Advertisement

ಈ ಬೇಸಿಗೆಯಲ್ಲಿ ಕಾಡದು ನೀರಿನ ಸಮಸ್ಯೆ

12:01 PM Feb 08, 2017 | Team Udayavani |

ವಿಧಾನಸಭೆ: “ರಾಜಧಾನಿ ಬೆಂಗಳೂರಿಗೆ ಬೇಸಿಗೆಯಲ್ಲೂ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗದು. ಈಗಿನ ಮಾಹಿತಿಯಂತೆ ಮೇ ತಿಂಗಳಿನವರೆಗೆ ಪೂರೈಕೆ ಮಾಡಬಹುದಾದಷ್ಟು ನೀರು ಎಲ್ಲ ಮೂಲಗಳಿಂದ ಲಭ್ಯವಿದೆ,” ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸದನದಲ್ಲಿ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಸಂದರ್ಭದಲ್ಲಿ ಜೆಡಿಎಸ್‌ ಶಾಸಕ ಗೋಪಾಲಯ್ಯ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಕೆಆರ್‌ಎಸ್‌ ಅಣೆಕಟ್ಟು ಸೇರಿ ಎಲ್ಲ ಮೂಲಗಳಿಂದ 1380 ದಶಲಕ್ಷ ಲೀಟರ್‌ ನೀರು ಸರಬರಾಜು ಆಗುತ್ತಿದೆ. ನಗರದ ಬೇಡಿಕೆ 1400 ದಶಲಕ್ಷ ಲೀಟರ್‌ ಇದೆ. |

ಬೆಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಲಮಂಡಳಿ ವ್ಯಾಪ್ತಿಯಲ್ಲಿ 7932 ಕೊಳವೆ ಬಾವಿ ಇದ್ದು 6994 ಸುಸ್ಥಿತಿಯಲ್ಲಿವೆ. 1925 ಕಿರು ನೀರಿನ ಟ್ಯಾಂಕ್‌ಗಳಿವೆ. 68 ನೀರಿನ ಟ್ಯಾಂಕರ್‌ ಮೂಲಕ ಸಮಸ್ಯೆ ಇರುವ ಕಡೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ,” ಎಂದು ಹೇಳಿದರು. 

“ನೀರಿನ ಬವಣೆ ಹೆಚ್ಚಾಗಿ ಇರುವ ಕಡೆ ಅಗತ್ಯವಾದರೆ ಹೊಸದಾಗಿ ಬೋರ್‌ವೆಲ್‌ ಸಹ ಕೊರೆಸಲಾಗುವುದು. ಬಿಬಿಎಂಪಿ, ಅರಣ್ಯ ಇಲಾಖೆ ವಶದಲ್ಲಿರುವ ಟ್ಯಾಂಕರ್‌ಗಳನ್ನು ಜಲಮಂಡಳಿ ಸುಪರ್ದಿಗೆ ಪಡೆದು ನೀರು ಪೂರೈಕೆ ಮಾಡಲಾಗುವುದು. ಅಗತ್ಯ ಬಿದ್ದರೆ ಖಾಸಗಿ ಟ್ಯಾಂಕರ್‌ಗಳನ್ನೂ ಬಾಡಿಗೆ ಆಧಾರದಲ್ಲಿ ಪಡೆಯಲಾಗುವುದು,” ಎಂದು ಹೇಳಿದರು.

ತಿಪ್ಪಗೊಂಡನಹಳ್ಳಿ ಕೆರೆ ನೀರು ಶುದ್ಧೀಕರಣ: ಶಾಸಕ ಬಾಲಕೃಷ್ಣ ಅವರ ಕೇಳಿದ ಮತ್ತೂಂದು ಪ್ರಶ್ನೆಗೆ ಉತ್ತರಿಸಿದ ಕೆ.ಜೆ ಜಾರ್ಜ್‌, “”ನಗರದ ಪಶ್ಚಿಮ ಭಾಗಕ್ಕೆ ನೀರು ಪೂರೈಕೆ ಮಾಡುವ ತಿಪ್ಪಗೊಂಡನಹಳ್ಳಿ ಕೆರೆಯು ಕಲುಷಿತಗೊಂಡಿದ್ದು, ಕೆರೆಗೆ ಸೇರ್ಪಡೆಯಾಗುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದರು.

Advertisement

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ನಿತ್ಯ 20 ದಶಲಕ್ಷ ಲೀಟರ್‌ ಕಲುಷಿತ ನೀರನ್ನು ನಾಗಸಂದ್ರದ ಶುದ್ಧೀಕರಣ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ. ಅದೇ ಜಾಗದಲ್ಲಿ ಇನ್ನೊಂದು 20 ದಶಲಕ್ಷ ಲೀಟರ್‌ ನೀರು ಸಂಸ್ಕರಣೆ ಘಟಕ, ಚಿಕ್ಕಬಾಣಾವರದಲ್ಲಿ 5 ದಶಲಕ್ಷ ಲೀಟರ್‌ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ,” ಎಂದರು. “ಅರ್ಕಾವತಿ ನದಿಗೆ ಹರಿಯುತ್ತಿರುವ ಕಲುಷಿತ ನೀರು ಶುದ್ಧೀಕರಿಸಲು 9.9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ರಾಜ್ಯ ಮಾಲಿನ್ಯ ಮಂಡಳಿಯಿಂದ ಒಪ್ಪಿಗೆ ಪಡೆಯಲಾಗಿದೆ,” ಎಂದೂ ಹೇಳಿದರು. 

ಅಡಮಾನವಿಟ್ಟ ಆಸ್ತಿಗೆ 164 ಕೋಟಿ ಬಡ್ಡಿ ಕಟಿ¤ದೆ ಪಾಲಿಕೆ 
ವಿಧಾನಸಭೆ:
ಬಿಬಿಎಂಪಿಯು ಹನ್ನೊಂದು ಆಸ್ತಿಗಳನ್ನು ಅಡಮಾನ ಇರಿಸಿ 1434.39 ಕೋಟಿ ರೂ. ಸಾಲ ಪಡೆದಿದ್ದು, ಇದಕ್ಕೆ ಪ್ರತಿಯಾಗಿ ವಾರ್ಷಿಕ 164.16 ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ ಎಂದು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ಪ್ರಶ್ನೋತ್ತರ ಸಂದರ್ಭದಲ್ಲಿ ಬಿಜೆಪಿಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಅವರು, “ನಗರದ ಹಲವು ಕಟ್ಟಡಗಳನ್ನು ಅಡಮಾನ ಇರಿಸಲಾಗಿದೆ. ಈಗಾಗಲೇ ಭಾಗಶಃ ಸಾಲ ಮರುಪಾವತಿಸಿ ಮೆಯೋಹಾಲ್‌ ಮತ್ತು ಕೆಂಪೇಗೌಡ ಮ್ಯೂಸಿಯಂ ಕಟ್ಟಡದ ಆಸ್ತಿ ಹಿಂಪಡೆಯಲಾಗಿದೆ. ಮತ್ತೂಂದು ಆಸ್ತಿ ವಾಪಸ್‌ ಪಡೆಯಲು ಹುಡ್ಕೊàಗೆ ಪತ್ರ ಬರೆಯಲಾಗಿದೆ,” ಎಂದು ವಿವರಿಸಿದರು.

ಆಸ್ತಿಗಳಲ್ಲಿ ಯಾವುದಾದರೂ ಮಾರಾಟ ಮಾಡಿದ್ದೀರಾ? ಸಾಲ ಪಡೆದಿದ್ದು ನಗರದ ಅಭಿವೃದ್ಧಿಗೋ ಆಸ್ತಿ ಸೃಷ್ಟಿಗೋ, ಯಾವ್ಯಾವ ಆಸ್ತಿ ಸೃಷ್ಟಿಯಾಗಿದೆ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಇದಕ್ಕೆ ಕೋಪಗೊಂಡ ಕಾಂಗ್ರೆಸ್‌ ಸದಸ್ಯರು, ಬಿಜೆಪಿ ಆಡಳಿತದಲ್ಲೇ ಆಸ್ತಿ ಅಡಮಾನ ಇಟ್ಟಿದ್ದು ಎಂದು ಟೀಕಿಸಿದರು. ಅದಕ್ಕೆ ತಿರಗೇಟು ನೀಡಿದ ಸಿ.ಟಿ.ರವಿ, ಹೌದು ನಮ್ಮ ಕಾಲದಲ್ಲಿ ಅಡಮಾನ ಇಟ್ಟರು. ನಿಮ್ಮ ಕಾಲದಲ್ಲಿ ಮಾರಿಬಿಟ್ಟರು ಎಂಬ ಮಾಹಿತಿ ಇದೆ. ಹೀಗಾಗಿ, ಹೌದಾ, ಇಲ್ಲವಾ ಹೇಳಿ ಎಂದರು. ಸಚಿವ ಜಾರ್ಜ್‌ ಯಾವ ಆಸ್ತಿಯೂ ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವರದಿ ನಂತರ ಕ್ರಮ: ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಅವರ ಮತ್ತೂಂದು ಪ್ರಶ್ನೆಗೆ, ಬಿಬಿಎಂಪಿ ವ್ಯಾಪ್ತಿ ಸೇರಿ ರಾಜ್ಯದ ನಗರ ಮತ್ತು ಪಟ್ಟಣಗಳಲ್ಲಿ ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ತಡೆಯಲು ಕ್ರಮ ಕೈಗೊಳ್ಳಲಾಗುವುದು.  ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಬಿಬಿಎಂಪಿ ತಜ್ಞರ ಸಮಿತಿ ರಚಿಸಲಾಗಿದ್ದು, ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. 

ಅಡವಿಟ್ಟ ಕಟ್ಟಡಗಳಿವು 
ಕೆ.ಆರ್‌.ಮಾರ್ಕೆಟ್‌, ಮಲ್ಲೇಶ್ವರಂ ಮಾರ್ಕೆಟ್‌, ದಾಸಪ್ಪ ಕಟ್ಟಡ, ಜಾನ್‌ಸನ್‌ ಮಾರ್ಕೆಟ್‌, ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಕಾಂಪ್ಲೆಕ್ಸ್‌, ಸ್ಲಾéಟರ್‌ ಹೌಸ್‌, ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್‌ ಬಿಲ್ಡಿಂಗ್‌. 

1899 ಪ್ರಕರಣ ದಾಖಲು
ವಿಧಾನಸಭೆ:
ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಹಲ್ಲೆ, ದೌರ್ಜನ್ಯಕ್ಕೆ ಸಂಬಂಧಿಸಿದ 1899 ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಗೋಪಾಲಯ್ಯ ಅವರು ಕೇಳಿದ ಪ್ರಶ್ನೆಗೆ, “ಲೈಂಗಿಕ ಕಿರುಕುಳ, ಹಲ್ಲೆ, ದೌರ್ಜನ್ಯಕ್ಕೆ ಸಂಬಂಧಿಸಿ 1899 ವರದಿಯಾಗಿದ್ದು, ಸರಗಳ್ಳತನ ಪ್ರಕರಣಗಳು 255 ದಾಖಲಾಗಿವೆ.  ಈ ಪೈಕಿ 33 ಹಲ್ಲೆ, 224 ಲೈಂಗಿಕ ಕಿರುಕುಳ, 150 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಯಾಗಿಲ್ಲ. ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಹೊಸದಾಗಿ ಎರಡು ಸಾವಿರ ಪೊಲೀಸರ ನೇಮಕಾತಿ ಮಾಡಿಕೊ ಳ್ಳಲು ಕ್ರಮ ಕೈಗೊಳ್ಳಲಾಗಿದೆ,” ಎಂದು ಹೇಳಿದರು.

“ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನೂ ಹಾಕಲಾಗುತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ 30 ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ತೆರೆಯಲಾಗಿದೆ. ಮಹಿಳೆಯರು ಒಂಟಿಯಾಗಿ ಓಡಾಡುವ ಸ್ಥಗಳಲ್ಲಿ ಪೊಲೀಸ್‌ ನಿಯೋಜನೆ ಹೆಚ್ಚಿಸಿ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ,” ಎಂದರು.

* 1400 ದಶಲಕ್ಷ ಲೀಟರ್‌ ದಿನವೊಂದಕ್ಕೆ ನಗರದ ನೀರಿನ ಬೇಡಿಕೆ.
* 7932 ಕೊಳವೆ ಬಾವಿ ನಗರದಲ್ಲಿರುವ ಒಟ್ಟು ಸರ್ಕಾರಿ ಕೊಳವೆ ಬಾವಿಗಳು.
* 6994 ಕೊಳವೆ ಬಾವಿ ಸುಸ್ಥಿತಿಯಲ್ಲಿರುವ ಬೋರ್‌ಗಳು.
* 1380 ದಶಲಕ್ಷ ಲೀಟರ್‌ ಸದ್ಯ ಎಲ್ಲ ಮೂಲಗಳಿಂದ ಸಿಗುತ್ತಿರುವ ನೀರು.

Advertisement

Udayavani is now on Telegram. Click here to join our channel and stay updated with the latest news.

Next