Advertisement

ಭಾರತಕ್ಕೆ ಪೂಜಾರ ಬಲ

12:32 PM Mar 19, 2017 | Team Udayavani |

ರಾಂಚಿ: ಚೇತೇಶ್ವರ ಪೂಜಾರ ಅವರ ತಾಳ್ಮೆಯ ಬ್ಯಾಟಿಂಗ್‌ ಸಾಹಸದಿಂದಾಗಿ ಭಾರತವು ರಾಂಚಿಯಲ್ಲಿ ಸಾಗುತ್ತಿರುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಹೋರಾಡುತ್ತಿದೆ. 

Advertisement

ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಆರು ವಿಕೆಟ್‌ ಕಳೆದುಕೊಂಡಿದ್ದು 360 ರನ್‌ ಗಳಿಸಿದೆ. ಮುನ್ನಡೆ ಸಾಧಿಸಲು ಇನ್ನೂ 91 ರನ್‌ ಬೇಕಾಗಿದೆ. ದಿನಪೂರ್ತಿ ಆಡಿದ ಪೂಜಾರ ಟೆಸ್ಟ್‌ನಲ್ಲಿ 11ನೇ ಶತಕ ಬಾರಿಸಿದ್ದು 130 ರನ್‌ ಗಳಿಸಿ ಆಡುತ್ತಿದ್ದಾರೆ. ನಾಲ್ಕನೇ ದಿನ ಆಟ ಮುಂದುವರಿಸಲಿರುವ ಅವರು ಸಾಹ ಮತ್ತು ಇನ್ನುಳಿದ ಆಟಗಾರರ ನೆರವಿನಿಂದ ಭಾರತಕ್ಕೆ ಮುನ್ನಡೆ ಒದಗಿಸಲು ಪ್ರಯತ್ನಿಸುವ ಸಾಧ್ಯತೆಯಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಕುತೂಹಲ ಘಟಕ್ಕೆ ತಲುಪುವ ಸಾಧ್ಯತೆಯಿದೆ. ನಾಲ್ಕನೇ ದಿನದಾಟ ಯಾವ ರೀತಿ ಸಾಗಬಹು ದೆಂಬುದರ ಮೇಲೆ ಈ ಪಂದ್ಯದ ಫ‌ಲಿತಾಂಶ ನಿರ್ಣಯಿಸಬಹುದಾಗಿದೆ.

ಪೂಜಾರ ಬಲ
ಆಸೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪೂಜಾರ ದಿನಪೂರ್ತಿ ಆಡಿ ಅದ್ಭುತ ತಾಳ್ಮೆಯ ಆಟ ಪ್ರದರ್ಶಿಸಿದರು. ಒಂದು ವಿಕೆಟಿಗೆ 120 ರನ್ನಿನಿಂದ ಆಟ ಮುಂದುವರಿಸಿದ ಪೂಜಾರ ಮತ್ತು ಮುರಳಿ ವಿಜಯ್‌ ದ್ವಿತೀಯ ವಿಕೆಟಿಗೆ 102 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಇದು ಅವರ ತವರಿನ ಕಳೆದ 10 ಟೆಸ್ಟ್‌ಗಳಲ್ಲಿ ಆರನೇ ಶತಕದ ಜತೆಯಾಟವಾಗಿದೆ.

ಛಲದಿಂದ ಆಡಿದ ಪೂಜಾರ ಈಗಾಗಲೇ 328 ಎಸೆತ ಎದುರಿಸಿ 130 ರನ್‌ ಗಳಿಸಿ ಆಡು ತ್ತಿದ್ದಾರೆ. 17 ಬೌಂಡರಿ ಬಾರಿಸಿದ ಅವರು ಟೆಸ್ಟ್‌ನಲ್ಲಿ 11ನೇ ಶತಕ ದಾಖಲಿಸಿ ಸಂಭ್ರಮಿಸಿ ದರು. ಆಸ್ಟ್ರೇಲಿಯದ ನಾಯಕ ಸ್ಟೀವನ್‌ ಸ್ಮಿತ್‌ ಅವರಂತೆ ಪೂಜಾರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಪ್ರವಾಸಿಗರಿಗೆ ಸಿಂಹಸ್ವಪ್ನರಾದರು.

10 ರನ್ನಿನಿಂದ ಆಟ ಮುಂದುವರಿಸಿದ ಪೂಜಾರ ಇಷ್ಟರವರೆಗೆ ಆರು ತಾಸು ಮತ್ತು 52 ನಿಮಿಷ ಆಡಿದ್ದಾರೆ. ಇತರ ಆಟಗಾರರ ಉತ್ತಮ ಬೆಂಬಲ ಪಡೆದು ತಂಡದ ರನ್‌ಮೊತ್ತ ಹೆಚ್ಚಿಸಲು ಪ್ರಯತ್ನಿಸಿದ ಅವರು ದಿನದಾಟದ ಅಂತ್ಯಕ್ಕೆ ವೃದ್ಧಿಮಾನ್‌ ಸಾಹ ಜತೆ ಮುರಿಯದ ಏಳನೇ ವಿಕೆಟಿಗೆ ಈಗಾಗಲೇ 32 ರನ್‌ ಪೇರಿಸಿದ್ದಾರೆ.

Advertisement

ಕಳೆದ ಎರಡು ಟೆಸ್ಟ್‌ಗಳನ್ನು ಗಮನಿಸಿದರೆ ಇಲ್ಲಿನ ಪಿಚ್‌ ಬ್ಯಾಟಿಂಗಿಗೆ ಯೋಗ್ಯವಾಗಿತ್ತು. ಆದರೂ ಆಸ್ಟ್ರೇಲಿಯ ಮೂರನೇ ದಿನ ಭಾರತದ ರನ್‌ ಗಳಿಕೆಯನ್ನು 240ಕ್ಕೆ ನಿಯಂತ್ರಿಸಿರುವುದು ವಿಶೇಷವಾಗಿದೆ. 

ಕೊಹ್ಲಿ  ವಿಫ‌ಲ
ಮೊದಲ ಅವಧಿ ಪೂರ್ತಿ ಆಡಿದ್ದ ಮುರಳಿ ವಿಜಯ್‌ 82 ರನ್‌ ಗಳಿಸಿದ ವೇಳೆ ಓ’ಕೀಫ್ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು. ಆಬಳಿಕ ಭುಜದ ನೋವಿದ್ದರೂ ಆಡಲಿಳಿದ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿ ನಿರಾಸೆ ಮೂಡಿಸಿದರು. ಈ ಸರಣಿಯಲ್ಲಿ ಅವರ ವೈಫ‌ಲ್ಯ ಈ ಪಂದ್ಯದಲ್ಲಿಯೂ ಮುಂದುವರಿಸಿತು. 23 ಎಸೆತ ಎದುರಿಸಿದ ಅವರು ಕೇವಲ 6 ರನ್‌ ಗಳಿಸಿದರು. 81ನೇ ಓವರಿನಲ್ಲಿ ಹೊಸ ಚೆಂಡು ತೆಗೆದುಕೊಂಡ ತತ್‌ಕ್ಷಣವೇ ಕೊಹ್ಲಿ ಔಟಾದರು.

ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್‌
ರಾಂಚಿ, ಮಾ. 18: ಆಸ್ಟ್ರೇಲಿಯ ವಿರುದ್ಧದ ರಾಂಚಿ ಟೆಸ್ಟ್‌ನ ಮೊದಲ ದಿನ ಫೀಲ್ಡಿಂಗ್‌ ಮಾಡುವ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುವ ಬಗ್ಗೆ ಸಂಶಯವಿತ್ತು. ಯಾಕೆಂದರೆ ಪಂದ್ಯದ ದ್ವಿತೀಯ ದಿನ ಆಸ್ಟ್ರೇಲಿಯ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಮೈದಾನದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 

ಪಂದ್ಯದ ಮೂರನೇ ದಿನ ಮಧ್ಯಾಹ್ನ ಮುರಳಿ ವಿಜಯ್‌ ಔಟಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗಿಗೆ ಬಂದಾಗ ನೆರೆದ ಪ್ರೇಕ್ಷಕರು ಕರತಾಡನದ ಮೂಲಕ ಸ್ವಾಗತಿಸಿದರು. ಆದರೆ ಕೊಹ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫ‌ಲರಾಗಿ ನಿರಾಸೆಗೊಳಿಸಿದರು. ಕೊಹ್ಲಿ 23 ಎಸೆತ ಎದುರಿಸಿ ಕೇವಲ 6 ರನ್‌ ಗಳಿಸಿ ವೇಗಿ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಎದುರಾಳಿ ನಾಯಕನಿಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿಕೊಂಡರು. 

ಈ ಹಿಂದಿನ ಸರಣಿಗಳಲ್ಲಿ ಮಹೋನ್ನತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ರನ್‌ ಗಳಿಸಲು ಒದ್ದಾಡುತ್ತಿದ್ದಾರೆ. 15 ರನ್‌ ಗಳಿಸಿರುವುದು ಈ ಸರಣಿಯಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ಭುಜದ ನೋವು ಗಂಭೀರವಾಗಿಲ್ಲದ ಕಾರಣ ಬ್ಯಾಟಿಂಗ್‌ ನಡೆಸಿದ್ದ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡರು.

Advertisement

Udayavani is now on Telegram. Click here to join our channel and stay updated with the latest news.

Next