Advertisement

ಮರವೂರಿನ 55 ಮನೆಗಳಿಗೆ ರಸ್ತೆಯೇ ಇಲ್ಲ; ರೈಲು ಹಳಿಯೇ ದಾರಿ! 

10:57 AM Oct 22, 2018 | |

ಬಜಪೆ : ಮರವೂರಿನಲ್ಲಿ ನಡೆಯುತ್ತಿರುವ ಎರಡನೇ ರೈಲು ಹಳಿ ಕಾಮಗಾರಿಯಿಂದಾಗಿ ಮರವೂರು ಜಂಕ್ಷನ್‌ ನಿಂದ ಕಿನ್ನಿಮುಗೇರು, ಮಹದೇವ ದೇವಸ್ಥಾನದವರೆಗಿನ ಮನೆಗಳಿಗೆ ಸಂಪರ್ಕ ರಸ್ತೆ ಕಡಿ ತಗೊಂಡಿದ್ದು, ಇದರಿಂದ ರೈಲು ಹಳಿಯನ್ನೇ ಬಳಸುವ ಅನಿವಾರ್ಯ ಎದುರಾಗಿದೆ.

Advertisement

5 ವರ್ಷಗಳಿಂದ ಇಲ್ಲಿ ಹಳಿ ಕಾಮಗಾರಿ ನಡೆಯುತ್ತಿದ್ದು, ಒಂದನೇ ಹಳಿ ಬದಿಯಲ್ಲಿ ಮಣ್ಣಿನ ರಸ್ತೆ ಇತ್ತು. ಇದುವೇ ಇಲ್ಲಿಯವರಿಗೆ ಸಂಪರ್ಕ ರಸ್ತೆಯಾಗಿತ್ತು. ಈಗ ಎರಡನೇ ಹಳಿಯ ಕಾಮಗಾರಿ ಆರಂಭಗೊಂಡಿದ್ದರಿಂದ ಈ ರಸ್ತೆಗೆ ಮಣ್ಣು ಹಾಕಲಾಗಿದೆ. ಇದರಿಂದ ರಸ್ತೆಯೇ ಇಲ್ಲದಂತಾಗಿದೆ.

55 ಮನೆಗಳಿಗೆ ರಸ್ತೆ ಸಂಪರ್ಕ ಕಡಿತ
ರೈಲು ಹಳಿ ಕಾಮಗಾರಿಯಿಂದಾಗಿ ಮರವೂರಿನ ಕಿನ್ನಿಮುಗೇರ ಪ್ರದೇಶದ ಸುಮಾರು 55 ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವೆಡೆ ಕಾಲುದಾರಿಯಷ್ಟೇ ಇದೆ. ರಸ್ತೆ ಸಂಪರ್ಕವಿಲ್ಲದೆ ಇಲ್ಲಿಗೆ ಯಾವುದೇ ವಾಹನಗಳು ಬರುವುದಿಲ್ಲ. ಶಾಲಾ ಮಕ್ಕಳು, ದಿನಗೂಲಿ ಕಾರ್ಮಿಕರು, ವಯಸ್ಕರು ಸಹಿತ ಸುಮಾರು 170 ಮಂದಿ ಈ ರೈಲು ಹಳಿಯನ್ನೇ ದಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

10 ವರ್ಷಗಳಲ್ಲಿ 13 ಸಾವು
ಈ ಪ್ರದೇಶದಲ್ಲಿ ಒಟ್ಟು 10 ವರ್ಷಗಳಲ್ಲಿ 13 ಮಂದಿ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅದರಲ್ಲಿ ವಯಸ್ಕರೇ ಹೆಚ್ಚು. ಈ ಪ್ರದೇಶದಲ್ಲಿ ವಿಮಾನಗಳ ಹಾರಾಟ ವೇಳೆ ರೈಲು ಬರುವುದು ಕೇಳಿಸದೇ ಇರುವುದು ಈ ಅಪಘಾತಗಳಿಗೆ ಕಾರಣ ಎನ್ನುತ್ತಾರೆ ಸ್ಥಳೀಯರು.

18 ದನಗಳ ಸಾವು
ಸೆಪ್ಟಂಬರ್‌ ಒಂದೇ ತಿಂಗಳಲ್ಲಿ 18 ದನಗಳು ರೈಲಿನಡಿಗೆ ಬಿದ್ದು ಸಾವನ್ನಪ್ಪಿವೆ. ಇದರಲ್ಲಿ ಕ್ಲೆಮೆಂತ್‌ ಲೋಬೋ ಅವರ 6 ದನಗಳು ಸೇರಿವೆ. ಈ ಪ್ರದೇಶದಲ್ಲಿ ಎಲ್ಲ ಮನೆಗಳಲ್ಲಿ ದನಗಳನ್ನು ಸಾಕುತ್ತಿದ್ದಾರೆ. ರೈಲು ಹಳಿಯ ಬಳಿಯ ಹುಲ್ಲಿನ ಅಸೆಯಿಂದ ದನಗಳು ತಿನ್ನಲು ಹೋಗುತ್ತವೆ. ರೈಲು ಬಂದಾಗ ಯದ್ವಾತದ್ವಾ ಓಡುವ ದನಗಳು ರೈಲಿನಡಿಗೆ ಬಿದ್ದು ಸಾವನ್ನಪ್ಪುತ್ತಿವೆ. ಹೀಗೆ ದನಗಳು ಸಾವನ್ನಪ್ಪುವುದರಿಂದ ಹೆಚ್ಚಿನವರು ದನಗಳನ್ನು ಮಾರಾಟ ಮಾಡಿದ್ದಾರೆ. ಈಗ ಕೇವಲ 5 ಮನೆಗಳಲ್ಲಷ್ಟೇ ದನಗಳಿವೆ.

Advertisement

ಕೃಷಿ ಮಾಡಲು ಸಂಕಷ್ಟ
ಇಲ್ಲಿನ ಹೈನುಗಾರಿಕೆಯ ಜತೆಗೆ ಭತ್ತದ ಕೃಷಿ ಕೂಡ ಮಾಡಲಾಗು ತ್ತಿತ್ತು.  ಒಟ್ಟು 10 ಎಕ್ರೆ ಜಾಗದಲ್ಲಿ ಭತ್ತದ ಕೃಷಿಯಾಗುತ್ತಿತ್ತು, ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಕೃಷಿ ಮಾಡಲು ಸಮಸ್ಯೆಯಾಗಿದೆ. ಹೀಗಾಗಿ ಈ ಬಾರಿ ಕೇವಲ 3 ಎಕ್ರೆ ಜಾಗದಲ್ಲಿ ಭತ್ತದ ಕೃಷಿ ಮಾಡಲಾ ಗಿದೆ. ರಸ್ತೆ, ನೀರು ಸಹಿತ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಈವರೆಗೆ ಇಲ್ಲಿನ ಒಟ್ಟು 18 ಕುಟುಂಬಗಳು ಮನೆಯನ್ನೇ ಬಿಟ್ಟು ಹೋಗಿದ್ದಾರೆ. ಸಂಪರ್ಕ ರಸ್ತೆ ಇಲ್ಲದೇ ಮನೆಗಳಿಗೆ ಹೋಗಲು ಸಾಧ್ಯವಿಲ್ಲ, ನೀರಿನ ಪೈಪ್‌ ಹಾಕುವಂತಿಲ್ಲ. ಕೆಲವರು ಬಾಡಿಗೆ ಮನೆಯಲ್ಲಿದ್ದು, ಸೆಪ್ಟಂಬರ್‌ ಒಂದೇ ತಿಂಗಳಿನಲ್ಲಿ 4 ಕುಟುಂಬ ಸದಸ್ಯರು ಮನೆಯನ್ನು ತ್ಯಜಿಸಿದ್ದಾರೆ. ಒಂದು ತಿಂಗಳ ಹಿಂದೆ ಲಿಂಗಪ್ಪ ದೇವಾಡಿಗ ಎಂಬವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಮನೆಯಿಂದ ಕುರ್ಚಿಯಲ್ಲಿ ಕುಳ್ಳಿರಿಸಿ, ದಂಡಿಗೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರಸ್ತೆಯಿಲ್ಲದೇ ಕಾಲುದಾರಿಯಲ್ಲಿ ಕೊಂಡೊಯ್ದುದರಿಂದ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳು ಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಕಾಮಗಾರಿಗೂ ಅಡ್ಡಿ
ಈ ಪ್ರದೇಶದಲ್ಲಿ ಪರ್ಯಾಯ ರಸ್ತೆ ಇಲ್ಲದ ಕಾರಣ ರೈಲ್ವೇ ಕಾಮಗಾರಿಗೆ ತೊಡಕಾಗಿದೆ. ಕಾಮಗಾರಿಯ ಸಾಧನಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಬೇಕಾದರೆ ಅದು ಎರಡನೇ ರೈಲು ಹಳಿಯನ್ನು ಬಳಸಿ ಟ್ರಾಲಿ ಮೂಲಕ ಕೊಂಡೊಯ್ಯಲಾಗುತ್ತದೆ. ಬೇರೆ ರಸ್ತೆ ಇದ್ದರೆ ಅಗತ್ಯ ಸಾಮಗ್ರಿಗಳನ್ನು ಲಾರಿ ಮೂಲಕವೇ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಲ್ಲದೇ ವಿದ್ಯುತ್‌ ಚಾಲಿತ ರೈಲು ಇಲ್ಲಿ ಸಂಚರಿಸುವುದರಿಂದ ರೈಲು ಹಳಿಗಳಿಗೆ ರಕ್ಷಣಾ ಕವಚವನ್ನು ಮುಂದೆ ಹಾಕಲಾಗುತ್ತದೆ. ಆಗ ಇಲ್ಲಿನ ನಿವಾಸಿಗಳಿಗೆ ಕಾಲುದಾರಿಯೂ ಇಲ್ಲವಾಗುವ ಭೀತಿ ಇದೆ. ಇದರಿಂದ ಸಂಪರ್ಕ ಕಡಿತಗೊಳ್ಳುವ ಆತಂಕ ಉಂಟಾಗಿದೆ.

ಪರಿಶೀಲಿಸಿದ ಬಳಿಕ ಕ್ರಮ
ಈ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಅದರಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ಸಂಬಂಧಪಟ್ಟ ರೈಲ್ವೇ ಎಂಜಿನಿಯರುಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಅವರು ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದ ವಿಭಾಗ ವ್ಯವಸ್ಥಾಪಕರ ಪರವಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ. ಗೋಪಿನಾಥ್‌ ತಿಳಿಸಿದ್ದಾರೆ.

ಮುಂದಿನ ವಾರ ಭೇಟಿ
ಕಿನ್ನಿಮುಗೇರು ಪ್ರದೇಶದಲ್ಲಿ ರೈಲ್ವೇ ಕಾಮಗಾರಿಯಿಂದ ಅಲ್ಲಿನ ಜನರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಈಗಾಗಲೇ ಅಲ್ಲಿಗೆ ಭೇಟಿ ಕೂಡ ನೀಡಿದ್ದೇನೆ. ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಹಿನ್ನೆಲೆಯಲ್ಲಿ ಮುಂದಿನ ವಾರ ರೈಲ್ವೇ ಇಲಾಖೆ ಎಂಜಿನಿಯರ್‌ಗಳ ಜತೆಗೆ ಮತ್ತೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
– ನಳಿನ್‌ ಕುಮಾರ್‌
ಕಟೀಲು, ಸಂಸದ, ದ.ಕ

ಕಟ್ಟುವುದು ಗ್ರಾ.ಪಂ.ಗೆ ಕಷ್ಟ
ಇಲ್ಲಿ ರಸ್ತೆ ನಿರ್ಮಿ ಸಲು ರೈಲ್ವೇ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಸರಕಾರ ನಿಗದಿ ಪಡಿಸಿದ ಮೌಲ್ಯವನ್ನು ಕಟ್ಟಿದಲ್ಲಿ ರಸ್ತೆಗೆ ಜಾಗವನ್ನು 30 ವರ್ಷಕ್ಕೆ ಲೀಸ್‌ಗೆ ಕೊಡಲಾಗುವುದು ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊತ್ತವನ್ನು ಗ್ರಾ.ಪಂ. ಭರಿಸುವುದು ಕಷ್ಟ. ಈ ಭಾಗದಲ್ಲಿ ನೀರಿನ ಸಮಸ್ಯೆಯೂ ಕಾಡುತ್ತಿದ್ದು, ರೈಲು ಹಳಿ ಅಡ್ಡವಿರುವ ಕಾರಣ ಕುಡಿಯುವ ನೀರಿನ ಪೈಪ್‌ ಅಳವಡಿಸಲು ಸಾಧ್ಯವಾಗುತ್ತಿಲ್ಲ.
– ಗಣೇಶ್‌ ಅರ್ಬಿ, ಅಧ್ಯಕ್ಷ,
ಮಳವೂರು ಗ್ರಾ.ಪಂ

ಹಲವು ಬಾರಿ ಮನವಿ
ಈ ಪ್ರದೇಶ ಜನರಿಗೆ ಮಣ್ಣಿನ ರಸ್ತೆಯೇ ಸಂಪರ್ಕ ಕೊಂಡಿಯಾಗಿತ್ತು. ಅದನ್ನು ಮಣ್ಣು ಹಾಕಿ ಮುಚ್ಚಿ ರೈಲು ಹಳಿ ಮಾಡಲಾಗಿದೆ. ಈ ರಸ್ತೆ ವಿಮಾನ ದುರಂತದ ವೇಳೆಯೂ ಹೆಚ್ಚು ಉಪಯೋಗಕ್ಕೆ ಬಂದಿತ್ತು. ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಈ ರಸ್ತೆ ರೈಲ್ವೇ ಇಲಾಖೆಗೂ ಅಗತ್ಯವಾಗಿದೆ. ಇಲ್ಲಿ ರಸ್ತೆಯ ಅಗತ್ಯ ರೈಲ್ವೇಗೂ ಇದೆ. 5 ವರ್ಷಗಳಿಂದ ಸಂಪರ್ಕ ರಸ್ತೆಗೆ ಮನವಿ ಮಾಡುತ್ತಿ ದ್ದೇವೆ. ರೈಲ್ವೇ ಇಲಾಖೆ, ಸಂಸದರು, ಶಾಸಕರಿಗೆ, ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ.ಗೂ ಮನವಿ ಮಾಡಲಾಗಿದೆ. 
– ಸತೀಶ್‌ ದೇವಾಡಿಗ, ಸ್ಥಳೀಯ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next