲೇ ಮಾತಿಗಿಳಿದರು. “ಇಲ್ಲಿ ವಕೀಲನ ಪಾತ್ರ ಹೈಲೈಟ್‌ ಆಗಿದ್ದು, ಇಡೀ ಚಿತ್ರ ಮನರಂಜನೆ ಜೊತೆಗೆ ಸಸ್ಪೆನ್ಸ್‌ನೊಂದಿಗೆ ಸಾಗಲಿದೆ. ಸಿನಿಮಾದುದ್ದಕ್ಕೂ ಹಲವು ವಿಶೇಷತೆಗಳು ಕಾಣಸಿಗಲಿವೆ. ಚಿತ್ರಕ್ಕೆ ಏನು ಬೇಕೋ ಎಲ್ಲವನ್ನೂ ಒದಗಿಸಿಕೊಡುವ ಮೂಲಕ ನಿರ್ಮಾಪಕರು ಈ ಚಿತ್ರ ಅದ್ಧೂರಿಯಾಗಿ ಮೂಡಿಬರಲು ಕಾರಣರಾಗಿದ್ದಾರೆ ಎಂಬುದನ್ನು ಹೇಳುತ್ತಲೇ, “ಬೀರ್‌ಬಲ್‌’ ಚಿತ್ರಕ್ಕೆ ಮೂರು ದೇಶಗಳಲ್ಲಿ ಕೆಲಸ ನಡೆದಿದೆ. ಕೆನಡಾದಲ್ಲಿ ವಿಎಫ್ಎಕ್ಸ್‌ ಮಾಡಿಸಿದರೆ, ಲಂಡನ್‌ನಲ್ಲಿ ಪೋಸ್ಟರ್‌ ಡಿಸೈನ್‌ ಕೆಲಸ ಮಾಡಲಾಗಿದೆ. ಡಿಐ ಕೆಲಸವನ್ನು ಅಮೆರಿಕಾದಲ್ಲಿ ಮಾಡಿಸಲಾಗಿದೆ ಎಂದು ವಿವರಿಸಿದರು ಶ್ರೀನಿ.

Advertisement

ಅಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಮಾತಿಗಿಳಿದ ಉಪೇಂದ್ರ, ಶ್ರೀನಿ ಅವರ ಗುಣಗಾನ ಮಾಡಿದರು. ಆಗೆಲ್ಲಾ ಚಿತ್ರದ ಶೀರ್ಷಿಕೆ ಇಡುವುದೇ ಒಂದು ಕಷ್ಟವಾಗಿತ್ತು. ಹೇಗೆ ಬೇಕೋ ಹಾಗೆಲ್ಲ ಇಡುವಂತಿರಲಿಲ್ಲ. ಈಗ ಶೀರ್ಷಿಕೆ ಮೂಲಕವೆ ಗಮನಸೆಳೆಯುವಂತಹ ಚಿತ್ರಗಳು ಬರುತ್ತಿವೆ. “ಬೀರ್‌ಬಲ್‌’ ಹೊಸ ಸೌಂಡ್‌ ಆಗಲಿ. ಚಿತ್ರ ಯಶಸ್ಸು ಪಡೆಯಲಿ. ನಿರ್ಮಾಪಕರು ಲಕ್ಕಿ. ಹಾಗಾಗಿ ಚಿತ್ರ ಸಕ್ಸಸ್‌ ಆಗಿ, ಹ್ಯಾಟ್ರಿಕ್‌ ಗೆಲುವು ಸಿಗಲಿ ಎಂಬುದು ಉಪೇಂದ್ರ ಮಾತು. 

ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಅವರಿಗೆ ಅಂದು ಸಿಕ್ಕಾಪಟ್ಟೆ ಖುಷಿ. ಅದಕ್ಕೆ ಕಾರಣ, ಅವರು ಉಪೇಂದ್ರ ಅವರ ಅಭಿಮಾನಿ. ಸ್ವತಃ ಉಪೇಂದ್ರ ಅವರೇ ತಮ್ಮ ಚಿತ್ರದ ಟ್ರೇಲರ್‌, ಟೀಸರ್‌ ಬಿಡುಗಡೆ ಮಾಡಿದ್ದು. ತಮ್ಮ ಚಿತ್ರದ ಬಗ್ಗೆ ಮಾತು ಶುರುಮಾಡಿದ ಚಂದ್ರಶೇಖರ್‌, “ನಮ್ಮ ಸಂಸ್ಥೆಯಿಂದ ಸದಭಿರುಚಿ ಚಿತ್ರ ಮಾಡುವ ಉದ್ದೇಶವಿದೆ. ಪ್ರತಿ ಚಿತ್ರದಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತೇನೆ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಬೇಕು’ ಎಂದು ಮನವಿ ಇಟ್ಟರು ನಿರ್ಮಾಪಕರು.

ಅಂದು ಸುರೇಶ್‌ಹೆಬ್ಳೀಕರ್‌, ಮಧುಸೂದನ್‌, ನಾಯಕಿ ರುಕ್ಮಿಣಿ ವಸಂತ, ಸಂಗೀತ ನಿರ್ದೇಶಕರಾದ ಸೈರಭ್‌ ವೈಭವ್‌, ಕಾಲಚರಣ್‌, ಸಂಕಲನಕಾರ ಶ್ರೀಕಾಂತ್‌ ಶ್ರಾಫ್ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next