Advertisement

ಅಲ್ಲಿ ಕಾರ್ನಾಡರು ಕಾಣಲೇ ಇಲ್ಲ…

01:39 AM Jun 11, 2019 | Lakshmi GovindaRaj |

ಬೆಂಗಳೂರು: ಅಲ್ಲಿ ಮೌನ ಆವರಿಸಿತ್ತು. ಅಪಾರ್ಟ್‌ಮೆಂಟ್‌ ಆವರಣದ ತುಂಬೆಲ್ಲ ನಿಶಬ್ಧ. ಸೂರ್ಯ ನೆತ್ತಿಗೇರುವ ಮೊದಲೇ ಕೆಲವರ ಹಾಜರಾತಿ ಅಲ್ಲಿತ್ತು. ಅಪಾರ್ಟ್‌ಮೆಂಟ್‌ ಆವರಣದ ಹೊರಗೆ ನೆರೆದಿದ್ದ ಕೆಲವರಿಗೆ ಮತ್ತೆ ಬಾರದ ಸಾಧಕನ ಮುಖ ನೋಡವ ತವಕ ಕ್ಷಣ, ಕ್ಷಣಕ್ಕೂ ಇಮ್ಮಡಿಸುತ್ತಿತ್ತು.

Advertisement

ಆದರೆ ಆವರಣ ಒಳ ಪ್ರವೇಶಿಸುವ ಅವಕಾಶ ಅವರಿಗಿಲ್ಲದಾಗಿತ್ತು. ಹೀಗಾಗಿ ಬರೀ ನಿರಾಶೆ, ಮೌನ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇದು ಸೋಮವಾರ ಅಗಲಿದ ನಾಟಕ ಸಾಹಿತ್ಯದ “ಅಗ್ನಿ-ಮಳೆ’ ಗಿರೀಶ ಕಾರ್ನಾಡರು ನೆಲೆಸಿದ್ದ ಲ್ಯಾವೆಲ್ಲೇ ರಸ್ತೆಯ “ಪುರ್ವ ಗ್ರಾಂಡೆ’ ಅಪಾರ್ಟ್‌ಮೆಟ್‌ನಲ್ಲಿ ಆವರಣದ ಹೊರಗೆ ಕಂಡು ಬಂದ ದೃಶ್ಯ.

ನಾಟಕ ಸಾಹಿತ್ಯದ ಮೂಲಕ ಟಿಪ್ಪುವಿನ ಕನಸುಗಳಿಗೆ ನಿರೇರೆದಿದ್ದ, “ಯಯಾತಿ’, ಮಹಾರಾಜನಿಗೆ ಅಕ್ಷರೂಪದಲ್ಲಿ ಜೀವ ನೀಡಿದ್ದ “ತುಘಲಕ್‌,’ ನಾಟಕದ ಖ್ಯಾತಿ ನಾಟಕಕಾರ “ಹಯವದನ’ನನ್ನು ಕಣ್ತುಂಬಿಕೊಳ್ಳಲು ಅವರ ಕೆಲ ಅಭಿಮಾನಿಗಳು ಕಾರ್ನಾಡರ ನಿವಾಸದ ಮುಂದೆ ದೌಡಾಯಿಸಿದ್ದರು. ಆದರೆ ಅಪಾರ್ಟ್‌ಮೆಂಟ್‌ ಒಳ ಪ್ರವೇಶಕ್ಕೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಕೆಲವರು ಗೇಟ್‌ ಬಾಗಿಲ ಕಬ್ಬಿಣದ ಕಿಂಡಿಗಳಲ್ಲೇ ಕಣ್ಣು ಮಿಟಿಕಿಸಿ,”ಪುರ್ವ ಗ್ರಾಂಡೆ’ ಅಪಾರ್ಟ್‌ಮೆಟ್‌ನ ಒಳ ನೋಟವನ್ನು ಗ್ರಾಹಿಸುತ್ತಿದ್ದದ್ದು ಕಂಡು ಬಂತು.

ಅಪಾರ್ಟ್‌ ಮೆಂಟ್‌ನ ರಸ್ತೆ ಬದಿ ನಿಂತಿದ್ದ ಅಂಬ್ಯುಲೆನ್ಸ್‌ಗಳು ಅಪಾರ್ಟ್‌ಮೆಂಟ್‌ ಆವರಣದೊಳಗೆ ತೆರಳಿದಾಗ ಕಾರ್ನಾಡರ ಪಾರ್ಥೀವ ಶರೀರ ಕಣ್ತುಂಬಿಕೊಳ್ಳುವ ತವಕ ಮತ್ತಷ್ಟು ಇಮ್ಮಡಿಸಿತು. ಬಿಸಿಲಿನ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳ ನೆರಳನ್ನು ಆಶ್ರಯಿಸಿದ್ದ ಕೆಲವರಿಗೆ ಒಮ್ಮೆಯಾದರೂ ಸಾಧಕನ ಕಳೆಬರಹ ನೋಡವ ಆಸೆಯಿತ್ತು. ಆದರೂ ಆ ಕನಸ್ಸು ನೆನಸಾಗಿಯೇ ಉಳಿಯಿತು.

ಕಾರ್ನಾಡರ ಪಾರ್ಥಿವ ಶರೀರವನ್ನು ಹೊತ್ತು ಬೈಯಪ್ಪನ ಹಳ್ಳಿ ಸಮೀಪದ ಕಲ್ಪಹಳ್ಳಿ ಚಿತಾಗಾರದತ್ತ ಹೊರಟ್ಟಿದ್ದ ಅಂಬ್ಯುಲೆನ್ಸ್‌ನ ಗಾಜಿನ ಕಿಟಕಿಗಳು ಜಾಹೀರಾತಿನಿಂದಲೇ ತುಂಬಿ ಹೋಗಿದ್ದರಿಂದ ಕಾರ್ನಾಡರ ಪಾರ್ಥಿವ ಶರೀರ ಕಾಣಲೇ ಇಲ್ಲ. ಹೀಗಾಗಿ ಕಾಕ್ಸ್‌ ಟೌನ್‌ ನಿಂದ ಬಂದಿದ್ದ ಕಾರ್ನಾಡರ ಅಭಿಮಾನಿಯೊಬ್ಬರು, ಕಾರ್ನಾಡರ ಅಂತಿಮ ದರ್ಶನಕ್ಕಾಗಿ ಆಟೋ ಏರಿ ಕಲ್ಪಹಳ್ಳಿಯಲ್ಲಿರುವ ಚಿತಾಗಾರದತ್ತ ಸಾಗಿದರು.

Advertisement

ಕವಿಗೂ ಕಿರಿಕಿರಿ: ಲ್ಯಾವೆಲ್ಲಿ ರಸ್ತೆಯಲ್ಲಿದ್ದ ಕಾರ್ನಾಡರ ನಿವಾಸಕ್ಕೆ ಬಂದ ನಿತೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರಿಗೂ ಕಿರಿಕಿರಿ ಉಂಟಾಯ್ತು. ಅಪಾರ್ಟ್‌ಮೆಂಟ್‌ ಬಾಗಿಲು ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಪೊಲೀಸರು ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರನ್ನು ನಿಲ್ಲಿಸಿದರು.

ಇದರಿಂದಾಗಿ ನಿಸಾರ್‌ ಅಹಮದ್‌ ಅವರಿಗೆ ಕಸಿವಿಸಿ ಉಂಟಾಯಿತು. ತಕ್ಷಣ ಅಲ್ಲಿದ್ದವರು ಸರ್‌ .ಅವರು ಪ್ರಸಿದ್ಧ ಕವಿ ಪ್ರೊ.ಕೆ.ಎಸ್‌ ನಿಸಾರ್‌ ಅಹಮದ್‌ ಎಂದು ಹೇಳಿದಾಗ ಪೊಲೀಸರು ಅವರನ್ನು ಒಳಗೆ ಬಿಟ್ಟ ಪ್ರಸಂಗ ಕೂಡ ನಡೆಯಿತು.

ಯಾವ ಮೂಲಾಜಿಗೆ ಒಳಗಾಗದ ವ್ಯಕ್ತಿತ್ವ: ಸಮಕಾಲೀನ ಸಮಸ್ಯೆ, ಸಂವೇದನೆಗಳನ್ನು ಅರ್ಥೈಯಿಸಿಕೊಂಡು ಅವುಗಳಿಗೆ ಅಕ್ಷರೂಪ ನೀಡುವುದನ್ನು ಕಾರ್ನಾಡರು ಹೆಚ್ಚು ಕರಗತ ಮಾಡಿಕೊಂಡಿದ್ದರು. ಏನು ಹೇಳಬೇಕೂ, ಅದನ್ನು ನೇರವಾಗಿ ಹೇಳಿ ಬಿಡುತ್ತಿದ್ದರು.

ಯಾವ ಮೂಲಾಜಿಗೂ ಅವರು ಒಳಗಾಗುತ್ತಿರಲಿಲ್ಲ. ಈ ಹಿಂದೆ ಕಾರ್ನಾಡರು ಕರ್ನಾಟ ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ವೇಳೆ ಸಚಿವರೊಬ್ಬರು ವ್ಯಕ್ತಿಯೊಬ್ಬರ ಪರವಾದ ಶಿಫಾರಸು ಪತ್ರ ಬರೆದಿದ್ದರು. ಅದನ್ನು ಧಿಕ್ಕರಿಸಿ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಂತಹ ವ್ಯಕ್ತಿತ್ವ ಕಾರ್ನಾಡರದ್ದಾಗಿತ್ತು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷ ಜೆ.ಲೋಕೇಶ್‌ ಅವರು ಸ್ಮರಿಸುತ್ತಾರೆ.

ರಾಜ್ಯಪಾಲ ವಿ.ಆರ್‌.ವಾಲಾ ಸಂತಾಪ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರ ನಿಧನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಹಲವು ಗಣ್ಯರು ಸಂತಾಪ ಸಲ್ಲಿಸಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು, ಗಿರೀಶ್‌ ಕಾರ್ನಾಡರ ಪುತ್ರ ರಘು ಅವರಿಗೆ ಸಂತಾಪ ಸಂದೇಶ ಕಳುಹಿಸಿದ್ದಾರೆ.

ಬಹುಮುಖ ವ್ಯಕ್ತಿತ್ವದ ಗಿರೀಶ್‌ ಕಾರ್ನಾಡ್‌ ಅವರು ಶ್ರೇಷ್ಠ ನಟ, ಬರಹಗಾರ ಹಾಗೂ ನಾಟಕಕಾರರಾಗಿದ್ದರು. ಅವರ ನಿಧನ ತೀವ್ರ ದುಃಖ ಉಂಟು ಮಾಡಿದ್ದು, ದೇಶ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದೆ. ಅವರಆತ್ಮಕ್ಕೆ ಶಾಂತಿ ಸಿಗಲಿ. ಹಾಗೆಯೇ ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.

ವಿಭಿನ್ನ ರೀತಿಯ ನಾಟಕಗಳ ರಚನೆಯಲ್ಲಿ ಕಾರ್ನಾಡರು ಎತ್ತಿದ ಕೈ. ಅದರ ಜೊತೆಗೆ ಹಲವು ರೀತಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿನಯದಲ್ಲೂ ಕೂಡ ಶ್ರೇಷ್ಠ ನಟ ಎನಿಸಿಕೊಂಡಿದ್ದರು.
-ಪ್ರೊ. ಕೆ.ಎಸ್‌.ನಿಸಾರ್‌ ಅಹಮದ್‌. ಹಿರಿಯ ಕವಿ

ಆತ್ಮೀಯ ಗೆಳೆಯ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್‌ ಕಾರ್ನಾಡ‌ರ ನಿಧನದಿಂದ ನನಗೆ ಮತ್ತು ಕನ್ನಡ ಸಾರಸ್ವತ ಲೋಕ, ಸಂಗೀತ, ನಾಟಕ ಹಾಗೂ ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ.
-ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

ಗಿರೀಶ್‌ ಕಾರ್ನಾಡರ ಸಾವನ್ನು ಯಾರೇ ಸಂಭ್ರಮಿಸಿದ್ದರೂ ಅದು ಅಕ್ಷಮ್ಯ. ಕಾರ್ನಾಡ್‌ ಅವರು ರಾಜ್ಯ ಮಾತ್ರವಲ್ಲದೆ ದೇಶವೇ ಗೌರವಿಸುವಂತಹ ವ್ಯಕ್ತಿ. ಅವರ ಅಗಲಿಕೆಯ ಸಂದರ್ಭದಲ್ಲಿ ಈ ರೀತಿ ನಡೆದುಕೊಳ್ಳುವುದು ಖಂಡನಾರ್ಹ.
-ಬಿ.ವೈ. ವಿಜಯೇಂದ್ರ, ಬಿಜೆಪಿ ನಾಯಕ

ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮಶ್ರೀ ಗಿರೀಶ್‌ ಕಾರ್ನಾಡ್‌ ಅವರ ನಿಧನ ರಾಜ್ಯದ ಸಾಹಿತ್ಯ, ಸಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಅಗಲಿಕೆಯ ದುಖ ಭರಿಸುವ ಶಕ್ತಿ ಲಭಿಸಲಿ
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಹಿರಿಯ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರ ನಿಧನ ಸಾರಸ್ವತ ಲೋಕದಲ್ಲಿ ದೊಡ್ಡ ಕಂದಕ ಉಂಟು ಮಾಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿಲ್ಲ. ಅವರ ಕೆಲಸಗಳು ಲಕ್ಷಾಂತರ ಜನರಿಗೆ ಮಾರ್ಗದರ್ಶಕವಾಗುವ ವಿಶ್ವಾಸ ಇದೆ.
-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ದೇಶ ಕಂಡ ಅತ್ಯುತ್ತಮ ರಂಗಕರ್ಮಿ ಗಿರೀಶ್‌ ಕಾರ್ನಾಡ ಅವರ ಅಗಲಿಕೆಯ ವಿಚಾರ ತಿಳಿದು ದಿಗ್ಭ್ರಮೆಯಾಗಿದೆ. ಕನ್ನಡ ಮತ್ತು ಭಾರತ ಸಾಹಿತ್ಯ ಹಾಗೂ ನಾಟಕ ಲೋಕಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ.
-ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡರ ಸಾವು ಆಘಾತಕಾರಿ ಸುದ್ದಿ. ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಎಂ.ಬಿ.ಪಾಟೀಲ್‌, ಗೃಹ ಸಚಿವ.

ಖ್ಯಾತ ಸಾಹಿತಿ ಡಾ.ಗಿರೀಶ್‌ ಕಾರ್ನಾಡ ಅವರ ಅಗಲಿಕೆಯಿಂದ ಭಾರತೀಯ ಸಾರಸ್ವತ ಲೋಕ ಬಡವಾಗಿದೆ. ಅವರ ನಿಧನದಿಂದ ಕನ್ನಡ ನಾಡಿಗೆ ತುಂಬಲಾರದ ಹಾನಿಯಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ.
-ಎಚ್‌.ಕೆ. ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಸಾಹಿತಿ ಗಿರೀಶ್‌ ಕಾರ್ನಾಡ್‌ ವಿಧಿವಶರಾಗಿರುವುದು ಆಘಾತ ತಂದಿದೆ. ಅವರ ಆಲೋಚನೆಗಳು, ಚಿಂತನೆಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿದ್ದವು. ಸಾಹಿತ್ಯ, ನಾಟಕ, ಚಲನಚಿತ್ರ ರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಅವರ ನಾಟಕ ಮತ್ತು ಚಲನ ಚಿತ್ರಗಳು ಸಮಾಜದಲ್ಲಿನ ಕೆಟ್ಟ ಹಾಗೂ ಮೂಢ ಪದ್ದತಿಗಳ ವಿರುದ್ಧದ ದನಿಯಾಗಿದ್ದವು.
-ಡಿ.ಕೆ.ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ.

ಕನ್ನಡ ಸಾಹಿತ್ಯವನ್ನು ಜ್ಞಾನಪೀಠ ಪ್ರಶಸ್ತಿಯ ಮೂಲಕ ಉತ್ತುಂಗಕ್ಕೆ ಕೊಂಡೋಯ್ದ, ಹಿರಿಯ ಬರಹಗಾರರು, ರಂಗ ಕರ್ಮಿಯಾಗಿ ಮಿನುಗುತ್ತಿದ್ದ ತಾರೆ ಇಂದು ನಮ್ಮಿಂದ ಮರೆಯಾಗಿದೆ. ಗಿರೀಶ್‌ ಕಾರ್ನಾಡ್‌ ಅವರಿಗೆ ಭಾವಪೂರ್ಣ ವಿದಾಯಗಳು. ಕನ್ನಡ ತಾಯಿಯ ಸೇವೆಗೆ ನಿಮ್ಮ ಕೊಡುಗೆ ಅಪಾರ. ನಿಮ್ಮ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.
-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ.

ಜ್ಞಾನಪೀರ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಬಹುಮುಖ ಪ್ರತಿಭೆ. ಬಹು ವ್ಯಕ್ತಿತ್ವ ಉಳ್ಳವರು. ಅವರ ವೈಚಾರಿಕ ಪ್ರಖರತೆ ಗಮನಾರ್ಹವಾದುದು. ಕಾರ್ನಾಡ್‌ ಮತ್ತು ಇತರರ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರÂ ಇದ್ದಾಗ ಇಂಥ ಭಿನ್ನಾಭಿಪ್ರಾಯಗಳು ಉದ್ಭವಿಸುವುದು ಸಹಜ. ಹಾಗೆಂದ ಮಾತ್ರಕ್ಕೆ ಸಾವನ್ನು ಸಂಭ್ರಮಿಸುವುದು ಸರಿಯಲ್ಲ.
-ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next