Advertisement

ಸದ್ದು ಮಾಡಿ ಸುದ್ದಿಯಾದವರು; ಸಣ್ಣ ಪರಿಚಯ ಇಲ್ಲಿದೆ…

01:17 AM Dec 27, 2022 | Team Udayavani |

ಕಣ್ಣು ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ದಿನಗಳು ಜಾರಿ ಹೋಗಿರುತ್ತವೆ, ವರ್ಷಗಳು ಉರುಳಿಹೋಗಿರುತ್ತವೆ. 2022ರ ಅಂತಿಮ ಘಟ್ಟಕ್ಕೆ ನಾವು ಬಂದಿದ್ದೇವೆ. ಇತಿಹಾಸ ಸೇರುತ್ತಿರುವ ಈ ವರ್ಷವನ್ನೊಮ್ಮೆ ಮೆಲುಕು ಹಾಕಿ ನೋಡಿದರೆ ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಸುದ್ದಿಯಾದ ಕೆಲವರ ಮುಖಗಳು ನಮ್ಮ ಕಣ್ಣೆದುರು ಬರುತ್ತವೆ. ಈ ವರ್ಷ ಸದ್ದು ಮಾಡಿ ಸುದ್ದಿಯಾದ ವ್ಯಕ್ತಿಗಳ ಸಣ್ಣ ಪರಿಚಯ ಇಲ್ಲಿದೆ.

Advertisement

1.ಪ್ರಧಾನಿ ಮೋದಿ
ಜಾಗತಿಕ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿ ಅವರು ಈ ವರ್ಷವೂ ತಮ್ಮ ವರ್ಚಸ್ಸನ್ನು ವಿಶ್ವಮಟ್ಟದಲ್ಲಿ ವೃದ್ಧಿಸಿಕೊಂಡಿದ್ದಾರೆ. ರಷ್ಯಾ- ಉಕ್ರೇನ್‌ ಯುದ್ಧದಲ್ಲಿ ಹೆಚ್ಚಿನ ಹಾನಿ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. ಬಲಿಷ್ಠ ರಾಷ್ಟ್ರಗಳು ರಷ್ಯಾಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿದರೂ ಮೋದಿ ಅವರು ರಷ್ಯಾ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಹೊರತಾಗಿಯೂ “ಯಾವುದೇ ಬಿಕ್ಕಟ್ಟಿಗೆ ಯುದ್ಧ ಪರಿಹಾರವಲ್ಲ’ ಎಂದು ಶಾಂತಿ ಮಂತ್ರ ಪಠಿಸಿದ್ದು ವಿಶ್ವ ನಾಯಕರ ಮೆಚ್ಚುಗೆ ಗಳಿಸಿತು. ರಷ್ಯಾ ಜತೆಗಿನ ಮೋದಿ ಅವರ ವಿದೇಶಾಂಗ ನೀತಿ ಭಾರತಕ್ಕೆ ಆರ್ಥಿಕವಾಗಿ ಸಾಕಷ್ಟು ನೆರವನ್ನೂ ನೀಡಿತು. ಜತೆಗೆ ರಷ್ಯಾದ ಯುದ್ಧ ದುಸ್ಸಾಹಸ ಧೋರಣೆ ತಡೆಯುವಲ್ಲೂ ಯಶಸ್ವಿಯಾದರು. ಇನ್ನು ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸಿದ್ದು, ವಿಶ್ವಮಟ್ಟದಲ್ಲಿ ಮೋದಿ ವರ್ಚಸ್ಸು ಮತ್ತಷ್ಟು ವೃದ್ಧಿಸಿತು.

2.ದ್ರೌಪದಿ ಮುರ್ಮು
ದ್ರೌಪದಿ ಮುರ್ಮು 2022ರ ಜುಲೈ 25ರಂದು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಈ ಹುದ್ದೆ ಅಲಂಕರಿಸಿದ ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರತಿಭಾ ಪಾಟೀಲ್‌ ಬಳಿಕ ರಾಷ್ಟ್ರಪತಿ ಸ್ಥಾನಕ್ಕೇರಿದ 2ನೇ ಮಹಿಳೆಯಾಗಿದ್ದಾರೆ. 64 ವರ್ಷದ ಮುರ್ಮು ಅವರು ಅತ್ಯಂತ ಕಿರಿಯ ವಯಸ್ಸಿಗೆ ರಾಷ್ಟ್ರಪತಿ ಸ್ಥಾನ ಪಡೆದ ಖ್ಯಾತಿ ಗಳಿಸಿದ್ದಾರೆ.

3.ಕಿಲಿಯನ್‌ ಎಂಬಪ್ಪೆ ಫ‌ುಟ್‌ಬಾಲ್‌ ಜಗತ್ತಿನ ನವತಾರೆ.
ಫ್ರಾನ್ಸ್‌ ತಂಡವನ್ನು ಪ್ರತಿನಿಧಿಸುವ ಎಂಬಪ್ಪೆ, ಈ ಬಾರಿಯ ಕತಾರ್‌ ವಿಶ್ವಕಪ್‌ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸತತ 3 ಗೋಲು ಬಾರಿಸಿದ್ದಾರೆ. ವಿಶ್ವಕಪ್‌ವೊಂದರಲ್ಲಿ ಈ ರೀತಿ ಹ್ಯಾಟ್ರಿಕ್‌ ಸಾಧನೆಗೈದ ಮೊದಲ ಆಟಗಾರ ಇವರು. ಈ ವಿಶ್ವ ಕಪ್‌ನಲ್ಲಿ 9 ಗೋಲು ಬಾರಿಸಿ ಅತ್ಯಧಿಕ ಗೋಲು ಗಳಿಸಿದ ದಾಖಲೆ ನಿರ್ಮಿ­ಸಿದ್ದಾರೆ. ಬಲಿಷ್ಠ ತಂಡಗಳ ವಿರುದ್ಧ ಅತ್ಯದ್ಭುತ ಆಟವಾಡಿ ಚೆಂಡನ್ನು ಗೋಲು­ ಪೆಟ್ಟಿಗೆಗೆ ಅಟ್ಟುತ್ತಿದ್ದ ಪರಿ ನೋಡಿ­ದರೆ ಭವಿಷ್ಯದಲ್ಲಿ ಎಂಬಪ್ಪೆ ಶ್ರೇಷ್ಠ ಆಟಗಾರನ ಪಟ್ಟಕ್ಕೇರುವ ಎಲ್ಲ ಸಾಧ್ಯತೆಯೂ ಇದೆ.

4.ಸದ್ಗುರು
ಇಶಾ ಫೌಂಡೇಶನ್‌ ಮುಖ್ಯಸ್ಥ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು “ಮಣ್ಣು ಸಂರಕ್ಷಿಸಿ’ ಅಭಿಯಾನದಡಿ 100 ದಿನಗಳ ಕಾಲ ಬೈಕ್‌ ಮೂಲಕ 30 ಸಾವಿರ ಕಿ.ಮೀ. ಸಂಚರಿಸಿ, 27 ದೇಶಗಳಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದರು.

Advertisement

64 ವರ್ಷ ಪೂರೈಸಿರುವ ಅವರು ಇಳಿ ವಯಸ್ಸಿನಲ್ಲೂ ಬುಲೆಟ್‌ ಬೈಕ್‌ನಲ್ಲಿ ವಿಶ್ವ ಪರ್ಯಟನೆ ಮಾಡಿ ಜಾಗತಿಕ ನಾಯಕರನ್ನು ಭೇಟಿ ಮಾಡಿ ಸುಸ್ಥಿರ ಪರಿಸರಕ್ಕಾಗಿ ತುರ್ತಾಗಿ ಮಣ್ಣು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಕೋರಿಕೊಂಡರು. ಈ ಹಿಂದೆ “ರ್ಯಾಲಿ ಫಾರ್‌ ರಿವರ್‌’ ಅಭಿಯಾನ ನಡೆಸಿ ನದಿಗಳ ಉಳಿವಿಗೆ ಹಲವು ರಾಜ್ಯಗಳನ್ನು ಸುತ್ತಿದ್ದರು.

5.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾ ಧಿಕಾರಿ


ಡಾ|ಡಿ. ವೀರೇಂದ್ರ ಹೆಗ್ಗಡೆ (73) ಅವರು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡು ಜು.21ರಂದು ರಾಜ್ಯಸಭೆ ಪ್ರವೇಶಿಸಿ ದರು. ಪದ್ಮವಿಭೂಷಣ ಪುರಸ್ಕೃತ  ಹೆಗ್ಗಡೆ ಅವರು ಧಮìಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಸಾಕಷ್ಟು ಯೋಜನೆಗಳನ್ನು ಕೈಗೊಂಡು ಲಕ್ಷಾಂತರ ಮಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.

6.ಲಿಯೋನೆಲ್‌ ಮೆಸ್ಸಿ


ಫ‌ುಟ್ಬಾಲ್‌ನಲ್ಲಿ ಲಿಯೋನೆಲ್‌ ಮೆಸ್ಸಿ ಜಗತ್ತಿನಾದ್ಯಂತದ ಅಭಿಮಾನಿಗಳ ಆರಾಧ್ಯದೈವ. ಈ ಬಾರಿಯ ಕತಾರ್‌ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್‌ ಮಣಿಸಲು ಮೆಸ್ಸಿ ಮತ್ತೊಮ್ಮೆ ಅದ್ಭುತ ಆಟವಾಡಿ ರೋಮಾಂಚನ ಉಂಟುಮಾಡಿದರು. ಈವರೆಗೆ ಮೆಸ್ಸಿ 700ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. 7 ಬಾರಿ “ವರ್ಷದ ಫ‌ುಟ್ಬಾಲಿಗ’, 6 ಬಾರಿ”ಗೋಲ್ಡನ್‌ ಶೂ’ ಪ್ರಶಸ್ತಿ ಪಡೆದಿದ್ದಾರೆ.

7.ಸಿಜೆಐ ನ್ಯಾ| ಡಿ.ವೈ.ಚಂದ್ರಚೂಡ್‌


ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ| ಡಿ.ವೈ.ಚಂದ್ರಚೂಡ್‌ ನ.20ರಂದು ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿ 2024 ನ.10ಕ್ಕೆ ಪೂರ್ಣಗೊಳ್ಳಲಿದ್ದು, ಸುದೀರ್ಘ‌ 2 ವರ್ಷ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಅವರ ತಂದೆ ನ್ಯಾ| ವೈ.ಸಿ. ಚಂದ್ರಚೂಡ್‌ ಕೂಡ ದೀರ್ಘಾವಧಿ ಸಿಜೆಐ ಆಗಿದ್ದರು. 37 ವರ್ಷಗಳ ಬಳಿಕ ಅವರ ಪುತ್ರ ಆ ಸ್ಥಾನಕ್ಕೇರಿದ್ದಾರೆ.

8.ರಾಹುಲ್‌ ಗಾಂಧಿ
ದೇಶವನ್ನು ಒಗ್ಗೂಡಿಸುವ ಮಂತ್ರದ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ವರ್ಷದ ದ್ವಿತೀಯಾರ್ಧದಲ್ಲಿ ಹೆಚ್ಚು ಸುದ್ದಿ ಯಾದರು. ಸೆ. 8ರಂದು ರಾಹುಲ್‌ ನೇತೃತ್ವದ ಭಾರತ್‌ ಜೋಡೋ ಯಾತ್ರೆಗೆ ಚಾಲನೆ ಸಿಕ್ಕಿತು.


ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ 3,570 ಕಿ.ಮೀ. ನಡೆಯುವ ಸಂಕಲ್ಪದೊಂದಿಗೆ  ಯಾತ್ರೆ ಆರಂಭವಾಯಿತು. ಈ ಯಾತ್ರೆಯು ರಾಹುಲ್‌ಗೆ ಹೊಸ ಮೈಲೇಜ್‌ ಕೊಟ್ಟು, ಪಕ್ಷದ ಪುನಶ್ಚೇತನಕ್ಕೂ ನೆರವಾಗಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್‌ನದ್ದು.

ವಿದೇಶಿ ನಾಯಕರು
9.ವ್ಲಾದಿಮಿರ್‌ ಪುತಿನ್‌ ರಷ್ಯಾ ಅಧ್ಯಕ್ಷ


ರಷ್ಯಾ ಅಧ್ಯಕ್ಷ ಪುತಿನ್‌ ಅವರನ್ನು 2022ರ “ಜಾಗತಿಕ ಖಳನಾಯಕ’ ಎಂದರೆ ತಪ್ಪಾಗಲಾರದು.  ವಿಶ್ವದ ಬಲಿಷ್ಠ ರಾಷ್ಟ್ರಗಳ ವಿರೋಧದ ಮಧ್ಯೆಯೂ ನೆರೆಯ ಪುಟ್ಟ ರಾಷ್ಟ್ರ ಉಕ್ರೇನ್‌ ಮೇಲೆ ಯುದ್ಧ ಸಾರಿದರು. ಆ ದೇಶ ನಿರಾಯಾಸವಾಗಿ ತನ್ನ ತೆಕ್ಕೆಗೆ ಬರುತ್ತದೆ ಎಂದೇ ಪುತಿನ್‌ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. 10 ತಿಂಗಳಿಂದ ಯುದ್ಧ ನಡೆ ಯುತ್ತಿದೆ. ಆರ್ಥಿಕ ದಿಗ್ಬಂಧನದಿಂದ ರಷ್ಯಾ ಬಡವಾಯಿತು ಮತ್ತು ಏಕಾಂಗಿಯಾಯಿತು. ಆರ್ಥಿಕತೆ ನೆಲಕಚ್ಚಿತು. ಸಾವಿರಾರು ಸೈನಿಕರು ಬಲಿಯಾದರು, ಅನಾರೋಗ್ಯವೂ ಪುತಿನ್‌ಗೆ ಶಾಪವಾಗಿ ಕಾಡಿತು.

10.ಝೆಲೆನ್‌ಸ್ಕಿ ಉಕ್ರೇನ್‌ ಅಧ್ಯಕ್ಷ


ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡುವವರೆಗೂ “ಝೆಲೆನ್‌ಸ್ಕಿ’ ಎಂಬ ಹೆಸರನ್ನು ಬಹುತೇಕ ಮಂದಿ ಕೇಳಿಯೇ ಇರಲಿಕ್ಕಿಲ್ಲ. ಉಕ್ರೇನ್‌ ಮೇಲೆ ಯಾವಾಗ ಪುತಿನ್‌ “ಯುದ್ಧ’ವೆಂಬ ಅಸ್ತ್ರ ಪ್ರಯೋಗಿಸಿದರೋ ಆಗ ಝೆಲೆನ್‌ಸ್ಕಿ ಎಂಬ “ಶಕ್ತಿ’ಯ ಪರಿಚಯವಾಯಿತು. ಹಲವು ಅವಕಾಶಗಳಿದ್ದರೂ ಯುದ್ಧದ ವೇಳೆ ದೇಶ ಬಿಟ್ಟು ಓಡಿ ಹೋಗಲಿಲ್ಲ. ತನ್ನ ನಾಗರಿಕರ ಬೆನ್ನಿಗೆ ನಿಂತು, ಧೈರ್ಯ ತುಂಬಿ, ಪ್ರತಿರೋಧದ ಕಿಚ್ಚು ಹೊತ್ತಿಸಿ ಶತ್ರುಗಳ ವಿರುದ್ಧ ಪ್ರಬಲ ಹೋರಾಟ ಮುಂದುವರಿಸುವಂತೆ ಮಾಡುತ್ತಿದ್ದಾರೆ. ಝೆಲೆನ್‌ಸ್ಕಿ ಅವರೇ 2022ರ ನೈಜ ಹೀರೋ.

11.ಎಲಾನ್‌ ಮಸ್ಕ್  ಟ್ವಿಟರ್‌ ಮಾಲಕ


ವಿಶ್ವದಲ್ಲೇ ಎರಡನೇ ಅತೀದೊಡ್ಡ ಶ್ರೀಮಂತ, ಉದ್ಯಮಿ ಎಲಾನ್‌ ಮಸ್ಕ್ ಈ ವರ್ಷ ಸುದ್ದಿಯಾಗಿದ್ದು ಟ್ವಿಟರ್‌ ಖರೀದಿ ಮೂಲಕ. ಅಕ್ಟೋಬರ್‌ನಲ್ಲಿ 44 ಶತಕೋಟಿ ಡಾಲರ್‌ಗೆ ಟ್ವಿಟರ್‌ ಖರೀದಿಸಿದರು. ಟ್ವಿಟರ್‌ಗೆ ಪ್ರವೇಶಿಸುತ್ತಲೇ ಅರ್ಧಕ್ಕೂ ಹೆಚ್ಚು ಸಿಬಂದಿಯನ್ನು ವಜಾ ಮಾಡಿದರು. ದೃಢೀಕೃತ ಖಾತೆಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡರು, ಬ್ಲೂಟಿಕ್‌ ಚಂದಾದಾರಿಕೆ ಪರಿಚಯಿಸಿ ಮುಜುಗರಕ್ಕೀಡಾದರು, ಕೊನೆಗೆ ತಾವು ಸಿಇಒ ಆಗಿ ಉಳಿಯಬೇಕೇ, ಬೇಡವೇ ಎಂಬ ಕುರಿತು ತಾವೇ ನಡೆಸಿದ ವೋಟಿಂಗ್‌ನಲ್ಲಿ ಸೋಲುಂಡರು.

ಸಂಕಲನ: ಹಲೀಮತ್‌ ಸಅದಿಯಾ – ನಿರಂಜನ್‌ 
ವಿನ್ಯಾಸ: ಸತೀಶ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next