Advertisement

ಫ‌ಲಿತಾಂಶದ ಮೇಲೆ ಮೈತ್ರಿ ಪರಿಣಾಮವಿಲ್ಲ

06:15 AM Mar 15, 2019 | |

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ  ಚುನಾವಣಾ ಫ‌ಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌.ಅಶೋಕ್‌ ಹೇಳಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಸರ್ಕಾರ ರಚನೆಯಾಗಿ 9 ತಿಂಗಳ ಕಳೆದಿದ್ದು, ಒಂದೂ ಸಾಧನೆ ಮಾಡಿಲ್ಲ. ಒಂಬತ್ತು ತಿಂಗಳಲ್ಲಿ ಸುಗಮವಾಗಿ ಹೆರಿಗೆಯಾಗಿ ಮಗು ಜನಿಸುತ್ತದೆ. ಆದರೆ ಒಂಬತ್ತು ತಿಂಗಳಾದರೂ ಒಂದೂ ಜನಪರ ಕಾರ್ಯಕ್ರಮವನ್ನು ಜಾರಿಗೊಳಿಸಿಲ್ಲ ಎಂದು ತಿಳಿಸಿದರು.

ಮೈತ್ರಿ ಪಕ್ಷಗಳ ನಾಯಕರ ಪರಸ್ಪರ ಕಚ್ಚಾಟವೇ ಒಂಬತ್ತು ತಿಂಗಳ ಸಾಧನೆಯಾಗಿದೆ. ಕೇವಲ ಕುಟುಂಬ ರಾಜಕಾರಣ ಮಾಡುವ ಜೆಡಿಎಸ್‌ ರಾಜ್ಯದ ಹಿತ ಕಾಪಾಡಲು ವಿಫ‌ಲವಾಗಿದೆ. ಮೈತ್ರಿಯ ಹೆಸರಿನಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಮ್ಮ ನೆಲೆ ಕಳೆದುಕೊಂಡಿವೆ. ಬಿಜೆಪಿ ಮಾತ್ರ ರಾಜ್ಯಾದ್ಯಂತ ತನ್ನ ಪ್ರಾಬಲ್ಯ ಹೊಂದಿರುವ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಚುನಾವಣಾ ಪ್ರಚಾರದಲ್ಲಿ ಟೀಕೆಗಳು ಹೆಚ್ಚಾಗಿ ಕೇಳಿಬರಲಿದ್ದು, ಅದಕ್ಕೆ ಪ್ರತಿಯಾಗಿ ಸಮರ್ಥವಾಗಿ ಪ್ರತಿಕ್ರಿಯೆ ನೀಡುವತ್ತ ಗಮನ ಹರಿಸಬೇಕು. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಬೇಕು. ಪ್ರಧಾನಿಯವರ ಸೂಚನೆಯಂತೆ ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ವಿಶೇಷ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳೇ ದೇಶಕ್ಕೆ ಶ್ರೀರಕ್ಷೆಯಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಹಲವು ಕೊಡುಗೆ ನೀಡಿದೆ. ಆದರೆ ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರ ಅಸಹಕಾರ ನೀಡುತ್ತಿದೆ. ಸ್ಮಾರ್ಟ್‌ಸಿಟಿಯಡಿ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರಾಜ್ಯ ಸರ್ಕಾರವು ಬೇರೆ ಕಾರ್ಯಕ್ಕೆ ಬಳಸುತ್ತಿದೆ.

Advertisement

ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕೇಂದ್ರ ಸರ್ಕಾರ 940 ಕೋಟಿ ರೂ. ಬಿಡುಗಡೆ ಮಾಡಿದ್ದರೂ ಎಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳು ಕಾಣಿಸುತ್ತಿಲ್ಲ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದೆ ಎಂದು ಕಿಡಿ ಕಾರಿದರು.

ಕಾಶ್ಮೀರದಲ್ಲಿ ಉಗ್ರಗಾಮಿಗಳು ಅಡಗಿಕೊಂಡಿದ್ದಾಗ ಅಂದಿನ ಯುಪಿಎ ಸರ್ಕಾರ ಅವರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ರಕ್ಷಣೆ ಒದಗಿಸಿತ್ತು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದಕರಿಗೆ ಎಂತಹ ಟ್ರೀಟ್‌ಮೆಂಟ್‌ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಮಾತನಾಡಿ, 2004ರಿಂದ 2014ರವರೆಗಿನ ಅವಧಿಯಲ್ಲಿ ಅಂದಿನ ಯುಪಿಎ ಕೇಂದ್ರ ಸರ್ಕಾರವು ಭ್ರಷ್ಟಾಚಾರದಲ್ಲೇ ಮುಳುಗಿ ಎಲ್ಲ ಕ್ಷೇತ್ರಗಳಲ್ಲಿ ವಿಫ‌ಲವಾಗಿತ್ತು. ಇದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಯಾಗಿದೆ. ಇತ್ತೀಚೆಗೆ ಪ್ರಿಯಾಂಕಾ ವಾದ್ರಾ ಅವರು ಚುನಾವಣಾ ರಂಗಕ್ಕೆ ಪ್ರವೇಶಿಸುವ ಮೂಲಕ ರಾಬರ್ಟ್‌ ವಾದ್ರಾ ಭ್ರಷ್ಟಾಚಾರವನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಮಾಧ್ಯಮ ನಿರ್ವಹಣಾ ವಿಭಾಗದ ಸಂಚಾಲಕ ಎ.ಎಚ್‌.ಆನಂದ್‌, ಸಹ ವಕ್ತಾರರಾದ ಎಸ್‌.ಪ್ರಕಾಶ್‌, ಮಾಳವಿಕಾ ಅವಿನಾಶ್‌, ಶಶಿಲ್‌ ನಮೋಶಿ, ಮಾಧ್ಯಮ ವಿಭಾಗದ ಪದಾಧಿಕಾರಿಗಳು, ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next