Advertisement

ಈ ಸಂಬಂಧ ದೈಹಿಕವಲ್ಲ, ದೈವಿಕ!

06:00 AM May 22, 2018 | |

ಎಷ್ಟೋ ಜನ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಆತುರಪಟ್ಟು ಮದುವೆ ಆಗುತ್ತಾರೆ. ಮುಂದೆ ನಡೆಯುವುದು ಅವರಂದುಕೊಂಡಂತಲ್ಲ. ಮನಸ್ಸು ಒತ್ತಡ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯ ಕೊರತೆಗಳಿಂದ ಬೇರೆಯದೇ ತಿರುವನ್ನು ಸಂಸಾರಕ್ಕೆ ಕೊಟ್ಟುಬಿಡುತ್ತದೆ. ಎಲ್ಲಾ ಗಂಡ- ಹೆಂಡತಿ ನಡುವೆ ಜಗಳ ನಡೆಯುವುದು ಸಹಜ, ಆದರೆ ದಿನಾ ಜಗಳ ನಡೀತಾ ಇದ್ರೆ ಅಂಥ ಮದುವೆಗೆ ಏನರ್ಥ ಇದೆ?

Advertisement

ಕಳೆದ ವಾರ ಗಂಡ ಹೆಂಡತಿಯರೇ ಸಂಸಾರದ ನಿಜವಾದ ಹೀರೋ-ಹೀರೋಯಿನ್‌ ಎಂಬ ವಿಚಾರವಾಗಿ ಬರೆದಿದ್ದೆ. ಅದಕ್ಕೆ ಪ್ರತಿಯಾಗಿ “ನಿಜವಾಗ್ಲೂ ಇವತ್ತಿನ ದಿನಗಳಲ್ಲಿ ಸಾಮರಸ್ಯ ಜೀವನ ನಡೆಸಲು ಸಾಧ್ಯಾನಾ?’ ಎಂಬ ಪ್ರಶ್ನೆಗಳು ಎದುರಾದವು.

ಸಾಮಾನ್ಯವಾಗಿ ಏಕೆ ಎಲ್ಲರಿಗೂ ಇದೇ ಪ್ರಶ್ನೆ ಕಾಡುತ್ತೆ?! ಏಕೆಂದರೆ ಎಲ್ಲರ ಜೀವನವೂ ಪ್ರಕೃತಿ ನಿಯಮಗಳಿಗೆ ಅನು ಸಾರವಾಗಿ ಒಂದೇ ರೀತಿ ಸಾಗುತ್ತದೆ. ವ್ಯತ್ಯಾಸ ಎಂದರೆ ಒಬ್ಬೊಬ್ಬರು ಒಂದೊಂದು ರೀತಿಯ ಕಷ್ಟಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರಷ್ಟೆ. ತುಂಬಾ ಪ್ರೀತಿಸುವ ಗಂಡ-ಹೆಂಡತಿಯರೇ ಆದರೂ ಕಡು ಬಡವರಾಗಿ, ಸಾಲದ ಕಷ್ಟಗಳಲ್ಲಿ ಸಿಕ್ಕಿ ಹಾಕಿಕೊಂಡು ದಾಂಪತ್ಯ ವಿರಸಮಯವಾದರೆ, ಶ್ರೀಮಂತ ಗಂಡ ಹೆಂಡತಿ ದುಡ್ಡಿದ್ದರೂ ಅದನ್ನು ಸಂತೋಷವಾಗಿ ಅನುಭವಿಸಲಾರದೇ ಮಾನಸಿಕ ಕ್ಲೇಷ ಗಳಿಗೆ ಗುರಿಯಾಗಿರುತ್ತಾರೆ. ಇಂಥ ಸಮಸ್ಯೆ ಗಳಿಲ್ಲದವರು ನಾಟಕ ಆಡಿಕೊಂಡೋ, ಸುಳ್ಳಿನ ಲೇಪ ಹಚ್ಚಿ ಕೊಂಡೋ ಜೀವನ ಸಾಗಿಸುತ್ತಿ ರುತ್ತಾರೆ. ಹೊರಗಡೆ ಸುತ್ತಾಡಿದಷ್ಟೂ ಮನಷ್ಯನ ಮನಸ್ಸು ಚಂಚಲ ವಾಗಿ ಎಲ್ಲೆಲ್ಲೋ ಅವನನ್ನು ಎಳೆದುಕೊಂಡು ಹೋಗುತ್ತದೆ. ಕೆಲವರಂತೂ ಮನೆಯಲ್ಲಿರುವ ಮಡದಿಗೆ ತಿಳಿಯದ ಹಾಗೆ ತಪ್ಪು ಮಾಡಿದರೆ ತಪ್ಪೇನಿಲ್ಲ ಅಂತ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಬಾಹ್ಯ ಆಕರ್ಷಣೆಗಳಿಗೆ ಒಳಗಾಗುತ್ತಾರೆ.

ನೀವು ಗಮನಿಸಿದ್ದೀರಾ, ಎಷ್ಟೋ ಜನ ಪ್ರೀತಿಸಿ, ಪ್ರಾಣಕ್ಕೆ ಪ್ರಾಣ ಕೊಡೋಷ್ಟು ಅತ್ತೂ ಕರೆದು, ತಂದೆ ತಾಯಿಯನ್ನು ಬಿಟ್ಟು, ಮನೆ ಬಿಟ್ಟು ಓಡಿ ಹೋಗಿ ಜಗತ್ತಿನ ಅತಿದೊಡ್ಡ ಪ್ರೇಮಿ ಗಳೆನ್ನಿಸಿಕೊಳ್ಳುವಂತೆ ಜೊತೆಗೂಡಿ ಬಾಳಲಾರಂಭಿಸುತ್ತಾರೆ. ಅವರಿ ಬ್ಬರನ್ನ 2 ವರ್ಷಗಳಾದ ನಂತರ ಹೋಗಿ ಮಾತನಾಡಿಸಿದರೆ ಒಬ್ಬರನ್ನೊಬ್ಬರು ಬಾಯಿಗೆ ಬಂದಂತೆ ಬೈಯಲಾರಂಭಿಸುತ್ತಾರೆ. “ಮೊದಲು ನಾನು ಹೇಗಿದ್ದರೂ ಚೆನ್ನಾಗಿದೆ ಎಂದು ಹೊಗಳುತ್ತಿದ್ದ, ನಾನೇ ಅವನ ಹೀರೋಯಿನ್‌ ಆಗಿದ್ದೆ, ಆದ್ರೆ ಈಗ ನನ್ನ ಹೊಗಳ್ಳೋದಿರ್ಲಿ ನನ್ನ ಜೊತೆ ಮಾತಾಡೋದಕ್ಕೂ ಇರಿಟೇಟ್‌ ಆಗ್ತಾನೆ. ಪ್ರೀತಿಸೋದಕ್ಕೆ ಪ್ರಾರಂಭಿಸಿದಾಗ ನಾನು ಏನು ಮಾತಾಡಿದರೂ ಅದು ಅವನಿಗೆ ಹಿತವಾಗಿತ್ತು. ನನ್ನ ಜೊತೆ ಮಾತಾಡ್ಬೇಕು ಅಂತಾನೇ ಓಡೋಡಿ ಬಂದು ಮನೆ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ, ಆದ್ರೆ ಈಗ ನನಗೋಸ್ಕರ ಒಂದು ನಿಮಿಷಾನೂ ಕೂಡಲ್ಲ…’ ಹೀಗೆ ಸಾಲು ಸಾಲಾಗಿ ಒಬ್ಬರ ಮೇಲೆ ಒಬ್ಬರ ದೂಷಣೆ ಸಾಗುತ್ತದೆ. 

ಯಾಕೆ ಹೀಗೆಲ್ಲ ಆಗುತ್ತದೆ? ನಿಮ್ಮನ್ನು ನೀವೇ ಗಮನಿಸಿ ಕೊಂಡಿದ್ದೀರಾ? ನಿಜವಾದ ಪ್ರೀತಿಗೆ ಯಾವತ್ತಿಗೂ ಸಾವಿಲ್ಲ. ಅದೊಂದೇ ಕೊನೆ ತನಕ ಉಳಿಯುವುದು. ಆದರೆ ಎಷ್ಟೋ ಜನ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಆತುರಪಟ್ಟು ಮದುವೆ ಆಗುತ್ತಾರೆ. ಮುಂದೆ ನಡೆಯುವುದು ಅವರಂದುಕೊಂಡಂತಲ್ಲ. ಮನಸ್ಸು ಒತ್ತಡ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯ ಕೊರತೆಗಳಿಂದ ಬೇರೆಯದೇ ತಿರುವನ್ನು ಸಂಸಾರಕ್ಕೆ ಕೊಟ್ಟು ಬಿಡುತ್ತದೆ. ಎಲ್ಲಾ ಗಂಡ-ಹೆಂಡತಿ ನಡುವೆ ಜಗಳ ನಡೆಯುವುದು ಸಹಜ, ಆದರೆ ದಿನಾ ಜಗಳ ನಡೀತಾ ಇದ್ರೆ ಅಂಥ ಮದುವೆಗೆ ಏನರ್ಥ ಇದೆ?

Advertisement

ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಅವನ ಬೇಕು ಬೇಡಗಳೂ ಬದಲಾಗುತ್ತಾ ಹೋಗುತ್ತವೆ. ಉದಾಹರಣೆಗೆ ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿಕೊಳ್ಳೋಣ. ಚಿಕ್ಕ ವಯಸ್ಸಿನಲ್ಲಿ ಕೆಂಪು ಬಣ್ಣ ಇಷ್ಟ ಪಟ್ಟೆ ಅಂತಿಟ್ಟುಕೊಳ್ಳಿ. ಸ್ವಲ್ಪ ವರ್ಷಗಳ ನಂತರ ನಮ್ಮ ಪ್ರಿಯವಾದ ಬಣ್ಣ ಬೇರೆಯದೇ ಆಗಿ ಬದಲಾಗಿರುತ್ತದೆ. ಹಾಗೆಯೇ ತಿನಿಸು, ಮಾತಾಡುವ ರೀತಿ, ಜನರ ಸಂಪರ್ಕ, ಉಡುಗೆ ತೊಡುಗೆ, ಅಲಂಕಾರದ ಶೈಲಿ ಎಲ್ಲಾ. ಆ ಬದಲಾವಣೆಯನ್ನು ನಮ್ಮ ವೈಯಕ್ತಿಕ ಸಂಬಂಧದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಥವಾ ಆ ಮತ್ತೂಬ್ಬರ ಬದಲಾವಣೆಗಳಿಗೆ ನಾವು ಹೊಂದಿಕೊಳ್ಳಬೇಕು.

ಕೆಲವು ಗಂಡಸರು ಪ್ರೀತಿಸಿ ವಿವಾಹವಾಗಿದ್ದರೂ ತಾವು ಕನಸು ಕಂಡ ಹೆಂಡತಿ ಅವಳಲ್ಲ ಅಂತ ಗೋಳಾಡುತ್ತಿರುತ್ತಾರೆ. ಆ ಕಡೆ ಹೆಂಡತಿಯೂ ತನ್ನ ಕಷ್ಟಗಳನ್ನೆಲ್ಲಾ ಮರೆಸಿ, ಸದಾ ತೋಳಲ್ಲಿ ಬಂಧಿಸಿಟ್ಟುಕೊಂಡು ಮುದ್ದಾಡುವ ಗಂಡ ನನಗೆ ಸಿಗಲಿಲ್ಲ ಅಂತ ಗೊಣಗಾಡುತ್ತಿರುತ್ತಾರೆ. ಶೇಕಡಾ 20ರಷ್ಟು ಸಂಸಾರಗಳು ಮಾತ್ರ ಇವತ್ತಿನ ಸಮಾಜದಲ್ಲಿ ಪಾಲಿಗೆ ಬಂದದ್ದು ಪಂಚಾಮೃತ ಅಂತ ಸ್ವೀಕರಿಸಿ, ಸುಖ, ಸಂತೋಷವನ್ನು ಕಂಡುಕೊಂಡಿರುವವರು.

ಇಷ್ಟೆಲ್ಲ ಕೇಳಲು ಕಷ್ಟಕರವಾದ ಸಂಗತಿಗಳಿದ್ದರೂ ಯಾವ ಗಂಡಸೂ ತನಗೆ ಬೇರೆ ಹುಡುಗಿ ಬೇಕು ಅಂತ ಹುಡುಕಿಕೊಂಡು ಹೋಗುವುದಿಲ್ಲ. ಹಾಗೇ ಯಾವ ಹೆಂಗಸೂ ನನಗೆ ಇಷ್ಟವಾಗು ವವರು ಇನ್ನೆಲ್ಲೋ, ಇನ್ನಾರಲ್ಲೋ ಸಿಗಬೇಕು ಅಂತ ಬಯಸುವು ದಿಲ್ಲ. ಆದರೆ ಯಾವುದೋ ಸಂದರ್ಭದಲ್ಲಿ ಅಂಥ ವ್ಯಕ್ತಿ ಸಂಪರ್ಕಕ್ಕೆ ಬಂದಾಗ ಅರೆ, ನನ್ನ ಮನಸ್ಸು ಹುಡುಕುತ್ತಿದ್ದ ವ್ಯಕ್ತಿ ಇವಳೇ/ ಇವನೇ ಎಂದುಕೊಳ್ಳುತ್ತದೆ, ಕುತೂಹಲ ಹುಟ್ಟುತ್ತದೆ. ಆದರೆ ಇಂತ ಕನಸಿನ ವ್ಯಕ್ತಿ ಸಿಗುವಷ್ಟರಲ್ಲಿ ಮದುವೆ ಆಗಿ ಮಕ್ಕಳೂ ಆಗಿಬಿಟ್ಟಿರುತ್ತದೆ, ಅಯ್ಯೋ… 8 ವರ್ಷಗಳ ಹಿಂದೆ ನೀವು ಸಿಗಬಾರದಾಗಿತ್ತಾ ಅಂದುಕೊಳ್ಳುತ್ತಾರೆ. ಸಿಕ್ಕಿದ್ದರೆ ಏನು ಮಾಡುತ್ತಿದ್ದೆ ಅಂತ ಕೇಳಿದರೆ ನಿಮ್ಮನ್ನೇ ಮದ್ವೆ ಆಗುತ್ತಿದ್ದೆ ಅನ್ನುತ್ತಾರೆ. ಆದರೆ ವಿಚಿತ್ರ ಏನೆಂದರೆ 8 ವರ್ಷಗಳ ಹಿಂದೆಯೂ ಸಿಕ್ಕಿದ್ದು ಇಂಥ ಇಷ್ಟವಾದವರೇ, ಅಲ್ಲಿ ಅಂಕುರಿಸಿದ್ದೂ ಪ್ರೇಮವೇ. ಮನಸಾರೆ ಪ್ರೀತಿಸಿ, ಅವಳೇ ಬೇಕು ಅಂತ ಹಠ ಹಿಡಿದು ತನ್ನ ಜೀವನಕ್ಕೆ ಅವಳೇ ಸರಿಯಾದ ವ್ಯಕ್ತಿ ಅಂತ ಪಟ್ಟು ಕೂತು, ಮನೆಯವರನ್ನೆಲ್ಲಾ ಕಷ್ಟಪಟ್ಟು ಒಪ್ಪಿಸಿ ಮದುವೆ ಆಗಿರುತ್ತಾರೆ. ಹಾಗಿದ್ದ ಮೇಲೆ ಯಾವುದು ಸರಿಯಾದ ಜೋಡಿ ಎನ್ನುವುದು, ಯಾರು ಮಿಸ್ಟರ್‌ ಯಾ ಮಿಸ್‌ ಪರ್ಫೆಕ್ಟ್? ಆಗ ಅವರೇ ಇಷ್ಟ ಅಂತ ಹೇಳಿಕೊಂಡವರು ಇವತ್ತು ಹೀಗೆ ಸಿಕ್ಕ ವ್ಯಕ್ತಿಯನ್ನು ಕನಸಿನ ಹುಡುಗ/ಹುಡುಗಿ ಅಂತ ಇಷ್ಟ ಪಡುವುದು ಸರಿಯಾ? ಇಂಥ ಗೊಂದಲದಲ್ಲಿದ್ದವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ, ನೀವು ಇವತ್ತು ಇಷ್ಟು ತೊಳಲಾಡುತ್ತಿರುವುದನ್ನು ನೋಡಿದರೆ ನೀವು ನಿಮ್ಮ ಕನಸಿನ ವ್ಯಕ್ತಿಯನ್ನು ತುಂಬ ಪ್ರೀತಿಸ್ತೀರಿ ಅನ್ನಿಸುತ್ತೆ… ಹಾಗಾದರೆ ನೀವೇಕೆ ಅಷ್ಟು ಬೇಗ ಮದುವೆ ಆಗಿದ್ದು? ನಿಮಗೆ ತಾಳ್ಮೆ ಇರಬೇಕಿತ್ತು. ನಿಮ್ಮ ಕನಸಿನ ವ್ಯಕ್ತಿ ಸಿಗೋ ತನಕ ಕಾಯ ಬೇಕಿತ್ತು! ಆ ಸಂದರ್ಭದಲ್ಲಿ ಇಂಥ ಪ್ರಶ್ನೆಗಳಿಗೆ ವ್ಯಕ್ತಿಗಳ ಬಳಿ ಉತ್ತರವೇ ಇರುವುದಿಲ್ಲ.

ಏಕೆ ಹೀಗೆ? ಹಾಗಿದ್ದರೆ ಮನುಷ್ಯನ ಆಸೆ ದೊಡ್ಡದಾ? ಕನಸು ದೊಡ್ಡದಾ? ಆ ದಿನ ಆಸೆಪಟ್ಟ ವ್ಯಕ್ತಿಯನ್ನು ಕಂಡು ಕನಸು ಕಟ್ಟುವುದಕ್ಕೆ ಶುರುಮಾಡಿದ. ಅದೇ ಇವತ್ತು ಜೀವನದ ಕನಸು ಕಣ್ಣೆದುರೇ ಇರುವಾಗ, ಇನ್ಯಾವುದನ್ನೋ ಆಸೆ ಪಡುವುದಕ್ಕೆ ಶುರು ಮಾಡಿದ. ಹಾಗಿದ್ದರೆ ಸಮಸ್ಯೆಯಿರುವುದು ಸಂಗಾತಿ ಯಲ್ಲಲ್ಲ, ಮನುಷ್ಯನ ಮನಸ್ಸು ಬದಲಾಗುವುದರಲ್ಲಿ, ಆದ್ಯತೆ ಬದಲಾಗುವುದರಲ್ಲಿ? ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ ಜೀವನದ ಹಾದಿಯಲ್ಲಿ. ಮನಸ್ಸು ಯಾವಾಗ ಹೇಗೆ ಎಲ್ಲಿ ಬದಲಾಗಬಹುದು ಅಂತ ಯಾವ ಸಂಶೋಧನೆ ಮಾಡಲೂ ಸಾಧ್ಯವಿಲ್ಲ. ಅಂಥ ಬದಲಾವಣೆಯ ಓಟಕ್ಕೆ ದಾಂಪತ್ಯವೂ ಬಲಿಯಾಗಬೇಕಾ?ಬಲಿಯಾಗಬಾರದು ಏಕೆ? ಗಂಡ-ಹೆಂಡತಿ ಸಂಬಂಧ ದೈಹಿಕವಲ್ಲ, ದೈವಿಕವಾದ್ದು, ಎಷ್ಟೇ ಜನ ಈ ಸಂಬಂಧಕ್ಕೆ ಮೋಸ ಮಾಡಿಕೊಂಡು, ಈ ಸಂಬಂಧದ ಬಗ್ಗೆ ಆಡಿಕೊಂಡು, ತಮಾಷೆ ಮಾಡಿಕೊಳ್ಳುತ್ತಾ ಸುಳ್ಳುಗಳನ್ನು ಪೋಣಿಸುತ್ತಾ, ನಾಟಕ ಆಡಿಕೊಂಡು ಜೀವನ ನಡೆಸಿದರೂ ಕಟ್ಟಕಡೆಗೆ ಅವರಿಬ್ಬರಿಗೆ ದೊರೆಯಬಹುದಾದ ಅತ್ಯುತ್ತಮ ಸ್ನೇಹಿತರು ಅವರಿಗವರೇ. ಮನುಷ್ಯ ಒಂದನ್ನು ಮನವರಿಕೆ ಮಾಡಿಕೊಳ್ಳಬೇಕು, ಎಲ್ಲರ ಕಣ್ಣಿಗೆ ಕಾಣಿಸುವ ಹಾಗೆ ಮಾಡುವ ತಪ್ಪಷ್ಟೇ ಅಲ್ಲ, ನಮಗೆ ಹಾಗೂ ನಮ್ಮ ಸಂಸಾರಕ್ಕೂ ನಾವು ಮಾಡಿಕೊಳ್ಳುವ ತಪ್ಪೂ ತಪ್ಪೇ! ನಾವು ಇತರರಿಗಾಗಿ ಅಲ್ಲ, ಇತರರಂತೆ ಅಲ್ಲ, ನಾವು ನಮಗಾಗಿ ಬದುಕಬೇಕು, ಆ ಬದುಕು ಸತ್ಯವಾಗಿರಬೇಕು. ಎಷ್ಟೋ ಜನ ಹೊರಗಡೆ ತಪ್ಪು ಕೆಲಸ ಮಾಡಿ ಮನೆಗೆ ಬಂದು ಹೆಂಡತಿಯನ್ನು ಬಾಯಿತುಂಬಾ ಹೊಗಳುತ್ತಾರೆ. ಅವಳ ಮುಗ್ಧತೆಗೆ ಮೋಸ ಮಾಡುತ್ತಾರೆ. ಕೆಲ ಹೆಂಗಸರೂ ಅಷ್ಟೇ, ತುಂಬಾ ಒಳ್ಳೆಯವರಂತೆ ಮನೆಯಲ್ಲಿದ್ದು ಹೊರಗಡೆ ಬೇರೇನೋ ವಿಷಯಕ್ಕೆ ಅಮಿಷಕ್ಕೆ ಒಡ್ಡಿಕೊಳ್ಳುತ್ತಿರುತ್ತಾರೆ, ತಪ್ಪಿಗಾಗಿ ಹೊಂಚು ಹಾಕುತ್ತಿರುತ್ತಾರೆ. ಆದರೆ ಈ ರೀತಿಯೆಲ್ಲಾ ಬದುಕುವವರು ಕ್ರಮೇಣ ತಮ್ಮನ್ನು ತಾವೇ ಕಳೆದುಕೊಳ್ಳುತ್ತಿರುತ್ತಾರೆಂಬುದನ್ನು ಮರೆತೇಬಿಟ್ಟಿರುತ್ತಾರೆ.

ಇನ್ನು ತಾವು ತುಂಬ ಪ್ರೀತಿಸಿದ ವ್ಯಕ್ತಿ ಬೇರೊಬ್ಬರನ್ನು ಮದುವೆ ಆಗಿದ್ದರೆ ನೀವು ಅವರನ್ನು ಮನಸ್ಸಿನಲ್ಲೇ ಪ್ರೀತಿಸುವುದು ತಪ್ಪೇನಿಲ್ಲ. ನಿಜವಾದ ಪ್ರೀತಿಯನ್ನು ಯಾವತ್ತೂ ಮನಸ್ಸಿನಿಂದ ಕಿತ್ತುಹಾಕು ವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರೀತಿ ಮನಸ್ಸಿನಲ್ಲೇ ಇದ್ದರೆ, ದೈವಿಕ ವಾಗಿದ್ದರೆ ಅದು ಸಂಭಾವಿತವಾಗಿರುತ್ತದೆ, ಸುರಕ್ಷಿತ ವಾಗಿರುತ್ತದೆ. ಆದರೆ ಅದನ್ನು ದೈಹಿಕ ಸಂಬಂಧವಾಗಿ ಮಾರ್ಪಟ್ಟರೆ, ಆ ಹೆಸರಿನಲ್ಲಿ ಇನ್ನೊಂದು ಜೀವವನ್ನು ಹಿಂಸಿಸಿದರೆ ನೀವೊಬ್ಬರೇ ಅಲ್ಲ, ನಿಮ್ಮ ಸುತ್ತಮುತ್ತಲಿನವರೆಲ್ಲಾ ಅದರ ನೋವು ಅನುಭವಿಸಬೇಕಾಗುತ್ತದೆ. ಕೊನೆಗೂ ಪ್ರೀತಿ ಯಾವತ್ತೂ ದಾಂಪತ್ಯದ ಚೌಕಟ್ಟಿನಲ್ಲರಳುವ ಹೂವು. ಬೇರೆಡೆ ಕಿತ್ತು ನೆಟ್ಟರೂ, ಬೇರೆಡೆ ಬೆಳೆಸಿ ಪೋಷಿಸಿದರೂ ನೋವು ಅಥವಾ ನಿಜವಾದ ಪ್ರೀತಿಯ ಸಾವು!

Advertisement

Udayavani is now on Telegram. Click here to join our channel and stay updated with the latest news.

Next