Advertisement

ಯಕ್ಷಶಿಕ್ಷಣ ಪ್ರಶಸ್ತಿಗೆ ತೋನ್ಸೆ ಜಯಂತ್‌ ಕುಮಾರ್‌

03:17 PM Dec 15, 2017 | Team Udayavani |

ಯಕ್ಷ ಶಿಕ್ಷಣ ಟ್ರಸ್ಟ್‌ 16-12-2017ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಸುತ್ತಿರುವ ಕಿಶೋರ ಯಕ್ಷಗಾನದ ದಶ ಮಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಯಕ್ಷಗುರು ಗಳಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಯು. ದುಗ್ಗಪ್ಪನವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ತೋನ್ಸೆ ಜಯಂತ್‌ ಕುಮಾರ್‌ ಅವರನ್ನು ಗೌರವಿಸಲಿದೆ. 

Advertisement

ಯಕ್ಷಶಿಕ್ಷಣದ ಗುರು, ಭಾಗವತ, ವೇಷಧಾರಿ ತೋನ್ಸೆ ಜಯಂತ್‌ ಕುಮಾರ್‌ ಯಕ್ಷಗಾನದ ಸರ್ವಾಂಗವನ್ನೂ ಬಲ್ಲವರು. “ಸವ್ಯಸಾಚಿ’ ಎಂಬುದು ಅವರ ಹಿಮ್ಮೇಳ -ಮುಮ್ಮೇಳ ಪರಿಣತಿಯನ್ನು ಗುರುತಿಸಿ ಅಭಿಮಾನಿಗಳು ನೀಡಿದ ಬಿರುದು.

1946ರಲ್ಲಿ ಕಾಂತಪ್ಪ ಮಾಸ್ತರ್‌-ಚೆಲುವಮ್ಮ ದಂಪತಿಯ ಪುತ್ರರಾಗಿ ಜನಿಸಿದ ತೋನ್ಸೆಯವರು ಚೇತನ ಪ್ರೌಢಶಾಲೆ, ಹಂಗಾರಕಟ್ಟೆಯಲ್ಲಿ ಗುಮಾಸ್ತರಾಗಿ ನಿವೃತ್ತರು. ಯಕ್ಷಗಾನದಲ್ಲಿ ಸದಾ ಪ್ರವೃತ್ತರು. 

ಯಕ್ಷಗಾನವು ಜಯಂತ ಕುಮಾರರಿಗೆ ವಂಶ ಪಾರಂಪರ್ಯವಾಗಿ ಬಂದ ಬಳುವಳಿ. ಅವರ ತೀರ್ಥರೂಪರು ಯಕ್ಷಗಾನದ ಭಾಗವತರಾಗಿ, ಗುರುಗಳಾಗಿ ಪ್ರಸಿದ್ಧರು. ಅಜ್ಜ ತಿಮ್ಮಪ್ಪ ಮಾಸ್ತರರು ಭಾಗವತರು. ದೊಡ್ಡಪ್ಪ ಗೋಳಿಗರಡಿ ಮೇಳದ ಕಲಾವಿದರಾಗಿದ್ದರು. ಈ ವಂಶೀಯ ಹಿನ್ನೆಲೆ ಅವರು ಯಕ್ಷಗಾನದತ್ತ ಆಕರ್ಷಿತರಾಗಲು ಪ್ರೇರಕವಾಯಿತು. ಕಾಂತಪ್ಪ ಮಾಸ್ತರರು ಶಾಲಾ ವೇಳೆಯ ಅನಂತರ ಅನೇಕ ಕಡೆ ಯಕ್ಷಗಾನ ತರಗತಿ ನಡೆಸುತ್ತಿದ್ದರು. ತಂದೆಯೊಂದಿಗೆ ಈ ತಿರುಗಾಟದಲ್ಲಿ ಕಲಿತ ಬಾಲಪಾಠ ಗಟ್ಟಿಯಾಯಿತು. ನಾರ್ಣಪ್ಪ ಉಪ್ಪೂರರು ಹಂಗಾರಟ್ಟೆ ಯಕ್ಷಗಾನ ಕೇಂದ್ರ ಸ್ಥಾಪಿಸಿದಾಗ ಅವರ ಮತ್ತು ಬೇಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯರಾಗುವ ಸುವರ್ಣಾವಕಾಶ ಪ್ರಾಪ್ತವಾಯಿತು. ಅದನ್ನು ಚೆನ್ನಾಗಿಯೇ ಬಳಸಿಕೊಂಡ ಜಯಂತರು, ಉಪ್ಪೂರರ ಶೈಲಿಯನ್ನು ಮೈಗೂಡಿಸಿಕೊಂಡರು. ಪರಂಪರೆಯ ಶೈಲಿಗೆ ತನ್ನ ತುಂಬು ಕಂಠಸಿರಿಯನ್ನು ಮೇಳೈಸಿ ಪ್ರಸಿದ್ಧ ಭಾಗವತರಾಗಿ ಮೂಡಿಬಂದರು.

ಎಳವೆಯಲ್ಲಿ ಯಕ್ಷಗಾನ ವೇಷಗಳನ್ನು ಮಾಡುತ್ತಿದ್ದ ಇವರು ಬಡಗಿನ ಪರಂಪರೆಯ ಸ್ತ್ರೀ-ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ. ಉಪ್ಪೂರರ ಭಾಗವತಿಕೆಗೆ ಹಿಮ್ಮೇಳವಾದಕನಾಗಿ ಭಾಗವಹಿಸಿದ್ದು ತನ್ನ ಭಾಗ್ಯವೆಂದು ನೆನಪಿಸಿಕೊಳ್ಳುತ್ತಾರೆ. ಭಾಗವತರಾಗಿ ಅನೇಕ ಆಟ- ಕೂಟ ಗಳಲ್ಲಿ ತಮ್ಮ ಸಿರಿಕಂಠ ಮೊಳಗಿಸಿದ್ದಾರೆ. ಯಕ್ಷಗಾನದ ತಂಡದ ಭಾಗವತರಾಗಿ ದಿಲ್ಲಿ, ಸಿಂಗಾಪುರ ಮತ್ತು ನಾಡಿನ ಅನ್ಯಾನ್ಯ ಪ್ರದೇಶಗಳಲ್ಲಿ ಭಾಗವಹಿಸಿದ್ದಾರೆ. 

Advertisement

ಯಕ್ಷಗಾನ ಗುರುಗಳಾಗಿ ಅವರ ಸಾಧನೆ ದೊಡ್ಡದು. ತಂದೆಯವರು ನಡೆಸುತ್ತಿದ್ದ ಅನೇಕ ಸಂಘಗಳಿಗೆ ಗುರು ಗಳಾಗಿ ತರಬೇತಿ ನೀಡುವ ಅನಿವಾರ್ಯತೆ ಅವರನ್ನು ಯಕ್ಷಗಾನ ಗುರುಗಳನ್ನಾಗಿಸಿತು. ತಂದೆಯ ಸ್ಥಾನವನ್ನು ಸಮರ್ಥವಾಗಿ ತುಂಬಿದ ಉತ್ತರಾಧಿಕಾರಿಯಾದರು. ಇವರಿಗೆ 20-30 ಪ್ರಸಂಗಗಳು ಕಂಠಸ್ಥ. ಹತ್ತಾರು ಪ್ರಸಂಗಗಳಿಗೆ ಸ್ವತಃ ಅರ್ಥ ಬರೆದು ನಿರ್ದೇಶಿಸಿದ್ದಾರೆ. ತಾವೇ ಅಚ್ಚುಕಟ್ಟಾಗಿ ಅರ್ಥ ಬರೆದ ಅನೇಕ ಹಸ್ತಪ್ರತಿಗಳು ಅವರ ಬಳಿ ಇವೆ. ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವವರಿಗೆ ನಿಜಕ್ಕೂ ಇದೊಂದು ಮಾದರಿ. ಮಹಿಳೆಯರಿಗೂ ಯಕ್ಷಗಾನ ತರಬೇತಿ ನೀಡಿ ಆಟ ಆಡಿಸಿ ದ್ದಾರೆ. ಯಕ್ಷಗಾನ ಶಿಬಿರಗಳನ್ನು ನಡೆಸಿದ್ದಾರೆ. ನಿರಂತರ 11 ವರ್ಷಗಳಿಂದ ಯಕ್ಷಶಿಕ್ಷಣ ಟ್ರಸ್ಟ್‌ನ ಗುರುಗಳಾಗಿ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. 

ಐದು ದಶಕಗಳ ಅವಧಿಯಲ್ಲಿ ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಕಲಾಪ್ರೌಢಿಮೆಯನ್ನು ಮೆರೆದು ಯಕ್ಷ ಕಲಾ ರಸಿಕರಿಗೆ ಮುದ ನೀಡಿ ದವರು, ಪರಂಪರೆಯ ಹಾಡಿಕೆಯ ಶುದ್ಧಿಯನ್ನು ಕಾಪಿಟ್ಟುಕೊಂಡು ಬಂದವರು, ಸಾವಿರಾರು ಶಿಷ್ಯರಿಗೆ ಈ ಕಲೆಯನ್ನು ಕಲಿಸಿಕೊಟ್ಟವರು ತೋನ್ಸೆ ಜಯಂತ್‌ ಕುಮಾರ್‌.

ನಾರಾಯಣ ಎಂ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next