Advertisement

ರಫೇಲ್‌ನಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇಲ್ಲ

06:23 AM Feb 17, 2019 | Team Udayavani |

ಬೆಂಗಳೂರು: ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಸಾಮಗ್ರಿ ಖರೀದಿ ಒಪ್ಪಂದ ವಿಶ್ವಾಸಾರ್ಹ ಸಂಸ್ಥೆ ಹಾಗೂ ದೇಶಗಳೊಂದಿಗೆ ನಡೆಯಬೇಕು ಎಂದು ನಿವೃತ್ತ ಅಸಿಸ್ಟೆಂಟ್‌ ಚೀಫ್ ಆಫ್ ಏರ್‌ಸ್ಟಾಫ್ ಮಾರ್ಷಲ್‌ ಎಸ್‌.ಎಸ್‌.ಲಹರಿ ಅಭಿಪ್ರಾಯಪಟ್ಟರು.

Advertisement

ಸಿಟಜನ್ಸ್‌ ಫಾರ್‌ ಡೆಮಾಕ್ರಸಿ ಸಂಸ್ಥೆ ಶನಿವಾರ ನಗರದಲ್ಲಿ ಆಯೋಜಿಸಿದ್ದ ರಫೇಲ್‌ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಕ್ಷಣಾ ಇಲಾಖೆಗೆ ಬೇಕಾದ ಸಾಮಗ್ರಿ ಖರೀದಿ ಎಂದರೆ, ಮಾರುಕಟ್ಟೆಗೆ ಹೋಗಿ ತರಕಾರಿ ತರುವುದಲ್ಲ. ತುಂಬಾ ರಹಸ್ಯ ಮತ್ತು ವಿಶ್ವಾಸಾರ್ಹ ಮೂಲಗಳ ಜತೆ ವ್ಯವಹರಿಸಬೇಕಿರುತ್ತದೆ.

ರಫೇಲ್‌ ಡೀಲ್‌ ಎರಡು ದೇಶಗಳ ನಡುವೆ ಆಗಿದ್ದು, ಇದರಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿರುವ ಸಾಧ್ಯತೆ ಇಲ್ಲ ಎಂದು ಪ್ರತಿಪಾದಿಸಿದರು. ರಕ್ಷಣಾ ಸಾಮಾಗ್ರಿಗಳ ಮಾರುಕಟ್ಟೆಯಲ್ಲಿ ಆಯ್ಕೆಗಳು ಕಡಿಮೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡರೆ, ಅವರು ಅತ್ಯಾದುನಿಕ ತಂತ್ರಜ್ಞಾನದ ರಕ್ಷಣಾ ಸಾಮಗ್ರಿ ಒದಗಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಯಾವುದೇ ದೇಶ ತಾನು ಅಭಿವೃದ್ಧಿಪಡಿಸಿರುವ ಸುಧಾರಿತ ತಂತ್ರಜ್ಞಾನ ಹಂಚಿಕೊಳ್ಳಲು ಮುಂದೆ ಬರುವುದಿಲ್ಲ. ಹೀಗಾಗಿ ಎರಡು ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ, ಹೊಂದಾಣಿಕೆಯಲ್ಲಿ ಒಪ್ಪಂದ ಮಾಡಿಕೊಂಡು ತಂತ್ರಜ್ಞಾನ ವರ್ಗಾವಣೆಯಾಗಿರುತ್ತದೆ. ಈ ಒಪ್ಪಂದದ ರಹಸ್ಯ ಕಾಯ್ದುಕೊಳ್ಳುವ ಹೊಣೆ ಎರಡೂ ರಾಷ್ಟ್ರಗಳ ಮೇಲೂ ಇರುತ್ತದೆ ಎಂದು ವಿವರಿಸಿದರು.

ಭಾರತ ಮತ್ತು ಫ್ರಾನ್ಸ್‌ ನಡುವೆ ನಡೆದಿರುವ ರಾಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ, ಇದು ರಾಜಕೀಯ ವಸ್ತುವಾಗಿ ಚರ್ಚೆಗೆ ಗ್ರಾಸವಾಗಿರುವುದು ದುರಂತ. ರಕ್ಷಣಾ ಸಾಮಾಗ್ರಿಗಳ ಖರೀದಿ ಪ್ರಕ್ರಿಯೆಯಲ್ಲಿ ಸಿದ್ಧ ಮಾನದಂಡಗಳ ಪ್ರಕಾರವೇ ನಡೆಯಬೇಕು. ಮಾನದಂಡ ಗಾಳಿಗೆ ತೂರಿ ಒಪ್ಪಂದ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೇ ರಿಲಾಯನ್ಸ್‌ ಸಂಸ್ಥೆಗೆ ಅಧಿಕ ಹಣ ಹೋಗಿದೆ ಎಂಬುದನ್ನೂ ಒಪ್ಪಲಾಗದು. ಈ ಎಲ್ಲ ಚರ್ಚೆಗಳಿಗೆ ಸಿಎಜಿ ವರದಿ ಉತ್ತರ ನೀಡಿದಂತಿದೆ ಎಂದು ಹೇಳಿದರು.

Advertisement

ನಿವೃತ್ತ ಏರ್‌ ಮಾರ್ಷಲ್‌ ಬಿ.ಕೆ.ಮುರುಳಿ ಮಾತನಾಡಿ, ದುರ್ಗಮ ಸ್ಥಳಗಳಲ್ಲಿ ವಾಯು ಪಡೆಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ರಫೇಲ್‌ ಯುದ್ಧ ವಿಮಾನಗಳಿಂದ ವಾಯು ಪಡೆಯ ಬಲ ಹೆಚ್ಚಾಗುತ್ತದೆ. ಖರೀದಿ ಪ್ರಕ್ರಿಯೆ ಅಥವಾ ಹಣಕಾಸಿನ ವಿಚಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ಒಟ್ಟಾರೆ ಒಪ್ಪಂದಲ್ಲಿ ಕೆಲವೊಂದು ನ್ಯೂನತೆ ಇರಬಹುದು ಎಂದು ಅಭಿಪ್ರಾಯಪಟ್ಟರು.

ಯುಪಿಎ ಅವಧಿಯಲ್ಲಿ 126 ರಫೇಲ್‌ ಯುದ್ಧ ವಿಮಾನಗಳನ್ನು 69 ಸಾವಿರ ಕೋಟಿ ರೂ. ನೀಡಿ ಖರೀದಿಸಲಾಗಿದೆ. ಎನ್‌ಡಿಎ ಖರೀದಿಸುತ್ತಿರುವ 36 ವಿಮಾನಗಳಿಗೆ 59 ಸಾವಿರ ಕೋಟಿ ರೂ. ನೀಡಲಾಗಿದೆ. ಈಗ ಖರೀದಿಸುತ್ತಿರುವ ಯುದ್ಧ ವಿಮಾನಗಳ ಗುಣಮಟ್ಟ, ತಂತ್ರಜ್ಞಾನ, ಖರೀದಿ ಸಮಯ ಎಲ್ಲವನ್ನೂ ಗಮನಿಸಬೇಕು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ತಾಂತ್ರಿಕ ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಎಚ್‌ಎಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಸಕ್ಸೇನಾ ಮಾತನಾಡಿ, ಸೇನೆಗೆ ಬೇಕಾದ ಲಘು ವಿಮಾನ ಸಿದ್ಧಪಡಿಸುವ ಸಾಮರ್ಥ್ಯವನ್ನು ಎಚ್‌ಎಎಲ್‌ ಹೊಂದಿದೆ. ಹಾಗೇ ರಫೇಲ್‌ ಸಿದ್ಧಪಡಿಸಬಹುದಾದ ಸಾಮರ್ಥ್ಯ ಹಾಗೂ ಕೌಶಲ್ಯವೂ ನಮ್ಮಲ್ಲಿ ಇದೆ ಎಂದು ಹೇಳಿದರು. ಬಿಇಎಂಎಲ್‌ ಡಿಫೆನ್ಸ್‌ ವಿಭಾಗದ ನಿವೃತ್ತ ಕಾರ್ಯನಿರ್ವಹಕ ನಿರ್ದೇಶಕ ಎಸ್‌.ರವಿ, ಎಚ್‌ಎಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಜಿತ್‌ ಪಂತ್‌, ಸಿಟಜನ್ಸ್‌ ಫಾರ್‌ ಡೆಮಾಕ್ರಸಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next