Advertisement

ಯುವಕರು ಸಮಾಜ ನೋಡುವ ದೃಷ್ಟಿಕೋನ ಬದಲಾಗಲಿ

05:23 PM Feb 07, 2018 | |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಯುವ ಜನಾಂಗ ಸಮಾಜವನ್ನ ನೋಡುವಂತಹ ದೃಷ್ಟಿಕೋನ ಬದಲಾಯಿಸಿಕೊಳ್ಳುವ ಅಗತ್ಯತೆ ಇದೆ ಎಂದು ಖ್ಯಾತ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌(ಚಂಪಾ) ಅಭಿಪ್ರಾಯಪಟ್ಟಿದ್ದಾರೆ.

Advertisement

ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ವೈಚಾರಿಕತೆ… ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯಲ್ಲಿ ಸಮಾಜವನ್ನು ನೋಡುವಂತಹ ದೃಷ್ಟಿಕೋನ ಬದಲಾಗಲೇಬೇಕು ಎಂದು ಪ್ರತಿಪಾದಿಸಿದರು. ಯುವಜನಾಂಗದಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸುವ ಮೂಲಕ ಆರೋಗ್ಯಕರ
ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಣದ ಪಾತ್ರ ಅತಿ ಮುಖ್ಯ. ಅಸಮಾನತೆ, ಜಾತಿಪದ್ದತಿಯಿಂದಾಗಿ ಸಾಮಾಜಿಕ ನ್ಯಾಯ ಕಳೆದೇ ಹೋಗಿದೆ. ಇಂತಹ  ಸಮಾಜದಲ್ಲಿರುವ ಯುವಜನತೆ, ಇರುವಂತಹವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮೂಢರಾಗದೇ ಪ್ರಶ್ನಿಸುವ ಮತ್ತು ಸರಿ -ತಪ್ಪು ಆಲೋಚಿಸುವ
ಮನೋಭಾವನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್‌ ವ್ಯಕ್ತಿಗಳು ಕನಸು ಕಂಡಂತಹ ಸಮಾನತೆಯ ಸಮಾಜ ಸೃಷ್ಟಿಸಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.

ಯುವಶಕ್ತಿ ಒಗ್ಗಟ್ಟು ಮತ್ತು ಸಮಚಿತ್ತದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಇಂದಿನ ಯುವಜನತೆ ಕೇವಲ ಶಿಕ್ಷಣವಂತರಾದರೆ ಸಾಲದು.
ಸಾಮಾಜಿಕ ಕಳಕಳಿ ಅಲ್ಪ ಮಟ್ಟದಲ್ಲಾದರೂ ಇರಬೇಕು. ಶಿಕ್ಷಣವನ್ನು ಬಳಸಿಕೊಂಡು ಸಾಮಾಜಿಕ ಸ್ವಾಸ್ಥ ಕಾಪಾಡುವಂತಹ ಪ್ರಯತ್ನ ಮಾಡಬೇಕು
ಎಂದು ತಿಳಿಸಿದರು. ಪ್ರಭಾರ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಯುವಜನತೆಗೆ ಹಿರಿಯ ಸಾಹಿತಿಗಳ ವಿಚಾರಧಾರೆಗಳು ಅವಶ್ಯಕವಾಗಿವೆ. ಹಿರಿಯರ, ಮಾರ್ಗದರ್ಶಕರ ಜೀವನಾನುಭವ ಹಾಗೂ ಅವರು ಕಂಡ ಸಮಾಜವನ್ನು ತಿಳಿಯಲು ಇಂತಹ ಸಂವಾದ ಕಾರ್ಯಕ್ರಮ ಪೂರಕವಾಗಿವೆ ಎಂದು ಹೇಳಿದರು. ಕುಲಸಚಿವ(ಆಡಳಿತ) ಪ್ರೊ| ಶರಣಪ್ಪ ವೈ. ಹಲಸೆ, ಪರೀಕ್ಷಾಂಗ ಕುಲ ಸಚಿವ ಪ್ರೊ. ಗಂಗಾಧರ್‌ನಾಯ್ಕ, ಇಂಗ್ಲಿಷ್‌ ವಿಭಾಗದ ಅತಿಥಿ ಉಪನ್ಯಾಸಕ ಎ.ಎಚ್‌. ಸಾಗರ್‌, ಮಲ್ಲೇಶ್‌, ಹೇಮಾ ಇತರರು ಇದ್ದರು. 

ಸಿದ್ಧಗಂಗಾ ಶ್ರೀ, ಸುತ್ತೂರು ಶ್ರೀ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬರಲಿ
ದಾವಣಗೆರೆ: ನಾವು ಸಹ ಬಸವಾದಿ ಶರಣ ಚಳವಳಿಯಿಂದಲೇ ಬಂದವರು ಎಂಬ ಸತ್ಯವ ಅರಿತು ವಿರಕ್ತ ಮಠಾಧೀಶರು ಸಹ ಲಿಂಗಾಯತ ಧರ್ಮದ ಹೋರಾಟದ ಆಂದೋಲನಕ್ಕೆ ಬಂದು ಸೇರಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌ ಮನವಿ ಮಾಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಬಹು ದೊಡ್ಡ  ವಿರಕ್ತ ಮಠಾಧೀಶರಾದ ಸಿದ್ದಗಂಗೆಯ ಡಾ| ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀಗಳು ಸಹ ಬಸವಣ್ಣನವರು ಹೇಳಿದಂತೆ ಅನ್ನ,  ಅಕ್ಷರ ದಾಸೋಹದಲ್ಲಿ ತೊಡಗಿಕೊಂಡಿದ್ದಾರೆ. ನಾವು ಸಹ ಬಸವಾದಿ ಶರಣ ಚಳವಳಿಯ
ಉತ್ಪನ್ನಗಳು ಎಂಬ ದಿಕ್ಕಿನಲ್ಲಿ ಆಲೋಚನೆ ಮಾಡಿ ಹೋರಾಟಕ್ಕೆ ಬರಬೇಕು ಎಂದರು.

ಲಿಂಗಾಯತ ಚಳವಳಿಗೆ 800 ವರ್ಷದ ಇತಿಹಾಸವೇ ಇದೆ. ಬಸವಣ್ಣನವರನ್ನ ಕೇಂದ್ರ ಬಿಂದುವಾಗಿಟ್ಟುಕೊಂಡು ಶರಣರು ಜಾತಿ, ಕುಲ, ಮತ, ಪಂಥ ಮೀರಿದ ವೈಚಾರಿಕ ಆಂದೋಲನ ನಡೆಸಿದರು. ಬಸವಣ್ಣನ ಕಾಲದ ನಂತರ ಶರಣ ಚಳವಳಿಯ ಪ್ರಭಾವ ಅಂತರ್ಗಾಮಿಯಾಗಿಯೇ ಇತ್ತು. ಕೆಲ
ಕಾಲದ ನಂತರ ವೀರಶೈವ ಪೋಷಾಕು ಧರಿಸಿ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯಿತು. ಈಗ ಮತ್ತೆ ಲಿಂಗಾಯತ ಧರ್ಮದ ಒಳ ಸತ್ಯ
ಹೊರ ಬರುತ್ತಿದ್ದು ಆಂದೋಲನದ ರೂಪ ಪಡೆಯುತ್ತಿದೆ. ವೀರಶೈವ, ಜಂಗಮರು ಸಹ ಲಿಂಗಾಯತ ಪಂಗಡದ ಅನೇಕ ಪಂಗಡಗಳಲ್ಲಿ ಒಂದು ಎಂದು ಸಮಿತಿಯ ಮುಂದೆ ದಾಖಲೆ ಹಾಜರಪಡಿಸಲಾಗುತ್ತಿದೆ. ಜಂಗಮೇತರ, ವೀರಶೈವೇತರ ಲಿಂಗಾಯತ ಧರ್ಮದ ಜನಾಂದೋಲನ ಪ್ರಾರಂಭವಾಗಿದೆ.
ಅಲ್ಪಸಂಖ್ಯಾತ ಧರ್ಮ ಮನ್ನಣೆ ಕಾನೂನು ಪ್ರಕಾರ ಬೇಕು ಎಂಬ ಹೋರಾಟ ನಡೆಯುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next