Advertisement

ಈ ಮಾದರಿಯ ಎದಿರೇಟು ಅಗತ್ಯ

11:00 PM Oct 21, 2019 | mahesh |

ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ ಭಾರತದ ಸೇನೆ ತಕ್ಕ ಪಾಠ ಕಲಿಸಿದೆ. ಕಾಶ್ಮೀರದ ವಿಶೇಷ ವಿಧಿ ರದ್ದುಗೊಂಡ ಬಳಿಕ ಭಾರತದೊಳಕ್ಕೆ ಉಗ್ರರನ್ನು ನುಗ್ಗಿಸಲು ಪಾಕ್‌ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಇದರಂಗವಾಗಿ ಗಡಿ ಭಾಗದಲ್ಲಿ ಅನೇಕ ಉಗ್ರ ಶಿಬಿರಗಳನ್ನು ಸಕ್ರಿಯಗೊಳಿಸಿತ್ತು.

Advertisement

ಲಷ್ಕರ್‌-ಎ-ತಯ್ಯಬ, ಹಿಜ್ಬುಲ್‌ ಮುಜಾಹಿದಿನ್‌ ಮತ್ತಿತರ ಸಂಘಟನೆಗಳಿಗೆ ಸೇರಿದ ಉಗ್ರರು ಈ ಶಿಬಿರಗಳಲ್ಲಿ ಜಮೆಯಾಗಿರುವ ಕುರಿತು ಗುಪ್ತಚರ ಪಡೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದಲ್ಲಿ ಸೇನೆ ಕಾರ್ಯಾಚರಣೆ ನಡೆಸಿ ಸುಮಾರು 10 ಪಾಕ್‌ ಸೈನಿಕರನ್ನು ಕೆಲವು ಉಗ್ರರನ್ನು ಸಾಯಿಸಿರುವುದಲ್ಲದೆ ಮೂರು ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ.

ಆದರೆ ಈ ಕಾರ್ಯಾಚರಣೆಯಿಂದ‌ ಪಾಕ್‌ ಪಾಠ ಕಲಿತುಕೊಳ್ಳುತ್ತದೆ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. 2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿದ ಬಳಿಕ ನಮ್ಮ ಸೇನೆ ಪಾಕ್‌ನೊಳಗೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಅನೇಕ ಉಗ್ರರು ಸತ್ತಿದ್ದರು. ಅನಂತರ ಈ ವರ್ಷದ ಆದಿಯಲ್ಲಿ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ವಾಯುಪಡೆ ಪಾಕ್‌ನ ಬಾಲಾಕೋಟ್‌ನಲ್ಲಿರುವ ಉಗ್ರ ನೆಲೆಯನ್ನು ಬಾಂಬ್‌ ಹಾಕಿ ಉಡಾಯಿಸಿದೆ. ಈ ಎರಡು ಮಾರಕ ಹೊಡೆತಗಳ ಬಳಿಕವೂ ಪಾಕ್‌ ಉಗ್ರರನ್ನು ಸಾಕುವುದನ್ನು ನಿಲ್ಲಿಸಿಲ್ಲ. ಹೀಗಾಗಿ ನಿನ್ನೆ ನಡೆಸಿದ ದಾಳಿಯಿಂದ ದೊಡ್ಡ ಮಟ್ಟದ ಪ್ರಯೋಜನವಾದೀತು ಎಂದು ನಿರೀಕ್ಷಿಸುವಂತಿಲ್ಲ. ಆದರೆ ಪದೇ ಪದೇ ಕದನ ವಿರಾಮ ಉಲ್ಲಂ ಸಿ ನಮ್ಮ ನಾಗರಿಕರನ್ನೂ, ಯೋಧರನ್ನೂ ಸಾಯಿಸಿದರೆ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ನಾವು ನೀಡುವ ಎದಿರೇಟು ಬಹಳ ಬಲವಾಗಿರುತ್ತದೆ ಎಂಬ ಸಂದೇಶವನ್ನು ಈ ದಾಳಿ ನೀಡಿದೆ.ಅಷ್ಟರ ಮಟ್ಟಿಗೆ ಈ ದಾಳಿ ಸಫ‌ಲ.

ಕದನ ವಿರಾಮ ಉಲ್ಲಂಘನೆ ಎನ್ನುವುದು ಪಾಕ್‌ ಸೇನೆಗೆ ನಿತ್ಯದ ಕಾರ್ಯಾಚರಣೆ ಎಂಬಂತಾಗಿದೆ. ವಿಶೇಷ ವಿಧಿ ನಿಷ್ಕ್ರಿಯಗೊಂಡ ಬಳಿಕ ಬರೀ ಒಂದೂವರೆ ತಿಂಗಳಲ್ಲಿ 7000ಕ್ಕೂ ಹೆಚ್ಚು ಬಾರಿ ಪಾಕ್‌ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾಗಿದೆ. ಉಗ್ರರನ್ನು ಗಡಿ ದಾಟಿಸಲು ಪಾಕ್‌ ಸೇನೆ ಕದನ ವಿರಾಮ ಉಲ್ಲಂಘನೆಯನ್ನು ರಕ್ಷಣಾ ಕವಚವನ್ನಾಗಿ ಬಳಸಿಕೊಳ್ಳುತ್ತಿದೆ. ಗಡಿ ಕಾಯುವ ಯೋಧರು ಪ್ರತಿದಾಳಿ ನಡೆಸುತ್ತಿದ್ದಾಗ ಇನ್ನೊಂದೆಡೆಯಿಂದ ಉಗ್ರರು ನುಸುಳಿ ಬರುತ್ತಾರೆ. ಆದರೆ ಬಹುಕಾಲ ಈ ತಂತ್ರ ಸಾಗುವುದಿಲ್ಲ ಎನ್ನುವುದನ್ನು ಪಾಕಿಗೆ ಕಲಿಸಿಕೊಡುವ ಅಗತ್ಯವಿದೆ. ಲೇಸರ್‌ ಬೇಲಿ ನಿರ್ಮಾಣ ಸೇರಿದಂತೆ ಗಡಿ ಭಾಗವನ್ನು ಇನ್ನಷ್ಟು ಭದ್ರಗೊಳಿಸುವ ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸಬೇಕಾಗಿದೆ.

ಕದನ ವಿರಾಮ ಉಲ್ಲಂಘನೆ ಎಂಬ ಯುದ್ಧವಲ್ಲದ ಯುದ್ಧದಲ್ಲಿ ನಿತ್ಯ ನಮ್ಮ ಯೋಧರು ಎಷ್ಟೆಂದು ಹುತಾತ್ಮರಾಗುತ್ತಾ ಅಥವಾ ಗಾಯಗೊಳ್ಳುತ್ತಾ ಇರಬೇಕು? ಗಡಿ ಕಾವಲು ವ್ಯವಸ್ಥೆಗೆ ಗರಿಷ್ಠ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಅಲ್ಲಿ ಪ್ರಾಣ ಹಾನಿಯಾಗುವ ಪ್ರಮಾಣವನ್ನು ತಪ್ಪಿಸಬೇಕು. ಗಡಿಯಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ನಿಯಮಾವಳಿಗಳು ಇದ್ದರೂ ಪಾಕ್‌ ಅದಕ್ಕೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡುವುದು ಅನಿವಾರ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next