Advertisement
ಕೆಲ ಕಿರಿಯ ಪೊಲೀಸ್ ಸಿಬ್ಬಂದಿಗೆ ಇಲಾಖೆಯೊಳಗಿನ ವೈಫಲ್ಯಗಳೇ ಕವನದ ಸಾಲುಗಳಾಗಿದ್ದವು. ಆ ಮೊನಚಾದ ಸಾಲುಗಳಿಗೂ ಉನ್ನತ ಅಧಿಕಾರಿಗಳು ಚಪ್ಪಾಳೆ ಮೂಲಕ ಬೆನ್ನುತಟ್ಟಿದರು. ಹಿರಿಯ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೆಬಲ್ವರೆಗಿನ 30ಕ್ಕೂ ಹೆಚ್ಚು ಪೊಲೀಸರು ಒಂದೇ ವೇದಿಕೆಯಲ್ಲಿ ಒಂದಕ್ಕಿಂತ ಮತ್ತೂಂದು ಉತ್ತಮವಾಗಿರುವ ಕವನಗಳ ವಾಚಿಸಿದರು.
Related Articles
Advertisement
ಮೈಸೂರಿನ ಪೊಲೀಸ್ ತರಬೇತಿ ಶಾಲೆಯ ಡಾ.ಧರಣೀದೇವಿ ಮಾಲಗತ್ತಿ, ಹಬ್ಬದ ಸಡಗರ ಊರು ತುಂಬಾ ಸಂಭ್ರಮದ ಎಳೆಯೂ ಇಲ್ಲಿಲ್ಲ, ಗುನ್ನೆಯ ಬೆನ್ನು ಹತ್ತಿ ಇರುಳೆಲ್ಲ ಜಾರಿತಲ್ಲ…’ ಎಂದು ದೀಪಾವಳಿ ಆಚರಿಸಲಾದ ಖಾಕಿಧಾರಿಗಳ ಅಸಹಾಯಕತೆ ವಿವರಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಸಾಹಿತ್ಯ ಲೋಕ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ ಹೊಂದಿದೆ. ಹಾಗಾಗಿಯೇ ಸಾಹಿತ್ಯಿಕ ಮನಸ್ಸು ಯಾವುದೇ ಕ್ಷೇತ್ರದಲ್ಲಿದ್ದರೂ ಹೆಚ್ಚು ಸೃಜನಶೀಲತೆ ಕಂಡುಕೊಂಡು, ಸಮಾಜದ ಜತೆಗೆ ಸೌಹಾರ್ದವಾಗಿ ಬೆಳೆಯುತ್ತಾ ಹೋಗುತ್ತದೆ. ಪೊಲೀಸ್ ಇಲಾಖೆಯೂ ಇದರಿಂದ ಹೊರತಲ್ಲ ಎಂದರು.
ಕವಿಗಳಾದ ಡಾ.ಎಸ್.ಎಸ್. ವೆಂಕಟೇಶಮೂರ್ತಿ, ಚಂದ್ರಶೇಖರ ತಾಳ್ಯ, ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತೆ) ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “ಸಮವಸ್ತ್ರದೊಳಗೊಂದು ಸುತ್ತು’ ಕವನ ಸಂಕಲನ ಸಂಪುಟ-4 ಲೋಕಾರ್ಪಣೆಗೊಂಡಿತು.
ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸರು ಒತ್ತಡದಲ್ಲಿದ್ದರೂ ಕನ್ನಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಡಾ.ಅಜಯಕುಮಾರ್ ಸಿಂಹ, ಪಿ.ಎಸ್. ರಾಮಾನುಜಂ ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಮತ್ತೂಂದೆಡೆ ಕನ್ನಡಿಗರೇ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದಿಲ್ಲ. ಹೀಗಾದರೆ, ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆ ತಿಳಿಯಲು ಹೇಗೆ ಸಾಧ್ಯ ಎಂದು ಕೇಳಿದರು.
ಕಾಲೇಜು ಮುಗಿಸಿಕೊಂಡು ಪೊಲೀಸ್ ಸಮವಸ್ತ್ರ ಧರಿಸಿ ಇಲ್ಲಿಗೆ (ಕರ್ನಾಟಕಕ್ಕೆ) ಬಂದಾಗ, ಕನ್ನಡ ಬರುತ್ತಿರಲಿಲ್ಲ. ಹಸಿವಾಗಿದ್ದರೂ ಊಟ ಬೇಕು ಎಂದು ಹೇಳುವುದು ಕಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಒಂದು ಆಮಂತ್ರಣ ಪತ್ರಿಕೆಯಲ್ಲಿದ್ದ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ಬರೆದ ಸಾಲುಗಳು ನನ್ನ ಜೀವನಕ್ಕೆ ಪ್ರೇರಣೆಯಾದವು. ನಂತರದಲ್ಲಿ ಅನೇಕ ದಿನಗಳು ಆ ಸಾಲುಗಳು ನನ್ನ ಮೇಜಿನ ಮೇಲಿದ್ದವು.
“ಗಿಡ ಒಣಗಿದ್ದರೂ ಅದರೊಳಗೆ ಜೀವ ಇರುತ್ತದೆ. ಮಳೆ ಬಂದಾಗ, ಅದು ಮತ್ತೆ ಚಿಗುರುತ್ತದೆ. ಹೂವು-ಹಣ್ಣು ಕೊಡುತ್ತದೆ. ಇದೇ ರೀತಿ ಜೀವನವೂ ಕೂಡ’ ಎಂದು ಇತ್ತು ಭಾವುಕರಾದ ನೀಲಮಣಿ ಎನ್. ರಾಜು, ಈ ಸಾಲುಗಳನ್ನು ನಾನು ನಂತರದಲ್ಲಿ ಹಿಂದಿಗೂ ಭಾಷಾಂತರಿಸಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿದರು.