Advertisement

ಸಂಪುಟದಿಂದ  ಹೊರಬಿದ್ದವರು..

11:22 PM Aug 04, 2021 | Team Udayavani |

ಲಕ್ಷ್ಮಣ ಸವದಿ:

Advertisement

ಉಪ ಮುಖ್ಯಮಂತ್ರಿಯಾಗಿದ್ದವರು ಹಾಗೂ ಪ್ರಬಲ ಸಮುದಾಯ (ಲಿಂಗಾಯತ)ಕ್ಕೆ ಸೇರಿದವರೂ ಆಗಿದ್ದರು. ಉತ್ತಮ ಪ್ರದರ್ಶನ ತೋರುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ವಿಶ್ವಾಸ ಉಳಿಸಿಕೊಂಡಿದ್ದರೆ, ಮುಖ್ಯಮಂತ್ರಿಯಾಗಿ ಹೊರಹೊಮ್ಮಬಹು ದಿತ್ತು. ಆದರೆ, ಖಾತೆ ನಿರ್ವಹಣೆಯಲ್ಲಿ ಎಡವಿದರು. ಸಾರಿಗೆ ನೌಕರರ ಮುಷ್ಕರ ನಿರ್ವಹಿಸಿದ ರೀತಿ, ನಷ್ಟದಿಂದ ಹೊರಬರದ ಸಾರಿಗೆ ನಿಗಮಗಳು, ಸಾರಿಗೆ ಇಲಾಖೆಯಲ್ಲಿ ಕೂಡ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ಆಗದಿರುವುದು ಮುಳುವಾಯಿತು. ಇದೆಲ್ಲ ದರ ಜತೆಗೆ ಪಕ್ಷದಲ್ಲಿ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿ ಕೊಂಡಿದ್ದರು. ಅದು ಕೂಡ ಹೊರಗುಳಿ ಯಲು ಕಾರಣವಾಯಿತು ಎನ್ನಲಾಗಿದೆ.

ಸಿ.ಪಿ. ಯೋಗೇಶ್ವರ :

ಖಾತೆ ನಿರ್ವಹಣೆಗಿಂತ ಹೆಚ್ಚು ಸರಕಾರ ಬೀಳಿಸುವಲ್ಲಿ ಸಕ್ರಿಯರಾಗಿದ್ದರು. ಕೆಲವು ನಾಯಕರ ಸಿಡಿಗಳು ಇವರ ಬಳಿ ಇದ್ದವು. ಅದರಿಂದ ಬ್ಲಾಕ್‌ವೆುàಲ್‌ ತಂತ್ರ ಅನುಸರಿ ಸುತ್ತಿದ್ದರು ಎಂಬ ಆರೋಪ ಇದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ ಸೋತ ಅವರನ್ನು ವಿಧಾನ ಪರಿಷತ್‌ಗೆ ಕರೆತಂದು ಸಚಿವರನ್ನಾಗಿ ಮಾಡಲಾಗಿತ್ತು. ಆದರೂ ಪಕ್ಷಕ್ಕೆ ಅವರ ಕೊಡುಗೆ ನಗಣ್ಯ. ಜತೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಕಾಣಿಸಿಕೊಂಡಿದ್ದರು. ಇವೆಲ್ಲವೂ ಅವರನ್ನು ಸಂಪುಟದಿಂದ ಕೈಬಿಡಲು ಕೊಡುಗೆ ನೀಡಿವೆ.

ಅರವಿಂದ ಲಿಂಬಾವಳಿ:

Advertisement

ಕೇವಲ ಆರು ತಿಂಗಳಲ್ಲೇ ಯಾವುದೇ ಸೂಕ್ತ ಕಾರಣಗಳಿಲ್ಲದೆ ಅರವಿಂದ ಲಿಂಬಾವಳಿ ಸಂಪುಟದಿಂದ ಹೊರಗುಳಿದಿದ್ದಾರೆ. ಖಾತೆ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಹೇಳಲೂ ಆಗುವುದಿಲ್ಲ. ಬೆಂಗಳೂರು “ಕೋಟಾ’ ಭರ್ತಿ ಆಗಿದ್ದರಿಂದ ಹೊರಗಿಡಲಾಯಿತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, ನಗರದಲ್ಲಿ ತಮ್ಮ ಹಿಡಿತ ಸಾಧಿಸುವ ಉದ್ದೇಶದಿಂದ ಹಿರಿಯ ನಾಯಕರೊಬ್ಬರ ಪ್ರಭಾವ ಇದರ ಹಿಂದೆ ಕೆಲಸ ಮಾಡಿದೆ ಎನ್ನಲಾಗಿದೆ. ಅಂದಹಾಗೆ, ಲಿಂಬಾವಳಿ ಅವರು ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೆ ಬಂದಾಗಲೂ ಪೂರ್ಣಾವಧಿ ಸಚಿವರಾಗಲು ಸಾಧ್ಯವಾಗಲಿಲ್ಲ.

ಜಗದೀಶ್‌ ಶೆಟ್ಟರ್‌ :

ಮುಖ್ಯಮಂತ್ರಿ ಘೋಷಣೆಯಾದ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ತಮಗೆ ಸಚಿವ ಸ್ಥಾನ ನಿರಾಕರಿಸಿ, “ಹಿರಿಯ ಮುಖಂಡನಾಗಿ ಮಾರ್ಗದರ್ಶನ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದರು. ಹಿರಿಯರಿಂದ ಮನವೊಲಿಕೆ ಪ್ರಯತ್ನ ನಡೆದರೂ ಫ‌ಲಪ್ರದವಾಗಲಿಲ್ಲ. ಇವರ ನಿರಾಕರಣೆ ಹಿಂದೆ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸುವ ತಂತ್ರಗಾರಿಕೆ ಇತ್ತೂ ಎಂದು ಹೇಳಲಾಗುತ್ತಿದೆ.

 ಸುರೇಶ್‌ ಕುಮಾರ್‌ :

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸಿದ ಅನುಭವಿ ಸಚಿವರಾಗಿ ದ್ದರು. ಆದರೆ, ಪ್ರಾದೇಶಿಕ ವಾರು ಮತ್ತು ಜಾತಿವಾರು ನೋಡಿದಾಗ ಸಂಪುಟ ಭರ್ತಿಯಾಗಿತ್ತು. ಬೆಂಗಳೂರಿಗೆ ಈಗಾಗಲೇ ಏಳು ಜನ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನು ಜಾತಿವಾರು ಲೆಕ್ಕಹಾಕಿದರೂ ಬ್ರಾಹ್ಮಣ ಕೋಟಾದಲ್ಲಿ ಇಬ್ಬರಿಗೆ (ಶಿವರಾಮ್‌ ಹೆಬ್ಟಾರ್‌, ಬಿ.ಸಿ. ನಾಗೇಶ್‌) ಹಂಚಿಕೆಯಾಗಿತ್ತು. ಕೊರೊನಾ ಹಾವಳಿ ನಡುವೆಯೂ ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದರು. ಆದರೆ, ಸಚಿವರು ಭೌತಿಕವಾಗಿ ಲಭ್ಯವಾಗುವುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಂಪರ್ಕಕ್ಕೆ ಸಿಗುತ್ತಿದ್ದರು ಎಂಬ ಆರೋಪವೂ ಇದೆ.

ಶ್ರೀಮಂತ ಪಾಟೀಲ್‌ :

ವಲಸಿಗರ ತಂಡದಲ್ಲೊಬ್ಬರಾಗಿದ್ದರಿಂದ ಸಚಿವ ಸ್ಥಾನ ಒಲಿದು ಬಂದಿತ್ತು. ಆದರೆ, ಅಲ್ಪಸಂಖ್ಯಾಕ ಖಾತೆ ನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಕಂಡುಬರಲಿಲ್ಲ. ಆದರೆ, ಇವರು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಹಾಗಾಗಿ, ಖಾತೆ ನಿರ್ವಹಣೆಯೊಂದೇ ಮಾನದಂಡ ಆಗಿಲ್ಲ. ಇವರನ್ನು ಸಂಪುಟದಿಂದ ಕೈಬಿಟ್ಟರೂ ವಿರೋಧಗಳು ಬರಲಿಕ್ಕಿಲ್ಲ ಎಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ.

ಆರ್‌. ಶಂಕರ್‌:

ಸರಕಾರ ರಚನೆಗೆ ಕಾರಣವಾದ ವಲಸಿಗರ ತಂಡದಲ್ಲಿ ಇವರೂ ಒಬ್ಬರು. ಅಷ್ಟೇ ಅಲ್ಲ, ತಮ್ಮ ಕ್ಷೇತ್ರ ರಾಣಿಬೆನ್ನೂರು ಅನ್ನು ಬಿಟ್ಟುಕೊಟ್ಟರು. ಇದೇ ಕಾರಣಕ್ಕೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಅನಂತರದಲ್ಲಿ ಸಂಪುಟದಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲದಂತಿದ್ದರು. ಖಾತೆ ನಿರ್ವಹಣೆ ತೃಪ್ತಿಕರವಾಗಿಲ್ಲ. ವಲಸಿಗರ ತಂಡವೂ ಮೊದಲಿನಂತೆ ಒಗ್ಗಟ್ಟಿಲ್ಲ; ಛಿದ್ರವಾಗಿದೆ. ಹಾಗಾಗಿ, ವಿರೋಧಗಳು ಅಷ್ಟು ಪ್ರಬಲವಾಗಿ ಇರುವುದಿಲ್ಲ. ಅಂದಹಾಗೆ ಸಮ್ಮಿಶ್ರ ಸರಕಾರ (ಕಾಂಗ್ರೆಸ್‌-ಜೆಡಿಎಸ್‌)ದಲ್ಲೂ ಶಂಕರ್‌ ಸಚಿವರಾಗಿದ್ದರು.

ಇವರನ್ಯಾಕೆ  ಕೈ ಬಿಟ್ಟರು? :

ಬಿ.ವೈ. ವಿಜಯೇಂದ್ರ:

ಮಾಜಿ ಸಿಎಂ ಯಡಿಯೂರಪ್ಪ ರಾಜೀನಾಮೆ ಹಿಂದೆ ವಯಸ್ಸಿನ ಕಾರಣ ಮಾತ್ರವಲ್ಲ; ಆಡಳಿತದಲ್ಲಿ ಮಗನ ಹಸ್ತಕ್ಷೇಪ ಆರೋಪವೂ ಇತ್ತು. ಈ ಮಧ್ಯೆ ಕುಟುಂಬ ರಾಜಕಾರಣ ಆರೋಪ ಕೂಡ ಬಲವಾಗುತ್ತಿತ್ತು. ಜತೆಗೆ ಯಡಿಯೂರಪ್ಪ ಅವರ ಆಪ್ತರೊಬ್ಬರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹೆಚ್ಚು-ಕಡಿಮೆ ಸಚಿವ ಸಂಪುಟವೂ ಅವರದ್ದೇ ಆಗಿದೆ. ಮತ್ತೆ ಮಗನನ್ನೂ ಸೇರಿಸುವುದರಿಂದ ಉಳಿದವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಇನ್ನು ಶಾಸಕರು ಕೂಡ ಆಗಿಲ್ಲ. ಒಂದು ವೇಳೆ ಸಚಿವ ಸ್ಥಾನ  ನೀಡಿದರೆ, ಆರು ತಿಂಗಳಲ್ಲಿ ಮತ್ತೆ ಚುನಾವಣೆ ಎದುರಿಸಬೇಕಿತ್ತು. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.

ಅರವಿಂದ ಬೆಲ್ಲದ:

ಮುಖ್ಯಮಂತ್ರಿ ರೇಸ್‌ನಲ್ಲಿದ್ದವರು ಕೊನೆಗೆ ಸಚಿವ ಸ್ಥಾನವೂ ಸಿಗದೆ ತೀವ್ರ ನಿರಾಸೆಗೊಳಗಾದವರು ಅರವಿಂದ ಬೆಲ್ಲದ. ಹೈಕಮಾಂಡ್‌ ಕೂಡ ತಮಗೆ ಸಿಎಂ ಸ್ಥಾನ ನೀಡಲಿದೆ ಎಂಬ ವಿಶ್ವಾಸದಲ್ಲೂ ಇದ್ದರು. ಅವರ ಅತಿಯಾದ “ವಿಶ್ವಾಸ’ ಕೊನೇ ಘಳಿಗೆಯಲ್ಲಿ  ಕೈಕೊಟ್ಟಿತು. ಇದಕ್ಕೆ ತೆರೆಮರೆಯಲ್ಲಿ ಹಿರಿಯ ಸಚಿವರೂ ಕಾರಣ ಎನ್ನಲಾಗಿದೆ. ಒಂದು ವೇಳೆ ಇವರಿಗೆ ಅವಕಾಶ ನೀಡಿದರೆ, ಹುಬ್ಬಳ್ಳಿ-ಧಾರವಾಡ ಹಿಡಿತ ತಪ್ಪುತ್ತದೆ ಎಂಬ ಲೆಕ್ಕಾಚಾರ ಕೆಲಸ ಮಾಡಿದೆ. ಇದರ ಪರಿಣಾಮ ಧಾರವಾಡ ಜಿಲ್ಲೆಯ ಕೋಟಾದಲ್ಲಿ ಅನಿರೀಕ್ಷಿತವಾಗಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅದೃಷ್ಟ ಒಲಿಯಿತು.

ಬಸನಗೌಡ ಪಾಟೀಲ ಯತ್ನಾಳ್‌:

ಮುಖ್ಯಮಂತ್ರಿ ರೇಸ್‌ನಲ್ಲಿ ಗುರುತಿಸಿಕೊಂಡವರಲ್ಲಿ ಬಸನಗೌಡ ಯತ್ನಾಳ್‌ ಕೂಡ ಒಬ್ಬರು. ಆರಂಭದಿಂದಲೂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದರು. ಮುಖ್ಯಮಂತ್ರಿ  ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಂತರವೂ ಅದು ಮುಂದುವರಿಯಿತು. ಅತಿಯಾದ ಮಾತು ಅವರಿಗೆ ಮುಳುವಾಯಿತು ಎನ್ನಲಾಗುತ್ತಿದೆ.

ಎಂ.ಪಿ. ರೇಣುಕಾಚಾರ್ಯ:

ಇವರಿಗೆ ಕೂಡ ಅತಿಯಾದ ಮಾತು ಮುಳುವಾಯಿತು. ಪಕ್ಷದ ಶಿಸ್ತು ಮೀರಿದರೆ, ಯಾರನ್ನಾದರೂ ಸಹಿಸುವುದಿಲ್ಲ ಎಂಬ ಸಂದೇಶ ನೀಡುವ ಸಲುವಾಗಿ ಸಂಪುಟಕ್ಕೆ ಸೇರಿಸಿಕೊಂಡಂತಿಲ್ಲ. ಅಲ್ಲದೆ, ಎಲ್ಲವೂ ಯಡಿಯೂರಪ್ಪ ಅವರ ಮೂಗಿನ ನೇರಕ್ಕೇ ನಡೆಯುವುದಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ರೇಣುಕಾಚಾರ್ಯ ಅವರನ್ನು ಸೇರಿಸಿ ಕೊಳ್ಳದಿರಲು ಕಾರಣ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ ಪ್ರಾತಿನಿಧ್ಯ ಸಿಗದ 13 ಜಿಲ್ಲೆಗಳಲ್ಲಿ ರೇಣುಕಾ ಚಾರ್ಯ ಪ್ರತಿನಿಧಿಸುವ ದಾವಣಗೆರೆ ಜಿಲ್ಲೆಯೂ ಸೇರಿದೆ.

 

Advertisement

Udayavani is now on Telegram. Click here to join our channel and stay updated with the latest news.

Next