Advertisement

ಎಂದೆಂದಿಗೂ ಪ್ರಸ್ತುತ ವಿಶ್ವ ಮಾನವ ಸಂದೇಶ

02:11 AM Feb 16, 2021 | Team Udayavani |

ಜಗತ್ತು ಇಂದು ಗೊಂದಲದ ಗೂಡಾಗಿದೆ. ಮನುಷ್ಯ ಪ್ರಬುದ್ಧವಾದ ಬುದ್ಧಿಮತ್ತೆಯನ್ನು ಪಡೆದ ಜೀವಿ ಎಂಬ ಹೆಗ್ಗಳಿಕೆ ಹೊಂದಿದ್ದರೂ ಮನುಜ ಕುಲವನ್ನು ಕಾಡುವ ಮೂಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂಬುದು ಸೋಜಿಗದ ವಿಚಾರ. ಧರ್ಮದ ಆಧಾರದ ಮೇಲೆ ಇಂದು ಜಗತ್ತು, ದೇಶ ಗಳು, ಹಳ್ಳಿಗಳು ಅಷ್ಟೇ ಏಕೆ ಬಡಾವಣೆಗಳು ಕೂಡ ಒಡೆದ ಮನೆಯಾಗಿವೆ. ಪ್ರಾಬಲ್ಯಕ್ಕಾಗಿ ಪ್ರಯತ್ನಗಳು ನಡೆಯುತ್ತ ಲೋಕದ ಅಶಾಂತಿಗೆ ಕಾರಣವಾಗಿವೆ.

Advertisement

ಮಾನವನ ವಿಕಾಸದ ಹಾದಿಯನ್ನು ಅವಲೋಕಿಸಿ ದರೆ, ಕಾಲಕಾಲಕ್ಕೆ ಮಹಾಪುರುಷರು ಆಗಿಹೋಗಿ ದ್ದಾರೆ. ಕೆಲವರ ಚಿಂತನೆಗಳು ಬೆಳೆದು ಧರ್ಮಗಳಾಗಿವೆ. ಒಟ್ಟು ಸೇರಿ ಬದುಕಬೇಕೆಂಬ ಆಶಯದ ಮಹಾತ್ಮರ ವಾಣಿಗಳು ತಲೆಮಾರುಗಳ ಬಳಿಕ ಮಾದಕವಾಗಿ ಸಮಾಜಕ್ಕೆ ಮಾರಕಗಳಾಗುತ್ತಿರುವುದನ್ನು ಇಂದಿನ ಜನಾಂಗದ ಗ್ರಹಿಕೆಯ ಕೊರತೆಗಳೆನ್ನಬೇಕೇ? ಮತದ ಹೆಸರಿನಲ್ಲಿ ಯುದ್ಧಗಳು, ಜಾಗತಿಕ ಕ್ಷೋಭೆ, ಭಯೋ ತ್ಪಾದನೆ ಸಾಮಾನ್ಯವಾಗುತ್ತಿದ್ದು, ಜಾಗತಿಕ ಅಶಾಂತಿಗೆ ಹೇತುಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಮಾನವ ಸಂದೇಶ’ ಪ್ರಸ್ತುತವೆನಿಸುತ್ತದೆ.

ಹುಟ್ಟುವ ಪ್ರತೀ ಮಗುವೂ ವಿಶಾಲ ಮನೋಧರ್ಮ ವನ್ನು ತನ್ನದಾಗಿಸಿಕೊಂಡು ಹುಟ್ಟುತ್ತದೆ. ಅದಕ್ಕೆ ಸಿಗುವ ಆರಂಭಿಕ ಅನುಭವ ಮತ್ತು ಬೋಧನೆಯಂತೆ ಮಗು ಬೆಳೆಯುತ್ತದೆ. ಇಂದಿನ ಪೈಪೋಟಿಯಲ್ಲಿ ವರ್ಣ, ಜಾತಿ, ಮತ, ದೇಶಗಳ‌ ಕಟ್ಟುಪಾಡುಗಳಿಂದ ಮಗುವಿನ ಮನಸ್ಸು ಪ್ರಭಾವಿತವಾಗುತ್ತದೆ. ಆ ಅಚ್ಚಿನಲ್ಲಿ ಬೆಳೆದ ಮಗು ಒಂದು ಸಂಕುಚಿತ ಮನೋಧರ್ಮದಲ್ಲಿ ಬೆಳೆಯುತ್ತಾ ಜಾಡ್ಯವನ್ನು ಅಂಟಿಸಿಕೊಳ್ಳುತ್ತದೆ.

ಮತಗಳು ಬೇರೆ ಬೇರೆ ಕಾಲಮಾನದ ಅವತರಣಿಕೆ ಗಳು. ಅಂದಿನ ಪರಿಸ್ಥಿತಿಗೆ ಅನುಸಾರವಾಗಿ ಧರ್ಮದ ಚಿಂತನೆಗಳು ಹರಳುಕಟ್ಟುವುದು ಸ್ವಾಭಾವಿಕವೂ ಸೂಕ್ತವೂ ಆಗಿದೆ. ಬದಲಾವಣೆ ಯುಗ ಧರ್ಮ. ಆದ್ದ ರಿಂದ ಮತೀಯ ಚಿಂತನೆಗಳು ಬದಲಾಗುತ್ತಿರುವ ಕಾಲಕ್ಕೆ ಅನುಸಾರವಾಗಿ ತಮ್ಮ ಚಿಂತನೆಗಳನ್ನು ಮರು ಚಿಂತನೆಗೊಳಪಡಿಸುವುದು ಅಗತ್ಯ. ಹಾಗಾಗದಿದ್ದರೆ ಅದರ ಚಿಂತನೆಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುವ “ವಿಶ್ವ ಮಾನವ ಸಂದೇಶ’ ಆಕರ್ಷಕವೆನಿಸುತ್ತದೆ.

ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶ ವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮಗು ಹುಟ್ಟುವಾಗ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದು ಅವರು ವಿಷಾದಿಸುತ್ತಾರೆ. ವಿಶ್ವ ಮಾನವ ಸಂದೇಶ ಸರಳ. ಮನುಜ ಕುಲ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳ ಮೇಲೆ ಈ ದರ್ಶನ ನಿಂತಿದೆ. ಮಾನವ ಕುಲ ಎಂದರೆ ಎಲ್ಲರೂ ಒಂದೇ ಕುಲದ ಸದಸ್ಯರೆನ್ನುವ ತಿಳಿವಳಿಕೆ. ವಿಶ್ವ ಪಥವೆಂದರೆ ಎಲ್ಲರ ಗುರಿ ವಿಶ್ವದ ಒಳಿತನ್ನು ಸಾಧಿಸುವುದು. ಸರ್ವೋದಯವೆಂದರೆ ಒಬ್ಬ ವ್ಯಕ್ತಿಯ ಪ್ರಗತಿ ಮಾತ್ರವಲ್ಲ, ಇಡೀ ಜಗತ್ತಿನ ಏಳಿಗೆ. ಸಮನ್ವಯ ಎಂದರೆ ಪರಸ್ಪರ ಸಿಡಿದು ಹೋಗುವುದಲ್ಲ;

Advertisement

ಮನುಷ್ಯರೊಳಗೆ ಬೆಳೆಯಬೇಕಾದ ತಿಳಿವಳಿಕೆ, ಹೊಂದಾಣಿಕೆ. ಪೂರ್ಣದೃಷ್ಟಿ ಎಂದರೆ ಮಿತ-ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ, ಪಾರಮಾರ್ಥಿಕ ಎಲ್ಲವನ್ನೂ ಭಗವದ್‌ ದೃಷ್ಟಿಯಿಂದ ಕಾಣುವ ವಿಶಾಲ ದೃಷ್ಟಿ. ಆದರ್ಶ ಸಮಾಜವೆಂದರೆ ಸಮಾನತೆಯ ಮೇಲೆ ನಿಂತ ಸಮಾಜ ಎಂದು ಸರಳವಾಗಿ ಅರ್ಥೈಸಬಹುದು. ಇದೇ ಮೂಲ ಸಂದೇಶವನ್ನು ಪಂಪನ “ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕಾವ್ಯದ ಮಾತು ಸಾರುತ್ತದೆ. ಇದು ಸಾಧ್ಯವಾಗಬೇಕಾದರೆ ಇಂದಿನ ಮತ, ಉಪಮತಗಳ ಸೀಳು ಕೊನೆಗೊಳ್ಳಬೇಕು.

ಉತ್ತಮ ವಿದ್ಯಾಭ್ಯಾಸ ಪ್ರತಿಯೊಬ್ಬನಿಗೆ ತನ್ನ ದೇವರನ್ನು ಕಂಡುಕೊಳ್ಳಲು ಸಹಾಯ ಮಾಡಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಾಗ ಪ್ರತಿಯೊಬ್ಬರೂ ತಮ್ಮ ದೇವರನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಮತಗಳಾಗಲು ಸಾಧ್ಯ! ಮತವೆನ್ನುವುದು ಪ್ರತಿಯೊಬ್ಬನ ಖಾಸಗಿ ಆವಿಷ್ಕಾರ. ಇಂತಹ ವಿಶ್ವಮಾನವ ದರ್ಶನದಲ್ಲಿ ಮತ ಪ್ರಾಬಲ್ಯವನ್ನು ಸಾಧಿಸಲು ಪೈಪೋಟಿ ಇಲ್ಲ. ಹುಟ್ಟಿದ ಪ್ರತೀ ಮಗುವನ್ನು ವಿಶ್ವ ಮಾನವನನ್ನಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯೂ ತುರ್ತೂ ಆಗಿದೆ. ಇಂದು ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಉತ್ತರವನ್ನು ಇದು ತನ್ನ ಬಸಿರಲ್ಲಿ ಹೊತ್ತಿದೆ.

ಪ್ರತಿಯೊಬ್ಬರಲ್ಲೂ ದೇವರಿದ್ದಾನೆ
ವಿಶ್ವ ಮಾನವ ಸಂದೇಶದ ಮೂಲ ಬೀಜವನ್ನು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಕಾಣಬಹುದು. ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೋ ಭಾಷಣದಲ್ಲಿ ಮಾನವ ಸಮಾನತೆಯನ್ನೂ ವ್ಯಕ್ತಿ ಸ್ವಾತಂತ್ರ್ಯವನ್ನೂ ಪ್ರತಿಪಾದಿಸಿದರು. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆದ್ದರಿಂದ ಪ್ರತಿಯೊಬ್ಬರಿಗೂ ತಾನು ಕಂಡುಕೊಂಡ ದೇವರನ್ನು ಪೂಜಿಸುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅವರು ವರ್ಣ ಮತ್ತು ಜಾತಿವಾದವನ್ನು ವಿರೋಧಿಸಿ, ಸಮಾನತೆಯನ್ನು ಪ್ರತಿಪಾದಿಸಿದರು. ಅವರು ರಾಮಕೃಷ್ಣ ಮಿಶನ್‌ ಸ್ಥಾಪಿಸಿ ತನ್ನ ಗುರುಗಳ ಚಿಂತನೆಗಳನ್ನೂ ತನ್ನ ದೃಷ್ಟಿಕೋನದಲ್ಲಿ ವಿಶ್ವಾದ್ಯಂತ ಪ್ರತಿಪಾದಿಸುತ್ತಾ ಬಂದರು. ರಾಮಕೃಷ್ಣ ಪರಮಹಂಸರ ಭಕ್ತರಾದ ಕುವೆಂಪು ಅವರು ಈ ಮೂಲ ಸಾರದ ಆಧಾರದ ಮೇಲೆ ವಿಶ್ವ ಮಾನವ ಸಂದೇಶವನ್ನು ತಮ್ಮ ಸಾಹಿತ್ಯದಲ್ಲೂ ಚಿಂತನೆಗಳಲ್ಲೂ ಪ್ರತಿಪಾದಿಸಿದರು. ಅವರ ಈ ಚಿಂತನೆಗಳು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ.

– ಡಾ| ಕೊಳ್ಚಪ್ಪೆ ಗೋವಿಂದ ಭಟ್‌, ತಿಲಕ್‌ ನಗರ

Advertisement

Udayavani is now on Telegram. Click here to join our channel and stay updated with the latest news.

Next