Advertisement

ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

07:50 AM Mar 13, 2019 | |

ನಾಗಮಂಗಲ: ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ಪುನರುತ್ಛರಿಸಿದರು. ತಾಲೂಕಿನ ಗಂಗವಾಡಿ, ಟಿ.ಚನ್ನಾಪುರ, ಮತ್ತು ತೆಂಗಿನಭಾಗ ಹಾಗೂ ಯತ್ತಗೋನಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನನಗೆ ರಾಜಕೀಯ ಎಂಬುದು ಇಷ್ಟವಿಲ್ಲದ ಕ್ಷೇತ್ರವಾಗಿತ್ತು.

Advertisement

ಆದರೆ, ಅಭಿಮಾನಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಈ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದೇನೆ. ಅದಕ್ಕೆ ಮೂಲ ಕಾರಣಕರ್ತರು ಜನರು. ಅವರ ಆಶಯಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಅಭಿಮಾನಿಗಳು ನನ್ನನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದಾರೆ. ನಾನು ಸ್ಪರ್ಧೆ ಮಾಡದೆ ಹಿಂದೆ ಸರಿದರೆ ಅವರ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ. ಆ ಕೆಲಸವನ್ನು ನಾನು ಮಾಡುವುದಿಲ್ಲ. ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬುದು ಗಾಳಿ ಸುದ್ದಿ. ಈ ರೀತಿಯ ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದರು.

ಅಧಿಕಾರಕ್ಕಾಗಿಯಲ್ಲ: ನನ್ನ ಸ್ಪರ್ಧೆ ಕೇವಲ ಅಭಿಮಾನಿಗಳಿಗೋಸ್ಕರವೇ ಹೊರತು ಅಧಿಕಾರ ಅನುಭವಿಸುವುದಕ್ಕಲ್ಲ. ನನಗೆ ಕಾರ್ಯಕರ್ತರೇ ದೊಡ್ಡ ಆಸ್ತಿ. ಅವರ ಸಲಹೆಯಂತೆ ನಡೆಯುತ್ತೇನೆ. ಅಂಬರೀಶ್‌ ಅಭಿಮಾನಿಗಳಿಗೋಸ್ಕರವೇ ಜೀವನ ಪೂರ್ತಿ ಕಳೆದರು. ಅದರಲ್ಲೂ ಮುಖ್ಯವಾಗಿ ಮಂಡ್ಯ ಜಿಲ್ಲೆಯ ಜನರೆಂದರೆ ಅವರಿಗೆ ಅಪಾರ ಪ್ರೀತಿ. ನಾನು ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಂಬಿ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ದೇನೆ. ಇದರಿಂದ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ನಾನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಜನರ ಸಲಹೆಯಾಗಿರುತ್ತದೆಯೇ ಹೊರತು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದರು.

ನಾನು ಸ್ಪರ್ಧೆ ಮಾಡುವುದಷ್ಟೇ ನನ್ನ ಕರ್ತವ್ಯ. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗೆಲ್ಲಿಸಬೇಕೊ ಅಥವಾ ಸೋಲಿಸಬೇಕೋ ಎಂಬುದನ್ನು ಯೋಚನೆ ಮಾಡುತ್ತಾರೆ. ಅದಕ್ಕಾಗಿಯೇ ಜನರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದೇನೆ. ಅದರಿಂದ ಅಭಿಮಾನಿಗಳು ನೇರವಾಗಿ ನನ್ನ ಬಳಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಅನೇಕ ಸಲಹೆಗಳನ್ನು ನೀಡುತ್ತಿದ್ದಾರೆ. ಅದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ ಎಂದರು.

ಸುಮಲತಾ ಅಂಬರೀಶ್‌ ಅವರನ್ನು ತಾಲ್ಲೂಕು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮಾಜಿ ಸಚಿವ ಚೆಲುವರಾಯಸ್ವಾಮಿ ಬೆಂಬಲಿಗರು ಸ್ವಾಗತಿಸಿ ಹೊಣಕೆರೆ ಹೋಬಳಿಯ ಗಂಗವಾಡಿ ಗ್ರಾಮದ ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಟಿ.ಚನ್ನಾಪುರ, ತೆಂಗಿನಭಾಗ ಮತ್ತು ಯತ್ತಗೋನಹಳ್ಳಿಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. 

Advertisement

ದೇವಾಲಯಗಳಿಗೆ ಭೇಟಿ: ಸುಮಲತಾ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿದಾಗಿನಿಂದ ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸುವ ಜೊತೆಗೆ ಮತದಾರರ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಆದಿಚುಂಚನಗಿರಿ ಕ್ಷೇತ್ರ, ಕದಬಹಳ್ಳಿ ಕಾವೇಟಿ ರಂಗನಾಥಸ್ವಾಮಿ ದೇವಾಲಯ, ನಾಗಮಂಗಲದ ಸೌಮ್ಯಕೇಶವಸ್ವಾಮಿ ದೇವಾಲಯ, ಗಂಗವಾಡಿ ಭೈರವೇಶ್ವರ ದೇವಾಲಯ ಸೇರಿದಂತೆ ಹಲವು ದೇಗುಲಗಳಿಗೆ  ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶರತ್‌ರಾಮಣ್ಣ, ರಾಜೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next