ಕೊರಟಗೆರೆ: ರೇಷನ್ ತರಲು ನ್ಯಾಯಬೆಲೆ ಅಂಗಡಿಗೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಹೊಂಚು ಹಾಕಿ ಚಿನ್ನ ಹಾಗೂ ನಗದು ಕಳವು ಮಾಡಲಾಗಿದ್ದ ಪ್ರಕರಣವನ್ನು ಭೇದಿಸಿದ ಕೋಳಾಲ ಪೊಲೀಸ್ ತಂಡ 4 ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೋಬಳಿಯ ಸಿಂಗ್ರಿಹಳ್ಳಿ ಗೊಲ್ಲಹಳ್ಳಿಯ ಜಿ.ಆರ್. ರಂಗನಾಥಗೌಡ(19) ಬಂಧಿತ ಆರೋಪಿ.
ಘಟನೆ ವಿವರ: ಸೆ.14 ರಂದು ಕೊರಟಗೆರೆ ತಾಲೂಕಿನ ವಜ್ಜನಕುರಿಕೆ ಗ್ರಾಮದ ಲಕ್ಷ್ಮಮ್ಮ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬಾಗಿಲು ಹೊಡೆದು ಮನೆಯ ಬೀರಿನ ಬಾಗಿಲನ್ನು ಕಬ್ಬಿಣದ ಆಯುಧದಿಂದ ಮುರಿದು ಅದರಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿತ್ತು.
ಕಳ್ಳತನದ ಆರೋಪಿ ರಂಗೇಗೌಡ ಕಳ್ಳತನ ನಡೆದ ದಿನ ವಜ್ಜಿನಕುರಿಕೆ ಗ್ರಾಮದಲ್ಲಿ ಬೆಳಿಗ್ಗೆಯಿಂದ – ಮಧ್ಯಾಹ್ನದವರೆಗೂ ಈ ಗ್ರಾಮದಲ್ಲಿ ಅಲೆದಾಡುತ್ತಿದ್ದ ಎನ್ನಲಾಗಿದ್ದು, ಕಳ್ಳತನಕ್ಕೆ ಹೊಂಚು ಹಾಕಿ ಕಾಯುತ್ತಿದ್ದು, ಮನೆಯವರು ಮನೆಯಿಂದ ಹೋದ ನಂತರ ಯಾರೂ ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಕಳ್ಳತನ ಪ್ರಕರಣದ ಬೆನ್ನತ್ತಿದ ಕೊರಟಗೆರೆ ಸಿಪಿಐ ಕೆ ಸುರೇಶ್ ಮಾರ್ಗದರ್ಶನದಂತೆ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಕಳ್ಳತನದ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಈ ಹಿಂದೆ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಸ್. ಗೊಲ್ಲಹಳ್ಳಿಯ ರಂಗನಾಥಗೌಡ ಕಳ್ಳತನದ ಸಂದರ್ಭದಲ್ಲಿ ಈ ಮನೆಯ ಆಸು ಪಾಸು ಓಡಾಡುತ್ತಿದ್ದನ್ನು ಗಮನಿಸಿ ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ 57.5 ಗ್ರಾಂ ಚಿನ್ನಾಭರಣ ಮತ್ತು 18 ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಅಡಿಷನಲ್ ಎಸ್ ಪಿ ಉದೇಶ್ ರವರ ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ ವೆಂಕಟೇಶ್ ನಾಯ್ಡು ನಿರ್ದೇಶನದಂತೆ ಕೊರಟಗೆರೆ ಸಿಪಿಐ ಕೆ ಸುರೇಶ್ ಸಹಕಾರದೊಂದಿಗೆ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಕಳ್ಳತನ ಕೇಸಿನ ಬೆನ್ನತ್ತಿ ಕ್ರೈಂ ಬ್ರಾಂಚ್ ನ ಮೋಹನ್ ಕುಮಾರ್, ಸೈಯದ್ ರಿಫತ್ ಅಲಿ, ಮಂಜುನಾಥ್ , ಪುಟ್ಟ ಸ್ವಾಮಿ ಈ ಪ್ರಕರಣ ಭೇದಿಸಲು ಸಹಕಾರ ನೀಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣವನ್ನ 4 ದಿನದಲ್ಲಿ ಭೇದಿಸಿದ ಕೊರಟಗೆರೆ ಸಿಪಿಐ ಸುರೇಶ್, ಪಿಎಸ್ಐ ಮಹಾಲಕ್ಷ್ಮಮ್ಮ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅಭಿನಂದಿಸಿದ್ದಾರೆ.