Advertisement

ನಮ್ಮ ಕೈ ಕಟ್ಟಿ ಹಾಕಿ ಉಗ್ರರಿಗೆ ದೇಶ ಮಾರಾಟ: ಅಫ್ಘಾನ್ ಅಧ್ಯಕ್ಷರ ವಿರುದ್ಧ ರಕ್ಷಣಾ ಸಚಿವ

12:35 PM Aug 16, 2021 | Team Udayavani |

ಕಾಬೂಲ್: ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬೂಲ್ ಸೇರಿದಂತೆ ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಏತನ್ಮಧ್ಯೆ ಅಫ್ಘಾನಿಸ್ತಾನ್ ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮ್ಮದಿ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Advertisement

ಅಫ್ಘಾನಿಸ್ತಾನ ಸರ್ಕಾರ ನಮ್ಮ ಕೈಯನ್ನು ಕಟ್ಟಿ ಹಾಕಿ, ದೇಶವನ್ನು ಉಗ್ರರಿಗೆ ಮಾರಾಟ ಮಾಡಿರುವುದಾಗಿ ರಕ್ಷಣಾ ಸಚಿವ ಬಿಸ್ಲಿಲ್ಲಾ ಕಿಡಿಕಾರಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಫ್ಘಾನ್ ಅಧ್ಯಕ್ಷ ಘನಿ ಅವರು ಮೂರ್ಖತನದ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ (ಸೇನೆ) ಕೈಯನ್ನು ಕಟ್ಟಿ ಹಾಕಿ ದೇಶವನ್ನು ಶ್ರೀಮಂತ ವ್ಯಕ್ತಿ ಮತ್ತು ಆತನ ಗ್ಯಾಂಗ್ ಗೆ ಮಾರಾಟ ಮಾಡಿರುವುದಾಗಿ ಟೀಕಿಸಿದ್ದಾರೆ.

ಭಾನುವಾರ ಬೆಳಗ್ಗೆ ತಾಲಿಬಾನ್ ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದು, ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ತಜಿಕಿಸ್ತಾನಕ್ಕೆ ಪಲಾಯನ ಮಾಡಿರುವುದಾಗಿ ರಾಯಿಟರ್ಸ್ ವರದಿ ಮಾಡಿತ್ತು. ಭದ್ರತೆಯ ದೃಷ್ಟಿಯಿಂದ ಅಶ್ರಫ್ ಘನಿ ಅವರ ಬಗ್ಗೆ ಯಾವ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

ತಾಲಿಬಾನ್ ಬಂಡುಕೋರರು ಕಾಬೂಲ್ ನಲ್ಲಿರುವ ಅಧ್ಯಕ್ಷರ ಅರಮನೆಯನ್ನು ಪ್ರವೇಶಿಸಿದ್ದು, ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ನ ಇಬ್ಬರು ಹಿರಿಯ ಕಮಾಂಡರ್ ತಿಳಿಸಿರುವುದಾಗಿ ವರದಿ ವಿವರಿಸಿದೆ. ಆದರೆ ಈ ಕುರಿತು ಅಫ್ಘಾನ್ ಸರ್ಕಾರ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next