Advertisement

ವಿಜ್ಞಾನಕ್ಕೆ ಡಿಗ್ರಿಗಿಂತ ಆಲೋಚನಾ ಕ್ರಮ ಮುಖ್ಯ

12:43 AM Jan 05, 2020 | Lakshmi GovindaRaj |

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ಸಾಧಿಸಲು ಡಿಗ್ರಿ ಮತ್ತು ಹಣಕ್ಕಿಂತ ಮುಖ್ಯವಾಗಿ ಸರಿಯಾದ ಆಲೋಚನಾ ಕ್ರಮ ಹಾಗೂ ಕಠಿಣ ಶ್ರಮ ಅಗತ್ಯವಿದೆ’ ಎಂದು ಭಾರತ ರತ್ನ ಪ್ರೊ.ಸಿ.ಎನ್‌.ಆರ್‌. ರಾವ್‌ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಐದು ದಿನಗಳ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಶನಿವಾರ ಭಾರತೀಯ ಕಿಶೋರ ವೈಜ್ಞಾನಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಅತ್ಯಂತ ಬಡ ಕುಟುಂಬದಿಂದ ಬಂದ ರಷಿಯಾದ ರಸಾಯನಶಾಸ್ತ್ರಜ್ಞೆ ದ್ಮಿತ್ರಿ ಮೆಂಡಲೀವ್‌ 1869ರಲ್ಲೇ ಆವರ್ತಕ ಕೋಷ್ಠಕವನ್ನು ರಚಿಸಿದರು. ಭೌತಶಾಸ್ತ್ರಜ್ಞ ಸಿ.ವಿ. ರಾಮನ್‌ ಅವರು ತಮ್ಮ 16ನೇ ವಯಸ್ಸಿನಲ್ಲೇ ಎರಡು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಅಷ್ಟೇ ಯಾಕೆ, ಜಗದೀಶ್ಚಂದ್ರ ಬೋಸ್‌ ಅವರು ರೇಡಿಯೊ ತರಂಗಾಂತರಗಳನ್ನು ಅನ್ವೇಷಣೆ ಮಾಡಿದರು. ಈ ನಿಟ್ಟಿನಲ್ಲಿ ಹೇಳುವುದಾದರೆ, ಡಿಗ್ರಿ ಪ್ರಮಾಣಪತ್ರ ಮತ್ತು ಹಣಕ್ಕಿಂತ ವಿಜ್ಞಾನದಲ್ಲಿ ಸರಿಯಾದ ಆಲೋಚನೆ ಹಾಗೂ ಅದರ ಸಾಕಾರಕ್ಕೆ ಕಠಿಣ ಶ್ರಮ ಮುಖ್ಯ ಎಂದು ಹೇಳಿದರು.

“ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಸುಲಭ, ಆದರೆ ಸರಸ್ವತಿ ಸುಲಭವಾಗಿ ಒಲಿಯುವುದಿಲ್ಲ. ಆಕೆಯನ್ನು ಇಷ್ಟಪಡಿಸಲು ಅನೇಕ ತ್ಯಾಗಗಳನ್ನು ಮಾಡಬೇಕು ಎಂದು ನನ್ನ ಅಮ್ಮ ಹೇಳುತ್ತಿದ್ದರು. ಹಾಗೆಯೇ ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂದರೆ ತ್ಯಾಗವೂ ಮುಖ್ಯ. ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು’ ಎಂದ ಅವರು, ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ಕೋಟ್ಯಂತ ಅದ್ಭುತ ಪ್ರತಿಭೆಗಳಿವೆ.

ಆದರೆ, ಅವುಗಳಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಇದಕ್ಕೆ ದೇಶದಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ದೊರೆಯ ದಿರುವುದೂ ಕಾರಣ ಇರಬಹುದು ಎಂದು ಬೇಸರ ವ್ಯಕ್ತಪಡಿಸಿದರು. “ವಿಜ್ಞಾನದ ಸಂಶೋಧನೆ ನಿರಂತರವಾದು ದಾಗಿರು ವುದರಿಂದ 86 ನೇ ವಯಸ್ಸಿನಲ್ಲೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವರು ವಿಜ್ಞಾನದಲ್ಲಿ ತೊಡಗಿಸಿಕೊಳ್ಳುವುದು ಹವ್ಯಾಸ ಎಂದು ಹೇಳುತ್ತಾರೆ. ಆದರೆ ಅದು ಜೀವನದ ಒಂದು ಭಾಗ’ ಎಂದು ಹೇಳಿದರು.

ಐಎಸ್‌ಸಿಎ ಇನ್ಫೋಸಿಸ್‌ ಪ್ರಶಸ್ತಿ: ವಿಜ್ಞಾನ ಕುರಿತು ಅತ್ಯುತ್ತಮವಾಗಿ ಪ್ರಬಂಧ ರಚಿಸಿದ ಐವರು ವಿದ್ಯಾರ್ಥಿಗಳಿಗೆ “ಇನ್ಫೋಸಿಸ್‌ ಫೌಂಡೇಷನ್‌-ಐಎಸ್‌ಸಿಎ ಟ್ರಾವೆಲ್‌ ಪ್ರಶಸ್ತಿ’ ಹಾಗೂ ಉತ್ತಮ ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಿದ ಐವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಪೈಕಿ ಕೆಲವರು “ಉದಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿ ಕೊಂಡರು.

Advertisement

ಸಂಜಯನಗರದ ಡ್ಯಾಫೋಡಿಲ್ಸ್‌ ಶಾಲೆಯ ವಿದ್ಯಾರ್ಥಿ ರಿತ್ವಿಕ್‌, “ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದ ಅಂಶಗಳ ಕುರಿತು 12 ಪುಟಗಳ ಪ್ರಬಂಧ ಬರೆದು ಕಳುಹಿಸಿದ್ದೆ. ಜೀವ ಶಾಸ್ತ್ರ , ಬಾಹ್ಯಾಕಾಶ ಮೊದಲಾದ ವಿಭಾಗಗಳ ಕುರಿತು ವಿವರಣೆ ನೀಡಿದ್ದೆ. ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸಿದೆ’ ಎಂದರು. ಕಂಬಾಲಪಲ್ಲಿಯ ಜಿಲ್ಲಾ ಪಂಚಾಯ್ತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬುಡಕಟ್ಟು ಸಮುದಾಯದ ಡಿ. ಅಂಜಲಿ, “ವಿಜ್ಞಾನಿಯಾಗುವ ಗುರಿ ಇದೆ. ಬಾಹ್ಯಾಕಾಶ ಹಾಗೂ ಕೃಷಿ ವಿಜ್ಞಾನದ ಬಗ್ಗೆ ಪ್ರಬಂಧ ಬರೆದಿದ್ದೆ’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ: ಅನ್ಹದ್‌ ಸಿಂಗ್‌ (ಸೆಂಟ್‌ ಜಾನ್‌ ಸ್ಕೂಲ್‌, ಚಂಡಿಗಢ), ರಿತ್ವಿಕ್‌ (ಡ್ಯಾಫೋಡಿಲ್ಸ್‌ ಫೌಂಡೇಷನ್‌ ಫಾರ್‌ ಲರ್ನಿಂಗ್‌, ಬೆಂಗಳೂರು), ಮುಕ್ತಾ ಎಸ್‌. ಕುಮಾರ್‌, (ಕೇಂದ್ರೀಯ ವಿದ್ಯಾಲಯ, ಕೋಲಾರ), ಸೌಭಾಗ್ಯ ಸಿಂಗ್‌ (ಶೀಲಿಂಗ್‌ ಹೌಸ್‌ ಸ್ಕೂಲ್‌, ಕಾನ್ಪುರ), ಝೈನಬ್‌ ಸಮನ್‌ ಮಕ್ಸೂದುರ್‌ ರಹಮಾನ್‌ (ಫ‌ಜಂದರ್‌ ಪ್ರೌಢಶಾಲೆ ಮತ್ತು ಜೂನಿಯರ್‌ ಕಾಲೇಜು, ರಾಯಗಢ), ಜೀನತ್‌ (ರಿವಿರಿಯನ್‌ ಪಬ್ಲಿಕ್‌ ಸ್ಕೂಲ್‌, ಡೆಹ್ರಾಡೂನ್‌), ಡಿ. ಅಂಜಲಿ (ಝಡ್‌ಪಿಎಸ್‌ಎಸ್‌, ಮೆಹಬೂಬಾಬಾದ್‌), ಎಂ. ಚಂದನ ಜ್ಯೋತಿ (ಪಿವಿಆರ್‌ ಜಿ.ಪಂ. ಪ್ರೌಢಶಾಲೆ, ಅನಂತಪುರಂ), ಕೆ. ಜಯಸೂರ್ಯ ಯಾದವ್‌ (ಪಿವಿಆರ್‌ ಜಿ.ಪಂ. ಪ್ರೌಢಶಾಲೆ, ಅನಂತಪುರಂ), ಪೂಜಾ ತಮ್ತಾ (ರಿವಿರಿಯನ್‌ ಪಬ್ಲಿಕ್‌ ಸ್ಕೂಲ್‌, ಡೆಹ್ರಾಡೂನ್‌).

ಈ ಎಣ್ಣೆಗೆ ಕಣ್ಣಿನ ಪೊರೆ ಬರಲ್ಲ!: ಕರ್ನಾಟಕ ಪ್ರತಿನಿಧಿಸಿದ್ದ ಹಾವೇರಿ ವಿದ್ಯಾರ್ಥಿಯು ಬೇವಿನ ಸೊಪ್ಪು , ಉಪ್ಪು, ಕರ್ಪೂರ, ನಿಂಬೆ ರಸ ಮಾತ್ರ ಬಳಸಿ ರಾಸಾಯನಿಕ ಮುಕ್ತ ಕೀಟನಾಶಕ ಮತ್ತು ಕಳೆನಾಶಕ, ಕಣ್ಣಿನ ಪೊರೆ ಬಾರದಂತೆ ನಿಯಂತ್ರಿಸುವ ಸಸ್ಯ ದ್ರಾವಣ ಸಿದ್ಧಪಡಿಸಿದ್ದು, ಇದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇವುಗಳ ಜತೆಗೆ ಸೈಕಲ್‌ ತುಳಿಯುವ ಮೂಲಕ ಬಾವಿ ನೀರು ಮೇಲೆತ್ತುವ ಛತ್ತೀಸ್‌ಗಢ ವಿದ್ಯಾರ್ಥಿಗಳ ಯೋಜನೆ, ಗುಜರಾತಿನ ಶಾಲೆಯೊಂದರ ವಿದ್ಯಾರ್ಥಿಗಳು ಸಿದ್ಧಪಡಿಸಿದ ಬೂಟುಗಳಲ್ಲಿ ಬಲೂನು ಅಳವಡಿಸಿ ಹೆಜ್ಜೆ ಇಟ್ಟಂತೆ ಅದಕ್ಕೆ ಅನುಗುಣವಾಗಿ ಗಾಳಿಯ ಒತ್ತಡದಿಂದ ನೀರು ಅಥವಾ ಕೀಟನಾಶಕ ಸಿಂಪಡಿಸುವ ವ್ಯವಸ್ಥೆಯಂತಹ ಹಲವು ಮಾದರಿಗಳು ಕಂಡುಬಂದವು.

ನಿರ್ದಿಷ್ಟ ರೋಗಕ್ಕೆ ಆ್ಯಂಟಿ ಬಯೋಟಿಕ್‌ ತಯಾರಿಕೆ: ಪರಿಸರ ಸ್ನೇಹಿ ಹಾಗೂ ನಿರ್ದಿಷ್ಟ ರೋಗವನ್ನು ಗುರಿಯಾಗಿಸಿಕೊಂಡ ಪರಿಣಾಮಕಾರಿ ರೋಗಾಣು ಪ್ರತಿರೋಧಕ (ಆ್ಯಂಟಿ ಬಯೋಟಿಕ್‌) ತಯಾರಿಸಲಾಗುತ್ತಿದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ಅಡಾ ಇ. ಯೋನತ್‌ ಹೇಳಿದರು. ಜಿಕೆವಿಕೆಯಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಸ್ತುತ ವಿವಿಧ ರೋಗಗಳ ನಿಯಂತ್ರಣಕ್ಕೆ ಅನು ಕೂಲವಾಗುವಂತೆ ಆ್ಯಂಟಿ ಬಯೋಟಿಕ್‌ಗಳನ್ನು ನೀಡಲಾಗುತ್ತಿದೆ. ಇದರಿಂದ “ಬ್ಯಾಕ್ಟೀರಿಯಾಗಳು ಆ್ಯಂಟಿ ಬಯೋಟಿಕ್‌ಗೆ ಪ್ರತಿನಿರೋ ಧಕತೆ ಒಡ್ಡುವ ಸಾಮರ್ಥ್ಯ ಬೆಳೆಸಿ ಕೊಂಡಿವೆ. ಪರಿ ಣಾಮ ಆ್ಯಂಟಿ ಬಯೋಟಿಕ್ಸ್‌ ತೆಗೆದು ಕೊಂಡರೂ ರೋಗ ಗುಣಮುಖವಾಗದೇ ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದರು.

ಯುರೋಪ್‌ನಲ್ಲಿ 33 ಸಾವಿರ ಹಾಗೂ ಅಮೆರಿಕದಲ್ಲಿ 23 ಸಾವಿರ ಜನ ಈ ರೀತಿ ಬಲಿಯಾಗುತ್ತಿದ್ದಾರೆ. ಹೀಗಾಗಿ, ನಿರ್ದಿಷ್ಟವಾಗಿ ಒಂದು ರೋಗಕ್ಕೆ ಆ್ಯಂಟಿ ಬಯೋಟಿಕ್ಸ್‌ ಕಂಡುಹಿಡಿಯವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿದ್ದೇನೆ. ಈ ಆ್ಯಂಟಿ ಬಯೋಟಿಕ ಪರಿಸರ ಸ್ನೇಹಿಯಾಗಿದೆ. ಇದರ ಉತ್ಪಾದನಾ ವೆಚ್ಚ ಅತಿ ಹೆಚ್ಚಾಗಿರಲಿರುವುದರಿಂದ ಔಷಧ ಕಂಪನಿಗಳು ಉತ್ಪಾದನೆಗೆ ಮುಂದೆ ಬರುವುದು ಕಷ್ಟ. ಜತೆಗೆ ಇವು ಬೇಗನೆ ಶಕ್ತಿ ಕಳೆದುಕೊಳ್ಳುವ ಕಾರಣ ಔಷಧ ತಯಾರಿಕಾ ಕಂಪನಿಗಳು ಹೊಸ ಆ್ಯಂಟಿ ಬಯೋಟಿಕ್‌ಗಳನ್ನು ಉತ್ಪಾದಿಸುವತ್ತ ಆಸಕ್ತಿ ತೋರುತ್ತಿಲ್ಲ ಎಂದರು. ಈ ಬಾರಿ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ.

ಭಾರತೀಯ ವಿಜ್ಞಾನಿ ಜಿ.ಎನ್‌.ರಾಮಚಂದ್ರನ್‌ ಅವರು ನನಗೆ ಮಾರ್ಗದರ್ಶಕರಾಗಿದ್ದರು. ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಅನುದಾನ ನೀಡುವ ಮೂಲಕ ಸಹಾಯ ಮಾಡಬಹುದಷ್ಟೇ. ಯುವ ವಿಜ್ಞಾನಿಗಳು ಸ್ವಂತಿಕೆಯಿಂದ ಸಂಶೋಧನೆ ಕೈಗೊಂಡು ಬೆಳೆಯಬೇಕೆಂದರು. ಮತ್ತೂಬ್ಬ ನೊಬೆಲ್‌ ಪುರಸ್ಕೃತ ವಿಜ್ಞಾನಿ ಪ್ರೊ.ಸ್ಟೀಫನ್‌ ಹೆಲ್‌ ಮಾತನಾಡಿ, ನೈಸರ್ಗಿಕ ನಿಯಮಗಳು ಎಲ್ಲಾ ದೇಶಗಳಲ್ಲೂ ಒಂದೇ ಆಗಿದ್ದು, ಎಂದಿಗೂ ಬದಲಾಗುವುದಿಲ್ಲ. ಹೀಗಾಗಿ, ಸಂಶೋಧನಾ ಆಸಕ್ತಿ ಯನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಸಂಶೋಧನೆ ಕೈಗೊಂಡ ಬಳಿಕ ಫಲಿತಾಂಶವು ನಿರೀಕ್ಷೆಗೆ ತಕ್ಕಂತೆ ಬಾರದಿದ್ದರೆ ಬೇಸರ ಪಟ್ಟುಕೊಳ್ಳದೇ ಪ್ರಯತ್ನ ಮುಂದುವರೆಸಬೇಕು ಎಂದರು.

ಹವಾಮಾನ ವೈಪರೀತ್ಯ; ಹಸಿವಿನ ಸೂಚ್ಯಂಕದಲ್ಲಿ ಏರಿಳಿತ: ದಿಲೀಪ್‌
ಬೆಂಗಳೂರು: ಹವಾಮಾನ ವೈಪರೀತ್ಯಕ್ಕೂ ಮತ್ತು ಹಸಿವಿನ ಸೂಚ್ಯಂಕದ ಏರುಪೇರಿಗೂ ಸಂಬಂಧ ಇದೆಯೇ? ಹೌದು, ನಿಕಟ ಸಂಬಂಧವಿದೆ ಎನ್ನುತ್ತಾರೆ ಖರಗಪುರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರಾಧ್ಯಾಪಕ ಡಾ.ದಿಲೀಪ್‌ ಸ್ವೆ„ನ್‌. “ಹವಾಮಾನ ವೈಪರೀತ್ಯ ಇದೇ ರೀತಿ ಮುಂದುವರಿದರೆ, ಮುಂಬರುವ ವರ್ಷಗಳಲ್ಲಿ ಹಸಿವಿನಿಂದ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಲಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ನಗರದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡ ಐದು ದಿನಗಳ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಶನಿವಾರ “ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನೆಗಾಗಿ ಅಳವಡಿಸಿಕೊಳ್ಳಬೇಕಾದ ಮುಂದುವರಿದ ತಂತ್ರಜ್ಞಾನಗಳು’ ಕುರಿತು ಅವರು ಮಾತನಾಡಿದರು. ಹವಾಮಾನ ವೈಪರೀತ್ಯದಿಂದ ಆಹಾರ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಆಗುತ್ತಿದೆ. ಜತೆಗೆ ಇಳುವರಿ ಹೆಚ್ಚಿಸಿಕೊಳ್ಳಲು ಅತ್ಯಧಿಕ ರಸಗೊಬ್ಬರ ಬಳಕೆ ಆಗುತ್ತದೆ. ಮತ್ತೂಂದೆಡೆ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದೆಲ್ಲದರ ಪರಿಣಾಮ ಹಸಿವಿನ ಸೂಚ್ಯಂಕದಲ್ಲಿ ಏರುಪೇರಾಗಲು ಕಾರಣವಾಗುತ್ತಿದೆ.

ತಾಪಮಾನದಲ್ಲಿ ಕೇವಲ ಒಂದು ಡಿಗ್ರಿ ಏರಿಕೆಯಾದರೂ ಪ್ರತಿ ಹೆಕ್ಟೇರ್‌ ಭೂಮಿಯಲ್ಲಿ 0.6 ಟನ್‌ನಷ್ಟು ಇಳುವರಿ ಕುಸಿತ ಆಗುತ್ತದೆ. ಈ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ ಎಂದರು. ಈ ಆರಂಭದ ಸಹಸ್ರಮಾನದಲ್ಲಿ ಜಾಗತಿಕ ಮಟ್ಟದಲ್ಲಿ 800-900 ಮಿಲಿಯನ್‌ ಜನ ಹಸಿವು ಮತ್ತು ಅಪೌಷ್ಟಿಕತೆ ಆತಂಕ ಎದುರಿಸುತ್ತಿದ್ದಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ, 2080ರ ವೇಳೆ ಇನ್ನೂ 500-600 ಮಿಲಿಯನ್‌ ಜನ ಇದಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸಿದರು.

ಹವಾಮಾನ ವೈಪರೀತ್ಯದಿಂದ ದ್ಯುತಿಸಂಶ್ಲೇಷಣಾ ಕ್ರಿಯೆ ಹೆಚ್ಚಳ, ನೀರಿನ ಮಿತಬಳಕೆ, ಅರೆಶುಷ್ಕ ಪ್ರದೇಶಗಳಲ್ಲಿ ಮಳೆ ಪ್ರಮಾಣ ಅಧಿಕವಾಗಿರುವುದು ಸೇರಿದಂತೆ ತುಸು ಅನುಕೂಲವೂ ಆಗಿರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ನಿರಂತರ ನೆರೆ, ಬರ, ಬೆಳೆಗಳ ಬೆಳೆ ಅವಧಿ ಕಡಿತ, ಕರಾವಳಿ ಪ್ರದೇಶಗಳಲ್ಲಿ ಲವಣಾಂಶ ಪ್ರಮಾಣ ಏರಿಕೆಯಂತಹ ಗಂಭೀರ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು. ಇದಕ್ಕೂ ಮುನ್ನ ಮೇಘಾಲಯದ ಕಿರ್ದೆಮುಕಲಾಯಿ ಕೃಷಿ ಮಹಾವಿದ್ಯಾಲಯದ ಡೀನ್‌ ಯು.ಕೆ. ಬೆಹರಾ “ಸಮಗ್ರ ಕೃಷಿ ಮತ್ತು ಗ್ರಾಮೀಣ ಜೈವಿಕ ಉದ್ಯಮ’ ಕುರಿತು ಉಪನ್ಯಾಸ ನೀಡಿದರು.

ಕಿರುಧಾನ್ಯಗಳ ಬೆಳೆ ಅಗತ್ಯ: ನೆರೆ ತಡೆದುಕೊಳ್ಳಬಹುದಾದ ತಳಿಗಳನ್ನು ಬೆಳೆಯುವುದು (ಉದಾ: ಎಫ್ಆರ್‌ 13ಎ ರೈಸ್‌), ಬರ ತಡೆಯುವ, ಮೇವು ಬರುವ ಕಿರುಧಾನ್ಯಗಳನ್ನು ಹೆಚ್ಚು ಬೆಳೆಯಬೇಕು. ಸಮಗ್ರ ಬೇಸಾಯಕ್ಕೆ ಒತ್ತುಕೊಡಬೇಕು. ಡ್ರೋನ್‌ನಂತಹ ತಂತ್ರಜ್ಞಾನ ಬಳಸಿ ಬೆಳೆಗಳ ನಿರ್ವಹಣೆ ಮಾಡ ಬೇಕೆಂದು ಖರಗಪುರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರಾಧ್ಯಾಪಕ ಡಾ.ದಿಲೀಪ್‌ ಸ್ವೆ„ನ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next