Advertisement

ಚಿತ್ರರಂಗಕ್ಕೆ ದುಡಿದ ಮೂವರು ಒಂದೇ ದಿನ ನಿಧನ

07:00 AM Oct 08, 2018 | |

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅ. 7ರ ಭಾನುವಾರ ಕರಾಳ ದಿನ. ಅಮಾವಾಸ್ಯೆ ಮುನ್ನ ದಿನವೇ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಮೂವರು ವ್ಯಕ್ತಿಗಳು ನಿಧನರಾಗಿದ್ದಾರೆ. ಛಾಯಾಗ್ರಾಹಕರಾದ ಕೆ.ಎಂ.ವಿಷ್ಣುವರ್ಧನ, ಕುಮಾರ್‌ ಚಕ್ರವರ್ತಿ ಮತ್ತು ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಪಾಪಣ್ಣ ಅಗಲಿದವರು.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್‌ (44) ಅವರು ಭಾನುವಾರ ನಿಧನರಾಗಿದ್ದಾರೆ. ಪತ್ನಿ ಪುಷ್ಪಲತಾ, ಪುತ್ರ ಚೇತಸ್‌, ಪುತ್ರಿ ಲೀನಾ ಹಾಗು ಚಿತ್ರರಂಗದ ಅಪಾರ ಗೆಳೆಯರನ್ನು ವಿಷ್ಣುವರ್ಧನ್‌ ಅಗಲಿದ್ದಾರೆ. ಕೆಲ ದಿನಗಳಿಂದ ವಿಷ್ಣುವರ್ಧನ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ನಗರದ ಕರುಣಾಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸುದೀಪ್‌ ಅಭಿನಯದ “ಹುಬ್ಬಳ್ಳಿ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಕೆ.ಎಂ. ವಿಷ್ಣುವರ್ಧನ್‌, ದರ್ಶನ್‌ ಅಭಿನಯದ “ಯೋಧ’, ಶಿವರಾಜಕುಮಾರ್‌ ಅಭಿನಯದ “ಸುಗ್ರೀವ’,”ಯಶ್‌ ನಟಿಸಿದ “ರಾಜಾ ಹುಲಿ’, “ಕಿರಣ್‌ ಬೇಡಿ’, “ಸ್ನೇಹಾಂಜಲಿ’,”ನಾರಿಯ ಸೀರೆ ಕದ್ದ’, “ರಾಜಾಸಿಂಹ’, “ಗನ್‌’,”ಪಂಗನಾಮ’,”ಹರ’,”ಬರ್ತ್‌’,”ಟೈಸನ್‌’ ಸೇರಿ ಹಲವು ಚಿತ್ರಗಳಿಗೆ ವಿಷ್ಣುವರ್ಧನ್‌ ಛಾಯಾಗ್ರಾಹಕರಾಗಿ ದುಡಿದಿದ್ದರು. ಸುಮನ ಕಿತ್ತೂರು ನಿರ್ದೇಶನದ “ಎದೆಗಾರಿಕೆ’ ಚಿತ್ರದ ಛಾಯಾಗ್ರಾಹಕ ರಾಕೇಶ್‌ ಅವರಿಗೆ ಸಣ್ಣ ಅಪಘಾತವಾಗಿದ್ದ ಸಂದರ್ಭದಲ್ಲಿ ಗೆಳೆತನ ಪ್ರೀತಿಗಾಗಿ ವಿಷ್ಣುವರ್ಧನ್‌ ಅವರು ಕ್ಯಾಮೆರಾ ಹಿಡಿದಿದ್ದರು. “ನೀನ್ಯಾರೆ’ ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನೂ ಪಡೆದಿದ್ದರು.ವಿಷ್ಣುವರ್ಧನ್‌ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕ, ನಿರ್ಮಾಪಕರ ಸಂಘ, ಚಲನಚಿತ್ರ ಛಾಯಾಗ್ರಾಹಕರ ಸಂಘ ಹಾಗೂ ಚಿತ್ರರಂಗದ ತಾಂತ್ರಿಕ ವರ್ಗ ಸಂತಾಪ ಸೂಚಿಸಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಕುದೂರುನಲ್ಲಿ ನೆರವೇರಿದೆ.

ಕುಮಾರ್‌ ಚಕ್ರವರ್ತಿ ಇನ್ನಿಲ್ಲ
ಛಾಯಾಗ್ರಾಹಕ ಕುಮಾರ್‌ ಚಕ್ರವರ್ತಿ (42)  ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿಕೆಎಚ್‌ ದಾಸ್‌ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಕುಮಾರ್‌ ಚಕ್ರವರ್ತಿ, “ಎಚ್‌2ಓ’ ಚಿತ್ರದ ಮೂಲಕ ಸ್ಥಿರ ಛಾಯಾಗ್ರಾಹಕರಾಗಿ ತಮ್ಮ ಕೆಲಸ ಶುರುಮಾಡಿದ್ದರು. ಆ ನಂತರದ ದಿನಗಳಲ್ಲಿ”ಚಂದ್ರ ಚಕೋರಿ’, “ಆಪ್ತ ಮಿತ್ರ’,”ಶಿವಲಿಂಗ’ ಇತರೆ ಚಿತ್ರಗಳಲ್ಲಿ ದಾಸ್‌ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಮಹೇಶ್‌ ಅಭಿನಯದ “ಬೌಂಡರಿ’ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಆ ಬಳಿಕ “ಸೂರಿ ಗ್ಯಾಂಗ್‌’,”ಕೆಂಗುಲಾಬಿ’,” ಚಿತ್ತ ಚಂಚಲ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದರು.

ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಪಾಪಣ್ಣ ನಿಧನ
ಕನ್ನಡ ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಂದಲೂ ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದ ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಪಾಪಣ್ಣ (60) ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೀಸೆ ಪಾಪಣ್ಣ ಎಂದೇ ಹೆಸರಾಗಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸದಾ ಚುರುಕಾಗಿದ್ದ ಮೀಸೆ ಪಾಪಣ್ಣ, ಯಾವುದೇ ಚಿತ್ರದ ಚಿತ್ರೀಕರಣವಿರಲಿ, ಚಿತ್ರೀಕರಣ ಸ್ಥಳಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಜೂನಿಯರ್‌ ಕಲಾವಿದರನ್ನು ಕರೆಸುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರೀಕರಣ ಪೂರೈಸುವಲ್ಲಿ ಯಶಸ್ವಿಯಾಗುತ್ತಿದ್ದರು. “ಗಣೇಶನ ಮದುವೆ’ ಸೇರಿದಂತೆ ಕೆಲ ಚಿತ್ರಗಳಲ್ಲಿ ಮೀಸೆ ಪಾಪಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ಪಾಪಣ್ಣ ಇತ್ತೀಚೆಗೆ ವಿನಯ್‌ರಾಜಕುಮಾರ್‌ ಅಭಿನಯದ “ಅನಂತು ವರ್ಸಸ್‌ ನುಸ್ರುತ್‌’ ಚಿತ್ರಕ್ಕೆ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next