Advertisement

ಮೂರು ಸೂತ್ರಗಳಾ ಬಾಳು!

03:45 AM Feb 28, 2017 | Harsha Rao |

ಹಣ ಮಾಡಬೇಕೋ, ಬದುಕನ್ನು ಅನುಭವಿಸಬೇಕೋ? ಎಂಬುದರ ಕುರಿತು ಮಾತುಗಳು ಏನೇ ಇರಲಿ, ನಮ್ಮ ನಮ್ಮ ಪರಿಸ್ಥಿತಿಗಳಿಗೆ ತಕ್ಕಂತೆ ಸ್ಪಂದಿಸುತ್ತಾ ಹೋಗುವುದೇ ಸರಿ. ಎಂತಹ ಬದುಕಾದರೂ ಈ ಮೂರು ಸೂತ್ರಗಳನ್ನು ಪಾಲಿಸುವುದರಿಂದ ಬದಲಾವಣೆ ಸಾಧ್ಯ.

Advertisement

ಈ ದಿನಗಳಲ್ಲಿ ಯಾರಲ್ಲೂ ಸಮಯವಿಲ್ಲ. ಅದಕ್ಕೆ ಮಿಗಿಲಾಗಿ ಆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಕೆಲಸ, ಜವಾಬ್ದಾರಿಗಳನ್ನು ಮುಗಿಸಿಬಿಡಬೇಕೆಂಬ ಧಾವಂತ ಎಲ್ಲರಲ್ಲೂ. ಬುಧಿœಶಕ್ತಿ- ಕಾರ್ಯಕ್ಷಮತೆಗೆ ಏನೇನೂ ಅವಕಾಶವಿಲ್ಲದ ಕೆಲಸ-ಕಾರ್ಯಗಳು. ಹೀಗಾದರೆ ಇಡೀ ಜೀವನವೇ ತುಕ್ಕು ಹಿಡಿದ ಅನುಭವ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು ಸಹಜವೇ… ಹಣ ಗಳಿಸುವ ಭರಾಟೆಯಲ್ಲಿ ಗಡಿಯಾರ ದೊಂದಿಗೆ ಓಡುವ ಬದುಕನ್ನು ಅಪ್ಪಿಕೊಳ್ಳುವ
ಅನಿವಾರ್ಯತೆ ಎಲ್ಲರಿಗೂ. ಈಗಿನ ಯುವಪೀಳಿಗೆ, ಏನಾದರಾಗಲಿ ತಾರುಣ್ಯವನ್ನು ಹಣಗಳಿಕೆಗೆ ಮೀಸಲಿಟ್ಟು ನಂತರ ರಿಟೈಡ್‌‌ì ಲೈಫ‌ನ್ನು ಎಂಜಾಯ್‌ ಮಾಡಿದರಾಯಿತು ಅಂದುಕೊಳ್ಳುತ್ತಾರೆ. ಆದರೆ ತಾರುಣ್ಯ ಕಳೆದ ಮೇಲೂ ಅವರ ಮನಸ್ಥಿತಿ ಹಾಗಿರುತ್ತದೆಯೇ ಎಂಬುದು ಅನುಮಾನ. ಸ್ಥಿತಿವಂತರಾಗಿದ್ದರೂ, ಎಷ್ಟೇ ಗಳಿಕೆ ಮಾಡಿದ್ದರೂ ಕೂಡ ಅವರ ಮನಸ್ಸಿನಲ್ಲಿ ಏನನ್ನೋ ಕಳೆದುಕೊಂಡ ಭಾವ ಒಂದು ಬಾರಿಯಾದರೂ ಮೂಡದೇ ಇರಲು ಸಾಧ್ಯವಿಲ್ಲ. ಕಡೆಗೆ ತಮ್ಮ ಬದುಕು ಹೇಗಿದ್ದರೂ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

ಹಣ ಮಾಡಬೇಕೋ, ಬದುಕನ್ನು ಅನುಭವಿಸಬೇಕೋ? ಎಂಬುದರ ಕುರಿತು ದ್ವಂದ್ವ, ತಳಮಳಗಳು ಏನೇ ಇರಲಿ, ನಮ್ಮ ನಮ್ಮ ಪರಿಸ್ಥಿತಿಗಳಿಗೆ ತಕ್ಕಂತೆ ಸ್ಪಂದಿಸುತ್ತಾ ಹೋಗುವುದೇ ಸರಿ. ಪ್ರತಿಯೊಬ್ಬರ ಪರಿಸ್ಥಿತಿ ಬೇರೆ ಬೇರೆ ಇರುವುದರಿಂದ ಒಬ್ಬರನ್ನೊಬ್ಬರು ಹೋಲಿಸಿಕೊಳ್ಳಲು ಹೋಗುವುದು ಸರಿಯಲ್ಲ. ಆದ್ದರಿಂದ ನಮ್ಮದು ಎಂತಹ ಬದುಕಾದರೂ ಈ ಮೂರು ಸೂತ್ರಗಳನ್ನು ಪಾಲಿಸುವುದರಿಂದ ಕಿಂಚಿತ್ತಾದರೂ ಬದಲಾವಣೆ ಸಾಧ್ಯವಿದೆ.

ಸೌಜನ್ಯದಿಂದಲೇ ನಿರಾಕರಿಸಿ

“ಆಗದು- ಇಲ್ಲ- ಸಮಯವಿಲ್ಲ’ ಎನ್ನಲಾಗದೆ ದಾಕ್ಷಿಣ್ಯಕ್ಕೆ ಒಳಪಟ್ಟು, ಮುಜುಗರಕ್ಕೆ ಸಿಲುಕುವ ಪರಿಸ್ಥಿತಿ ಹಲವಾರು ಮಂದಿಯನ್ನು ಕಾಡುವದುಂಟು. ನಿರಾಕರಿಸಿದರೆ ಸಂಬಂಧ-ಸ್ನೇಹಗಳು ಎಲ್ಲಿ ಮುರುಟಿ ಹೋಗುವವೋ ಎಂಬ ಆತಂಕದಲ್ಲಿ ಹೇಳಿದ ಕೆಲಸ ಮಾಡಲಾಗದೆ, ಒತ್ತಡಕ್ಕೆ ಸಿಲುಕಿ ನರಳುವವರಿದ್ದಾರೆ.

Advertisement

ಕಚೇರಿಯಲ್ಲಿ ತಮ್ಮ ಪಾಲಿನ ಕೆಲಸಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಿ ಹಾಯಾಗಿ ಕುಳಿತಿರುವವರ ಸಂಖ್ಯೆ
ಕಡಿಮೆಯದೇನಲ್ಲ.

ನಿಷ್ಟುರವಾಗಿ ಇಲ್ಲವೆನ್ನಲಾಗದೆ ಒಲ್ಲದ ಹೊರೆಯನ್ನು ಹೆಗಲಿಗೇರಿಸಿಕೊಳ್ಳುವುದಕ್ಕಿಂತ ನಯವಾಗಿ ನಿರಾಕರಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಸೌಜನ್ಯಯುತ ನಿರಾಕರಣೆಯಿಂದ, ಕಾಡುವ ಅಪರಾಧಿ ಪ್ರಜ್ಞೆಯನ್ನು ದೂರವಾಗಿಸಿಕೊಳ್ಳಬೇಕು. ಅನಗತ್ಯ ಕೆಲಸಗಳಲ್ಲಿ ಭಾಗಿಯಾಗುವುದನ್ನು ನಿರಾಕರಿಸಿದರೆ, ಅಗತ್ಯವೆನಿಸುವ ಕೆಲಸಗಳಿಗೆ ಸಮಯ-ಶ್ರಮಗಳನ್ನು ಮೀಸಲಾಗಿಸಿರಬಹುದು.

ಸಂಬಂಧಗಳನ್ನು ಕಡೆಗಣಿಸಿದರಿ

ಈ ದಿನ ನೆಟ್‌ ವರ್ಕ್‌ ಸರಿಯಿರಲಿಲ್ಲ. ಆಗ ಸಿಕ್ಕಿದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿರುವ ಎಲ್ಲ ಸದಸ್ಯರ ಬಳಿಯೂ ಮಾತನಾಡಿದೆ. ನಮ್ಮ ಮನೆಯಲ್ಲಿರುವವರೆಲ್ಲಾ ತುಂಬಾ ಒಳ್ಳೆಯವರು ಎನಿಸಿತು. ಇಂತಹದೊಂದು ಜೋಕ್‌ ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದು ಬಂದಿತ್ತು. ಈ ಮಾತುಗಳಲ್ಲಿ ಅತಿಶಯೋಕ್ತಿಯೇನಿಲ್ಲ. ಗಡಿಬಿಡಿಯಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಕಾಟಾಚಾರಕ್ಕೆನ್ನುವಂತೆ ತಿನ್ನುವ ಕೆಲಸ ಮುಗಿಸಿ, ಕಚೇರಿಗೆ ದೌಡಾಯಿಸಿದರೆ, ರಾತ್ರಿಯಾಗುವವರೆಗೂ ಇಹಪರಗಳ ಯೋಚನೆಗಳಿಲ್ಲ. ವಾರದ ರಜಾದಿನಗಳು ಸಹ ಕೆಲಸ ಮಾಡಬೇಕೆಂದು ಕಂಪನಿಗಳು ಬಯಸುವ ಈ ದಿನಗಳಲ್ಲಿ ಸಂಬಂಧಗಳನ್ನು ನಿಭಾಯಿಸಲು ಸಮಯವೆಲ್ಲಿಯದು, ಎಂದು ಗೊಣಗುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಎಷ್ಟೇ ಹಣವಿದ್ದರೂ ಪ್ರೀತಿಸುವ ಹೆಂಡತಿ, ಮುದ್ದಾದ ಮಕ್ಕಳು, ಮಾರ್ಗದರ್ಶಕರಾಗಿ ಹಿರಿಯರು, ಉತ್ತಮ ಗೆಳೆಯರ ಸಹವಾಸಗಳಿದ್ದರೆ ಕ್ಷುಲ್ಲಕ ಚಿಂತೆ-ಆತಂಕಗಳು ಮರೆಯಾಗುತ್ತವೆ.

ನಿಮಗಾಗಿ ಸಮಯವಿರಲಿ

ಬಿರುಸಿನ ಓಟದಲ್ಲಿ ದಣಿವ ಮನಸ್ಸಿಗೆ, ತಂಪು ನೀಡುವ ಹವ್ಯಾಸಗಳನ್ನು ರೂಢಿಸಿಕೊಂಡರೆ, ಬದುಕಿನ ಲಯ ತಪ್ಪದು. ಛಾಯಾಚಿತ್ರಗಳಲ್ಲಿ, ದಿನಚರಿಗಳಲ್ಲಿ ದಾಖಲಾಗಿರಿಸಿದ ಸಂತಸದ ಕ್ಷಣಗಳು, ಸುಮಧುರ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ಧನಾತ್ಮಕ ಯೋಚನೆಗಳು ಬದುಕನ್ನು ಆವರಿಸಿಕೊಳ್ಳುತ್ತವೆ. ಪ್ರಕೃತಿ ಅತಿ ಸುಂದರವಾಗಿ ಕಾಣುವ ಬೆಳಗಿನ ಸಮಯದಲ್ಲಿ, ಲಘು ವ್ಯಾಯಾಮಗಳೂ ಸಹ ಚೇತೋಹಾರಿ. 

– ಜಯಶ್ರೀ ಕಾಲ್ಕುಂದ್ರಿ

Advertisement

Udayavani is now on Telegram. Click here to join our channel and stay updated with the latest news.

Next