Advertisement

ಕೋಡಿ: ಉಪ್ಪು ನೀರಿನಿಂದಾಗಿ ಕುಡಿಯಲೂ ನೀರಿಲ್ಲ

12:54 PM Dec 07, 2020 | Suhan S |

ಕುಂದಾಪುರ, ಡಿ. 6: ಕೋಡಿ ಪ್ರದೇಶದ ಹೊಳೆಯಲ್ಲಿ ಉಪ್ಪುನೀರು ಬರುತ್ತಿರುವ ಕಾರಣ ಈ ಭಾಗದ ಕೃಷಿಗೆ ಹಾನಿಯಾಗಿದ್ದು ಕುಡಿಯುವ ನೀರಿಗೆ ತತ್ವಾರವಾಗಿದೆ. ಬಾವಿಯ ನೀರೂ ಉಪ್ಪಾಗಿದ್ದು ಬದಲಿ ನೀರಿಗೂ ಪರದಾಡುವಂತಾಗಿದೆ.

Advertisement

ಕೋಡಿ, ಮಧ್ಯಕೋಡಿ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ಸೋನ್ಸ್‌ ಶಾಲೆ ಬಳಿಯೂ ಸಮಸ್ಯೆ ಇದೆ. ಕೋಡಿಯ ಸೋನ್ಸ್‌  ಹಿರಿಯ ಪ್ರಾಥಮಿಕ  ಶಾಲೆಯ ಪೂರ್ವದಿಕ್ಕಿಗೆ  ಇರುವ 25ರಿಂದ 30 ಎಕರೆ ಗದ್ದೆ 2011ರಿಂದಲೂ ಇದೇ ಪರಿಸ್ಥಿತಿ ಅನುಭವಿಸುತ್ತಿದೆ.  ಕುಡಿಯುವ ನೀರಿಗೂ ಬರ ಉಂಟಾಗಿದೆ. ಪುರಸಭೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ  ಪರಿಣಾಮ ಶೂನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಪುರಸಭೆಯವರು ತತ್‌ಕ್ಷಣ ಕೇವಲ 25 ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ಉಪ್ಪುನೀರಿಗೆ ತಡೆ ಹಾಕಬಹುದು. ಆದರೆ ಆ ಕೆಲಸವನ್ನು  ಮಾಡದೇ  ಸರಕಾರದಿಂದ ಕೋಟ್ಯಂತರ ರೂ.ಗಳ ಅನುದಾನದ ಕಡೆಗೆ ಬೆರಳು ತೋರಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಇಲ್ಲಿನ ನಿವಾಸಿಗಳು.

ಕೃಷಿ ನಾಶ :  ಸುಮಾರು 1.5 ಕಿ.ಮೀ. ದೂರದಷ್ಟು ಹಿನ್ನೀರು ನುಗ್ಗುವ ಕಾರಣ ಕೃಷಿಯೂ ಹಾನಿಗೀಡಾಗುತ್ತಿದೆ. ನದಿಪಾತ್ರದ ಮನೆಗಳ ಸುತ್ತ ಉಪ್ಪುನೀರಿನ ರಾಯಭಾರ ಎಂದಾಗಿದೆ. ಮನೆಗಳ ಸುತ್ತ ಉಪ್ಪು ನೀರು ಹಿನ್ನೀರಿನ ರೂಪದಲ್ಲಿ ಸಂಗ್ರಹವಾಗಿದ್ದು ಸೊಳ್ಳೆಕಾಟದಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ.  ಉಪ್ಪು ನೀರಿನಿಂದ  ಕೃಷಿಭೂಮಿಗಾದ ಅವಸ್ಥೆಯನ್ನು ನೋಡಿ ಇಲ್ಲಿನ ಜನ ಮರುಗುತ್ತಿದ್ದಾರೆ. ಹೊಳೆ  ಬದಿಯಿಂದ 400 ಅಡಿ ದೂರದಲ್ಲಿ  ಇರುವ ಕೋಡಿ ಸುಬ್ರಹ್ಮಣ್ಯ  ಶೇರೆಗಾರರ ಮನೆಯ ಸುತ್ತಲೂ  ಮೂರೂ ಕಡೆಯ ಕೃಷಿ  ಭೂಮಿ ಗದ್ದೆಗಳೆಲ್ಲ  ಹೊಳೆಯ ಉಪ್ಪು ನೀರಿನಿಂದ ಆವರಿಸಿ  ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಳಪೆ ಕಾಮಗಾರಿ ಎನ್ನುತ್ತಾರೆ ಅವರು. ತೆಂಗಿನಗಿಡಗಳು ಉಪ್ಪು ನೀರಿನ ಹೊಡೆತಕ್ಕೆ  ಸಾಯಲಾರಂಬಿಸಿವೆ. ಕುಡಿಯುವ  ನೀರಿಲ್ಲದೆ ದನಕರುಗಳು ಹಾಗೂ ಸುತ್ತಲಿನ  ಮನೆಯವರಿಗೂ  ತೊಂದರೆಯಾಗಿದೆ.

ಕಳೆದ 25 ವರ್ಷಗಳಿಂದಲೂ ಇಲ್ಲಿ ಹಿನ್ನೀರು ನುಗ್ಗುತ್ತದೆ. ಕೃಷಿ ನಾಶವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಆದರೆ ಈ ಬಾರಿ ಅತಿಹೆಚ್ಚು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಆದ್ದರಿಂದ ಅಲ್ಪಸ್ವಲ್ಪ ಕೃಷಿ ಮಾಡುತ್ತಿದ್ದವರೂ ಕೈಬಿಟ್ಟು 50 ಎಕರೆಯಷ್ಟು ಪ್ರದೇಶ ಕೃಷಿಯಿಲ್ಲದೆ ಹಡಿಲು ಬಿದ್ದಿದೆ. ಕೋಡಿ ಚಕ್ರೇಶ್ವರಿ ದೇವಸ್ಥಾನದ ವಠಾರದಿಂದ ಸೋನ್ಸ್‌ ಶಾಲೆಯವರೆಗೆ 40ಕ್ಕೂ ಅಧಿಕ ರೈತ ಕುಟುಂಬಗಳು ಇದೇ ಹಿನ್ನೀರಿನ ಕಾರಣದಿಂದ ಕೃಷಿಯಿಂದ ದೂರವಿದ್ದಾರೆ.

ಶಾಶ್ವತ ಕಾಮಗಾರಿ ಬೇಕುಈ ಪ್ರದೇಶದಲ್ಲಿ ಶಾಶ್ವತ ನದಿದಂಡೆ ಕಾಮಗಾರಿ ಬೇಕು ಎನ್ನುವುದು ಇಲ್ಲಿನವ‌ರ ಬೇಡಿಕೆ. ಈ ಹಿಂದೆ “ಉದಯವಾಣಿ’ “ವಾರ್ಡ್‌ನಲ್ಲಿ ಸುದಿನ’ ಅಭಿಯಾನ ನಡೆಸಿದಾಗಲೂ ಕೋಡಿ ಪ್ರದೇಶದ ಜನ ಉಪ್ಪು ನೀರಿನ ಸಮಸ್ಯೆಯನ್ನು ಉಲ್ಲೇಖೀಸಿದ್ದರು.

Advertisement

ಉಬ್ಬರಇಳಿತ : ಕೋಡಿ ಅಳಿವೆಗೆ ಹೊಂದಿಕೊಂಡಂತಹ ಕೋಡಿ ಹಿನ್ನೀರಿನ ವಠಾರದಲ್ಲಿ ಹುಣ್ಣಿಮೆ, ಅಮಾವಾಸ್ಯೆಗೆ ಸಮುದ್ರದ ಉಬ್ಬರ- ಇಳಿತದ ಸಂದರ್ಭ ಸಮಸ್ಯೆಯಾಗುತ್ತಿದೆ. ಹುಣ್ಣಿಮೆಗೆ ನದಿ ನೀರು ಏರಿಕೆಯಾಗಿ ಕೃಷಿಭೂಮಿ, ಮನೆ ವಠಾರಕ್ಕೆ ನುಗ್ಗುತ್ತದೆ. ಇದು ಸಹಜ ಎನ್ನಬಹುದಾದರೂ ಇನ್ನೊಂದು ಹುಣ್ಣಿಮೆವರೆಗೂ ನೀರು ಇಳಿದು, ಹರಿದು ಹೋಗುವುದಿಲ್ಲ ಎನ್ನುವುದು ಸಮಸ್ಯೆ. ಇದರಿಂದಾಗಿಯೇ ಕುಡಿಯುವ ನೀರಿನ ಬಾವಿಗಳ ನೀರೂ ಕಲುಷಿತವಾಗಿದೆ, ಉಪ್ಪಾಗಿದೆ. ಕೋಡಿ ಭಾಗಕ್ಕೆ ಇನ್ನೂ ಪುರಸಭೆಯ ಕುಡಿಯುವ ನೀರಿನ ಸಂಪರ್ಕ ಆಗದೇ ಇರುವ ಕಾರಣ ಸಮಸ್ಯೆ ಮುಂದುವರಿದಿದೆ.

ಕಿಂಡಿ ಅಣೆಕಟ್ಟುಇಲ್ಲಿನ ದಾಸಪ್ಪ ಹವಾಲ್ದಾರ್‌ ಅವರ ಮನೆ ಸಮೀಪ 30 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ಒಂದನ್ನು ರಚಿಸಲಾಗಿದೆ. ಅದು ಈಗ ದುರಸ್ತಿಗೆ ಬಂದ ಕಾರಣ ಸಮಸ್ಯೆಯಾಗುತ್ತಿದೆ. ಉಪ್ಪು ನೀರು ತಡೆಗಟ್ಟಲಾಗದೆ ಮನೆಗಳಿರುವ ಜಾಗಕ್ಕೆ ಬರುತ್ತಿದೆ. ಗುತ್ತೇದಾರ್‌ ಮನೆ ಸಮೀಪ ಕಾಮಗಾರಿ ವೈಫ‌ಲ್ಯ ಕೂಡ ಉಪ್ಪುನೀರು ಒಳನುಗ್ಗಲು ಕಾರಣ ಎಂದು ಸ್ಥಳೀಯರು ಬೆರಳು ತೋರಿಸುತ್ತಾರೆ.

ಡಿಸಿ ಗಮನಿಸಲಿಸಣ್ಣ ಮೊತ್ತದಲ್ಲಿ ಪರಿಹಾರ ಒದಗಿಸಲು ಸಾಧ್ಯವಿದ್ದರೂ ಪುರಸಭೆ ದೊಡ್ಡ ಮೊತ್ತದ ಕಾಮಗಾರಿ ಸರಕಾರದಿಂದ ಬರಬೇಕಿದೆ ಎಂದು ದಿನದೂಡುತ್ತದೆ. ಇದರಿಂದಾಗಿ ಕುಡಿಯುವ ನೀರು ಹಾಗೂ ಕೃಷಿಗೆ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲಿ. ತಾತ್ಕಾಲಿಕ ತುರ್ತು ಕಾಮಗಾರಿಗೆ ಆದೇಶ ನೀಡಲಿ. ಸುಬ್ರಹ್ಮಣ್ಯ ಶೇರೆಗಾರ್ಸಂತ್ರಸ್ತ ರೈತ, ಕೋಡಿ

ಗಮನಕ್ಕೆ ಬಂದಿದೆ : ಕೋಡಿ ನಿವಾಸಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಶಾಶ್ವತ ಕಾಮಗಾರಿ ನಡೆಸಲು ಪುರಸಭೆಯಲ್ಲಿ ಅನುದಾನದ ಕೊರತೆಯಿದೆ. ಸ್ಥಳೀಯರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ. – ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next