Advertisement

ಈ ಬಾರಿ ಗೆಲುವು ನನ್ನದೇ; ಕ್ಷೇತ್ರದ ಜನ ಕೈ ಬಿಡಲ್ಲ

11:02 AM May 10, 2018 | Team Udayavani |

ಬೆಂಗಳೂರು: ಹೈ ವೋಲ್ಟೇಜ್‌ ಕಣವಾಗಿರುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿಯ ಎ.ರವಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಭೈರೇಗೌಡ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕೃಷ್ಣ ಬೈರೇಗೌಡ ವಿರುದ್ಧ ಎರಡು ಬಾರಿ ತೀವ್ರ ಸ್ಪರ್ಧೆ ನೀಡಿ ಸೋತಿರುವ ಎ.ರವಿ, ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. “ಎರಡು ಬಾರಿ ಸೋತರೂ ಕ್ಷೇತ್ರದ ಜನರ ಜತೆ ನಿರಂತರ ಸಂರ್ಪಕದಲ್ಲಿದ್ದು, ಜನರ ಕೆಲಸ ಮಾಡುತ್ತಿದ್ದೇನೆ. ಹಾಲಿ ಶಾಸಕರ ನಿರ್ಲಕ್ಷ್ಯದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಜನ ಬೇಸತ್ತಿದ್ದಾರೆ. ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ಈ ಬಾರಿ ನನ್ನ ಗೆಲುವು ಖಚಿತ,’ ಎನ್ನುವ ಎ. ರವಿ ಅವರು “ಉದಯವಾಣಿ’ಗೆ ನೀಡಿರುವ ಸಂದರ್ಶನದ ವಿವರ ಇಲ್ಲಿದೆ.

Advertisement

„ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ?
ಪ್ರಚಾರ ಕಾರ್ಯ ಬಹುತೇಕ ಪೂರ್ಣಗೊಳಿಸಿದ್ದೇನೆ. ಎಲ್ಲ ವರ್ಗದವರ ಮನೆ ಬಾಗಿಲಿಗೆ ಎಡತಾಕಿ ಮತ ನೀಡುವಂತೆ
ಕೋರಿದ್ದೇನೆ. ಈ ಬಾರಿ ಮತದಾರರು ತೋರುತ್ತಿರುವ ಪ್ರೀತಿ, ವಿಶ್ವಾಸ ಗೆಲುವಿನ ಭರವಸೆ ಮೂಡಿಸಿದೆ. ಕ್ಷೇತ್ರದ ಜನ ನನ್ನನ್ನು ಬೆಂಬಲಿಸುತ್ತಿರುವುದನ್ನು ಸಹಿಸದೆ ಕಾಂಗ್ರೆಸ್‌ ವಾಮಮಾರ್ಗ ಅನುಸರಿಸುತ್ತಿದೆ. ಅವರೇನೇ ತಂತ್ರ
ಮಾಡಿದರೂ ಈ ಬಾರಿ ಗೆಲುವುನನ್ನದೇ.

„ ನಿಮ್ಮ ಗೆಲುವಿಗೆ ಯಾವ ಅಂಶಗಳು ಸಹಕಾರಿಯಾಗಲಿವೆ?
ಹಾಲಿ ಶಾಸಕರು 10 ವರ್ಷಗಳಲ್ಲಿ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿರುವುದೇ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ವಾರ್ಡ್‌ 5 ಹಾಗೂ 7ರಲ್ಲಿ ಒಂದೇ ಒಂದು ರಸ್ತೆ ಸರಿಯಿಲ್ಲ. ಕುಡಿಯುವ ನೀರಿನ ಪೂರೈಕೆ ಸರಿಯಾಗಿಲ್ಲ. ಒಳಚಂರಡಿ
ವ್ಯವಸ್ಥೆ ಕಾಮಗಾರಿ ಈಗ ಶುರು ಮಾಡಿಸಿದ್ದಾರೆ. ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದರೆ ಶಾಸಕರು ಕೈಗೆ ಸಿಗೋದಿಲ್ಲ ಎಂದು ಕ್ಷೇತ್ರದ ಜನತೆ ಹೇಳುತ್ತಿದ್ದಾರೆ. ಹೀಗಾಗಿ ಈ ಬಾರಿ ಮತದಾರರು ನನ್ನ ಕೈ ಹಿಡಿಯಲಿದ್ದಾರೆ.

„ ಜನ ನಿಮ್ಮನ್ನೇ ಏಕೆ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ಬಯಸುತ್ತೀರಿ?
ಎರಡು ಬಾರಿ ಚುನಾವಣೆಯಲ್ಲಿ ಸೋತರೂ ನಾನು ಕ್ಷೇತ್ರ ಬಿಟ್ಟು ಬೇರೆಡೆ ಹೋಗಿಲ್ಲ. ಇವತ್ತಿಗೂ ಕ್ಷೇತ್ರದ ಜನರ ನೇರ ಸಂಪರ್ಕಕ್ಕೆ ಸಿಗುತ್ತೇನೆ. ಅವರ ಸಮಸ್ಯೆ ಆಲಿಸುತ್ತೇನೆ. ಅವರು ಕೇಳಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಅಧಿಕಾರ ಇಲ್ಲದಿದ್ದರೂ 10 ವಾಟರ್‌ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಬವಣೆಗೆ ಸ್ಪಂದಿಸಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾವೇರಿ 4 ನೇ ಹಂತದಲ್ಲಿ ಯೋಜನೆ ಕ್ಷೇತ್ರದ ಐದು ವಾರ್ಡ್‌ಗೆ ಲಭ್ಯವಾಗುವಂತೆ ಶ್ರಮಿಸಿದ್ದೇನೆ. ಅರ್ಕಾವತಿ ಲೇಔಟ್‌ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡು ಪರಿಹಾರ ಸಿಗದೆ ಒದ್ದಾಡುತ್ತಿದ್ದ ರೈತರಿಗೆ ನೆರವಾಗಿದ್ದೇನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗುವಂತೆ ಮಾಡಿದ್ದೇನೆ.

„ ಗೆಲುವಿನ ವಿಶ್ವಾಸ ಎಷ್ಟಿದೆ?
ನಾನು ಈ ಬಾರಿ 20ರಿಂದ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಇಲ್ಲಿ ಜೆಡಿಎಸ್‌ ಗೆಲ್ಲೋದಿಲ್ಲ ಅಂತಾ ಜನತೆಗೆ ಗೊತ್ತು. ಆದರೆ, ಕಾಂಗ್ರೆಸ್‌ಗೆ ಪರ್ಯಾಯ ಅಭ್ಯರ್ಥಿಯಾಗಿರುವ ನಾನೇ ಎಂದು ಜನ ತೀರ್ಮಾಸಿದ್ದಾರೆ. ಎರಡು ಬಾರಿ ಸೋತಿರುವ ನನ್ನ ಮೇಲೆ ಅನುಕಂಪವಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬ್ಯಾಟರಾಯನಪುರದಲ್ಲಿ ಬಿಜೆಪಿ ಬರಲಿದೆ. 

Advertisement

ಶಾಸಕರಾಗಿ ಆಯ್ಕೆ ಯಾದರೆ ನಿಮ್ಮ ಯೋಜನೆಗಳೇನು?
ಕ್ಷೇತ್ರ ಅಭಿವೃದ್ಧಿ ಬಗ್ಗೆ ಒಂದು ನಿರ್ದಿಷ್ಟ ವಿಷನ್‌ ಇಟ್ಟುಕೊಂಡಿದ್ದೇನೆ. ಇದಕ್ಕಾಗಿಯೇ ಜನರಿಂದಲೇ “ಪ್ರಣಾಳಿಕೆ ಸಿದ್ಧಪಡಿಸಿದ್ದೇನೆ’ ಆ ಭರವಸೆಗಳನ್ನು ಈಡೇರಿಸುತ್ತೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳ ಅಭಿವೃದ್ಧಿ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸುವುದು. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಜಾಗದಲ್ಲಿ ಮಳಿಗೆ ಹಾಕಿಕೊಳ್ಳಲು ಅವಕಾಶ ಕಲ್ಪಿಸುವುದು. ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಜಯನಗರ ಹೃದ್ರೋಗ ಆಸ್ಪತ್ರೆಯ ಒಂದು ಶಾಖೆಯನ್ನು ಈ ಭಾಗದಲ್ಲಿ ತೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲ ಲೇಔಟ್‌ ಗಳಿಗೆ ಬಸ್‌ ಸಂಪರ್ಕ ಕಲ್ಪಿಸುವೆ. ಉದ್ಯಾನವನಗಳ ಅಭಿವೃದ್ಧಿ, ಟ್ರೀಟ್‌ಮೆಂಟ್‌ ಫ್ಲಾಂಟ್‌ಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಅಂಗನವಾಡಿ, ಶಾಲೆಗಳ ಅಭಿವೃದ್ಧಿ ಮಾಡಿಸುವುದು. ಹೀಗೆ ಹಲವು ಅಭಿವೃದ್ಧಿ ಯೋಜನೆಗಳ ಜಾರಿಗೆ ಬದ್ಧನಾಗಿರುತ್ತೇನೆ. 

 ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next