Advertisement

Theft: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳವು

08:07 PM Jul 27, 2024 | Team Udayavani |

ಮಂಜೇಶ್ವರ: ಮೀಂಜ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಜು. 26ರಂದು ರಾತ್ರಿ ಚಿನ್ನಾಭರಣ ಹಾಗು ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

Advertisement

ಗರ್ಭಗುಡಿಯ ಬಾಗಿಲಿನ ಬೀಗ ಮುರಿಯಲಾಗಿದ್ದು, ಅದರೊಳಗಿದ್ದ ಬೆಳ್ಳಿಯ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ದೇವಸ್ಥಾನದ ಕಚೇರಿಯ ಲಾಕರ್‌ ಮುರಿಯಲೆತ್ನಿಸಿದ್ದು, ಆದರೆ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಭಕ್ತರು ಹರಕೆ ರೂಪದಲ್ಲಿ ನೀಡಿದ ಸುಮಾರು 10 ಪವನ್‌ ಚಿನ್ನಾಭರಣವನ್ನು ಸಣ್ಣ ಪೆಟ್ಟಿಗೆಯಿಂದ ದೋಚಿದ್ದಾರೆ.

ಜು. 26ರಂದು ರಾತ್ರಿ ಪೂಜೆಯ ಬಳಿಕ ದೇವಸ್ಥಾನಕ್ಕೆ ಬಾಗಿಲು ಮುಚ್ಚಲಾಗಿತ್ತು. ಶುಕ್ರವಾರ ಬೆಳಗ್ಗೆ ಸಿಬಂದಿ ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಕಳವು ನಡೆದಿರುವುದು ತಿಳಿದು ಬಂತು. ಸುತ್ತು ಗೋಪುರದ ಬಾಗಿಲನ್ನು ಕಳ್ಳರು ತೆರೆಯಲಿಲ್ಲ. ಬದಲಾಗಿ ಸುತ್ತು ಗೋಪುರದ ಛಾವಣಿಗೆ ಹತ್ತಿ ಕಳ್ಳರು ಒಳಗಿಳಿದು ಕಳವು ನಡೆಸಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.

ದೇವಸ್ಥಾನದ ಸಿ.ಸಿ. ಕೆಮರಾ ಪರಿಶೀಲಿಸಿದಾಗ ಅದರಲ್ಲಿ ಗುರುವಾರ ರಾತ್ರಿ 11.30ರ ವೇಳೆ ಕೋಟು ಹಾಗು ಕೈಗಳಿಗೆ ಗ್ಲೌಸ್‌ ಧರಿಸಿದ ವ್ಯಕ್ತಿಯೋರ್ವ ಕಳವು ನಡೆಸುವ ದೃಶ್ಯ ಕಂಡು ಬಂದಿದೆ. ಈ ದೃಶ್ಯದ ಆಧಾರದಲ್ಲಿ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳ್ಳರು ವಾಹನದಲ್ಲಿ ಬಂದಿರಬಹುದೆಂದು ಶಂಕಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪರಿಸರದ ಸಿ.ಸಿ. ಕೆಮರಾಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಹಚ್ಚುವ ಕ್ರಮ ಕೈಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next