Advertisement

ನಿರಂತರ ಕುಡಿವ ನೀರಿನ ಯೋಜನೆ ಖಾಸಗೀಕರಣ ಇಲ್ಲ

10:17 AM Jun 17, 2022 | Team Udayavani |

ಹುಬ್ಬಳ್ಳಿ: ಮಹಾನಗರದ ನಿರಂತರ ಕುಡಿಯುವ ನೀರು ಯೋಜನೆ ಸರಕಾರದ ಮಹತ್ವದ ಯೋಜನೆಯಾಗಿದ್ದು, ಮಹಾನಗರ ಪಾಲಿಕೆ ಮಾಲಿಕತ್ವದಲ್ಲಿಯೇ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ ವಿನಃ ಖಾಸಗೀಕರಣ ಮಾಡಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ|ಬಿ.ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

Advertisement

ಆಮ್‌ ಆದ್ಮಿ ಪಕ್ಷದ ಯೋಜನೆ ಕುರಿತು ಅಭಿಯಾನ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಪತ್ರಿಕಾ ಸ್ಪಷ್ಟನೆ ನೀಡಿದ್ದು, ಮಹಾನಗರದ ಎಲ್ಲ ವಾರ್ಡುಗಳಿಗೆ ಒತ್ತಡ ಸಹಿತ 24/7 ನಿರಂತರ ನೀರು ಸರಬರಾಜು ಯೋಜನೆಯನ್ನು ಮಹಾನಗರ ಪಾಲಿಕೆಯ ಮಾಲೀಕತ್ವದಲ್ಲಿ ಅನುಷ್ಠಾನ ಮಾಡಲು ಮೆ| ಎಲ್‌ ಆ್ಯಂಡ್‌ ಟಿ ನಿರ್ವಾಹಕರಿಗೆ ಗುತ್ತಿಗೆ ನೀಡಲಾಗಿದೆ. ಯೋಜನೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಡಿಬಿಒಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು 12 ವರ್ಷಗಳ ಅವಧಿಯವರೆಗೆ (6 ತಿಂಗಳು ಅಧ್ಯಯನ ಅವಧಿ, 4.6 ವರ್ಷಗಳು ವಿನ್ಯಾಸ ಮತ್ತು ನಿರ್ಮಾಣ ಹಾಗೂ ಹಾಲಿ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯ ಅವಧಿ), 7 ವರ್ಷಗಳು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗಿದೆ. ಯೋಜನಾ ಅಂದಾಜು ವೆಚ್ಚ ಒಟ್ಟು 1207.81 ಕೋಟಿ ರೂ. (ಮೂಲ ಕಾಮಗಾರಿ ವೆಚ್ಚ ರೂ.763 ಕೋಟಿ ರೂ. ನಿರ್ವಹಣಾ ವೆಚ್ಚ 444.81 ಕೋಟಿ ರೂ.) ಆಗಿದ್ದು, ಇದರಲ್ಲಿ ಟೆಂಡರ್‌ ಮೊತ್ತ 1206.96 ಕೋಟಿ ರೂ. ಇರುತ್ತದೆ. ನೀರು ಸರಬರಾಜು ವ್ಯವಸ್ಥೆಯ ಎಲ್ಲ ಚರ- ಸ್ಥಿರ ಆಸ್ತಿಗಳು ಪಾಲಿಕೆಯ ಒಡೆತನದಲ್ಲಿರುತ್ತವೆ.

ಸರಕಾರ ಕಾಲಕಾಲಕ್ಕೆ ರೂಪಿಸುವ ನಿಯಮಗಳನುಸಾರ ನೀರಿನ ದರವನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿಟ್ಟು ನಿರ್ಧರಿಸಲಾಗುತ್ತದೆ ಹೊರತು ಇದರಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿ ಪಾತ್ರ ಇರಲ್ಲ. ಹೆಚ್ಚಿನ ದರ ಸಂಗ್ರಹಿಸಲು ಅವಕಾಶ ಇರಲ್ಲ. ಮೀಟರ್‌ ಅಳವಡಿಕೆಯಿಂದ ಬಳಸಿದ ನೀರಿಗಷ್ಟೇ ದರ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ನೀರಿನ ಬಿಲ್‌ನಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಸರಿಪಡಿಸಿ ಕೊಳ್ಳಬಹುದು.

ಈಗಾಗಲೇ ಮಹಾನಗರದಲ್ಲಿ 18 ವಾರ್ಡುಗಳಲ್ಲಿ ಪ್ರಾಯೋಗಿಕ ಯಶಸ್ವಿಯಾಗಿದ್ದು, 58 ಸಾವಿರ ಕುಟುಂಬಗಳಿಗೆ ಅನುಕೂಲವಾಗಿದೆ. ಉಳಿದ 1,45,700 ಕುಟುಂಬಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಯೋಜನೆ ಸರಕಾರದಿಂದ ಅನುಮೋದನೆಯಾಗಿದ್ದು, ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಯೋಜನೆಗೆ ಒಪ್ಪಿಗೆ ನೀಡಿರುತ್ತದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಮೊದಲ 2 ವರ್ಷಗಳ ವೇತನ, ಭತ್ಯೆ, ಇಎಸ್‌ಐ, ಪಿಎಫ್‌ ಮತ್ತು ನಿವೃತ್ತಿ ವೇತನ ಶುಲ್ಕ ಸೇರಿದಂತೆ ಇತರೆ ಕಡಿತಗಳನ್ನು ಸಂಬಂಧಿಸಿದ ಇಲಾಖೆಗಳ ವೆಚ್ಚವನ್ನು ಪಾಲಿಕೆ ವತಿಯಿಂದ ಎಲ್‌ ಆ್ಯಂಡ್‌ ಟಿ ಕಂಪನಿಗೆ ಮರುಪಾವತಿಸಲಾಗುವುದು. 2 ವರ್ಷಗಳ ನಂತರ ಸಂದರ್ಶನ ಮೂಲಕ ಪರಸ್ಪರ ಒಪ್ಪಿಗೆ ಸಿಬ್ಬಂದಿ ನೇಮಿಸಿಕೊಳ್ಳಬಹುದು. ಒಪ್ಪಿಗೆಯಿಲ್ಲದ ಸಿಬ್ಬಂದಿಯನ್ನು ಪಾಲಿಕೆಯಲ್ಲಿ ಮುಂದುವರಿಸಲಾಗುವುದು.

ಮಧ್ಯಂತರ ನೀರು ಸರಬರಾಜು ವ್ಯವಸ್ಥೆಯು 2022 ಮೇ 2ರಿಂದ ಹೊರಗುತ್ತಿಗೆ ನೌಕರರು ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗೆ ನೋಂದಣಿ ಪ್ರಕ್ರಿಯೆಗೆ ಸ್ಪಂದಿಸಿ ಒಪ್ಪಿಕೊಂಡಿರುವ ಷರತ್ತಿಗೊಳಪಟ್ಟು ಹಸ್ತಾಂತರಿಸಿದ್ದು, ನೀರು ಸೋರಿಕೆ ಕಂಡು ಬಂದಲ್ಲಿ ಕೂಡಲೇ ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಹೊಸ ನಳ ಸಂಪರ್ಕ ಪಡೆಯಲು ಇಚ್ಛಿಸುವವರು ಪಾಲಿಕೆಯ ವಲಯ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ನೀಡಿದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಂಪರ್ಕ ಕೊಡುವ ವ್ಯವಸ್ಥೆ ಮಾಡಲಿದ್ದಾರೆ. ಪ್ರಸ್ತುತ 12ಲಕ್ಷ ಜನಸಂಖ್ಯೆಯಿದ್ದು, ಮುಂದಿನ 20 ವರ್ಷಗಳವರೆಗೆ ಬೆಳವಣಿಗೆ ಆಧರಿಸಿ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲ್ಲ. ಪಾಲಿಕೆ ಮಾಲಿಕತ್ವದಲ್ಲಿಯೇ ಅನುಷ್ಠಾಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next