Advertisement

ಮಲ್ಯರನ್ನು ಸುಮ್ಮನೆ ಬಿಡೋ ಪ್ರಶ್ನೆಯೇ ಇಲ್ಲ

03:45 AM Apr 19, 2017 | Team Udayavani |

ನವದೆಹಲಿ: “ಹಣಕಾಸು ಅವ್ಯವಹಾರ ನಡೆಸಿದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಮಲ್ಯ ಮಾತ್ರವಲ್ಲ, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳನ್ನೂ ವಾಪಸ್‌ ಕರೆತಂದು ಶಿಕ್ಷೆಯಾಗುವಂತೆ ನೋಡಿಕೊಳ್ಳುಧಿತ್ತೇವೆ.’ ಹೀಗೆಂದು ಹೇಳಿರುವುದು ಕೇಂದ್ರ ಸಚಿವ ಸಂತೋಷ್‌ ಗಂಗ್ವಾರ್‌. ಲಂಡನ್‌ನಲ್ಲಿ ವಿಜಯ ಮಲ್ಯ ಅವರನ್ನು ಬಂಧಿಸಿ, ಬಿಡುಗಡೆ ಮಾಡಿದ ಬೆನ್ನಲ್ಲೇ ಗಂಗ್ವಾರ್‌ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಮಲ್ಯರನ್ನು ಭಾರತಕ್ಕೆ ಕರೆಯಿಸಿ, ಅವರ ವಿರುದ್ಧ ನ್ಯಾಯಾಂಗ ವಿಚಾರಣೆ ಆರಂಭಿಸುವ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ತಪ್ಪು ಮಾಡಿದವರನ್ನು ಶಿಕ್ಷಿಸದೇ ಬಿಡುವುದಿಲ್ಲ,’ ಎಂದಿದ್ದಾರೆ.

Advertisement

“ಮಲ್ಯ ಅವರಿಗೆ ಬ್ಯಾಂಕುಗಳು ಸಾಲ ನೀಡಿದ್ದು ಯುಪಿಎ ಅವಧಿಯಲ್ಲಿ. ಆದರೂ, ನಮ್ಮ ಸರ್ಕಾರವು ಸಾಲ ತೀರಿಸುವಿಕೆಗೆ ಕ್ರಮಗಳನ್ನು ಕೈಗೊಂಡಿದೆ. ಇಂದು ನಡೆದ ಬೆಳವಣಿಗೆಯೂ ಅದರಲ್ಲಿ ಒಂದು,’ ಎಂದೂ ಹೇಳಿದ್ದಾರೆ ಗಂಗ್ವಾರ್‌. ಇದೇ ವೇಳೆ, “ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ಇತರೆ ದೇಶಗಳೊಂದಿಗೂ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ,’ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. 

ನಮಗೆ ಬಾಕಿಯಿರುವ ವೇತನ ಕೊಡಿ, ಸಾಕು!
“ಮಲ್ಯರನ್ನು ಸರ್ಕಾರ ಭಾರತಕ್ಕೆ ಕರೆತಂದು, ಬಾಕಿಯಿರುವ ನಮ್ಮ ವೇತನವನ್ನು ಕೊಡಿಸಿದರೆ ಅಷ್ಟೇ ಸಾಕು.’ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನಲ್ಲಿ ಈ ಹಿಂದೆ ಕೆಲಸ ಮಾಡಿದವರು ಅಳಲು ತೋಡಿಕೊಂಡಿದ್ದು ಹೀಗೆ. ಮಲ್ಯ ಬಂಧನ, ಬಿಡುಗಡೆ ಸುದ್ದಿ ತಿಳಿಯುತ್ತಲೇ, ಅಭಿಪ್ರಾಯ ಪಡೆಯಲು ಸುದ್ದಿಗಾರರು ಕಿಂಗ್‌ಫಿಶರ್‌ನ ಮಾಜಿ ಉದ್ಯೋಗಿಗಳ ಬಳಿಗೆ ಹೋದರೆ, ಅವರು ತಮ್ಮ ನೋವನ್ನು ತೋಡಿಕೊಂಡರು. “ನಮಗೆ ವೇತನ ಕೊಡದೆ ಸತಾಯಿಸಿದ್ದಕ್ಕಾಗಿ ಮಲ್ಯ ಶಿಕ್ಷೆ ಅನುಭವಿಸಲೇಬೇಕು. ಅವರು ಮಾಡಿದ ಕರ್ಮಕ್ಕೆ ಪ್ರತಿಫ‌ಲ ಉಣ್ಣುತ್ತಾರೆ,’ ಎಂದು ಕಿಂಗ್‌ನ ಮಾಜಿ ಪೈಲಟ್‌ ಅನಿರುದ್ಧ ಬಲ್ಲಾಳ ಹೇಳಿದರೆ, “ನಮಗೆ ಬಾಕಿಯಿರುವ ವೇತನ ಕೊಟ್ಟರೆ ಸಾಕು,’ ಎಂದು ಮತ್ತೂಬ್ಬ ಪೈಲಟ್‌ ರಾಹುಲ್‌ ಭಾಸಿನ್‌ ಹೇಳಿದ್ದಾರೆ. ಕಳೆದ ವರ್ಷ ಈ ಉದ್ಯೋಗಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, 3 ಸಾವಿರ ನೌಕರರಿಗೆ 300 ಕೋಟಿ ರೂ. ವೇತನ ಕೊಡಲು ಬಾಕಿಯಿದೆ. ನಮಗೆ ಈಗ ಉಳಿದಿರುವ ಭರವಸೆಯೆಂದರೆ, ಅದು ಸರ್ಕಾರ. ನೀವೇ ನಮ್ಮ ಬಾಕಿ ತೀರಿಸಲು ನೆರವಾಗಬೇಕು ಎಂದು ಕೇಳಿಕೊಂಡಿದ್ದರು. 

ಮದ್ಯದ ದೊರೆಯ ಸಾಲದ ಹೊರೆ
ಎಸ್‌ಬಿಐ- 1,600 ಕೋಟಿ ರೂ.
ಪಿಎನ್‌ಬಿ- 800 ಕೋಟಿ ರೂ.
ಐಡಿಬಿಐ ಬ್ಯಾಂಕ್‌- 800 ಕೋಟಿ ರೂ.
ಬ್ಯಾಂಕ್‌ ಆಫ್ ಇಂಡಿಯಾ- 650 ಕೋಟಿ ರೂ.
ಬ್ಯಾಂಕ್‌ ಆಫ್ ಬರೋಡಾ- 550 ಕೋಟಿ ರೂ.
ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ- 430 ಕೋಟಿ ರೂ.
ಸೆಂಟ್ರಲ್‌ ಬ್ಯಾಂಕ್‌- 410 ಕೋಟಿ ರೂ.
ಯುಕೋ ಬ್ಯಾಂಕ್‌- 320 ಕೋಟಿ ರೂ.
ಕಾರ್ಪೊರೇಷನ್‌ ಬ್ಯಾಂಕ್‌- 310 ಕೋಟಿ ರೂ. 
ಎಸ್‌ಬಿಎಂ- 150 ಕೋಟಿ ರೂ.
ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌- 140 ಕೋಟಿ ರೂ.
ಫೆಡರಲ್‌ ಬ್ಯಾಂಕ್‌- 90 ಕೋಟಿ ರೂ.
ಪಂಜಾಬ್‌-ಸಿಂಡ್‌ ಬ್ಯಾಂಕ್‌- 60 ಕೋಟಿ ರೂ.
ಆ್ಯಕ್ಸಿಸ್‌ ಬ್ಯಾಂಕ್‌- 50 ಕೋಟಿ ರೂ.
14 ಬ್ಯಾಂಕುಗಳಿಂದ ಒಟ್ಟು ಸಾಲ-  6,360 ಕೋಟಿ ರೂ.

ಮಲ್ಯ ಬಳಿಕ ಟಾರ್ಗೆಟ್‌ ಲಲಿತ್‌ ಮೋದಿ?
ಮಲ್ಯ ಅವರ ಬಂಧನವೂ ಆಯ್ತು, ಬೇಲ್‌ ಸಿಕ್ಕಿದ್ದೂ ಆಯ್ತು. ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಐಪಿಎಲ್‌ ಮಾಜಿ ಆಯುಕ್ತ ಲಲಿತ್‌ ಮೋದಿ ಅವರನ್ನೂ ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಫೆಮಾ ನಿಯಮ ಉಲ್ಲಂಘನೆ ಆರೋಪದಲ್ಲಿ ಮೋದಿ ವಿರುದ್ಧ ತನಿಖೆ ನಡೆಯುತ್ತಿದೆ. ಯುಕೆ ಮೂಲದ ಎಮರ್ಜಿಂಗ್‌ ಮೀಡಿಯಾ ಸಂಸ್ಥೆಯಿಂದ 20 ಕೋಟಿ ರೂ. ಪಡೆದಿರುವ, ಐಪಿಎಲ್‌ ತಂಡಗಳ ಹರಾಜು ವೇಳೆ ಎಷ್ಟು ಮೊತ್ತವನ್ನು ಬಿಡ್‌ ಮಾಡಬೇಕೆಂದು ಕೆಲವರಿಗೆ ಮೊದಲೇ ಹೇಳಿಕೊಟ್ಟಿದ್ದ, ಕಾರ್ಪೊರೇಟ್‌ ಜೆಟ್‌ ಖರೀದಿಸಲು ಅಕ್ರಮ ಹಣವನ್ನು ಬಳಕೆ ಮಾಡಿದ್ದ ಹಾಗೂ ಫೆಮಾ ನಿಯಮಗಳನ್ನು ಉಲ್ಲಂ ಸಿರುವ ಹಲವು ಪ್ರಕರಣಗಳು ಲಲಿತ್‌ ಮೋದಿ ಮೇಲಿದೆ. ಆದರೆ, ಯುಕೆಗೆ ಹೋಗಿ ತಲೆಮರೆಸಿಕೊಂಡ ಲಲಿತ್‌, ನಿಯಮ ಉಲ್ಲಂಘನೆಗೆ ನಾನೊಬ್ಬನೇ ಜವಾಬ್ದಾರನಲ್ಲ ಎಂದು ಹೇಳಿಕೊಂಡು ಬಂದಿದ್ದಾರೆ. 2015ರಲ್ಲಿ ಜಾರಿ ನಿರ್ದೇಶನಾಲಯವು ಮೋದಿ ವಿರುದ್ಧ ಜಾಗತಿಕ ವಾರಂಟ್‌ ಹೊರಡಿಸುವಂತೆ ಇಂಟರ್‌ಪೋಲ್‌ ಮನವಿ ಮಾಡಿತ್ತು. ಜತೆಗೆ, ರೆಡ್‌ ಕಾರ್ನರ್‌ ನೋಟಿಸ್‌ಗೂ ಕೋರಿತ್ತು. ಆದರೆ, ಮೋದಿ ವಿರುದ್ಧ ಸಾಕಷ್ಟು ದಾಖಲೆಗಳು ಇಲ್ಲದ ಕಾರಣ ವಾರಂಟ್‌ ಹೊರಡಿಸಲಾಗದು ಎಂದು ಹೇಳಿ ಇ.ಡಿ. ಕೋರಿಕೆಯನ್ನು ಇಂಟರ್‌ಪೋಲ್‌ ತಿರಸ್ಕರಿಸಿತ್ತು. ಮೋದಿಯವರನ್ನೂ ಗಡಿಪಾರು ಮಾಡ ಬೇಕೆಂಬ ಕೂಗು ಹೆಚ್ಚಿರುವ ಹಿನ್ನೆಲೆಯಲ್ಲಿ, ಸರ್ಕಾರ ಆ ನಿಟ್ಟಿನಲ್ಲೂ ಹೆಜ್ಜೆಯಿಡಬಹುದು ಎಂದು ಹೇಳಲಾಗಿದೆ.

Advertisement

ಏನಿದು ಭಾರತ-ಯುಕೆ ಒಪ್ಪಂದ?
ಭಾರತ-ಯುಕೆ ಹಸ್ತಾಂತರ ಒಪ್ಪಂದವು 1993ರ ಡಿ.30ರಂದು ಜಾರಿಯಾಯಿತು. ಕೇಂದ್ರ ಗೃಹ ಸಚಿವ ಎಸ್‌.ಬಿ. ಚವಾಣ್‌ ಅವರು 1992ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ಈವರೆಗೂ ಭಾರತಕ್ಕೆ ಯಾವೊಬ್ಬ ಹೈಪ್ರೊಫೈಲ್‌ ಆರೋಪಿಯನ್ನೂ ಯುಕೆ ಹಸ್ತಾಂತರಿಸಿಲ್ಲ. “ಅಪರಾಧವು ರಾಜಕೀಯ ಸಂಬಂಧ ಹೊಂದಿದೆ ಎಂದಾದರೆ ಹಸ್ತಾಂತರ ಕೋರಿಕೆಯನ್ನು ತಿರಸ್ಕರಿಸಬಹುದು,’ ಎಂದು ಒಪ್ಪಂದದ 5ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ. 1993ರ ಗುಜರಾತ್‌ ಸ್ಫೋಟ ಪ್ರಕರಣದ ಆರೋಪಿ ಟೈಗರ್‌ ಹನೀಫ್ನನ್ನು ಹಸ್ತಾಂತರಿಸುವಂತೆ ಭಾರತವು 2010ರಿಂದಲೂ ಮನವಿ ಸಲ್ಲಿಸುತ್ತಲೇ ಇದೆ. ಆದರೂ, ಆತ ಎಲ್ಲ ಕಾನೂನಾತ್ಮಕ ಅವಕಾಶಗಳನ್ನು ಬಳಸಿಕೊಂಡು, ಹಸ್ತಾಂತರದಿಂದ ತಪ್ಪಿಸಿಕೊಂಡಿದ್ದಾನೆ. 

ಜನರ ಕಣ್ಣಿಗೆ ಮಣ್ಣೆರಚಬೇಡಿ ಎಂದ ಕಾಂಗ್ರೆಸ್‌ 
ಮಲ್ಯ ಬಂಧನಕ್ಕೆ ಸಂಬಂಧಿಸಿ ಮೋದಿ ಸರ್ಕಾರವು ದೇಶದ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. “ವಶಕ್ಕೆ ತೆಗೆದುಕೊಂಡು, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬಿಡುಗಡೆಯೂ ಆಗಿದೆ. ಇದೆಂಥಾ ಹಸ್ತಾಂತರ ಪ್ರಕ್ರಿಯೆ? ಹಾಗಾದರೆ ಮಲ್ಯರನ್ನು ವಾಪಸ್‌ ಕರೆತರಲು ಇನ್ನೂ 12 ವರ್ಷ, 15 ವರ್ಷ, 30 ವರ್ಷ ತಗಲುತ್ತದೋ ಅಥವಾ ಅದೂ ಸಾಧ್ಯವಿಲ್ಲವೋ? ಜನರನ್ನು ಮೂರ್ಖರನ್ನಾಗಿಸುವ ಮೊದಲು ಮೋದಿ ಮತ್ತು ಬಿಜೆಪಿ ಈ ಪ್ರಶ್ನೆಗೆ ಉತ್ತರಿಸಲಿ. 9 ಸಾವಿರ ಕೋಟಿ ರೂ. ಸಾಲವನ್ನು ವಾಪಸ್‌ ಪಡೆಯುವ ಕಾಲಮಿತಿಯನ್ನು ಹೇಳಲಿ,’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ. 

ಇದೇ ವೇಳೆ, ಸಿಬಿಐ ಹಾಗೂ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಯುಕೆ ಕೋರ್ಟ್‌ ನಲ್ಲಿ ಭಾರತದ ಪರ ವಾದ ಮಂಡಿಸಲಿದ್ದು, ಕಾನೂನು ಉಲ್ಲಂ ಸಿದರನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ತೋರಿಸಿಕೊಡಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಗೊಂದಲಕ್ಕೆ ವಕೀಲರ ಉತ್ತರವೇನು?
ಮಲ್ಯಗೆ ಜಾಮೀನು ಸಿಕ್ಕಿರುವುದು ಭಾರತಕ್ಕಾದ ಹಿನ್ನಡೆಯಲ್ಲ. ಅದು ನಿರೀಕ್ಷಿತ. ಬ್ರಿಟನ್‌ ಸರ್ಕಾರಕ್ಕೆ ಈಗಿರುವುದು ಎರಡೇ ಆಯ್ಕೆ. ಒಂದು ಹಸ್ತಾಂತರ, ಮತ್ತೂಂದು ಗಡಿಪಾರು. ಒಂದು ವಿಚಾರ ನೆನಪಿರಲಿ, ಮಲ್ಯ ಅವರಲ್ಲಿ ಈಗ ಪಾಸ್‌ಪೋರ್ಟ್‌ ಇಲ್ಲ. ಅವರು ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಪಾಸ್‌ಪೋರ್ಟ್‌ ಇಲ್ಲದ ಕಾರಣ, ಅವರನ್ನು ಗಡಿಪಾರು ಮಾಡಲೇಬೇಕಾಗುತ್ತದೆ. ಕಾನೂನಾತ್ಮಕವಾಗಿ ನೆಲೆಸಿದ್ದರಷ್ಟೇ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಆದರೆ, ಮಲ್ಯ ವಿಚಾರದಲ್ಲಿ ಅದು ಸಾಧ್ಯವಿಲ್ಲ. ಅಲ್ಲದೆ, ಅವರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಗಳೂ ಇವೆ.
– ಮಹೇಶ್‌ ಜೇಠ್ಮಲಾನಿ, ನ್ಯಾಯವಾದಿ, ಬಾಂಬೆ ಹೈಕೋರ್ಟ್‌

ಈಗ ಯುಕೆ ನ್ಯಾಯಾಲಯದಲ್ಲಿ ಪೂರ್ಣಪ್ರಮಾ ಣದ ಹಸ್ತಾಂತರ ವಿಚಾರಣೆ ಆರಂಭವಾಗಿದೆ. ಅಲ್ಲಿನ ಕಾನೂನಿನಂತೆ ಶಿಕ್ಷಾರ್ಹ ಅಪರಾಧವನ್ನು ಮಲ್ಯ ಎಸಗಿದ್ದಾರೆ ಎಂಬುದು ಸಾಬೀತಾದರೆ, ಆಗಷ್ಟೇ ಅವರನ್ನು ಹಸ್ತಾಂತರಿಸಲು ಸಾಧ್ಯ. ಗಮನಿಸಬೇಕಾದ ಅಂಶವೆಂದರೆ, ಮಲ್ಯ ಅವರೂ ಈ ಎಲ್ಲ ಪ್ರಕ್ರಿಯೆಗೆ ಸಿದ್ಧರಾಗಿಯೇ ಇರುತ್ತಾರೆ. ಅವರು ಕೂಡ ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಎಲ್ಲವನ್ನೂ ಮಾಡಿರುತ್ತಾರೆ. ಅವರ ಹಸ್ತಾಂತರದಲ್ಲಿ ಭಾರತವು ಯಶಸ್ವಿಯಾಗ ಲಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾರತವು ಪ್ರಬಲ ಸಾಕ್ಷ್ಯಗಳನ್ನು ಮುಂದಿಟ್ಟರಷ್ಟೇ ಇದರಲ್ಲಿ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ, ಮಲ್ಯ ಸುಲಭವಾಗಿ ನುಣುಚಿಕೊಳ್ಳಬಹುದು.
– ಸತೀಶ್‌ ಮನ್‌ಶಿಂದೆ, ನ್ಯಾಯವಾದಿ, ಬಾಂಬೆ ಹೈಕೋರ್ಟ್‌

ಲಂಡನ್‌ನ ಜಾರಿ ನಿರ್ದೇಶನಾಲಯಕ್ಕೂ ಮಲ್ಯ ಬಂಧನದ ನಿರೀಕ್ಷೆ ಇರಲಿಲ್ಲ. ಹಸ್ತಾಂತರವು ಹೇಳಿದಷ್ಟು ಸುಳಬವಿಲ್ಲ. ಆದರೆ, ನಮ್ಮ ವಿತ್ತ ಸಚಿವರು ಕೂಡ ಒಬ್ಬ ಉತ್ತಮ ನ್ಯಾಯವಾದಿ ಆಗಿರುವ ಕಾರಣ, ತಿಂಗಳೊಳಗಾಗಿ ಆ ಪ್ರಕ್ರಿಯೆ ನಡೆಯಲೂಬಹುದು. ಮಲ್ಯ ಜೊತೆ ದೊಡ್ಡ ದೊಡ್ಡ ನ್ಯಾಯವಾದಿಗಳಿದ್ದರೆ, ನಮ್ಮ ಜೊತೆ ಹಣಕಾಸು ಸಚಿವ ಜೇಟಿÉ ಇದ್ದಾರೆ. ಅವರನ್ನು ಭಾರತಕ್ಕೆ ವಾಪಸ್‌ ಕರೆತಂದರೆ, ಮೊದಲು ಮುಂಬೈನ ಹಣಕಾಸು ಅವ್ಯವಹಾರ ನಿಯಂತ್ರಣ ಕಾಯ್ದೆ ಕೋರ್ಟ್‌ಗೆ ಹಾಜರುಪಡಿಸುತ್ತೇವೆ. 
– ಹಿತೇನ್‌ ವೆಂಗಾಂವ್ಕರ್‌, ನ್ಯಾಯವಾದಿ, ಜಾರಿ ನಿರ್ದೇಶನಾಲಯ

Advertisement

Udayavani is now on Telegram. Click here to join our channel and stay updated with the latest news.

Next