Advertisement

ಗತಕಾಲದ ಚರ್ಚೆಯೊಡನೆ ಚಿಂತನೆ ಮುಖ್ಯ

09:47 PM Mar 03, 2020 | Lakshmi GovindaRaj |

ಮೈಸೂರು: ಸಾಹಿತ್ಯಕ್ಕೂ ಮಾನವನ ಬದುಕಿಗೂ ಅವಿನಾಭಾವ ಸಂಬಂಧವಿದೆ. ಬದುಕು ಹಿಂದೆಂದಿಗಿಂತಲೂ ಇಂದು ಬಹಳಷ್ಟು ಬದಲಾಗಿದೆ. ವೇಗದ ಬದುಕಿನೊಂದಿಗೆ ವ್ಯವಹಾರವೂ ಸೇರಿಕೊಂಡಿದೆ. ಈ ಬದುಕಿಗೆ ಇಂದಿನ ಸಾಹಿತ್ಯದ ಸ್ಪಂದನೆ ಕುರಿತು ಆಲೋಚಿಸಬೇಕಾದ ಅಗತ್ಯತೆ ಇದೆ. ಗತಕಾಲದ ಚರ್ಚೆಯೊಡನೆ ವರ್ತಮಾನದ ಚಿಂತನೆ ಬಹಳ ಮುಖ್ಯ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್‌ ಹೇಳಿದರು.

Advertisement

ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗದಿಂದ ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ಸಮಕಾಲೀನ ಕನ್ನಡ ಸಾಹಿತ್ಯ- ಸವಾಲು ಮತ್ತು ಸಾಧ್ಯತೆಗಳು ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸಂವೇದನಾಶೀಲತೆ ಕಡಿಮೆ: ಮಾನವನ ಇಂದಿನ ವ್ಯವಹಾರಿಕ ದೃಷ್ಟಿಯಿಂದ ವ್ಯಕ್ತಿಯ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆ ಕಡಿಮೆಯಾಗುತ್ತಿದೆ. ಇದು ಅಧ್ಯಯನ ಮತ್ತು ಬರವಣಿಗೆಗೆ ಬಹುದೊಡ್ಡ ತೊಡಕಾಗಿದೆ. ಇಂದು ನಾವು ಬರಿ ಮಾತಿನ ಯುಗದಲ್ಲಿದ್ದೇವೆ. ಹಗಲು ರಾತ್ರಿಯೆನ್ನದೆ ಮಾತಿನಲ್ಲಿ ತೊಡಗಿದ್ದೇವೆ. ಈ ಮಾತು ಮೌನವನ್ನು ಕೊಲ್ಲುತ್ತಿದೆ. ಮೌನ ಮಾನವನ ಬದುಕಿಗೆ ಅತ್ಯಗತ್ಯವಾದುದು. ಇದರಿಂದ ಮಾತ್ರವೇ ಆತ್ಮಾವ‌ಲೋಕನ ಸಾಧ್ಯ. ಆದರೆ ಆತ್ಮಾವಲೋಕನವಿಲ್ಲದೆ ಅಭಿರುಚಿ ಹಾಳಾಗುತ್ತಿದೆ ಎಂದರು.

ಮಸುಕು ಮಸುಕಾದ ಬದುಕು ನಮ್ಮದಾಗಿದೆ: ನವೋದಯದ ನಾಡು-ನುಡಿಯ ಮತ್ತು ಪ್ರಕೃತಿ ಪ್ರೇಮದ ತೀವ್ರತೆ ನಮ್ಮಲ್ಲಿ ಮಾಯವಾಗಿದೆ. ಮಸುಕು ಮಸುಕಾದ ಬದುಕು ನಮ್ಮದಾಗಿದೆ. ಯಾವುದೂ ನಿಂತಿಲ್ಲ, ನಡೆಯುತ್ತಿದೆ. ಆದರೆ ಅದು ಸತ್ವವನ್ನು, ಸಾಮರ್ಥ್ಯವನ್ನು ಕಳೆದುಕೊಂಡಿದೆ. ಇಂತಹ ವಿಚಾರ ಸಂಕಿರಣಗಳಿಂದ, ಕಾರ್ಯಕ್ರಮಗಳಿಂದ ಅವಲೋಕನ ಮಾಡುವ ಮೂಲಕ ದಾರಿಯನ್ನು ಗುರುತಿಸಬೇಕಾಗಿದೆ, ಸರಿಯಾದ ದಾರಿಯತ್ತ ನಡೆಯಬೇಕಾಗಿದೆ ಎಂದರು.

ಇಂಗ್ಲಿಷ್‌ ವ್ಯಾಮೋಹ ಬಿಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಕರ್ನಾಟಕದಲ್ಲಿರುವವರೆಲ್ಲರಿಗೂ ಕನ್ನಡ ಹೆತ್ತತಾಯಿಯಂತೆ. ಅದನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಇಂದು ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ ಕಡಿಮೆಯಾಗಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವಿದು. ಇಂಗ್ಲಿಷ್‌ ವ್ಯಾಮೋಹವನ್ನು ಬಿಡಬೇಕು. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗಮನಾರ್ಹವಾದುದು. ಈ ದಿಸೆಯಲ್ಲಿ ಸಮರ್ಪಕವಾದ ಕಾನೂನುಗಳನ್ನು,ಯೋಜನೆಗಳನ್ನು ತಂದಲ್ಲಿ ಕನ್ನಡದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

Advertisement

ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಮಹದೇವಪ್ಪ ಉಪಸ್ಥಿತರಿದ್ದರು. ಸೃಜನಶೀಲ ಸಾಹಿತ್ಯ ಕುರಿತು ಪ್ರೊ. ಅಮರೇಶ ನುಗಡೋಣಿ, ಸೃಜನೇತರ ಸಾಹಿತ್ಯ ಕುರಿತು ಪ್ರೊ. ಮಾಧವ ಪೆರಾಜೆ, ಅನುವಾದ ಸಾಹಿತ್ಯ ಕುರಿತು ಪ್ರೊ.ವಿ.ಬಿ. ತಾರಕೇಶ್ವರ ಮಾತನಾಡಿದರು. ದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next