Advertisement

ಹರಿದು ಬರಲಿದೆ ಸಾವಿರಾರು ಕೋಟಿ ಬಂಡವಾಳ

10:16 AM Jan 27, 2020 | Lakshmi GovindaRaj |

ಬೆಂಗಳೂರು: “ಹಿಂಜರಿಕೆಯಿಂದಲೇ ನಾನು ದಾವೋಸ್‌ ಪ್ರವಾಸ ಕೈಗೊಂಡೆ. ಆದರೆ, ರಾಜ್ಯದ ಯುವಜನತೆ ಹಾಗೂ ರೈತರಿಗೆ ಮುಂದಿನ ದಿನಗಳಲ್ಲಿ ಲಾಭವಾಗುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ದಾವೋಸ್‌ ಪ್ರವಾಸ ಫ‌ಲಪ್ರದವಾಗಿದೆ. ದಾವೋಸ್‌ಗೆ ನಾನು ಹೋಗದಿದ್ದರೆ ಅಕ್ಷಮ್ಯ ಅಪರಾಧವಾಗುತ್ತಿತ್ತು ಎಂದು ನನಗೀಗ ಅನ್ನಿಸಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಸ್ವಿಡ್ಜರ್‌ಲ್ಯಾಂಡ್‌ನ‌ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲೂಇಎಫ್) 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗಿದ ಸಿಎಂ, ಶನಿವಾರ ತಮ್ಮ ಗೃಹ ಕಚೇರಿ “ಕೃಷ್ಣಾ’ದಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಇದರಿಂದಾಗಿ ಇಂತಿಷ್ಟು ಹಣ ಹೂಡಿಕೆ ಯಾಗಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ರಾಜ್ಯಕ್ಕೆ ಹರಿದು ಬರಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಬಂಡವಾಳ ಹರಿದು ಬರುವ ಕನಸು ನನಸಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಜಗತ್ತಿನಲ್ಲಿ ಯಾವುದೇ ದೇಶ, ರಾಜ್ಯ ಮಾಡದಂತಹ “ಸೆಂಟರ್‌ ಫಾರ್‌ ಇಂಟರ್‌ನೆಟ್‌ ಆಫ್ ಎಥಿಕಲ್‌ ಥಿಂಗ್ಸ್‌’ ಒಪ್ಪಂದಕ್ಕೆ ಅನೌಪಚಾರಿಕವಾಗಿ ಸಹಿ ಹಾಕಲಾಗಿದೆ. ಈ ಒಪ್ಪಂದಕ್ಕೆ ಸಹಿ ಮಾಡಿರುವ ಡಬ್ಲೂಇಎಫ್ ವ್ಯವಸ್ಥಾಪಕ ನಿರ್ದೇಶಕ ಮೊರಾಟ್‌ ಸೋನ್ಮೆಜ್‌, “ಯಾರೂ ಮಾಡದ ಕೆಲಸವನ್ನು ತಾವು ಮಾಡಿದ್ದು, ಇದು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ದೊಡ್ಡ ಪ್ರಮಾಣದಲ್ಲಿ ಲಾಭ ತಂದು ಕೊಡಲಿದೆ’ ಎಂದು ಹೇಳಿರುವುದು ಸಂತಸ ತಂದಿದೆ ಎಂದರು.

ಉದ್ಯಮಿಗಳಿಂದ ಸಕಾರಾತ್ಮಕ ಸ್ಪಂದನೆ: ಸುಮಾರು 40ಕ್ಕೂ ಹೆಚ್ಚು ಉದ್ಯಮಿಗಳು, ಹೂಡಿಕೆದಾರರೊಂದಿಗೆ ಚರ್ಚಿಸಲಾಯಿತು. ಜಗತ್ತಿನ ಪ್ರತಿಷ್ಠಿತ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್‌, ಅರವಿಂದ ಕಿರ್ಲೋಸ್ಕರ್‌, ಮಹೇಂದ್ರ, ಜನರಲ್‌ ಎಲೆಕ್ಟ್ರಿಕಲ್ಸ್‌, ಡಸ್ಸೋ ಸಿಸ್ಟಮ್‌, ಲಾಕ್ಹೀಡ್‌ ಮಾರ್ಟಿನ್‌, ಲುಲು ಗ್ರೂಪ್‌, ಡೊಮೆಕ್‌, ನೆಸ್ಲೆ, ದಾಲ್ಮಿಯಾ, ಪ್ರೊಕ್ಟರ್‌ ಆ್ಯಂಡ್‌ ಗ್ಯಾಂಬ್ಲ್, ನೋವಾ ನಾಸ್ಡಿಕ್‌ ಹಾಗೂ ವೋಲ್ವೋ ಸೇರಿ ಹಲವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ, ಕೈಗಾರಿಕೆಗಳ ಅಭಿವೃದ್ಧಿಗಿರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಉದ್ಯೋಗ ಸೃಷ್ಟಿ ಮೂಲಕ ಆರ್ಥಿಕ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂಬು ದನ್ನು ತಿಳಿಸಲಾಗಿದೆ. “ಈಸ್‌ ಆಫ್ ಡೂಯಿಂಗ್‌ ಬಿಸಿನೆಸ್‌’ ಸುಧಾರಣೆಗೆ ರಾಜ್ಯ ಸರ್ಕಾರ ಕೈಗೊಂಡಿ ರುವ ಕ್ರಮಗಳ ಕುರಿತು ವಿವರಿಸಲಾಗಿದೆ. ಸಚಿವ ಜಗದೀಶ ಶೆಟ್ಟರ್‌ ಅವರು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಪ್ರಧಾನ ಮಂತ್ರಿ ಹಾಗೂ ಎಮಿರೇಟ್‌ ಆಫ್ ದುಬೈನ ದೊರೆ ಶೇಕ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕೊ¤ಮ್‌ ಅವರನ್ನು ಭೇಟಿಯಾಗಿ ರಾಜ್ಯದ ಏಕರೂಪದ ಬೆಳವಣಿಗೆಗೆ ಸಹಕಾರ ಕೋರಿದರು ಎಂದು ತಿಳಿಸಿದರು.

Advertisement

ಈಗಾಗಲೇ ಮಾತುಕತೆ ನಡೆಸಿರುವ ಕಂಪನಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಪತ್ರ ವ್ಯವಹಾರ ನಡೆಸಲಾಗುವುದು. ದಾವೋಸ್‌ ವಾರ್ಷಿಕ ಸಭೆಯಲ್ಲಿ ಕರ್ನಾಟಕ, ಬೆಂಗಳೂರು ಕುರಿತೇ ಹೆಚ್ಚು ಚರ್ಚೆಯಾಗಿ ವ್ಯಾಪಕ ಪ್ರಚಾರ ಸಿಕ್ಕಿತು. ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಅವರು 100 ಉದ್ಯಮಿ ಗಳೊಂದಿಗೆ ನಿಂತು ದೇಶ ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದರು. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಕರ್ನಾಟಕದ ಪೆವಿಲಿಯನ್‌ ಆಕರ್ಷಣೀಯ ಕೇಂದ್ರ: ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಡಬ್ಲೂಇಎಫ್ ವಾರ್ಷಿಕ ಸಭೆಯಲ್ಲಿ ಕರ್ನಾಟಕದ ಪೆವಿಲಿಯನ್‌ ಆಕರ್ಷಣೀಯ ಕೇಂದ್ರವಾಗಿತ್ತು. ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ತಂಡ ನಮ್ಮ ಪೆವಿಲಿಯನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಹಿತಿ ಪಡೆಯಿತು. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಅವರು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿದ್ದು, ಆ ಹಾದಿಯಲ್ಲಿ ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದ್ದು ಸಂತಸ ತಂದಿದೆ ಎಂದರು.

ಉಡುಪಿ ಮೂಲದ ಸಂಸದ ಭೇಟಿ: ಕರ್ನಾಟಕ ಪೆವಿಲಿಯನ್‌ಗೆ ಸಾಕಷ್ಟು ಯುವಜನತೆ ಭೇಟಿ ನೀಡಿದ್ದರು. ಉಡುಪಿ ಮೂಲದ ವ್ಯಕ್ತಿಯೊಬ್ಬರು 40 ವರ್ಷ ಗಳಿಂದ ಸ್ವಿಡ್ಜರ್‌ಲ್ಯಾಂಡ್‌ನ‌ಲ್ಲಿ ನೆಲೆಸಿದ್ದು, ಸಂಸದರಾಗಿದ್ದಾರೆ. ಅವರು ಬೆಳಗ್ಗೆ, ಸಂಜೆ ಪೆವಿಲಿಯನ್‌ಗೆ ಬಂದು ಹೋಗುತ್ತಿದ್ದರು. ಸ್ವಿಡ್ಜರ್‌ಲ್ಯಾಂಡ್‌ ವತಿಯಿಂದ ಭಾರತ ಹಾಗೂ ಕರ್ನಾಟಕಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳಿಗೆ ರಾಯಭಾರಿಯಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದು ಖುಷಿಯಾಯಿತು ಎಂದು ಶೆಟ್ಟರ್‌ ಹೇಳಿ ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಕಾರ್ಯದರ್ಶಿ ಸೆಲ್ವಕುಮಾರ್‌, ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ್‌ ಉಪಸ್ಥಿತರಿದ್ದರು.

ಪ್ರಮುಖ ಹೂಡಿಕೆಗಳು
* ಲುಲು ಕಂಪನಿಯು 2,000 ಕೋಟಿ ರೂ.ಬಂಡವಾಳ ಹೂಡಿಕೆಗೆ ಒಪ್ಪಿದೆ. ತರಕಾರಿ, ಹಣ್ಣು, ಹೂ ಇನ್ನಿತರ ಬೆಳೆಗಳನ್ನು ನಗರಗಳಿಗೆ ಸಾಗಿಸುವ ಸಂಪರ್ಕ ಜಾಲ ಕಲ್ಪಿಸಲು ಆಸಕ್ತಿ ತೋರಿದೆ. ಇದರಿಂದ ರೈತರ ಬೆಳೆಗಳು ಹಾಳಾಗದೆ ಬಹು ಬೇಗನೇ ಮಾರುಕಟ್ಟೆ ತಲುಪಿ ಉತ್ತಮ ಬೆಲೆ ಸಿಗುವಲ್ಲಿ ಸಹಕಾರಿ ಯಾಗುವ ನಿರೀಕ್ಷೆ.

* ಬಹರೇನ್‌ನ ಎಕನಾಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ನೊಂದಿಗೆ ಫಿನ್‌ಟೆಕ್‌, ಕೃತಕ ಬುದ್ಧಿಮತ್ತೆ ಹಾಗೂ ಸೈಬರ್‌ ಸುರಕ್ಷತೆ ವಿಷಯಗಳಲ್ಲಿ ಸಹಯೋಗ, ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ.

* ನೋವೋ ನೋಸ್ಡೆಕ್‌ ಕಂಪನಿ, ರಾಜ್ಯದ ಮಧುಮೇಹಿಗಳ ಆರೋಗ್ಯ ಸುಧಾ ರಣೆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ನಿರ್ವಹಿಸಲು ಒಪ್ಪಿದೆ. ಇದರಿಂದ ರಾಜ್ಯದ ಸಾವಿರಾರು ಮಧುಮೇಹಿಗಳಿಗೆ ರೋಗನಿರ್ವಹಣೆ ಜತೆಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವಲ್ಲಿ ಸಹಕಾರಿಯಾಗುವ ನಿರೀಕ್ಷೆ.

* ಉದ್ಯಮಿ ಲಕ್ಷ್ಮೀ ಮಿತ್ತಲ್‌ ಅವರೊಂದಿಗೆ ಚರ್ಚೆ. ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಹೂಡಿಕೆಗೆ ಲಕ್ಷ್ಮೀ ಮಿತ್ತಲ್‌ಗೆ ಮನವಿ. ಉಕ್ಕು ಕಾರ್ಖಾನೆ ಸ್ಥಾಪನೆ ಆಹ್ವಾನಕ್ಕೆ ಸ್ಪಂದನೆ.

Advertisement

Udayavani is now on Telegram. Click here to join our channel and stay updated with the latest news.

Next