Advertisement

ವಿವಾದಗಳ ನಡುವೆ ಅಭಿವೃದ್ಧಿ  ವಿಚಾರದಲ್ಲಿ ರಾಜಿಯಿಲ್ಲ 

01:46 PM Mar 25, 2018 | Team Udayavani |

ಸುರತ್ಕಲ್‌: ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪರ ಕೆಲಸಗಳನ್ನು ಮಾಡಿಕೊಳ್ಳುವ ಜತೆಗೆ, ಸದಾ ಒಂದಿಲ್ಲೊಂದು ವಿವಾದಗಳಿಂದ ಶಾಸಕ ಮೊಯಿದಿನ್‌ ಬಾವಾ ಸದಾ ಸುದ್ದಿಯಲ್ಲಿದ್ದಾರೆ. ಜನಸಾಮಾನ್ಯರಿಗಾಗಿ ಹತ್ತುಹಲವು ಕೆಲಸ ಕಾರ್ಯಗಳನ್ನು ನಡೆಸುತ್ತ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತರುವ ಮೂಲಕ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಬಾವಾ ಅವರು ಮತದಾರರನ್ನು ಸೆಳೆಯಲು ನಡೆಸಿರುವ ಕೆಲವು ಗಿಮಿಕ್‌ಗಳ ಮುಖೇನ ಸಾಕಷ್ಟು ಚರ್ಚೆಗೆ ಕಾರಣರಾದವರು.

Advertisement

ಶಾಲಾ ಮಕ್ಕಳಿಗೆ ತನ್ನ ಭಾವಚಿತ್ರವಿರುವ ಪುಸ್ತಕ ನೀಡುವ ಮೂಲಕ ವಿವಾದಕ್ಕೀಡಾಗಿದ್ದರು. ಸುರತ್ಕಲ್‌ನಲ್ಲಿ ಹೊಸ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಕೆಲವು ಮಾರಾಟಗಾರರಿಗೆ ಆದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಯ್ಯಪ್ಪ ಸ್ವಾಮಿ ಭಕ್ತಿಗೀತೆಯ ಧಾಟಿಯಲ್ಲಿ ತನ್ನ ಸಾಧನೆಯನ್ನು ಪ್ರಚುರಪಡಿಸುವ ಮೂಲಕವೂ ಸುದ್ದಿಗೆ ಗ್ರಾಸವಾಗಿದ್ದರು. ಜತೆಗೆ ಸಾಮಾಜಿಕ ಜಾಲ ತಾಣಗಳಲ್ಲೂ ಬಾವಾ ಪರ ಹಾಗೂ ವಿರೋಧ ಚರ್ಚೆ ನಡೆಯುವಂತಾಯಿತು. ಹೀಗೆ ಹಲವು ವಿಚಾರಗಳ ಮಧ್ಯೆಯೇ ಅಭಿವೃದ್ಧಿ ವಿಚಾರದಲ್ಲಿ ಮೊದಿನ್‌ ಬಾವಾ ಯಾವುದೇ ರಾಜಿ ಮಾಡದೆ ಗುರುತಿಸಿಕೊಂಡಿರುವುದು ಉಲ್ಲೇಖನೀಯ.

ಮಂಗಳೂರು ಉತ್ತರ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ. ಕೋಡಿಕಲ್‌ನಿಂದ ವಾಮಂಜೂರು ವರೆಗೆ ಮನಪಾ ವ್ಯಾಪ್ತಿ ಮತ್ತು ಗುರುಪುರ ಕೈಕಂಬ, ಕುಪ್ಪೆಪದವು ಪ್ರದೇಶ ಜಿ.ಪಂ. ವ್ಯಾಪ್ತಿಗೆ ಬರುವ ಪ್ರದೇಶ. ಹೀಗಾಗಿ ಸಂಪೂರ್ಣ ನಗರವೂ ಅಲ್ಲ, ಗ್ರಾಮೀಣ ಪ್ರದೇಶವೂ ಅಲ್ಲ. ಸಮಾನವಾಗಿ ಆಡಳಿತ ನಿರ್ವಹಣೆ ಇಲ್ಲಿ ಕಷ್ಟ. ನಗರಾಡಳಿಮತ್ತು ಪಂಚಾಯತ್‌ ರಾಜ್‌ ಆಡಳಿತದ ಜತೆ ನಿರಂತರ ಸಂಪರ್ಕ ಹೊಂದಿರಬೇಕಾಗುತ್ತದೆ. ನಗರ ಪ್ರದೇಶದ ಅಭಿವೃದ್ಧಿ ಒಂದಿಷ್ಟು ಸುಲಭವಾದರೂ ಗ್ರಾಮೀಣ ಭಾಗದಲ್ಲಿ ಗುಡ್ಡಕಾಡು ಪ್ರದೇಶವಿರುವುದರಿಂದ ಅಭಿವೃದ್ಧಿ ಸವಾಲಿನ ಕೆಲಸ.

ಕ್ಷೇತ್ರದ ಕುರಿತಂತೆ ಮೊಯಿದಿನ್‌ ಬಾವಾ ಹೇಳುವುದು ಹೀಗೆ: ಮಂಗಳೂರು ಉತ್ತರ ಕೈಗಾರಿಕಾ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದರೂ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಒಳಚರಂಡಿ ವ್ಯವಸ್ಥೆ ಜನರ ಮನೆ ಬಾಗಿಲಿಗೆ ಬಂದಿಲ್ಲ. ಬಂದಿದ್ದರೂ ವೈಫಲ್ಯಕ್ಕೆ ಒಳಗಾಗಿ ನೂರಾರು ಕೋಟಿ ರೂ. ದಂಡವಾಗಿದೆ.

ಸುರತ್ಕಲ್‌ ಈ ಹಿಂದಿನಂತಿಲ್ಲ. ಬೆಳೆಯುತ್ತಿರುವ ಉಪನಗರ, ಎಸ್‌ಇಝಡ್‌ ನ‌ಂತಹ ಆರ್ಥಿಕ ಕೇಂದ್ರಗಳು ಇಲ್ಲಿರುವುದರಿಂದ ಸಹಜವಾಗಿಯೇ ಜನ ದಟ್ಟಣೆ ಹೆಚ್ಚಿದೆ. ಬೃಹತ್‌ ಕಂಪೆನಿಗಳಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಒಳಚರಂಡಿ ವ್ಯವಸ್ಥೆ ಬೇಕು.

Advertisement

ಇನ್ನು ಅಪಾಯಕಾರಿ ಪ್ರದೇಶದಲ್ಲಿ ಜನರು ವಾಸಿಸುತ್ತಿರುವುದರಿಂದ ಒಂದು ಅಗ್ನಿಶಾಮಕ ಠಾಣೆ, ಒಂದು ಆಸ್ಪತ್ರೆಯ ವ್ಯವಸ್ಥೆ ಇಲ್ಲಿಬೇಕಾಗಿದೆ. ಈ ಭಾಗದ ಜನತೆ ಓಡಾಟಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನೇ ನಂಬಿದ್ದಾರೆ. ಇಲ್ಲಿ ಬೈಪಾಸ್‌ ರಸ್ತೆ ಅಗತ್ಯ. ಈಗಾಗಲೇ ಯೋಜನೆ ರೂಪಿಸಿ ಸರಕಾರಕ್ಕೆ ನೀಡಲಾಗಿದೆ. ದೀರ್ಘ‌ಕಾಲೀನ ಪ್ರಕ್ರಿಯೆ ಇದಾಗಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನ ಖಚಿತ. ವಸತಿ ರಹಿತರಿಗೆ ಆಶ್ರಯ, ಅಂಬೇಡ್ಕರ್‌ ವಸತಿ ಯೋಜನೆ ನೀಡಿದ ಸರಕಾರ ನಮ್ಮದು. ವಸತಿ ರಹಿತರ ಕನಸು ನನಸು ಮಾಡಿದ್ದೇವೆ. ಆರೋಗ್ಯ ಭಾಗ್ಯಕ್ಕಾಗಿ ಮುಖ್ಯಮಂತ್ರಿಗಳ ಹೊಸ ಯೋಜನೆ ಸರ್ವರಿಗೂ ಲಭ್ಯವಾಗಲಿದೆ ಎನ್ನುತ್ತಾರೆ ಬಾವಾ.

ಮಂಗಳೂರಿನಿಂದ ಸುಮಾರು 14 ಕಿ.ಮೀ. ದೂರವಿರುವ ಸುರತ್ಕಲ್‌ನಲ್ಲಿ ವಲಯ ಕಚೇರಿ ಆಗಬೇಕೆಂಬಬಹು ದಿನದ ಆಸೆ ಇದೀಗ ಈಡೇರಿದೆ. 58 ಕೋ.ರೂ. ವೆಚ್ಚದಲ್ಲಿ ಸುರತ್ಕಲ್‌ -ಗಣೇಶಪುರ ಚತುಷ್ಪಥ, ಸೈಕ್ಲಿಂಗ್‌, ಉದ್ಯಾನವನ ಸಹಿತ ರಸ್ತೆ ರಾಜ್ಯದಲ್ಲೇ ಪ್ರಥಮ ಎನ್ನಬಹುದಾದ ಕಾಮಗಾರಿ. ಇದರ ಜತೆಗೆ ಕೈಗಾರಿಕಾ ಪ್ರದೇಶದಲ್ಲಿ 11 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಪ್ರೀಮಿಯರ್‌ ಎಫ್‌ಐಆರ್‌ ಅನುದಾನದಲ್ಲಿ ಗುಡ್ಡೆಕೊಪ್ಲ ರಸ್ತೆ ವಿಸ್ತರಣೆ, ಎಂಆರ್‌ಪಿಎಲ್‌ ರಸ್ತೆ ವಿಸ್ತರಣೆ -ಕಾಂಕ್ರಿಟೀಕರಣ, 120 ಕೋ. ರೂ. ಸುರತ್ಕಲ್‌ ಮಾರುಕಟ್ಟೆ ಅಭಿವೃದ್ಧಿ, ಎರಡು ಕೆರೆಗಳ ಅಭಿವೃದ್ಧಿ ನಡೆದಿವೆ.

 2.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್‌ ರಸ್ತೆ, ಗುಡ್ಡೆಕೊಪ್ಲ ರಸ್ತೆಗೆ 1.13 ಕೋ.ರೂ. ವೆಚ್ಚದಲ್ಲಿ ಶಿಲಾನ್ಯಾಸ, 40 ಲಕ್ಷ ರೂ.ವೆಚ್ಚದ ಒಳರಸ್ತೆ, ಉಳಾಯಿಬೆಟ್ಟು ರಸ್ತೆಗೆ 23 ಕೋ.ರೂ. ವ್ಯಯಿಸಿ ಕಾಂಕ್ರಿಟೀಕರಣ, ಈಶ್ವರಕಟ್ಟೆ ರಸ್ತೆಗೆ 5 ಕೋ.ರೂ., ಮುಚ್ಚಾರು -ಗಂಜಿಮಠ ರಸ್ತೆಗೆ 11 ಕೋ.ರೂ, ಮುತ್ತೂರು ಬಡಗಬೆಳ್ಳೂರು ತೂಗು ಸೇತುವೆ, ಕಿಂಡಿ ಅಣೆಕಟ್ಟು ಮೂಲಕ ನೀರಿನ ಯೋಜನೆ, ಕೆರೆ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 7 ಕೋ.ರೂ.ಗೂ ಮಿಕ್ಕಿ ಹಣ ವಿತರಣೆ, ಮೊರಾರ್ಜಿ ದೇಸಾಯಿ ಶಾಲೆ ಆರಂಭ, ಗುರುಪುರದಲ್ಲಿ ಸರಕಾರಿ ಕಾಲೇಜು, ಮುತ್ತೂರಿನಲ್ಲಿ ಕಾಲೇಜು, ಪಿಲಿಕುಳ-ವಾಮಂಜೂರು ರಸ್ತೆಗೆ 4.9 ಕೋ.ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿಯಾಗುತ್ತಿದೆ. ಬೈಲಾರೆ ತೋಡು ನಿರ್ಮಾಣಕ್ಕೆ 5 ಕೋ.ರೂ, ಹೊಸಬೆಟ್ಟು ತಡೆಗೋಡೆ ರಚನೆಗೆ 5 ಕೋ.ರೂ., ಕಟ್ಲ ಚರಂಡಿ ನಿರ್ಮಾಣಕ್ಕೆ 2 ಕೋ.ರೂ, ಸುರತ್ಕಲ್‌ ವಲಯ ಕಚೇರಿಗೆ 2.25 ಕೋ.ರೂ, ಮೀನಕಳಿಯದಲ್ಲಿ ಕಡಲ್ಕೊರೆತ ತಡೆಗೆ 4.70 ಕೋ.ರೂ. ಮತ್ತಿತರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಹಂತದಲ್ಲಿವೆ ಎನ್ನುತ್ತಾರೆ ಮೊಯಿದಿನ್‌ ಬಾವಾ.

ವಿಶೇಷ ಯೋಜನೆಗಳು
ಕೋಸ್ಟ್‌ ಗಾರ್ಡ್‌ ಬೃಹತ್‌ ತರಬೇತಿ ಹಾಗೂ ಕೇಂದ್ರ 1,020 ಕೋ.ರೂ. ವೆಚ್ಚದಲ್ಲಿ ಬೈಕಂಪಾಡಿ ಸಮೀಪ ತಲೆ ಎತ್ತಲಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ಬೈಪಾಸ್‌ ರಸ್ತೆ, ಹೆದ್ದಾರಿ 66ರನ್ನು ಎನ್‌ ಐಟಿಕೆ ಬಳಿಕ ನೇರವಾಗಿ ಹೆದ್ದಾರಿ 169 (ಬೆಂಗಳೂರು ಹೆದ್ದಾರಿಗೆ) ಸಂಪರ್ಕ, ಬೈಕಂಪಾಡಿ ವಿಮಾನ ನಿಲ್ದಾಣ ರಸ್ತೆ, ಬೃಹತ್‌ ಕ್ರೀಡಾಂಗಣ, ಉದ್ಯಾನವನ, ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ಯೋಜನೆ. ಫ‌ಲ್ಗುಣಿ ನದಿಯಲ್ಲಿ ಬೋಟಿಂಗ್‌ಗೆ ಅವಕಾಶವಿದೆ. ಆದರೆ ಇದರ ಸದುಪಯೋಗ ಪಡಿಸಿಕೊಳ್ಳುವ ಭಾಗ್ಯ ಕೂಡಿ ಬಂದಿಲ್ಲ. ಆದರೆ ಇದಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳಲಾಗಿದೆ ಎನ್ನುತ್ತಾರೆ ಶಾಸಕ ಮೊಯಿದಿನ್‌ ಬಾವಾ.

ಆಗಬೇಕಾದ್ದು ಇನ್ನೂ ಇದೆ
ಕುಳಾಯಿ ಕಿರು ಬಂದರು ಕಳೆದ ಹತ್ತು ಹಲವು ವರ್ಷಗಳಿಂದ ಆಗುತ್ತದೆ ಎಂಬ ಭರವಸೆ ಇದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ಮಂಗಳೂರಿನಲ್ಲಿ ದೋಣಿಗಳನ್ನಿಡಲು ಜಾಗದ ಕೊರತೆ ಎದುರಾಗಿದ್ದು, ಕುಳಾಯಿ ಜೆಟ್ಟಿಯ ನಿರ್ಮಾಣ ಅಗತ್ಯವಾಗಿದೆ. ಇದರ ಜತೆಗೆ ಮೀನುಗಳ ಸಾಗಾಟಕ್ಕೆ ಮೀನುಗಾರಿಕಾ ರಸ್ತೆಯ ಆವಶ್ಯಕತೆಯಿದೆ. ಗುರುಪುರದಲ್ಲಿ ನಾಡ ಕಚೇರಿ ಬೇಡಿಕೆ ಹಲವು ವರ್ಷಗಳ ಹಿಂದಿನದಾಗಿದೆ. ಇನ್ನು ಎಪಿಎಂಸಿ ಬಹುತೇಕ ಪಳೆಯುಳಿಕೆಯಂತಿದ್ದು, ಇದರ ಅಭಿವೃದ್ಧಿಗೆ ಸಂಕಲ್ಪ ತೊಡಬೇಕಿದೆ. ರೈತ ಕೇಂದ್ರಗಳು ಬಲಗೊಳ್ಳಬೇಕಿವೆ. ನೀರುಮಾರ್ಗ, ಪಡು, ಅದ್ಯಪಾಡಿ ಪ್ರದೇಶದಲ್ಲಿ ಸರಕಾರಿ ಬಸ್‌ನ ಬೇಡಿಕೆಯಿದ್ದು ಇನ್ನೂ ಈಡೇರಿಲ್ಲ.

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next