Advertisement

ಆಯುಸ್ಸು ಗಟ್ಟಿ ಇದ್ರ ಮತ್ತೆ ಸಿಗೋಣಾ…

11:13 AM Jan 30, 2018 | Team Udayavani |

ಒಂದು ಸಲ ನಾನು ಬೆಂಗಳೂರಿಗೆ ಹೊರಡುವ ಪ್ರಸಂಗ ಬಂತು. ರೈಲಿನಲ್ಲಿ ಹೊರಟಿದ್ದೆ. ಜನರಲ್‌ ಬೋಗಿಯ ಪಯಣ, ಒಂದು ಲೆಕ್ಕದಲ್ಲಿ ಒಳ್ಳೆಯದೇ ಅಂತನ್ನಿಸಿತ್ತು. ಒಂದು ಮುಕ್ತ ವಾತಾವರಣ ಅಲ್ಲಿರುತ್ತೆ. ಅಲ್ಲಿ ಜನಸಾಮಾನ್ಯರ ನಡುವಿನ ಪಯಣ ನಮ್ಮದಾಗಿರುತ್ತೆ. ಆದರೆ, ನಾನು ಹೋಗಬೇಕಿದ್ದ ರೈಲೇನೋ ಬಂತು. ಒಳಗೆ ಕಾಲಿಡೋಣವೆಂದರೆ, ಜನ ಕಿಕ್ಕಿರಿದು ನೆರೆದಿದ್ದರು. ಬಾಗಿಲ ಬಳಿ ಒಬ್ಬರ ಮೇಲೊಬ್ಬರು ಜೋತು ಬಿದ್ದಿದ್ದರು. ಒಳಗೆ ಕಾಲಿಡಲು ನನ್ನಿಂದ ಸಾಧ್ಯವೇ ಇಲ್ಲ ಅಂದುಕೊಂಡಾಗ, ರೈಲೊಳಗಿಂದ ಒಬ್ಬ ಪುಣ್ಯಾತ್ಮ, “ಬರ್ರೀ ಸರಾ… ಇಲ್ಲಿ ಜಾಗ ಅದ ನೋಡ್ರಿ’ ಅಂತ ತನ್ನ ಒಂದು ಕಾಲನ್ನು ಮೇಲಕ್ಕೆತ್ತಿ, ನನಗೆ ಒಳಬರಲು ಅನುವು ಮಾಡಿಕೊಟ್ಟರು. “ಅಲ್ಲಪ್ಪಾ, ನಿಂಗೇ ನಿಲ್ಲಲು ಸರಿಯಾಗಿ ಜಾಗವಿಲ್ಲ. ಅಂಥದ್ದರಲ್ಲಿ ನನ್ನನ್ನು ಕರೀತಿಯಲ್ಲ’ ಎಂದಾಗ, “ಅದರಾಗೇನೈತಿ ಬಿಡ್ರಿ, ಇವತ್ತ ನಾ ನಿಮಗ ಅನುಕೂಲ ಮಾಡಿದಂಗ ನಾಳೆ ನನಗ್ಯಾರನ ಮಾಡ್ತಾರ, ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಒಂದಿನ ಇದ್ದ ಇರತಾದಲಿ ಪರಮನೆಂಟ್‌ ಆರಾಮಾಗಿ ಕೂಡೂದು, ಅಲ್ಲಿ ಮಟ ನಾವು ಛಲೋ ಆಗಿ ಯಾರಿಗೂ ಬ್ಯಾಸರ ಆಗದಂಗ ಬಾಳಬೇಕ್ರಿ ಯಪ್ಪಾ’ ಅಂದಾಗ ಆತನ ಜೀವನೋತ್ಸಾಹಕ್ಕೆ ತಲೆ ಬಾಗಿದೆ. 

Advertisement

ಆತ ತಾನಿಳಿಯುವ ನಿಲ್ದಾಣ ಸಮೀಪಿಸಿತೆಂದು ಪಕ್ಕದ ಸೀಟಿನ ವ್ಯಕ್ತಿಯ ಬಳಿ ಕೊಟ್ಟಿದ್ದ ತನ್ನ ಚೀಲವನ್ನು ತೆಗೆದುಕೊಂಡು ಇಳಿಯಲು ಅಣಿಯಾದ. ಆತನ ಕೈಯಲ್ಲಿ ಆಸ್ಪತ್ರೆಯ ವರದಿಗಳು ಇದ್ದಿದ್ದು ನನ್ನ ಕಣ್ಣಿಗೆ ಬಿತ್ತು. ಸುಮ್ಮನೆ ಮಾತಿಗೆಂದು, “ಯಾಕೆ ಸ್ವಾಮಿ? ಇಷ್ಟೊಂದು ಚೆನ್ನಾಗಿದ್ದೀರಿ, ಆದರೂ ಆಸ್ಪತ್ರೆಗೆ ಹೊರಟಿದ್ದೀರಲ್ಲಾ’ ಎಂದಾಗ, ಆತ ಕೂಡಲೇ “ಕ್ಯಾನ್ಸರ್‌’ ಎಂದು ಬಿಡುವುದೇ? ಒಂದು ಕ್ಷಣ ಬೆವತುಹೋದೆ. ಆಗ ಆತನೇ “ನೋಡ್ರಿ, ನನಗ ಈ ಶ್ರೀಮಂತ ರೋಗ ಬಂದದ ಅಂತ ನಾ ಏನು ಅಂಜಿ ಮೂಲ್ಯಾಗ ಕೂಡೋ ಪ್ರಾಣಿ ಅಲ್ಲ. ಏನಾರ ಆಗವಲ್ದಕ ಛಲೋ ಆಗಿ ನಕ್ಕೊಂತ, ಮನ್ಯಾವರ ಕೂಡ ಚಂದನಾಗಿ ಮಾತಾಡಿಗೋತ ಇರತೇನಿ’ ಎಂದಾಗ ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ತಾನು ಇಳಿಯುವ ಸ್ಥಳ ಬಂದಾಗ, “ನಾ ಇನ್ನ ಬರತೇನ್ರಿ, ಸಾಹೇಬ್ರ. ಆಯುಸ್ಸು ಗಟ್ಟಿ ಇದ್ರ ಮತ್ತೆ ಸಿಗೋಣಾ’ ಅಂತ ಹೇಳಿ ಕೆಳಗಿಳಿದ.

ಬದುಕಿನ ಮೇಲೆ ಆತನಿಗಿರುವ ಉತ್ಕಟ ಪ್ರೀತಿಯನ್ನು ನೋಡಿದಾಗ, ನನಗಿಂತಲೂ ಗಟ್ಟಿ ಆಯಸ್ಸಿಗ ಎಂದು ಒಳ ಮನಸ್ಸು ಪಿಸುಗುಟ್ಟಿತು. “ಇಂಥ ಒಳ್ಳೇ ಮನಸ್ಸಿನವರನ್ನು ನೂರ್ಕಾಲ ಸುಖವಾಗಿಡಪಾ’ ಎಂದು ಪ್ರಾರ್ಥಿಸಿದೆ. ಜೀವನದ‌ ಬಗ್ಗೆ ನನಗಿದ್ದ ಅಂಧಕಾರತ್ವವನ್ನು ಹೋಗಲಾಡಿಸಿ, ಉತ್ಸಾಹದ ಬೆಳಕನ್ನು ತೋರಿಸಿದ ಆ ವ್ಯಕ್ತಿ ಎಲ್ಲಾದರೂ ಕಾಣಿಸುತ್ತಾರೇನೋ ಎಂದು ರೈಲು ನಿಲ್ದಾಣಕ್ಕೆ ಹೋದಾಗಲೆಲ್ಲ ಸುತ್ತಲೂ ಕಣ್ಣಾಡಿಸುತ್ತಿರುತ್ತೇನೆ.

ನಾಗರಾಜ್‌ ಬಿ. ಚಿಂಚರಕಿ

Advertisement

Udayavani is now on Telegram. Click here to join our channel and stay updated with the latest news.

Next