Advertisement

ಶಿವಗಂಗೆ ಬೆಟ್ಟದ ಚಾರಣಕ್ಕೆ ಇಲ್ಲ ಸುರಕ್ಷತೆ

12:41 PM Feb 07, 2022 | Team Udayavani |

ನೆಲಮಂಗಲ: ಹುಚ್ಚು ಸಾಹಸದ ನೆಪದಲ್ಲಿ ಶಿವಗಂಗೆಯಂತಹ ಕಡಿದಾದ ಬೆಟ್ಟದಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಪ್ರವಾಸಿಗರು ಅಪಾಯದ ಸ್ಥಳಗಳಲ್ಲಿ ಜಾಲಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ನೆಲಮಂಗಲ ತಾಲೂಕಿನಲ್ಲಿ ವಿವಿಧ ಬೆಟ್ಟಗಳು ಹಾಗೂ ಪ್ರವಾಸಿ ತಾಣಗಳಿಗೆ ಬೆಂಗಲೂರು ಹಾಗೂ ಸುತ್ತಮುತ್ತಲ ಜಿಲ್ಲೆಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಭೇಟಿ ನೀಡುವ ಅನೇಕರು ಬೆಟ್ಟಗಳಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ದೇವರದರ್ಶನ ಪಡೆದು ಪ್ರಕೃತಿಯ ಸೌಂದರ್ಯ ಸವಿದರೆ, ಕೆಲವು ಪ್ರವಾಸಿಗರು ಅಪಾಯದ ಸುಳಿಗಳಿರುವಜಾಗಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಜಾಲಿಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿ ದ್ದು ಬಹಳಷ್ಟು ಅಪಾಯದ ಮುನ್ಸೂಚನೆ ಎದುರಾಗಿದೆ.

ಜಾರುವ ಬಂಡೆಯಲ್ಲಿ ಹುಚ್ಚಾಟ: ರಾಜಧಾನಿಯಿಂದ 50ಕಿ.ಮೀ. ದೂರವಿರುವ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಸಮುದ್ರ ಮಟ್ಟದಿಂದ 4557ಅಡಿ ಎತ್ತರವಿದ್ದು ಶಿಖರದ ಮೇಲೆ ಗಂಗೋತ್ಪತಿ ಸ್ತಂಭಗಳು, ಶಿವನ ದೇವಾಲಯ, ಶಾಂತಲಾ ಡ್ರಾಪ್‌ ಇರುವುದರಿಂದ ಹೆಚ್ಚು ಜನ ಭೇಟಿ ನೀಡುತ್ತಾರೆ. ಶಿಖರದ ಮೇಲೆ ಪ್ರವಾಸಿಗರಿಗೆ ಅಪಾಯ ಎದುರಾಗದಂತೆ ರೈಲಿಂಗ್ಸ್‌ ಅಳವಡಿಸಲಾಗಿದ್ದು ರೈಲಿಂಗ್ಸ್‌ ದಾಟದಂತೆ ಸೂಚನೆ ನೀಡಲಾಗಿದೆ. ಆದರೆ ಅನೇಕ ಪ್ರವಾಸಿಗರು 400 ಮೀ.ಹೆಚ್ಚು ಆಳವಿರುವ ಜಾರುವ ಬಂಡೆಗಳ ತುಟ್ಟತುದಿಯಲ್ಲಿ ಕುಳಿತುಕೊಂಡು ಫೋಟೋ ತೆಗೆಸಿಕೊಳ್ಳುವುದು, ಜಾಲಿ ಮಾಡುತ್ತಿರುವುದು ಸಾಮಾನ್ಯ ವಾಗಿದೆ. ಶಿವಗಂಗೆ ಬೆಟ್ಟದ ಶಿಖರದ ಮೇಲೆ ಕಡಿದಾದ ಬಂಡೆಗಳಿದ್ದು ಬಂಡೆಮೃದುವಾಗಿರುವುದರಿಂದ ಜಾರುವುದುಹೆಚ್ಚು. ಇಂತಹ ಅಪಾಯದ ಸ್ಥಳದಲ್ಲಿ ಪ್ರವಾಸಿಗರು ಬೆಟ್ಟದ ಕೆಳಭಾಗದಲ್ಲಿ ಕಾಣುವ ದೇವಾಲಯಗಳು, ಬೆಟ್ಟ ಹತ್ತುವವರನ್ನು ಹಾಗೂಬೆಟ್ಟದಿಂದ ಕೆಳಗೆ ಕಾಣುವ ಆಳವನ್ನು ನೋಡಲು ಬಂಡೆಗಳ ತುಟ್ಟತುದಿಯಲ್ಲಿ ಕುಳಿತುಕೊಳ್ಳುತ್ತಿದ್ದು ಜೀವಕ್ಕೆ ಯಾವುದೇ ಕ್ಷಣದಲ್ಲೂ ಅಪಾಯವಾಗಬಹುದು. ಇಂತಹ ಪ್ರವಾಸಿಗರ ಆಟಾಟೋಪಕ್ಕೆ ಬ್ರೇಕ್‌ ಬೀಳಬೇಕಾಗಿದೆ.

ಪ್ರೇಮಿಗಳ ಹುಚ್ಚಾಟ: ಶಿವಗಂಗೆ ಬೆಟ್ಟದ ಶಿಖರದ ಮೇಲೆ ಹೋಗುವ ಪ್ರವಾಸಿಗರಿಗೆ ಮೋಡದ ಮೇಲೆ ಓಡಾಡಿದ ಅನುಭವವಾಗುತ್ತದೆ. ಆದ್ದರಿಂದ ಬೆಳಗಿನಜಾವ ಬರುವ ಪ್ರೇಮಿಗಳು ಪೋಟೋ, ವಿಡಿಯೋಗಳನ್ನು ತೆಗೆಸಿಕೊಳ್ಳಲು ಕಡಿದಾದ ಜಾರುವ ಬಂಡೆಗಳಬಳಿ ಹೋಗುವುದು, ಪ್ರೇಯಸಿಯ ಜತೆ ಹುಡುಗಾಟವಾಡುವುದು, ಅಪಾಯದ ಜಾಗದಲ್ಲಿ ರೀಲ್ಸ್‌ನಂತಹ ವಿಡಿಯೋ ಮಾಡುವ ಅಪಾಯದ ಸಾಹಸ ಮಾಡುತ್ತಿದ್ದು ಪ್ರೇಮಿಗಳ ಹುಚ್ಚಾಟದಿಂದ ಸ್ಥಳೀಯರಿಗೂ ತಲೆನೋವಾಗಿದೆ.

ಭದ್ರತೆಯ ಅನಿವಾರ್ಯತೆ: ಶಿವಗಂಗೆ ಬೆಟ್ಟ ಮುಜಾರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು ಸಾವಿರಾರು ಜನರು ಪ್ರತಿನಿತ್ಯ ಭೇಟಿ ನೀಡುತ್ತಾರೆ. ಬೆಟ್ಟದಲ್ಲಿ ಅಪಾಯ ಎದುರಾಗದಂತೆ ಭದ್ರತೆ ಮಾಡಬೇಕಾದ ಜವಾಬ್ದಾರಿ ಸರಕಾರದ ಹೊಣೆಗಾರಿಕೆಯಾಗಿದ್ದು ಹುಚ್ಚುಸಾಹಸಮಾಡುವವರಿಗೆ ಪೊಲೀಸ್‌ ಇಲಾಖೆ ಕೂಡ ಎಚ್ಚರಿಕೆ ನೀಡಬೇಕಾಗಿದೆ.

Advertisement

ದಕ್ಷಿಣಕಾಶಿ ಪುರಾಣಪ್ರಸಿದ್ದ ಶಿವಗಂಗೆ ಬೆಟ್ಟಕ್ಕೆ ಬರುವಸಾವಿರಾರು ಪ್ರವಾಸಿಗರಲ್ಲಿಕೆಲವರು ಅಪಾಯದ ಜಾರುವಬಂಡೆಗಳಲ್ಲಿ ಹುಚ್ಚು ಸಾಹಸಮಾಡುತ್ತಿದ್ದು ಇಂತಹ ಪ್ರಕರಣಗಳಿಗೆ ಇಲಾಖೆಗಳು ನಿಯಂತ್ರಣ ಮಾಡದಿದ್ದರೆ ಮುಂದಿನ ದಿನಗಳಲ್ಲಿದೊಡ್ಡ ಅಪಾಯ ಎದುರಾಗಲಿದೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.-ಪವನ್‌ ಸ್ಥಳೀಯರು ಶಿವಗಂಗೆ.

ಬೆಟ್ಟದಲ್ಲಿ ಪೊಲೀಸರನ್ನು ನೇಮಕ ಮಾಡುವ ಜತೆ ಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬೆಟ್ಟದಲ್ಲಿ ಅಪಾಯದ ಸಾಹಸ ಮಾಡುವುದನ್ನು ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. -ರಾಜೀವ್‌ ವೃತ್ತ ನಿರೀಕ್ಷಕರು ನೆಲಮಂಗಲ

 

-ಆರ್‌.ಕೊಟ್ರೇಶ್‌

Advertisement

Udayavani is now on Telegram. Click here to join our channel and stay updated with the latest news.

Next