Advertisement

ಗ್ರಾಮ ಕರ್ನಾಟಕ ನಿರ್ಮಾಣಕ್ಕಿದು ಸದಾವಕಾಶ

01:10 PM May 08, 2020 | mahesh |

ಬೆಂಗಳೂರು: ಕೋವಿಡ್ ವೈರಸ್‌ ದಾಳಿಯಿಂದ ತಪ್ಪಿಸಿಕೊಳ್ಳಲು ವಲಸೆ ಬಂದಿದ್ದ ನಗರವಾಸಿಗಳೆಲ್ಲ ಈಗ ಮತ್ತೆ ತವರು ಸೇರಿಕೊಂಡಿದ್ದಾರೆ. ಅವರು ನಗರ
ಪ್ರದೇಶಗಳಿಗೆ ಮತ್ತೆ ವಲಸೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಕೃಷಿಗೆ ಪೂರಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಕೂಲಿ ಕಾರ್ಮಿಕರಿಂದ ಹಿಡಿದು ಐಟಿ-ಬಿಟಿ ಸೇರಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಶೇ. 70ರಷ್ಟು ಜನರು ಗ್ರಾಮೀಣ ಪ್ರದೇಶಗಳಿಗೆ ತೆರಳಿದ್ದಾರೆ. ಹೀಗಾಗಿ ಹಳ್ಳಿಗಳು ಯುವ ಶಕ್ತಿ ಕೇಂದ್ರಗಳಾಗಿ ಮಾರ್ಪಾಡಾಗಿವೆ.

Advertisement

ಉದ್ಯೋಗ ಸಮಸ್ಯೆ: ವೃದ್ಧಾಶ್ರಮಗಳಾಗಿದ್ದ ಹಳ್ಳಿಗಳಿಗೆ ಏಕಾಏಕಿ ಜನರು ವಲಸೆ ಹೋಗಿರುವುದರಿಂದ ಹಳ್ಳಿಗಳಲ್ಲಿ ದುಡಿಯುವ ವರ್ಗದ ಪ್ರಮಾಣ ಹೆಚ್ಚಾಗಲಿದೆ. ಕೋವಿಡ್ ಭಯದಿಂದ ನಗರ ತೊರೆದಿರುವ ಕಾರ್ಮಿಕ ವರ್ಗ, ವಾಹನ ಚಾಲಕರು, ಕಾರ್ಪೆಟರ್‌, ಎಲೆಕ್ಟ್ರಿಷಿಯನ್‌, ಖಾಸಗಿ ಕಂಪನಿಗಳ ಉದ್ಯೋಗಿಗಳು, ಸಣ್ಣ ಅಂಗಡಿ ಇಟ್ಟುಕೊಂಡವರು ಹೀಗೆ ವಿವಿಧ ಬಗೆಯ ಉದ್ಯೋಗ ಕಂಡುಕೊಂಡವರು ತಕ್ಷಣಕ್ಕೆ ನಗರ ಪ್ರದೇಶಗಳಿಗೆ ವಾಪಸ್‌ ಬರುವುದು ಅನುಮಾನ. ಈ ವರ್ಗದ ಶೇ.50ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಡುತ್ತಾರೆ.

ಆದರೆ, ಈಗಿರುವ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಕ್ಷಣಕ್ಕೆ ಹೊಸ ಉದ್ಯೋಗ ಸೃಷ್ಟಿಸುವುದು ಕಷ್ಟ. ರೈತರು ಹೆಚ್ಚಿನ ಕೂಲಿ ನೀಡಿ ಕಾರ್ಮಿಕರನ್ನು
ಕೆಲಸಕ್ಕೆ ಸೇರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರ ಕೂಲಿ ದರವೂ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಪೂರಕವಾಗಿರುವ ಪರ್ಯಾಯೋಪಾಯಗಗಳ ಸೃಷ್ಟಿ ಹಾಗೂ ನರೇಗಾ ಯೋಜನೆಯನ್ನು ರೈತರ ಎಲ್ಲ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಿದರೆ ಗ್ರಾಮ ಭಾರತವ ನ್ನು ಬಲಗೊಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೃಷಿ ಸಾಗುವಳಿ ಹೆಚ್ಚಿಸುವುದು: ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ತೆರಳಿರುವ ಅನೇಕ ಜನರು ಸಣ್ಣ ಹಿಡುವಳಿದಾರರಾಗಿರುತ್ತಾರೆ. ಕಡಿಮೆ ಜಮೀನು ಇರುವ
ಕಾರಣ ಸಾಗುವಳಿ ಮಾಡದೆ ನಗರಕ್ಕೆ ವಲಸೆ ಬಂದಿರುತ್ತಾರೆ. ಅಂತಹ ಪಾಳು ಬಿದ್ದ ಜಮೀನು ಸಾಗುವಳಿ ಮಾಡಲು ಸರ್ಕಾರ ಉತ್ತೇಜನ ನೀಡಬೇಕು.
ರಾಜ್ಯದಲ್ಲಿ 16 ಲಕ್ಷ ಹೆಕ್ಟೇರ್‌ ಪ್ರದೇಶ ಉಳುಮೆ ಮಾಡದೇ ಬೀಳು (ಪಾಳು) ಬಿಡಲಾಗಿದೆ. ಅಂದರೆ, ಒಟ್ಟು ಉಳುಮೆಯ ಶೇ.21ರಷ್ಟು ಭೂಮಿ ಪಾಳು
ಬಿಡಲಾಗಿದೆ. ರಾಜ್ಯದಲ್ಲಿ ಒಟ್ಟು 115 ಲಕ್ಷ ಹೆಕ್ಟೇರ್‌ ಭೂಮಿ ಕೃಷಿ ಸಾಗುವಳಿಗೆ ಯೋಗ್ಯವಾಗಿದ್ದು, ಸುಮಾರು 75 ರಿಂದ 80 ಲಕ್ಷ ಹೆಕ್ಟೇರ್‌ ಮಾತ್ರ ಸಾಗುವಳಿ ಮಾಡಲಾಗುತ್ತಿದೆ. ಕೃಷಿ ಭೂಮಿ ಸಾಗುವಳಿ ಹೆಚ್ಚಿಸಲು ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಬೇಕೆಂಬ ಸಲಹೆ ವ್ಯಕ್ತವಾಗುತ್ತಿದೆ.

ಕೃಷಿ ಪೂರಕ ಉದ್ಯಮಕ್ಕೆ ಆದ್ಯತೆ: ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ವಲಸೆ ಹೋಗಿರುವ ಕೂಲಿ ಕಾರ್ಮಿಕರನ್ನು ಹೊರತುಪಡಿಸಿ ಬಹುತೇಕರು ಕುಶಲ
ಕರ್ಮಿಗಳಿರುತ್ತಾರೆ. ಯಾವುದಾದರೊಂದು ವಿಷಯ  ದಲ್ಲಿ ಕೌಶಲ್ಯ ಪಡೆದವರಿರುತ್ತಾರೆ. ಅಂತಹ ಕುಶಲ ಕಾರ್ಮಿಕರ ಕಲೆಗಳಿಗೆ ಕೃಷಿ ಹಾಗೂ ಗ್ರಾಮೀಣ ಜೀವನಕ್ಕೆ ಪೂರಕವಾದ ಉದ್ಯೋಗ ಕೈಗೊಳ್ಳಲು ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಬೇಕು. ಕೃಷಿಗೆ ಪೂರಕವಾದ ಸಣ್ಣ ಕೈಗಾರಿಕೆ ಸ್ಥಾಪನೆಗೆ ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಮಹಿಳೆಯರಿಗೆ ಹಳ್ಳಿಗಳಲ್ಲಿಯೇ ಸಣ್ಣ ಪ್ರಮಾಣದ ಗಾರ್ಮೆಂಟ್‌ ಉದ್ಯಮ, ಹಪ್ಪಳ, ಸಂಡಿಗೆ, ಮಸಾಲೆ ಪುಡಿ ಮಾಡುವ ಕಾರ್ಖಾನೆಗಳನ್ನು ತೆರೆಯಲು ಸಬ್ಸಿಡಿ ದರದಲ್ಲಿ ಸಾಲ ನೀಡುವಂತಾಗ  ಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Advertisement

ಕೃಷಿಯಲ್ಲಿಯೇ ನರೆಗಾ ಬಳಕೆ: ನರೇಗಾ ಯೋಜನೆ ಅಡಿಯಲ್ಲಿ ಕೃಷಿ, ತೋಟಗಾರಿಕೆಯ ಎಲ್ಲ ಚಟುವಟಿಕೆ ಕೈಗೊಳ್ಳಲು ಅವಕಾಶ ಕಲ್ಪಿಸುವಂತಾಗಬೇಕು. ರೈತರು ಕಾರ್ಮಿಕರಿಗೆ ಉದ್ಯೋಗ ನೀಡಿದರೆ, ನರೆಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಕೂಲಿ ನೀಡಿದಂತಾಗುತ್ತದೆ. ಅಲ್ಲದೆ ರೈತನಿಗೆ ಕಡಿಮೆ ಹಣಕ್ಕೆ ಕಾರ್ಮಿಕರು ದೊರೆಯುವುದರಿಂದ ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿದಂತಾಗುತ್ತದೆ. ಇದರಿಂದ ರೈತರು ಮತ್ತು ಕಾರ್ಮಿಕರಿಗೆ ಅನುಕೂಲ ವಾಗುತ್ತದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಾರೆ.

ಕೃಷಿ ಪೂರಕ ಸ್ಟಾರ್ಟ್‌ಅಪ್‌: ಕೋವಿಡ್ ಮಹಾಮಾರಿಗೆ ನಲುಗಿ ಐಟಿ ಬಿಟಿ ಉದ್ಯೋಗಿಗಳು ಹಳ್ಳಿ ಸೇರಿಕೊಂಡಿದ್ದು, ಮಹಾನಗರದ ಜೀವನದಿಂದ ಬೇಸತ್ತು ತಮ್ಮ ಊರುಗಳಲ್ಲಿಯೇ ಸಣ್ಣ ಪ್ರಮಾಣದ ಕೃಷಿ ಅಥವಾ ಅದಕ್ಕೆ ಪೂರಕವಾದ ಉದ್ಯೋಗ ಮಾಡುವ ಅಲೋಚನೆಯಲ್ಲಿ ಬಹಳ ಟೆಕ್ಕಿಗಳಿದ್ದಾರೆ. ಸರ್ಕಾರ ಅಂತಹವರಿಗೆ ಕೃಷಿ ಉತ್ಪನ್ನಗಳ ನೇರ ಮಾರಾಟ, ರೈತರು ಮತ್ತು ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸಲು ಅಗತ್ಯ ಸ್ಟಾರ್ಟ್‌ ಅಪ್‌ ಗಳನ್ನು ಗ್ರಾಮೀಣ
ಪ್ರದೇಶದಲ್ಲಿಯೇ ತೆರೆಯಲು ಸರ್ಕಾರ ಪ್ರೋತ್ಸಾಹಿಸಿದರೆ, ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಮೀಣ ಭಾರತವನ್ನು ಬಲಿಷ್ಠಗೊಳಿಸುವ ಮೂಲಕ
ನಗರಗಳಿಗೆ ವಲಸೆ ಪ್ರಮಾಣ ಕಡಿಮೆ ಮಾಡಿ ನಗರ ಪ್ರದೇಶಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಸಾಲ ನೀಡಲು ಸರ್ಕಾರ ನಿರ್ಧಾರ
ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿರುವ ಸಣ್ಣ ಹಿಡುವಳಿದಾರರು ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಕೃಷಿಗೆ ಪೂರಕವಾದ ಉದ್ಯಮ ಸ್ಥಾಪಿಸಲು ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ಸಾಲ ನೀಡಲು ತೀರ್ಮಾನಿಸಿದೆ. ಆದರೆ, ಪಾಳು ಬಿದ್ದ ಭೂಮಿಯ ಸಾಗುವಳಿ ಪ್ರಮಾಣ ಹೆಚ್ಚಿಸಲು ಬೇಕಾದ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದಂತಿಲ್ಲ. ಸರ್ಕಾರ ಗ್ರಾಮೀಣ ಪ್ರದೇಶಗಳ ವಲಸಿಗರಿಗೆ ಕೈಗೊಳ್ಳಬೇಕಾದ ಪರ್ಯಾಯ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಒಳ್ಳೆಯ ಅವಕಾಶ. ಪಾಳು ಬಿದ್ದ ಕೃಷಿ ಯೋಗ್ಯ ಭೂಮಿ ಸಾಗುವಳಿಗೆ ಆದ್ಯತೆ ನೀಡಿ, ಹಳ್ಳಿಗಳಿಗೆ ಬಂದಿರುವ ಕುಶಲ
ಕರ್ಮಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಕೃಷಿಗೆ ಪೂರಕ ಸ್ಟಾರ್ಟ್‌ಅಪ್‌ಗ್ಳನ್ನು  ತೆರೆಯಲು ಸರ್ಕಾರ ಪ್ರೋತ್ಸಾಹಿಸಬೇಕು.
● ಪ್ರಕಾಶ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ನಮ್ಮ ಹೊಲಗಳಲ್ಲಿ ನರೇಗಾ ಮೂಲಕ ಎಲ್ಲ ರೀತಿಯ ಕಾಮಗಾರಿ  ಕೈಗೊಳ್ಳಲು ಅವಕಾಶ ನೀಡಬೇಕು. ಇದರಿಂದ ನಮ್ಮ ಉತ್ಪಾದನೆ ವೆಚ್ಚ ಕಡಿಮೆ ಆಗುತ್ತದೆ.
ಅಲ್ಲದೆ ಸೂಕ್ತ ಮಾರುಕಟ್ಟೆ ಒದಗಿಸಬೇಕು.
● ಸೋಮಲಿಂಗ ಯಂಕಮ್ಮನವರ, ರೈತ

●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next