Advertisement

ಸಿನಿಮಾದಲ್ಲಿ ಅವಕಾಶವಿಲ್ಲ, ಕ್ಯಾಬ್‌ ಓಡಿಸಿ ಜೀವನ ನಡೆಸುತ್ತಿದ್ದೇನೆ

01:01 PM Dec 30, 2017 | Team Udayavani |

ಚಿತ್ರರಂಗದಲ್ಲಿ ಇವತ್ತು ಅವಕಾಶವಿರುವವರಿಗೆ ನಾಳೆ ಅವಕಾಶವಿರುವುದಿಲ್ಲ. ಅನೇಕ ವರ್ಷ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮಿಂಚಿದ ಅದೆಷ್ಟೋ ಕಲಾವಿದರು ಈಗ ಒಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು ಕೆಲವರು ಅವಕಾಶವಿಲ್ಲವೆಂದು ಚಿತ್ರರಂಗವನ್ನು ದೂರುತ್ತಾರೆ. ಆದರೆ, ನಟ ಶಂಕರ್‌ ಅಶ್ವತ್ಥ್ ಮಾತ್ರ ತನಗೆ ಅವಕಾಶವಿಲ್ಲವೆಂದು ಚಿತ್ರರಂಗವನ್ನು ದೂರದೇ ತಮ್ಮ ದುಡಿಮೆಯ ದಾರಿಯನ್ನು ನೋಡಿಕೊಂಡಿದ್ದಾರೆ. ಅದು ಕಾರು ಓಡಿಸುವ ಮೂಲಕ. 

Advertisement

ಕನ್ನಡದ ಖ್ಯಾತ ನಟ ಕೆ.ಎಸ್‌.ಅಶ್ವತ್ಥ್ ಅವರ ಮಗನಾಗಿರುವ ಶಂಕರ್‌ ಅಶ್ವತ್ಥ್ ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿರುವ ಅಶ್ವತ್ಥ್ ಅವರಿಗೆ ಈಗ ಅವಕಾಶಗಳ ಕೊರತೆ ಕಾಡಿದೆ. ಸಿನಿಮಾಗಳಿಂದ ಅವಕಾಶ ಕಡಿಮೆಯಾದ ಕಾರಣ ಕಿರುತೆರೆಗೆ ವಾಲಿದ್ದ ಶಂಕರ್‌ ಅಶ್ವತ್ಥ್ ಅವರು, ಅಲ್ಲೊಂದಿಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲೂ ಅವಕಾಶ ಕಡಿಮೆಯಾಗಿ ತಿಂಗಳುಗಟ್ಟಲೇ ಮನೆಯಲ್ಲಿ ಕೂರುವ ಪರಿಸ್ಥಿತಿ ಶಂಕರ್‌ ಅವರಿಗೆ ಬಂದಿದೆ. ಆಗ ಅವರ ತಲೆಯಲ್ಲಿ ಬಂದಿದ್ದು ಕ್ಯಾಬ್‌ ಓಡಿಸುವ ಯೋಚನೆ. ಹಾಗಾಗಿ, ಚಿತ್ರೀಕರಣವಿಲ್ಲದ ಸಮಯದಲ್ಲಿ ಉಬರ್‌ ಕ್ಯಾಬ್‌ ಓಡಿಸುವ ಮೂಲಕ ತಮ್ಮ ದುಡಿಮೆಯನ್ನು ಮಾಡಿಕೊಳ್ಳುತ್ತಿದ್ದಾರೆ ಶಂಕರ್‌ ಅಶ್ವತ್ಥ್. “ಇತ್ತೀಚಿನ ದಿನಗಳಲ್ಲಿ ನನಗೆ ಅವಕಾಶವಿಲ್ಲದ ದಿನಗಳೇ ಹೆಚ್ಚು.

ಅವಕಾಶವಿಲ್ಲವೆಂದು ಸುಮ್ಮನೆ ಕೂರುವಂತಿಲ್ಲ. ಜೀವನ ನಡೆಸಲು ಏನಾದರೊಂದು ದಾರಿ ಹುಡುಕಬೇಕು. ನಾನು ಚಿತ್ರರಂಗವನ್ನು ಯಾವತ್ತೂ ದೂಷಿಸುವುದಿಲ್ಲ. ಅವಕಾಶವಿದ್ದಾಗ ನಟಿಸಿದ್ದೇನೆ. ಈಗ ಅವಕಾಶ ಕಡಿಮೆಯಾಗಿದೆ. ನನಗೆ ಅವಕಾಶಕ್ಕಾಗಿ, ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚಿ ಅಭ್ಯಾಸವಿಲ್ಲ. ಹಾಗಾಗಿ, ನನ್ನ ದುಡಿಮೆಯನ್ನು ನಾನು ನೋಡಿಕೊಳ್ಳುತ್ತಿದ್ದೇನೆ’ ಎಂದು ತಾವು ಕ್ಯಾಬ್‌ ಓಡಿಸುವ ಬಗ್ಗೆ ಹೇಳುತ್ತಾರೆ ಶಂಕರ್‌ ಅಶ್ವತ್ಥ್.

Advertisement

Udayavani is now on Telegram. Click here to join our channel and stay updated with the latest news.

Next