Advertisement

ಹೊಸ ಕಟ್ಟಡವಿದ್ರೂ ಸ್ಥಳಾಂತರವಿಲ್ಲ

12:13 PM Jan 30, 2018 | Team Udayavani |

ಬೆಂಗಳೂರು: ಮಳೆಗೆ ಸೋರುವ ಚಾವಣಿ, ಆರು ತಿಂಗಳಿಂದ ದುರಸ್ತಿಯಾಗದ ಜನರೇಟರ್‌, ಬಳಕೆಯಾಗದೆ ಧೂಳು ಹಿಡಿದಿರುವ ಅತ್ಯಾಧುನಿಕ ಯಂತ್ರೋಪಕರಣಗಳು… ಇದು ಶ್ರೀರಾಮಪುರ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಸ್ಥಿತಿ.

Advertisement

ಶ್ರೀರಾಮಪುರ ಭಾಗದಲ್ಲಿ ಹೆಚ್ಚು ವಾಸವಿರುವ ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕಾಗಿ 1963ರಲ್ಲಿ ಕೆ.ರಾಧಾಬಾಯಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಆಸ್ಪತ್ರೆ ಅಭಿವೃದ್ಧಿಗೆ ಮುಂದಾಗಿಲ್ಲ. ಮಾತ್ರವಲ್ಲ ಆಸ್ಪತ್ರೆಗೆಂದೇ ನಿರ್ಮಿಸಿರುವ ಸುಸಜ್ಜಿತ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆ ನೀಡಿದ್ದಾರೆ!

ಶ್ರೀರಾಮಪುರ ಆಸ್ಪತ್ರೆಯು 20 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಪ್ರತಿ ತಿಂಗಳು ಕನಿಷ್ಠ 100 ಹೆರಿಗೆಗಳಾಗುತ್ತವೆ. ಆಸ್ಪತ್ರೆಯು ಸಿಸೆರಿಯನ್‌ ವಿಭಾಗವನ್ನೂ ಹೊಂದಿದ್ದು, ಅತ್ಯಾಧುನಿಕ ಸ್ಕ್ಯಾನಿಂಗ್‌ ಯಂತ್ರಗಳಿವೆ. ಆದರೆ, ಅವುಗಳನ್ನು ನಿರ್ವಹಿಸುವ ಸಿಬ್ಬಂದಿಯಿಲ್ಲದ ಕಾರಣ ಬಡವರು ಹೆಚ್ಚು ಹಣ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸುವಂತಾಗಿದೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಸ್ಪತ್ರೆ ಮುಂಭಾಗವನ್ನು ನವೀಕರಿಸಿದ್ದರೂ, ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯತ್ತ ಪಾಲಿಕೆ ಅಧಿಕಾರಿಗಳು ಗಮನಹರಿಸಿಲ್ಲ. ಮಳೆಗಾಲದಲ್ಲಿ ಚಾವಣಿ ಸೋರುವುದರಿಂದ ಬಾಣಂತಿಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಹಾಳಾದ ಜನರೇಟರ್‌: ಆಸ್ಪತ್ರೆಯಲ್ಲಿರುವ ಜನರೇಟರ್‌ ಹಾಳಾಗಿ ಆರು ತಿಂಗಳು ಕಳೆದಿದೆ. ಅದನ್ನು ದುರಸ್ತಿಪಡಿಸುವಂತೆ ಆಸ್ಪತ್ರೆಯ ವೈದ್ಯರು ಹಲವಾರು  ಪತ್ರ ಬರೆದರೂ, ಹಿರಿಯ ಅಧಿಕಾರಿಗಳು ಗಮನಹರಿಸಿಲ್ಲ. ಅಪರೇಷನ್‌ ಥಿಯೇಟರ್‌ನಲ್ಲಿ ಮಾತ್ರ ಯುಪಿಎಸ್‌ ವ್ಯವಸ್ಥೆಯಿದ್ದು, ಉಳಿದ ಕೊಠಡಿ ಹಾಗೂ ಯಂತ್ರಗಳು ವಿದ್ಯುತ್‌ ಹಾಗೂ ಜನರೇಟರನ್ನೇ ಆಧರಿಸಿವೆ. ಆದರೂ, ಶೀಘ್ರ ದುರಸ್ತಿ ಮಾಡದ ಪಾಲಿಕೆ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿದ್ಯುತ್‌ ವ್ಯತ್ಯಯ ಸ್ಥಗಿತಗೊಂಡ ಫೋಟೋ ಥೆರಪಿ: ಇತ್ತೀಚೆಗೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಜಾಂಡೀಸ್‌ ಇದ್ದ ಹಿನ್ನೆಲೆಯಲ್ಲಿ ವೈದ್ಯರು “ಬ್ಲೂಲೈಟ್‌ ಫೋಟೋ ಥೆರಪಿ’ ನಡೆಸಲು ಸೂಚಿಸಿದ್ದರು. ಸಾಮಾನ್ಯವಾಗಿ ಜಾಂಡೀಸ್‌ ಕಾಣಿಸಿಕೊಂಡ ಮಕ್ಕಳಿಗೆ ನಿರಂತರವಾಗಿ 48 ಗಂಟೆಗಳು ಈ ಥೆರಪಿ ನೀಡಿದರೆ ಮಗು ಚೇತರಿಸಿಕೊಳ್ಳುತ್ತದೆ. ಆದರೆ, ಜ.26ರಂದು ಮಗುವಿಗೆ ಥೆರಪಿ ನಡೆಸುವ ವೇಳೆ 4ಗಂಟೆ ವಿದ್ಯುತ್‌ ವ್ಯತ್ಯಯವಾಗಿತ್ತು. ಜತೆಗೆ ಜನರೇಟರ್‌ ಕೆಟ್ಟಿದ್ದ ಹಿನ್ನೆಲೆಯಲ್ಲಿ ಮಗುವಿಗೆ ನಿರಂತರವಾಗಿ ಥೆರಪಿ ನೀಡಲು ಸಾಧ್ಯವಾಗದೆ ಮಗು ಮೃತಪಟ್ಟಿತ್ತು.

ಧೂಳು ಹಿಡಿಯುತ್ತಿದೆ ಎಕ್ಸ್‌ರೆ ಸಾಧನ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಸ್ಪತ್ರೆಗೆ ಎಕ್ಸ್‌ರೆ ಸಾಧನಗಳನ್ನು ಪೂರೈಸಲಾಗಿದೆ. ಆದರೆ, ಸ್ಥಳದ ಅಭಾವದಿಂದ ಯಂತ್ರಗಳು ಧೂಳು ಹಿಡಿಯುತ್ತಿವೆ. ಯಂತ್ರೋಪಕರಣಗಳು ಬಂದು ಎರಡು ತಿಂಗಳು ಕಳೆದರೂ ಬಳಕೆಯಾಗಿಲ್ಲ. ಜತೆಗೆ ಯಂತ್ರ ಕಾರ್ಯನಿರ್ವಹಿಸಲು ಅಗತ್ಯವಿರುವ 40ಕೆವಿ  ವಿದ್ಯುತ್‌ ಕೇಂದ್ರ ಅಳವಡಿಸಲು ಬೆಸ್ಕಾಂಗೆ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ. 

ಎರಡು ಲಕ್ಷದ ಬದಲು 7 ಸಾವಿರ ಬಾಡಿಗೆ: ಬಿಬಿಎಂಪಿ ವತಿಯಿಂದ ಶ್ರೀರಾಮಪುರ ಹೆರಿಗೆ ಆಸ್ಪತ್ರೆಗೆ ಕೂಗಳತೆ ದೂರದಲ್ಲಿ ಸುಸಜ್ಜಿತವಾದ ಅಂಬೇಡ್ಕರ್‌ ಡೇ ಕೇರ್‌ ಸೆಂಟರ್‌ ಕಟ್ಟಡ ನಿರ್ಮಿಸಲಾಗಿದೆ. ಹೆರಿಗೆ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯ ಪಾಲಿಕೆ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ.

ಆದರೆ, ಅಧಿಕಾರಿಗಳು ಮಾತ್ರ ಕಟ್ಟಡವನ್ನು ಕೇವಲ 7 ಸಾವಿರ ರೂ.ಗೆ ಬಾಡಿಗೆಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಟ್ಟಡವನ್ನು ಎರಡು ಸಂಸ್ಥೆಗಳಿಗೆ ಜಂಟಿಯಾಗಿ ನೀಡಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ನಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ, ಒಂದು ಸಂಸ್ಥೆ ತನಗೆ ಸೌಲಭ್ಯ ಬೇಡವೆಂದು ಪತ್ರ ನೀಡಿ ಒಪ್ಪಂದದಿಂದ ದೂರ ಸರಿದಿದೆ.

ಅದರಂತೆ ಒಪ್ಪಂದವನ್ನು ರದ್ದುಗೊಳಿಸಿ ಮತ್ತೆ ಕೌನ್ಸಿಲ್‌ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಬೇಕಿತ್ತು. ಜತೆಗೆ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆ 1,84,595 ರೂ. ಬಾಡಿಗೆ ನಿಗದಿಪಡಿಸಿದ್ದರೂ, ದ್ವಿತೀಯ ದರ್ಜೆ ಸಹಾಯಕರೊಂದಿಗೆ ಖಾಸಗಿಯವರು ಒಪ್ಪಂದ ಮಾಡಿಕೊಂಡು ಕೇವಲ 7 ಸಾವಿರ ರೂ.ಗೆ ಬಾಡಿಗೆ ಪಾವತಿಸುತ್ತಿದ್ದಾರೆ.

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next