Advertisement

ಈ ಬಾರಿಯೂ ಶಾಲಾ ಶಿಕ್ಷಣ ಇಲಾಖೆಗೆ ಅತಿಥಿ ಶಿಕ್ಷಕರೇ ಗತಿ!

10:48 PM May 24, 2024 | Team Udayavani |

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲಿಯೇ ಪುಸ್ತಕ, ಶಾಲಾ ಸಮವಸ್ತ್ರ ವಿತರಿಸಲು ಕ್ರಮ ವಹಿಸಿರುವ ಸರ್ಕಾರ, ಇದೇ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಂಡು ಶಿಕ್ಷಕರ ಕೊರತೆ ನೀಗಿಸಬಹುದೇ ಎಂದು ಶಾಲಾ ಶಿಕ್ಷಣ ಇಲಾಖೆ ನಿರೀಕ್ಷೆಯಲ್ಲಿದೆ.

Advertisement

ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗುವ ಮೊದಲೇ ರಾಜ್ಯ ಸರ್ಕಾರ, ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಿತ್ತು. ಎರಡು ಹಂತದಲ್ಲಿ 44 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಕೊಂಡಿತ್ತು. ಆದರೆ ಈ ಬಾರಿ ಈವರೆಗೂ ಅತಿಥಿ ಶಿಕ್ಷಕರ ನೇಮಕಾತಿ ವಿಚಾರವಾಗಿ ಯಾವುದೇ ಕ್ರಮ ಆಗಿಲ್ಲ. ಶಾಲಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಷ್ಟರೊಳಗೇ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರೆ ಮಕ್ಕಳಿಗೆ ವರ್ಷಾರಂಭದಿಂದಲೇ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡಬಹುದು ಎಂಬ ಆಶಾಭಾವ ಇಲಾಖೆಯಲ್ಲಿ ಗರಿಗೆದರಿದೆ.

ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ 50 ಸಾವಿರಕ್ಕೂ ಅಧಿಕ ಹಾಗೂ ಪ್ರೌಢಶಾಲೆಗಳಲ್ಲಿ 10 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಳೆದ ವರ್ಷ 15,500 ಕಾಯಂ ಶಿಕ್ಷಕರ ನೇಮಕಾತಿಯಲ್ಲಿ 13 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರೂ ಸಾವಿರಾರು ಶಿಕ್ಷಕರ ಕೊರತೆ ಎದುರಾಗಲಿದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅತಿಥಿ ಶಿಕ್ಷಕರ ನೇಮಕಾತಿ ಈ ಬಾರಿಯೂ ಅನಿವಾರ್ಯವಾಗಿದೆ.

ಪರಿಹಾರ ಬೋಧನೆಗೂ ಶಿಕ್ಷಕರ ಕೊರತೆ:
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದವರ 10 ತಿಂಗಳ ಗುತ್ತಿಗೆ ಅವಧಿ ಮಾರ್ಚ್‌ನಲ್ಲಿಯೇ ಮುಕ್ತಾಯವಾಗಿದ್ದು ಹೊಸದಾಗಿ ಅತಿಥಿ ಶಿಕ್ಷಕರ ನೇಮಕ ಆಗಬೇಕಾಗಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ನಡೆಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ ಅಣಿಗೊಳಿಸುವ ಕಾರ್ಯ ನಡೆದಿದೆ. ಆದರೆ, ಈ ಪರಿಹಾರ ಬೋಧನೆಗೂ ಶಿಕ್ಷಕರ ಕೊರತೆ ಎದುರಾಗಿದೆ. ಹಲವು ಶಾಲೆಗಳಲ್ಲಿ ಮುಖ್ಯವಾಗಿ ಇಂಗ್ಲಿಷ್‌, ಹಿಂದಿ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕರನ್ನೇ ಹೆಚ್ಚು ಅವಲಂಬಿಸಲಾಗಿದೆ. ಈಗ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೂ ಇಲ್ಲ, ಕಾಯಂ ಶಿಕ್ಷಕರೂ ಸಮರ್ಪಕ ಸಂಖ್ಯೆಯಲ್ಲಿ ಇಲ್ಲ ಎಂಬಂತಾಗಿದ್ದು ಪರಿಹಾರ ಬೋಧನೆ ಕುಂಠಿತವಾಗಿ ಮಕ್ಕಳ ಫಲಿತಾಂಶದ ಮೇಲೆ ಭಾರೀ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

ಮರು ನೇಮಕದ ಆಮಿಷ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಳೆದ ವರ್ಷ ಕೆಲಸ ನಿರ್ವಹಿಸಿದ ಅತಿಥಿ ಶಿಕ್ಷಕರನ್ನೇ ಪರಿಹಾರ ಬೋಧನೆಗೂ ಬಳಸಿಕೊಳ್ಳಲಾಗುತ್ತಿದೆ. ಈಗ ನೀವು ಪರಿಹಾರ ಬೋಧನೆ ಮಾಡಿರಿ. ಮುಂದಿನ ವರ್ಷ ಸರ್ಕಾರ ನಿಮ್ಮನ್ನೇ ಮುಂದುವರಿಸಬಹುದು’ ಎಂದು ಕೆಲ ಶಾಲಾ ಮುಖ್ಯಸ್ಥರು ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಪರಿಹಾರ ಬೋಧನೆಗೆ ಸಂಬಳವೂ ಇಲ್ಲ. ಮುಂದಿನ ವರ್ಷ ತಮ್ಮನ್ನೇ ನೇಮಕ ಮಾಡಿಕೊಳ್ಳುವ ಭರವಸೆಯೂ ಇಲ್ಲದೇ ಕೆಲಸ ಮಾಡುವುದು ಹೇಗೆ ಎಂದು ಕೆಲವರು ನಿರಾಕರಿಸುತ್ತಲೂ ಇದ್ದಾರೆ.

Advertisement

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಈಗಲೇ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
– ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘ

ಹಿಂದಿನ ವರ್ಷಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೂ ಪರಿಗಣಿಸಬೇಕು. ಪ್ರತಿ ತಿಂಗಳ ಆಯಾ ತಿಂಗಳಲ್ಲೇ ವೇತನ ಸಿಗುವ ವ್ಯವಸ್ಥೆ ಆಗಬೇಕು. ಈಗ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗೆ 10,000 ರೂ., ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ 10,500 ರೂ. ಮಾಸಿಕ ವೇತನವಿದ್ದು ಇದನ್ನು ಹೆಚ್ಚಿಸಬೇಕು.
– ರಾಜೇಶ್ವರಿ ಕೊಪ್ಪದ, ಅತಿಥಿ ಶಿಕ್ಷಕರು

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next