Advertisement

ಮೋದಿ ಸರ್ಕಾರದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ

11:01 AM May 30, 2017 | Team Udayavani |

ಬೆಂಗಳೂರು: “ನಗರ ಹಾಗೂ ಬಡವರು, ಹಳ್ಳಿ, ಕೃಷಿಕ ಮತ್ತು ಕೂಲಿ ಕಾರ್ಮಿಕರ ಅಭಿವೃದ್ಧಿ’ ಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ವರ್ಷಗಳಲ್ಲಿ ಭಾರತ ಅಭಿವೃದ್ಧಿ ವಿಚಾರದಲ್ಲಿ ಅತ್ಯುನ್ನತ ಸ್ಥಾನ ತಲುಪಿದೆ’ ಇದು, ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆ ಕುರಿತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್‌ ಅವರ ಮಾತು. ನೋಟು ಅಮಾನ್ಯ ಹಾಗೂ ಗೋಹತ್ಯೆ ನಿಷೇಧ ವಿಚಾರ ವಿವಾದ, ಸರ್ಕಾರದ ಸಾಧನೆ ಕುರಿತು “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡ ಅವರು, ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ, ಸಣ್ಣ ಸಣ್ಣ ವಿಷಯ ಮುಂದಿಟ್ಟು ಜನರ ಭಾವನೆ ಕೆರಳಿಸುತ್ತಾ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿವೆ. ಆದರೆ, 3 ವರ್ಷಗಳಲ್ಲಿ ಆದ ಸಾಧನೆ ಬಗ್ಗೆ ಯಾಕೆ ಬಾಯಿ ಬಿಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

ವಾಜಪೇಯಿ ಅವರು ಪ್ರಧಾನಿಯಾಗಿ 24 ಪಕ್ಷಗಳನ್ನು ಸೇರಿಸಿಕೊಂಡು ಮೈತ್ರಿ ಧರ್ಮದಡಿ ಅಧಿಕಾರ ನಡೆಸಿ ಜನಪರ
ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತಕ್ಕೆ ನಾಂದಿ ಹಾಡಿದರು. ಅವರ ಮಾದರಿಯಲ್ಲೇ ಮೋದಿ ಕೆಲಸ
ಮಾಡುತ್ತಿದ್ದಾರೆ. ನರೇಂದ್ರ ಮೋದಿ ನುಡಿದಂತೆ ನಡೆಯುತ್ತೇನೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದು ದೇಶದ ಎಲ್ಲ ವರ್ಗ ಅವರಲ್ಲಿ ಸಂಪೂರ್ಣ ವಿಶ್ವಾಸವಿಟ್ಟಿದೆ.

ಇಂದಿರಾಗಾಂಧಿಯವರಿಂದ ಹಿಡಿದು ಮನಮೋಹನ್‌ಸಿಂಗ್‌ವರೆಗಿನ ಆಡಳಿತದ ಅವಧಿಯಲ್ಲಿ ಸರ್ಕಾರಕ್ಕೆ 3 ವರ್ಷ
ತುಂಬುತ್ತಿದ್ದಂತೆ ನಾನಾ ಹಗರಣಗಳು ಹೊರಬರುತ್ತಿದ್ದವು. ಆದರೆ, ಮೋದಿ ಸರ್ಕಾರದಲ್ಲಿ ಒಂದೇ ಒಂದು ಕಪ್ಪುಚುಕ್ಕೆ
ಇಲ್ಲ ಎಂದೂ ಹೇಳಿದ್ದಾರೆ ಈ ಮೊದಲು ಯೂರಿಯಾಗಾಗಿ ರೈತರು ಬೀದಿಗಿಳಿದು ಪ್ರತಿಭಟನೆ, ಗೋಲಿಬಾರ್‌, ಲಾಠಿ ಚಾರ್ಚ್‌ ನಡೆಯುತ್ತಿತ್ತು. 3 ವರ್ಷಗಳಲ್ಲಿ ಅಂತಹ ಯಾವುದಾದರೂ ಘಟನೆ ನಡೆದಿದೆಯಾ? ಪ್ರಸಕ್ತ ಮುಂಗಾರಿಗೆ ರಾಜ್ಯದ ಗೋದಾಮುಗಳಲ್ಲಿ 1 ಲಕ್ಷ ಟನ್‌ ಯೂರಿಯಾ ದಾಸ್ತಾನು ಇದೆ. ದೇಶದಲ್ಲಿ 32 ಲಕ್ಷ ಟನ್‌ ದಾಸ್ತಾನು ಇದೆ.
ವರ್ಷಕ್ಕೆ 60 ಲಕ್ಷ ಟನ್‌ ಯೂರಿಯಾ ಅಕ್ರಮವಾಗಿ ಸಾಗಣೆಯಾಗುತ್ತಿದ್ದದ್ದು ತಡೆಗಟ್ಟಿ ಬೇವು ಲೇಪಿತ ಯೂರಿಯಾ ಕೊಟ್ಟು ರೈತಾಪಿ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ.

ಜನೆರಿಕ್‌ ಔಷಧ- ಸ್ಟಂಟ್‌: ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧ ಸಿಗಬೇಕು ಎಂಬ ಕಾರಣಕ್ಕೆ 2008ರಲ್ಲಿ ಜನೌಷಧಿ
ಯೋಜನೆ (ಜನೆರಿಕ್‌ ಔಷಧ) ಆರಂಭಿಸಲಾಗಿತ್ತು. 2014ರವರೆಗೆ ಈ ಯೋಜನೆಯಡಿ ಪ್ರಾರಂಭವಾದ ಔಷಧ ಮಳಿಗೆ
ಗಳ ಸಂಖ್ಯೆ ಕೇವಲ 88 ಮಾತ್ರ. ಲಭ್ಯವಿದ್ದ ಔಷಧಗಳ ಸಂಖ್ಯೆ ಸುಮಾರು 150. ಆದರೆ, 3 ವರ್ಷಗಳಲ್ಲಿ 450 ಜಿಲ್ಲೆಗಳಲ್ಲಿ 1400 ಜನೆರಿಕ್‌ ಔಷಧ ಮಳಿಗೆ ಪ್ರಾರಂಭವಾಗಿ 500ಕ್ಕೂ ಹೆಚ್ಚು ಔಷಧ, 150 ವೈದ್ಯಕೀಯ ಸಲಕರಣೆಗಳು ಕಡಿಮೆ ಬೆಲೆಗೆ ಸಿಗುತ್ತಿವೆ. 2014ರಲ್ಲಿ 3 ಕೋಟಿ ರೂ. ಇದ್ದ ಜನೌಷಧ ವಹಿವಾಟು 60 ಕೋಟಿ ರೂ. ತಲುಪಿದೆ. ವರ್ಷಾಂತ್ಯಕ್ಕೆ 100 ಕೋಟಿ ರೂ. ಆಗಲಿದ್ದು ಜನೆರಿಕ್‌ ಔಷಧ ಮಳಿಗೆಗಳ ಸಂಖ್ಯೆಯೂ 3000
ತಲುಪಲಿದೆ.

ದೇಶದಲ್ಲಿ 6 ಕೋಟಿ ಜನ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಬೇಕಾದ ಸಾಮಾನ್ಯ ಸ್ಟಂಟ್‌ (ಬೇರ್‌
ಮೆಟಲ್‌ ಸ್ಟಂಟ್‌) ಬೆಲೆ 50 ಸಾವಿರ ರೂ., ಡ್ರಗ್‌ ಎಲ್ಯೂಟಿಂಗ್‌ ಸ್ಟಂಟ್‌ 1.25ರಿಂದ 1.5 ಲಕ್ಷ ರೂ. ಇತ್ತು. ಈಗ ಸಾಮಾನ್ಯ ಸ್ಟಂಟ್‌ ದರ 7,500 ರೂ., ಡ್ರಗ್‌ ಎಲ್ಯೂಟಿಂಗ್‌ ಸ್ಟೆಂಟ್‌ ದರ 30 ಸಾವಿರ ರೂ.ಗೆ ಮಾತ್ರ ಮಾರಾಟ ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಅಧಿಕಾರ ನಡೆಸಿದವರು ಇದ್ಯಾಕೆ ಮಾಡಲಿಲ್ಲ? ಫ‌ಸಲ್‌ ಭಿಮಾ ಯೋಜನೆಯಿಂದ
ಕೋಟ್ಯಂತರ ರೈತರಿಗೆ ಅನುಕೂಲವಾಗಿದೆ.

Advertisement

ರೈತರ ಬೆಳೆನಷ್ಟವಾದರೆ ತಕ್ಷಣ ಅವರಿಗೆ ಪರಿಹಾರ ನೀಡಲಾಗುತ್ತಿದೆ. ದಾಖಲೆ, ಆಧಾರ ಇಲ್ಲದೆ ಈ ಯೋಜನೆ ಬಗ್ಗೆ
ಕುಮಾರಸ್ವಾಮಿಯವರು ಟೀಕಿಸುತ್ತಾರೆ. ಕರ್ನಾಟಕದ ಬರ ಪರಿಹಾರಕ್ಕೆ ಡಾ. ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ಕೊಟ್ಟಷ್ಟು ಹಣ ಮೂರೇ ವರ್ಷಗಳಲ್ಲಿ ನರೇಂದ್ರಮೋದಿ ಅವರ ಸರ್ಕಾರ ಕೊಟ್ಟಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಂದು
ರೀತಿಯಲ್ಲಿ ನೂರು ಸುಳ್ಳುಗಾರ- ಸಾವಿರ ಸುಳ್ಳುಗಾರರು ಇದ್ದಂತೆ. ಪದೇ ಪದೇ ಸುಳ್ಳು ಹೇಳುವುದು ಇವರ ಚಾಳಿ.

ಗೋಹತ್ಯೆಗೆ ಕಡಿವಾಣ: ಜಾನುವಾರು ಮಾರಾಟ ಮತ್ತು ಖರೀದಿಗೆ ನಿಷೇಧ ಹೇರಿ ಪರಿಸರ ಸಚಿವಾಲಯ ಅಧಿಸೂಚನೆ
ಹೊರಡಿಧಿಸಿದ್ದನ್ನು ವಿವಾದ ಎಂಬಂತೆ ಬಿಂಬಿಸಲಾಗುತ್ತಿದೆ. ರಾಜ್ಯದ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಇದಕ್ಕೆ ವಿರೋಧ ತೋರುತ್ತಿರುವವರು ತಮ್ಮ ಅರಿವು ಹೆಚ್ಚಿಸಿಕೊಳ್ಳಲು ಮತ್ತೆ ಮತ್ತೆ ಅಂಬೇಡ್ಕರ್‌ ವಿರಚಿತ ಸಂವಿಧಾನ ಓದಲಿ. ಅನೇಕ ರಾಜ್ಯಗಳ ಗೋಹತ್ಯೆ ನಿಷೇಧ ಕಾಯ್ದೆ, ಜಾನುವಾರು ಸಂರಕ್ಷಣೆ ಕಾಯ್ದೆಯಲ್ಲಿ ಹಲವಾರು ನಿಯಮಗಳಿವೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಷ್ಟೇ ಕೇಂದ್ರ ಪರಿಸರ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ನಿಯಮ ರೂಪಿಸುವುದು ಪಾಲಿಸುವುದಕ್ಕಾಗಿಯೇ ಹೊರತು
ಉಲ್ಲಂಘನೆ ಮಾಡುವುದಕ್ಕಲ್ಲ. ಸಂವಿಧಾನದ ನಿರ್ದೇಶಕ ತತ್ವ, ಗೋಸಂತತಿ ರಕ್ಷಣೆಗೆ ಇರುವ ಕಾನೂನು ಪಾಲಿಸಿ ಎಂಬ ಸೂಚನೆ ಕೊಟ್ಟಿರುವ ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಟೀಕಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ನೋಟು ಅಮಾನ್ಯಿàಕರಣ: ನೋಟು ಅಮಾನ್ಯ ಬಗ್ಗೆ ದೊಡ್ಡ ಚರ್ಚೆ, ಟೀಕೆಗಳು ಬಂದವು. ಆದರೆ, ನಾನು ನೋಟು ರದ್ದು ಎನ್ನುವುದಿಲ್ಲ. ನೋಟು ಬದಲಿಯಷ್ಟೆ. ಹಳೇ ಕರೆನ್ಸಿ ಹೋಗಿ ಹೊಸ ಕರೆನ್ಸಿ ಬಂದಿದೆ. ದೇಶದಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಸುಮಾರು 14.5 ಲಕ್ಷ ಕೋಟಿ ರೂ. ಬ್ಯಾಂಕ್‌ ಖಾತೆಗಳಿಗೆ ಬಂದಿದೆ. ಅದಕ್ಕೆ ಈಗ ತೆರಿಗೆ ಕಟ್ಟಲೇಬೇಕಿದೆ. ಅಷ್ಟರ ಮಟ್ಟಿಗೆ ಇದು ಸಾಧನೆಯಲ್ಲವೇ?  ಸುಮಾರು 5.5 ಲಕ್ಷ ಕೋಟಿ ರೂ. ಕಡಿಮೆ ನೋಟುಗಳೊಂದಿಗೆ ದೇಶದ
ಆರ್ಥಿಕ ವ್ಯವಸ್ಥೆ ಮುನ್ನಡೆಯುತ್ತಿದೆ. ಕಪ್ಪುಹಣ, ಕೋಟಾ ಹಣ ಪತ್ತೆಯಾಗಿದೆ. ಭ್ರಷ್ಟಾಚಾರ, ಕಪ್ಪುಹಣ ಮಾಡಿದವರ ಮೇಲೆ ದಾಳಿಯಾಗಿದೆ. ಪ್ರತಿಪಕ್ಷದವರು ಆರೋಪಿಸಿದಂತೆ ಪೂರ್ವ ಸಿದ್ಧತೆ ಇಲ್ಲದೆ ಈ ಕೆಲಸವನ್ನು ಕೇಂದ್ರ ಸರ್ಕಾರ
ಮಾಡಿಲ್ಲ.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು 1926-27ರಲ್ಲಿ ಬರೆದ ದಿ ಪ್ರಾಬ್ಲೆಮ್ಸ್‌ ಆಫ್ ಮನಿ ಎಂಬ ಪುಸ್ತಕದಲ್ಲಿ 21 ವರ್ಷಕ್ಕೊಮ್ಮ ಅರ್ಥ ವ್ಯವಸ್ಥೆ ಶುದ್ಧೀಕರಣಕ್ಕೆ ನೋಟುಗಳ ವಿಮುದ್ರೀಕರಣ ಆಗಬೇಕು ಎಂದು ಹೇಳಿದ್ದರು. ಆದರೆ, ರಾಜಕೀಯ ಕಾರಣಗಳಿಗಾಗಿ ಹಿಂದಿನ ಸರ್ಕಾರಗಳು ಅದನ್ನು ಜಾರಿಗೆ ತರಲಿಲ್ಲ.

ಕಾವೇರಿ, ಮಹದಾಯಿ, ಕೃಷ್ಣಾ ವಿಚಾರಗಳಲ್ಲೂ ಕರ್ನಾಟಕಕ್ಕೆ ಏನಾದರೂ ಅನುಕೂಲ ಆಗಿದ್ದರೆ ಅದು ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇದ್ದಾಗ ಮಾತ್ರ. ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಸಿದ್ದರಾಮಯ್ಯ ಅಭಿಪ್ರಾಯವೇನು?: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ
ಸಂವಿಧಾನದ 124ನೇ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಮಂಡಿಸಿದಾಗ ಲೋಕಸಭೆಯಲ್ಲಿ ಸರ್ವಾನುಮತದ ಅಂಗೀಕಾರ ನೀಡಲಾಗಿದೆ. ಆದರೆ, ರಾಹುಲ್‌ ಗಾಂಧಿ ಅವರ ಸೂಚನೆ ಮೇಲೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಅದಕ್ಕೆ ಅಡ್ಡಿಪಡಿಸಿದೆ. ಕಾಂಗ್ರೆಸ್‌ನ ಈ ಎಡ ಬಿಡಂಗಿ ಧೋರಣೆ ಬಗ್ಗೆ ಹಿಂದು ಳಿದ ವರ್ಗಗಳ ಸ್ವಯಂಘೋಷಿತ ನಾಯಕ ಎಂದು
ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯವೇನು? ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ಅಡ್ಡಿಪಡಿಸಬೇಡಿ ಎಂದು ಅವರು ಸೋನಿಯಾ ಅಥವಾ ರಾಹುಲ್‌ಗೆ ಪತ್ರ ಬರೆದಿದ್ದಾರೆಯೇ?

ಅಹಂಕಾರ, ಅಸಡ್ಡೆಯೇ ಸಾಧನೆ
ಅಹಂಕಾರ, ಅಸಡ್ಡೆ, ಅವ್ಯವಹಾರಗಳೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಾಧನೆಗಳು. 4 ವರ್ಷದಲ್ಲಿ ಒಂದೇ ಒಂದು ಸಾಧನೆಯನ್ನು ಈ ಸರ್ಕಾರ ಮಾಡಿಲ್ಲ. ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 29 ರೂ. ಸಬ್ಸಿಡಿ ನೀಡಿ ರಾಜ್ಯಕ್ಕೆ ಕಳುಹಿಸಿಕೊಡುವ ಅಕ್ಕಿಗೆ ಪ್ರತಿ ಕೆ.ಜಿ.ಗೆ 3 ರೂ. ಸಬ್ಸಿಡಿ ನೀಡಿ ಅನ್ನಭಾಗ್ಯ ಯೋಜನೆ ನನ್ನದೇ ಎಂದು ಹೇಳಿಕೊಳ್ಳುವುದು, ಬರ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ನೀಡಿದ ನೆರವನ್ನು ರೈತರಿಗೆ
ಹಂಚದೆ ನಾವು ಕೇಳಿದಷ್ಟು ಹಣ ಕೊಟ್ಟಿಲ್ಲ ಎಂದು ಸುಖಾಸುಮ್ಮನೆ ಆರೋಪಿಸುವುದಷ್ಟೇ ಕೆಲಸವಾಗಿದೆ. ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ ಆದರೆ, ಇನ್ನೊಬ್ಬರತ್ತ ಕೈತೋರಿಸುವ ಮೊದಲು ನಾನೇನು ಮಾಡಿದ್ದೇನೆ ಎಂಬುದನ್ನು ಅವರು ಯೋಚಿಸಬೇಕಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next