Advertisement

ಸಾಗರದ ಮಹಿಳೆಗೆ ಸೋಂಕು ಇಲ್ಲ

01:43 AM Mar 13, 2020 | mahesh |

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದ ಸಾಗರ ತಾಲೂಕಿನ ಮಹಿಳೆಯಲ್ಲಿ ಕೊರೊನಾ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿ ಬಂದಿದ್ದು, ಮಹಿಳೆ ವಯೋಸಹಜ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಈ ವರೆಗೂ ಯಾವುದೇ ಕೊರೊನಾ (ಕೋವಿಡ್‌-19) ಪ್ರಕರಣಗಳು ಪತ್ತೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಅಚಾಪುರ ಗ್ರಾಮದ 68 ವರ್ಷದ ಮಹಿಳೆಯು ಫೆಬ್ರವರಿ ಕೊನೆಯಲ್ಲಿ ಮೆಕ್ಕಾ ಮದೀನಕ್ಕೆ ತೆರಳಿದ್ದರು. ಆಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಸೌದಿ ಆಸ್ಪತ್ರೆಯಲ್ಲಿ ಜ್ವರ-ಕಫ‌ ಮತ್ತು ಶೀತಕ್ಕೆ ಚಿಕಿತ್ಸೆ ಪಡೆದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ತಪಾಸಣೆ ನಡೆದ ಬಳಿಕ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿ ಮತ್ತೆ ಉಸಿರಾಟ ಸಮಸ್ಯೆ ಕಾಣಿಸಿತ್ತು. ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಉಲ್ಬಣಿಸಿದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಯ ಗಂಟಲಿನ ದ್ರವವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಗುರುವಾರ ಬಂದ ವರದಿಯಂತೆ ಆಕೆಗೆ ಕೊರೊನಾ ಸೋಂಕು ಲಕ್ಷಣ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next