Advertisement

ಯುವ ದಸರಾದಲ್ಲಿ ಹೊರಬಂತು “ಭೈರಾದೇವಿ’ಹಾಡು

12:50 PM Oct 11, 2019 | Lakshmi GovindaRaju |

ಬಹುಕಾಲದ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಹಿರಿತೆರೆಗೆ ರೀ-ಎಂಟ್ರಿ ಕೊಡುತ್ತಿರುವ ಚಿತ್ರ ಎಂದೇ ಹೇಳಲಾಗುತ್ತಿರುವ, ಮಹಿಳಾ ಪ್ರಧಾನ ಚಿತ್ರ “ಭೈರಾದೇವಿ’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಭೈರಾದೇವಿ’ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದ್ದು, ಅದರ ಮೊದಲ ಭಾಗವಾಗಿ ಚಿತ್ರದ ಆಡಿಯೋ ಅದ್ಧೂರಿಯಾಗಿ ಹೊರಬಂದಿದೆ.

Advertisement

ಇತ್ತೀಚೆಗೆ ನಡೆದ ವಿಶ್ವವಿಖ್ಯಾತ ಮೈಸೂರು ದಸರಾದ ಯುವ ದಸರಾದ ವರ್ಣರಂಜಿತ ಕಾರ್ಯಕ್ರಮದಲ್ಲಿ “ಭೈರಾದೇವಿ’ ಚಿತ್ರದ ಆಡಿಯೋವನ್ನು ಹೊರತರಲಾಯಿತು. ಇದೇ ವೇಳೆ ಸಂಸದ ಪ್ರತಾಪ ಸಿಂಹ, ನಟ ರಮೇಶ್‌ ಅರವಿಂದ್‌, ನಟಿ ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು, ಸಾವಿರಾರು ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇನ್ನು “ಶಮಿಕಾ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿ, ನಿರ್ಮಿಸುತ್ತಿರುವ “ಭೈರಾದೇವಿ’ ಚಿತ್ರಕ್ಕೆ ಶ್ರೀ ಜೈ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಜೆ.ಎಸ್‌.ವಾಲಿ ಛಾಯಾಗ್ರಹಣ, ರವಿಚಂದ್ರನ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಕೆ.ಕೆ ಸೆಂಥಿಲ್‌ ಪ್ರಸಾದ್‌ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ರಮೇಶ್‌ ಅರವಿಂದ್‌, ರವಿಶಂಕರ್‌, ರಂಗಾಯಣ ರಘು, ಶಿವರಾಂ, ಸ್ಕಂದ ಅಶೋಕ್‌, ಸುಚೇಂದ್ರ ಪ್ರಸಾದ್‌, ಮಾಳವಿಕಾ ಅವಿನಾಶ್‌, ಪದ್ಮಜಾ ರಾವ್‌ ಮುಂತಾದವರಿದ್ದಾರೆ. ಕಾಶಿ, ಬೆಂಗಳೂರು, ತಮಿಳುನಾಡು ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ತಿಂಗಳ ಅಂತ್ಯಕ್ಕೆ “ಭೈರಾದೇವಿ’ಯನ್ನು ತೆರೆಗೆ ತರುವ ಪ್ಲಾನ್‌ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next