Advertisement

ಸಾವಿರಕ್ಕೂ ಮಿಕ್ಕಿ ವಸತಿ ರಹಿತ ಕುಟುಂಬಗಳು!

10:14 AM Dec 13, 2018 | |

ಸುಳ್ಯ: ನಗರದಲ್ಲಿ 1,512 ವಸತಿ ರಹಿತ ಕುಟುಂಬಗಳಿವೆ. ನಿವೇಶನ ರಹಿತ ಕುಟುಂಬಕ್ಕೆ ಸೂರು ಒದಗಿಸಲು ಜಾಗದ ಕೊರತೆ ಇದೆ ಎನ್ನುವ ಉತ್ತರದಿಂದ ಅರ್ಜಿದಾರರು ಸ್ವಂತ ಮನೆ ಕಟ್ಟಿ ವಾಸಿಸುವ ಆಸೆ ಕಮರಿದೆ.

Advertisement

ಇದರಲ್ಲಿ 1,033 ಮನೆ ರಹಿತ ಹಾಗೂ 479 ನಿವೇಶನ ರಹಿತ ಕುಟುಂಬಗಳಿವೆ. ಇದು ಎರಡು ವರ್ಷಗಳ ಹಿಂದೆ ನ.ಪಂ. ವತಿಯಿಂದ ನಡೆಸಿದ ಸರ್ವೆ ಕಾರ್ಯದ ವೇಳೆ ದಾಖಲಾದ ಅಂಕಿ ಅಂಶ. ಪ್ರಸ್ತುತ ನಿವೇಶನ, ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾವಿರ ದಾಟಿದೆ.

ಜಾಗ ಇಲ್ಲ – ಇದೆ..!
ಫಲಾನುಭವಿಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಅವರ್ಯಾರಿಗೂ ನಿವೇಶನ ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲೇ ಕಾಲ ಕಳೆಯಬೇಕಾದ ಸ್ಥಿತಿ. ಪ್ರತಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತದೆ. ಆಗ ನ.ಪಂ. ಅಧಿಕಾರಿಗಳು ನಗರದಲ್ಲಿ ಸರಕಾರಿ ಖಾಲಿ ಜಾಗ ಇಲ್ಲ ಎಂಬ ಉತ್ತರ ನೀಡುತ್ತಾರೆ. ನಗರದಲ್ಲಿ ಬೇಕಾದಷ್ಟು ಸರಕಾರಿ ಖಾಲಿ ಜಾಗ ಇದೆ ಎನ್ನುವುದು ಸದಸ್ಯರ ವಾದ. ಕಳೆದ ಸಭೆಯಲ್ಲಿ ಸದಸ್ಯ ಉಮ್ಮರ್‌ ಕೆ.ಎಸ್‌. ಅವರು ನಗರದಲ್ಲಿ 15 ಎಕ್ರೆಗೂ ಹೆಚ್ಚು ಸರಕಾರಿ ಖಾಲಿ ಜಾಗ ಇರುವ ಬಗ್ಗೆ ಪಹಣಿ ಪತ್ರ ಪ್ರದರ್ಶಿಸಿದರು.

ಈ ಬಗ್ಗೆ ಕಂದಾಯ ಅಧಿಕಾರಿಗಳು ಪರಿಶೀಲಿಸುವಂತೆ ಆಗ್ರಹಿಸಿದ್ದರು. ಹಲವು ಸಭೆಗಳಲ್ಲಿ ಈ ವಿಚಾರ ಪ್ರಸ್ತಾವಗೊಂಡಿದೆ. ಆದರೆ ಪರಿಹಾರ ಕಂಡಿಲ್ಲ. 2020ರೊಳಗೆ ಎಲ್ಲರಿಗೆ ಸೂರು ಕಲ್ಪಿಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಇಲ್ಲಿ 1,033 ಮನೆರಹಿತ ಕುಟುಂಬಗಳಿಗೆ ವಸತಿ ಯೋಜನೆ ಮೂಲಕ ಮನೆ ಕಟ್ಟಿಕೊಡಲು ಅವಕಾಶ ಇದೆ. ಆದರೆ ನಿವೇಶನ ರಹಿತ ಕುಟುಂಬಕ್ಕೆ ಜಾಗದ ವ್ಯವಸ್ಥೆ ಇಲ್ಲದಿದ್ದರೆ ಮನೆ ಕಟ್ಟುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಏನು ಸಮಸ್ಯೆ?
ಪಹಣಿ ಪತ್ರದಲ್ಲಿ ಖಾಲಿ ಜಾಗ ತೋರಿಸುತ್ತಿದ್ದರೂ ಅದು ಒತ್ತುವರಿ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ನ.ಪಂ. ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಒತ್ತುವರಿ ತೆರವು ಮಾಡಿ ಬಡವರಿಗೆ ನೀಡುವಂತೆ ಆಗ್ರಹಕ್ಕೆ ಸ್ಪಂದಿಸಲಾಗದ ಸ್ಥಿತಿ. ಎನ್‌ಒಸಿ ನೀಡುವ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡಿದ್ದರೆ ಖಾಲಿ ಜಾಗಕ್ಕೆ ಬರ ಬರುತ್ತಿರಲಿಲ್ಲ. ಆದರೆ ಈಗ ಅಂದು ಮಾಡಿದ ಎಡವಟ್ಟಿನಿಂದ ಬಡ ಕುಟುಂಬಗಳು ಮನೆ ಇಲ್ಲದೆ ಬೀದಿಗೆ ಬಂದಿವೆ.

Advertisement

ಖಾಸಗಿ ಜಾಗ ಖರೀದಿಗೆ ಸಚಿವರ ಸೂಚನೆ
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರ ಉಪಸ್ಥಿತಿಯಲ್ಲಿ ನಡೆದ ನ.ಪಂ. ಪ್ರಗತಿ ಪರಿಶೀಲನ ಸಭೆಯಲ್ಲಿ ನಿವೇಶನ ರಹಿತ ಕುಟುಂಬಗಳ ಬಗ್ಗೆ ಚರ್ಚೆ ನಡೆದಿತ್ತು. ನಗರ ಅಥವಾ ನಗರದಂಚಿನಲ್ಲಿರುವ ಖಾಸಗಿ ಭೂಮಿ ಖರೀದಿಸಿ ಮನೆ ನಿರ್ಮಿಸಲು ಬಳಸಬಹುದು. ಭೂಮಿ ಖರೀದಿಗೆ ಸರಕಾರವು ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಿದ್ದರು.

ಅರಣ್ಯ ತೊಡಕು..!
ನ.ಪಂ. ವ್ಯಾಪ್ತಿಯ ಕುಕ್ಕಾಜೆಕಾನದಲ್ಲಿ ಜಾಗ ಗುರುತಿಸಿದ್ದರೂ, ಅದು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಸೇರಿದೆ ಎನ್ನಲಾಗಿದೆ. ದುಗಲಡ್ಕದಲ್ಲಿ ಆಶ್ರಯ ಮನೆ ನಿವೇಶನಕ್ಕೆ 1.25 ಎಕ್ರೆ ಹಾಗೂ ಘನತ್ಯಾಜ್ಯ ವಿಲೇವಾರಿಗೆ 3.75 ಎಕ್ರೆ ಕಾದಿರಿಸಲಾಗಿತ್ತು. ಅದರಲ್ಲಿ ಘನತ್ಯಾಜ್ಯ ವಿಲೇಗೆಂದು ಮೀಸಲಿಟ್ಟ ಜಾಗವನ್ನೂ ನಿವೇಶನ ರಹಿತರಿಗೆ ನೀಡುವ ಉದ್ದೇಶಕ್ಕಾಗಿ ಬಳಸಲು ಪ್ರಸ್ತಾವಿಸಿ, ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ.

ಇಲಾಖೆಗೆ ಮಾಹಿತಿ
ಕುಕ್ಕಾಜೆ ಬಳಿ ಗುರುತಿಸಲಾದ ಜಾಗ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಸೇರಿದೆ ಎಂಬ ಕಾರಣದಿಂದ ಆಕ್ಷೇಪ ವ್ಯಕ್ತವಾಗಿತ್ತು. ತಹಶೀಲ್ದಾರ್‌ ಅವರು ಈ ಜಾಗ ಒದಗಿಸುವ ಬಗ್ಗೆ ಪೂರಕ ಸ್ಪಂದನೆ ನೀಡಿದ್ದಾರೆ. ನಗರದಲ್ಲಿನ ಸರಕಾರಿ ಖಾಲಿ ಜಾಗವನ್ನು ಗುರುತಿಸಿ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ.
ಮತ್ತಡಿ
ಮುಖ್ಯಾಧಿಕಾರಿ, ನ.ಪಂ. ಸುಳ್ಯ

ಜಾಗ ಇದೆ
ನಗರದಲ್ಲಿ ಸರಕಾರಿ ಖಾಲಿ ಜಾಗ ಬೇಕಾದಷ್ಟು ಇದೆ. ಅದನ್ನು ಪಹಣಿ ಪತ್ರ ಸಹಿತ ತೋರಿಸಲಾಗಿದೆ. ಹೀಗಾಗಿ ಜಾಗ ಇಲ್ಲ ಎಂಬ ನೆಪವೊಡ್ಡಿ ಬಡ ಕುಟುಂಬಗಳಿಗೆ ನಿವೇಶನ ನೀಡದಿರುವುದು ಸರಿಯಲ್ಲ. ನ.ಪಂ. ವ್ಯಾಪ್ತಿಗೆ ಸೇರಿದ ಸರಕಾರಿ ಖಾಲಿ ಜಾಗ ಸ್ವಾಧೀನಪಡಿಸಿಕೊಂಡು ಅದರಲ್ಲಿ ಬಡವರಿಗೆ ಮನೆ ಕಟ್ಟಿ ಕೊಡಬೇಕು.
-ಉಮ್ಮರ್‌ ಕೆ.ಎಸ್‌.,
ಸದಸ್ಯರು, ನ.ಪಂ. ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next