Advertisement

ಮಳೆಗಾಲ ಮುಗಿವವರೆಗೂ ರಜೆ ಇಲ್ಲ

12:34 PM May 23, 2017 | Team Udayavani |

ಬೆಂಗಳೂರು: ಮಳೆಗಾಲ ಮುಗಿಯುವವರೆಗೆ ಎಲ್ಲ ವಲಯಗಳ ಜಂಟಿ ಆಯುಕ್ತರಿಂದ ಹಿಡಿದು ತಮ್ಮ ಅಧೀನ ಸಿಬ್ಬಂದಿಗೆ (ಸಹಾಯಕ ಎಂಜಿನಿಯರ್‌ ಹುದ್ದೆವರೆಗೆ) ರಜೆ ನಿರ್ಬಂಧಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅನುಮೋದನೆ ಪಡೆದು ರಜೆ ನೀಡತಕ್ಕದ್ದು. ಇದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಅಧಿಕಾರಿಗಳಿಗೆ ನೀಡಿದ ಕಟ್ಟುನಿಟ್ಟಿನ ಆದೇಶ.

Advertisement

ಮಳೆಯಿಂದ ನಗರದಲ್ಲಿ ಉಂಟಾದ ಅವಾಂತರಗಳ ಬೆನ್ನಲ್ಲೇ ನಗರದಲ್ಲಿ ಮುಂದೆ ಮಳೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸೋಮವಾರ ಮೇಯರ್‌ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಆಯುಕ್ತರು ಈ ಆದೇಶ ಮಾಡಿದ್ದಾರೆ.

“ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳ ಜಂಟಿ ಆಯುಕ್ತರಿಂದ ಹಿಡಿದು ಸಹಾಯಕ ಎಂಜಿನಿಯರ್‌ಗಳವರೆಗಿನ ಎಲ್ಲ ಸಿಬ್ಬಂದಿಗೆ ಮಳೆಗಾಲ ಮುಗಿಯುವವರೆಗೆ ರಜೆ ನಿರ್ಬಂಧಿಸಲಾಗಿದೆ. ಅನಿವಾರ್ಯ ಸಂದರ್ಭ ಗಳಲ್ಲಿ ನನ್ನ ಅನುಮೋದನೆ ಪಡೆದು, ನಂತರ ರಜೆ ಮಂಜೂರು ಮಾಡಬೇಕು’ ಎಂದು ಸೂಚಿಸಿದರು. 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, 8 ವಲಯ ಕಚೇರಿಗಳು ಮತ್ತು ಐಪಿಪಿ ನಿಯಂತ್ರಣ ಕೊಠಡಿಗಳಲ್ಲಿರುವ ವೈರ್‌ಲೆಸ್‌, ವಾಕಿಟಾಕಿ ವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸಿಕೊಳ್ಳಬೇಕು. ಅದೇ ರೀತಿ, ಮಳೆ ಅನಾಹುತ ತಡೆಯುವ ಸಂಬಂಧ ಉಪ ವಿಭಾಗ ಮಟ್ಟದಲ್ಲಿ ಎಲ್ಲ ವಲಯಗಳು ಸೇರಿ 72 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು. ಈ ನಿಯಂತ್ರಣ ಕೊಠಡಿಯಲ್ಲಿ ವಾಹನ, ಸಿಬ್ಬಂದಿ ಹಾಗೂ ಅಗತ್ಯ ಸಲಕರಣೆಗಳೊಂದಿಗೆ 3 ದಿನಗಳೊಳಗೆ ಸಜಾjಗಿರಬೇಕು ಎಂದೂ ಹೇಳಿದರು. 

ನೆಪ ಹೇಳುವಂತಿಲ್ಲ: ಮೇಯರ್‌ ಜಿ. ಪದ್ಮಾ ವತಿ ಮಾತನಾಡಿ, ಮಳೆ ಅನಾಹುತಗಳನ್ನು ಎದುರಿಸಲು ಶೀಘ್ರವೇ ಎಲ್ಲ ರೀತಿಯಲ್ಲೂ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ನಿಯಂತ್ರಣ ಕೊಠಡಿಗಳಿಗೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿ, ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ನೆಪ ಹೇಳಕೂಡದು ಎಂದು ಎಚ್ಚರಿಸಿದರು.

Advertisement

ಉಪ ಮೇಯರ್‌ ಎಸ್‌. ಆನಂದ್‌, ಆಡಳಿತ ಪಕ್ಷದ ನಾಯಕ ಮಹಮ್ಮದ್‌ ರಿಜ್ವಾನ್‌ ನವಾಬ್‌, ಜೆಡಿಎಸ್‌ನ ರುಮೀಳಾ ಉಮಾಶಂಕರ್‌, ವಿಶೇಷ ಆಯುಕ್ತ (ಯೋಜನೆ ಮತ್ತು ಆಡಳಿತ) ಬಿ.ಎಂ. ವಿಜಯ್‌ಶಂಕರ್‌ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊಬೈಲ್‌ ಸಂಖ್ಯೆ ಪಟ್ಟಿ ಕೊಡಿ
ಎಲ್ಲ ವಲಯದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು ತಮ್ಮ ವ್ಯಾಪ್ತಿ ಯಲ್ಲಿ ಬರುವ ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಕೈಗೊಳ್ಳಬೇಕು.

ಮುಖ್ಯ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ಬೃಹತ್‌ ರಸ್ತೆಗಳಲ್ಲಿ ನೀರು ನಿಲ್ಲದಂತೆ ಹಾಗೂ ತಮ್ಮ ಅಧೀನ ದಲ್ಲಿ ಬರುವ ಎಲ್ಲ ಎಂಜಿನಿಯರ್‌ಗಳಿಗೆ ನಿಖರವಾದ ರಸ್ತೆಯ ಸ್ಥಳವನ್ನು ಗುರುತಿಸಿ ಸಂಪೂರ್ಣ ಮೇಲುಸ್ತುವಾರಿ ಹೊಣೆ ವಹಿಸಿ ಅವರ ಹೆಸರು, ಮೊಬೈಲ್‌ ಸಂಖ್ಯೆ, ಸ್ಥಿರ ದೂರವಾಣಿ ಮತ್ತು ಇತರೆ ಸಂಪರ್ಕ ಮಾಹಿತಿ ಒಳಗೊಂಡ ಪಟ್ಟಿಯನ್ನು ಒದಗಿ ಸಬೇಕು ಎಂದು ಆಯುಕ್ತರು ಸೂಚಿಸಿದರು.

ಅರಣ್ಯ ಘಟಕ ವಿಭಾಗವು 21 ತಂಡಗಳನ್ನು ರಚಿಸಿದ್ದು, ಪ್ರತಿ ತಂಡದಲ್ಲಿ ಒಂದು ವಾಹನ, ಅಗತ್ಯ ಸಿಬ್ಬಂದಿ ಹಾಗೂ ಎಲ್ಲ ಸಲಕರಣೆಗಳೊಂದಿಗೆ ಸಜ್ಜಾಗಿರಬೇಕು. ಈ ತಂಡಗಳನ್ನು ಮಳೆ ಹೆಚ್ಚಾಗಿರುವ ಪ್ರದೇಶದ ವ್ಯಾಪ್ತಿಗಳಲ್ಲಿ ಬಳಸಿಕೊಳ್ಳುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.

ಇನ್ನೂ ಸಿಗದ ಶಾಂತಕುಮಾರ್‌
ಬೆಂಗಳೂರು:
ಶನಿವಾರದ ಸುರಿದ ಮಳೆ ಸಂದರ್ಭದಲ್ಲಿ ನಗರದ ಕುರಬರಹಳ್ಳಿ ರಾಜಕಾಲುವೆಯಲ್ಲಿ ಕೊಚ್ಚಿಹೋದ ಹಿಟಾಚಿ ನಿರ್ವಾಹಕ ಶಾಂತಕುಮಾರ್‌ಗಾಗಿ ಸೋಮವಾರ ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ ಬಿಬಿಎಂಪಿ ಕಾರ್ಮಿಕರು ತೀವ್ರ ಹುಡುಕಾಟ ನಡೆಸಿದರು.

ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. 40 ಜನರ ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಬಿಬಿಎಂಪಿಯ ನೂರು ಜನ ಕಾರ್ಮಿಕರು ರಾಜಕಾಲುವೆಯಲ್ಲಿ ಇಳಿದು ಸುಮಾರು ಹತ್ತು ಕಿ.ಮೀ.ವರೆಗೂ ಶೋಧಕಾರ್ಯ ನಡೆಸಿದರು. ಜ್ಞಾನಭಾರತಿಯಿಂದ ಬೈರಸಂದ್ರ ಕೆರೆವರೆಗೂ ಹುಡುಕಾಟ ನಡೆಸಲಾಯಿತು. ಈ ಮಧ್ಯೆ ಸಾಮಾನ್ಯವಾಗಿ ನೀರಲ್ಲಿ ಮುಳುಗಿದ್ದರೆ, ಆ ಮೃತದೇಹ 48 ಗಂಟೆಗಳಲ್ಲಿ ಮೇಲಕ್ಕೆ ಬರುತ್ತದೆ.

ಆದ್ದರಿಂದ ಮಂಗಳವಾರ ಬೆಳಿಗ್ಗೆ ಬೈರಸಂದ್ರ ಕೆರೆಯಿಂದ ಪುನಃ ಸುಮನಹಳ್ಳಿ ಬ್ರಿಡ್ಜ್ ಮೂಲಕ ಕುರುಬರಹಳ್ಳಿವರೆಗೆ ಮತ್ತೂಂದು ಸುತ್ತಿನ ಹುಡುಕಾಟ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಬೆಳಿಗ್ಗೆ ಮತ್ತೆ ರಾಜಕಾಲುವೆಯಲ್ಲಿ ಕಾರ್ಯಾಚರಣೆ ಮುಂದುವರಿಯಲಿದ್ದು, ಸಂಜೆವರೆಗೂ ನಡೆಯಲಿದೆ. ಒಂದು ವೇಳೆ ಸಿಗದಿದ್ದರೆ, ಮಂಗಳವಾರಕ್ಕೆ ಶೋಧಕಾರ್ಯವನ್ನು ಅಂತ್ಯಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಅನಾಹುತಕ್ಕೆ ಪಾಲಿಕೆಯೇ ಹೊಣೆ!
ನಗರದಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸುವ ಕೆಲಸವನ್ನು ಬಿಬಿಎಂಪಿ ಸಮರ್ಪಕವಾಗಿ ನಿರ್ವಹಿಸದ ಕಾರಣ ಮಳೆಗಾಲದಲ್ಲಿ ಅನಾಹುತಗಳು ಹೆಚ್ಚಲು ಕಾರಣ ಎಂಬ ಆರೋಪ ಕೇಳಿಬಂದಿದೆ.  ಶನಿವಾರ ರಾತ್ರಿ ಸುರಿದ ಮಳೆಗೆ 117 ಮರಗಳು ಮತ್ತು ಮರದ ರೆಂಬೆಗಳು ಮುರಿದು ಬಿದ್ದಿವೆ.

ಇವುಗಳಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿ, ಸಂಚಾರ ಒತ್ತಡ ಉಂಟಾಯಿತು. ಇನ್ನೂ ಕೆಲವೆಡೆ ಮರಗಳು ಮತ್ತು ರೆಂಬೆಗಳು ವಿದ್ಯುತ್‌ ತಂತಿ ಮೇಲೆ ಬಿದ್ದಿದ್ದರಿಂದ ಸಾಕಷ್ಟು ಸಮಸ್ಯೆ ಆಯಿತು. ಇದನ್ನು ಮೊದಲೇ ಗುರುತಿಸಿ, ತೆರವುಗೊಳಿಸಿದ್ದರೆ ಇಷ್ಟೊಂದು ತೊಂದರೆ ಆಗುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, “ನಾನಾ ಕಾರಣಗಳಿಂದ ಸಡಿಲಗೊಂಡಿರುವ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ಶಿಥಿಲಗೊಂಡ ಮರಗಳನ್ನು ತೆರವುಗೊಳಿಸಲಿಕ್ಕೂ ಸ್ಥಳೀಯರು ಅಡ್ಡಿಪಡಿಸುತ್ತಾರೆ,’ ಎಂದು ತಿಳಿಸಿದ್ದಾರೆ.

ಒಂದು ದಿನ ಬಿಡುವು ಕೊಟ್ಟು ಮತ್ತೆ ಆರ್ಭಟಿಸಿದ ಮಳೆರಾಯ
ಶನಿವಾರ ಆರ್ಭಟಿಸಿ ಒಂದು ದಿನದಮಟ್ಟಿಗೆ ವಿರಾಮ ನೀಡಿದ್ದ ಮಳೆ ಸೋಮವಾರ ರಾತ್ರಿ ಮತ್ತೆ ಅಬ್ಬರಿಸಿದೆ. ಕೆಲವೇ ಹೊತ್ತಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಅಲ್ಲಲ್ಲಿ ವಿದ್ಯುತ್‌ ಕಡಿತಗೊಂಡು ಕತ್ತಲೆ ಆವರಿಸಿತು. ಪ್ರಮುಖ ರಸ್ತೆಗಳು ಜಲಾವೃತಗೊಂಡವು.

ಶಾಂತಿನಗರ, ರಿಚ್‌ಮಂಡ್‌ ರಸ್ತೆ, ಮೆಜೆಸ್ಟಿಕ್‌, ಎಂ.ಜಿ. ರಸ್ತೆ, ಮಾಗಡಿ ರಸ್ತೆ, ಕೆ.ಆರ್‌. ಮಾರುಕಟ್ಟೆ, ಯಲಹಂಕ, ಕೆ.ಆರ್‌. ಪುರ ಮತ್ತಿತರ ಕಡೆಗಳಲ್ಲಿ ಮಳೆ ಅಬ್ಬರ ಹೆಚ್ಚಿತ್ತು. ಗಾಳಿಸಹಿತ ಮಳೆಗೆ ವಿಜಯನಗರದ ವಿದ್ಯಾಸಾಗರ, ಮೋದಿ ಆಸ್ಪತ್ರೆ ಬಳಿ, ಮಲ್ಲೇಶ್ವರ, ಸದಾಶಿವನಗರ, ಆರ್‌.ಆರ್‌. ನಗರದಲ್ಲಿ ಮರ ನೆಲಕಚ್ಚಿವೆ. ಪ್ಯಾಲೇಸ್‌ ಗುಟ್ಟಹಳ್ಳಿ ಬಳಿ ಬಾಷ್‌ ಕಂಪೆನಿಯ ಬಸ್‌ ಮೇಲೆ ಮರ ಬಿದ್ದಿದ್ದು, ಬಸ್‌ ಜಖಂಗೊಂಡಿತು.

ಈ ಮಧ್ಯೆ ಕೆಲವೆಡೆ ಭಾರೀ ಗಾಳಿಯಿಂದ ಕೆ.ಆರ್‌. ಪುರ, ಜೆ.ಪಿ. ನಗರ, ಜಯನಗರ, ಕುಮಾರಸ್ವಾಮಿ ಲೇಔಟ್‌ನಲ್ಲಿ ವಿದ್ಯುತ್‌ ಕಡಿತಗೊಂಡಿತ್ತು. ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಪ್ರಮುಖ ಜಂಕ್ಷನ್‌ಗಳು, ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ 2-3 ಅಡಿ ನೀರು ಆವರಿಸಿತು. ಆನಂದರಾವ್‌ ವೃತ್ತ, ಓಕಳಿಪುರ, ಮಡಿವಾಳ, ಡಬಲ್‌ ರಸ್ತೆ ಮತ್ತಿತರ ಕಡೆಗಳಲ್ಲಿ ಸಂಚಾರದಟ್ಟಣೆ ಇತ್ತು. 

ಮಳೆ ಎಲ್ಲೆಲ್ಲಿ ಎಷ್ಟು?
ಹಂಪಿನಗರ, ನಾಗರಬಾವಿಯಲ್ಲಿ 27 ಮಿ.ಮೀ., ಬಿದರಹಳ್ಳಿ 21, ಹೊರಮಾವು 20, ಎಚ್‌ಎಸ್‌ಆರ್‌ ಲೇಔಟ್‌ 18.5, ಪುಲಕೇಶಿನಗರ 30, ಶಾಂತಿನಗರ 7.5, ಹೇರೋಹಳ್ಳಿ 11.5, ಭಾರತಿನಗರ 16.5, ಆರ್‌.ಆರ್‌. ನಗರ 8, ಕೆಂಗೇರಿ 12.5, ಕೆ.ಜಿ. ಹಳ್ಳಿ 11, ಸಿಂಗಸಂದ್ರ 22.5, ಕಾಡುಗೋಡಿ 8, ಶೆಟ್ಟಿಹಳ್ಳಿ 15.5 ಮಿ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next