Advertisement

20 ವರ್ಷದಿಂದ ಡಾಮರೇ ಕಂಡಿಲ್ಲ ಈ ರಸ್ತೆ!​​​​​​​

06:00 AM Jun 21, 2018 | Team Udayavani |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿಯಿಂದ ಬಡಾಕೆರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಭಾಗದ ಜನರು ಸಂಚಾರ ದುಸ್ತರದಿಂದಾಗಿ ಹೈರಾಣಾಗಿದ್ದಾರೆ. 

Advertisement

ಸುಮಾರು 4 ಕಿ.ಮೀ. ಉದ್ದದ ರಸ್ತೆಗೆ ಹಾಕಲಾದ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಬೃಹತ್‌ ಹೊಂಡ- ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾದಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳೂ ಸಂಚರಿಸುವುದು ಕಷ್ಟಕರವಾಗಿದೆ.  


20 ವರ್ಷದಿಂದ ಡಾಮರೇ ಹಾಕಿಲ್ಲ
ನಾಡಾಗುಡ್ಡೆಯಂಗಡಿ ಪೇಟೆಯ ಪ್ರಾರಂಭದಲ್ಲಿ ಸ್ವಲ್ಪ ದೂರದವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದ್ದು, ಅದು ಬಿಟ್ಟರೆ ಈ ಬಡಾಕೆರೆ- ನಾಡಾ ರಸ್ತೆಗೆ ಕಳೆದ 20 ವರ್ಷದಿಂದ ಡಾಂಬರೇ ಹಾಕಿಲ್ಲ. ಆಳುವ ವರ್ಗದಿಂದ ಈ ರಸ್ತೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ ಎನ್ನುವುದು ಸ್ಥಳೀಯರ ಆರೋಪ. 

ಈ ರಸ್ತೆ ಸಂಪೂರ್ಣ ಹದಗೆಡಲು ಕಾರಣ ಈ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿಯ ವ್ಯವಸ್ಥೆಯೇ ಇಲ್ಲ. ಈಗ ನೀರೆಲ್ಲ ಈ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದರಿಂದ ರಸ್ತೆಯೇ ಇಲ್ಲವಾಗಿದೆ.  

ಘನ ವಾಹನಗಳಿಂದ ಹಾನಿ
ನಾಡಾದಿಂದ ಬಡಾಕೆರೆ ಮಾರ್ಗವಾಗಿ ಹೆದ್ದಾರಿಗೆ ಕಲ್ಲು, ಜಲ್ಲಿ, ಮರಳು ತುಂಬಿದ ಘನ ಲಾರಿಗಳು, ಟಿಪ್ಪರ್‌ಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಇದರಿಂದ ಈ ರಸ್ತೆ ಮತ್ತಷ್ಟು ಹದಗೆಟ್ಟು ಹೋಗಿದೆ. ಅದರಲ್ಲೂ ರಾತ್ರಿ ವೇಳೆಯೇ ಹೆಚ್ಚಾಗಿ ಈ ರಸ್ತೆಯ ಮೂಲಕ ಘನ ವಾಹನಗಳು ಸಂಚರಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ದುರಸ್ತಿ ಮಾಡಿ
ಈ ಹೊಂಡ- ಗುಂಡಿಗಳ ರಸ್ತೆ ಯಿಂದಾಗಿ ದಿನಾಲೂ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಈ ರಸ್ತೆಯನ್ನು ದುರಸ್ತಿಪಡಿಸಲು ಪ್ರಯತ್ನಿಸಲಿ. 
 – ಸುಚಿತಾ ಎಂ. ಕಾಮತ್‌, 
ನಾಡಾ ನಿವಾಸಿ 

Advertisement

ಅನುದಾನ ಬೇಕಿದೆ
ಕಳೆದ ವರ್ಷ ಜಿ.ಪಂ.ನಿಂದ ಬಿಡುಗಡೆಯಾದ 3.50 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆ ಸುಮಾರು 2 ಲಕ್ಷ ರೂ. ಬಳಕೆ ಮಾಡಲಾಗಿದೆ. ಇದು ದೊಡ್ಡ ರಸ್ತೆಯಾಗಿರುವುದರಿಂದ ಜಿ.ಪಂ. ಅನುದಾನದಲ್ಲಿ ಡಾಂಬರೀಕರಣ ಮಾಡಲು ಆಗಲ್ಲ. ಕೇವಲ ಪ್ಯಾಚ್‌ವರ್ಕ್‌ ಅಷ್ಟೇ ಮಾಡಬಹುದು. ಇದಕ್ಕೆ ರಾಜ್ಯ ಸರಕಾರದ ಅನುದಾನದ ಅಗತ್ಯವಿದೆ. 
– ಬಾಬು ಶೆಟ್ಟಿ ತಗ್ಗರ್ಸೆ, 
ಸ್ಥಳೀಯ ಜಿ.ಪಂ. ಸದಸ್ಯರು 

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next