Advertisement

Hijab ಧರಿಸುವುದಾದರೆ ಕೇಸರಿ ಧರಿಸುವುದರಲ್ಲಿ ತಪ್ಪಿಲ್ಲ: ಡಾ.ಭರತ್ ಶೆಟ್ಟಿ ವೈ

03:04 PM Dec 23, 2023 | Team Udayavani |

ಮಂಗಳೂರು: ಶಾಲಾ-ಕಾಲೇಜುಗಳು ರೂಪಿಸಿಕೊಂಡಿರುವ ಶಿಸ್ತುಬದ್ಧ ವಸ್ತ ಸಂಹಿತೆಗೆ ಸರಕಾರವೇ ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ. ಹಿಜಾಬ್ ಧರಿಸಲು ಶಾಲಾ ಕೊಠಡಿ ಒಳಗೆ ಅನುಮತಿ ನೀಡುವುದಾದರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ತಿರುಗೇಟು ನೀಡಿದ್ದಾರೆ.

Advertisement

ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಕ್ಯಾಂಪಸ್ ಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸುಧೀರ್ಘ ಹೋರಾಟವೊಂದು ವಿವಿಧ ವಿದ್ಯಾರ್ಥಿ ಸಂಘಟನೆಗಳ ನಡುವೆ ರೂಪುಗೊಳ್ಳಬಹುದು ಎಂದಿರುವ ಶಾಸಕ ಡಾ.ಭರತ್ ಶೆಟ್ಟಿ ಅವರು, ಸರಕಾರ ಕೂಡಲೇ ಎಚ್ಚೆತ್ತುಕೊಂಡು ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಹಿಜಾಬ್ ಧರಿಸಲು ಕ್ಯಾಂಪಸ್ ಹೊರಗಡೆ, ಕಾಲೇಜಿನ ಒಳಗೂ ಅನುಮತಿ ನೀಡುವುದಾದರೆ,ಕೇಸರಿ ಶಾಲು ಧರಿಸಲು ಹಿಂದೂಪರ ವಿದ್ಯಾರ್ಥಿಗಳಿಗೂ ಆಯ್ಕೆಯ ಸ್ವಾತಂತ್ರ್ಯವಿದೆ. ಜಾತಿಗೊಂದರಂತೆ ಬಟ್ಟೆ ಧರಿಸಲು ಕ್ಯಾಂಪಸ್ ನಲ್ಲಿ ಅನುಮತಿ ನೀಡುವ ಮೂಲಕ ಸರಕಾರ ಶಾಲಾ-ಕಾಲೇಜಿನ ಯೂನಿಫಾರ್ಮ್ ವ್ಯವಸ್ಥೆಗೆ ಬೆಲೆ ಇಲ್ಲದಂತೆ ಮಾಡಿದೆ ಎಂದು ಹೇಳಿದರು.

ಶಾಲಾ-ಕಾಲೇಜು ಕೊಠಡಿ ಒಳಗೆ ಎಲ್ಲರೂ ಸಮಾನರು ಎಂಬ ಭಾವನೆಗೆ ಸರಕಾರವೇ ಹಿಜಾಬ್ ಧರಿಸಲು ಅನುಮತಿ ನೀಡುವ ಮೂಲಕ  ದಕ್ಕೆ ತಂದಂತಾಗಿದೆ. ಬಿಜೆಪಿ ಇದರ ವಿರುದ್ದ ಎಲ್ಲಾ ಹೋರಾಟ ಹಾದಿಯನ್ನು ಮುಕ್ತವಾಗಿ ಇರಿಸಿದೆ. ಸೂಕ್ತ ಸಮಾಲೋಚನೆಯ ಬಳಿಕ ಹೋರಾಟದ ಅಭಿಯಾನ ಆರಂಭವಾಗಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next