Advertisement

ದೇಶದ ಸುಭಿಕ್ಷೆಗೆ ಯುವಜನತೆ ಬೇಕು

11:30 PM Dec 11, 2020 | mahesh |

ಯುವಜನರು ಜವಾಬ್ದಾರಿ ಹೊರಬೇಕಾದ ಅನಿವಾರ್ಯ ಇದೆ. ಅವರನ್ನು ಸರಿದಾರಿಯಲ್ಲಿ ಕರೆದೊಯ್ಯುವುದು ಆವಶ್ಯಕವೂ ಆಗಿದೆ. ಗ್ರಾಮೀಣ ಪ್ರದೇಶದಿಂದ ನಾಯಕರು ಬೆಳೆಯ ಬೇಕು ಮತ್ತು ಅಧಿಕಾರ ವಿಕೇಂದ್ರೀಕರಣದ ಸದುದ್ದೇಶದಿಂದ ಪಂಚಾಯತ್‌ ರಾಜ್‌ ವ್ಯವಸ್ಥೆ ಯನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ನಮ್ಮ ಆಡಳಿತ ವ್ಯವಸ್ಥೆಯ ತಳಪಾಯದಂತಿ ರುವ ಗ್ರಾಮ ಪಂಚಾಯತ್‌ ಆಡಳಿತದಲ್ಲಿ ಯುವಶಕ್ತಿಯ ಭಾಗೀದಾರಿಕೆ ಅತೀ ಮುಖ್ಯ ವಾಗಿದೆ. ಇಂದಿನ ಆಧುನಿಕ ಜಗತ್ತಿನ ನಾಗಾ ಲೋಟದಲ್ಲಿ ಯುವಜನತೆಯ ಪಾತ್ರ ಮಹತ್ವ ದ್ದಾಗಿರುವುದರಿಂದ ಅವರು ಆಡಳಿತ ವ್ಯವಸ್ಥೆಯ ಭಾಗವಾಗಲೇಬೇಕಿದೆ.

Advertisement

ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ರಾಜಕೀಯ ಇರಬಾರದು. ಅರ್ಹರ ಆಯ್ಕೆಗಾಗಿ ಚುನಾವಣೆಯೇ ಹೊರತು ರಾಜಕೀಯ ಸ್ಪರ್ಧೆ ಗಾಗಿ ಪಂಚಾಯತ್‌ ಚುನಾವಣೆಯಲ್ಲ. ನಾನು 1960ರಿಂದ ಮೊದಲ 8 ವರ್ಷ ಮಂಡಲ ಪಂಚಾಯತ್‌ ಸದಸ್ಯನಾಗಿಯೂ ಅನಂತರದ 16 ವರ್ಷ (1984)ಅಧ್ಯಕ್ಷ ನಾಗಿಯೂ ಇದ್ದೆ. ಅನಂತರ ಶಾಸಕನಾದೆ. ಆಗ ಸ್ಥಳೀಯಾ ಡಳಿತಗಳಲ್ಲಿ ರಾಜಕೀಯ ಹಸ್ತ ಕ್ಷೇಪ ಇರಲಿಲ್ಲ. ಆದರೆ ಈಗ ಪಕ್ಷರಹಿತ ಚುನಾವಣೆ ಆಗಿ ಉಳಿ ದಿಲ್ಲ. ಎಲ್ಲ ಪಕ್ಷದವರೂ ತಮ್ಮ ಬೆಂಬಲಿಗರು ಎನ್ನುವ ಮೂಲಕ ಪಂಚಾಯತ್‌ಗೆ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದಾರೆ.

ಮದ್ರಾಸ್‌ ಆ್ಯಕ್ಟ್, ಹಳೆಮೈಸೂರು ಆ್ಯಕ್ಟ್ ಇದ್ದಾಗ ಪಂಚಾಯತ್‌ಗೆ ಅಧಿಕಾರ ಇತ್ತು. ಈಗ ಅಧಿಕಾರಿಗಳ ಹಸ್ತಕ್ಷೇಪವೇ ಹೆಚ್ಚಾಗಿದೆ. ರಾಮಕೃಷ್ಣ ಹೆಗಡೆ, ನಜೀರ್‌ಸಾಬ್‌ರಂಥವರು ಪಂಚಾಯತ್‌ರಾಜ್‌ನಲ್ಲಿ ಉತ್ತಮ ಕೆಲಸ ಮಾಡಲು ಅವಕಾಶ ನೀಡಿದ್ದರು. ಇದರಿಂದಾಗಿ ಅಂದಿನ ಮಂಡಲ ಪಂಚಾಯತ್‌ಗಳು ಊರಿನ ಅಭಿವೃದ್ಧಿ ಮಾಡಿದವು. ಈಗ ಅಂತಹ ರಾಜಕೀಯ ವ್ಯವಸ್ಥೆಯೇ ಇಲ್ಲ. ಅಷ್ಟಲ್ಲದೇ ಪಂಚಾಯತ್‌ ಚುನಾವಣೆಗೂ ಒಂದೇ ಪಕ್ಷದ ಬೆಂಬಲಿಗರೊಳಗೇ ಪೈಪೋಟಿ ಎಂಬ ಸ್ಥಿತಿಯೂ ಬಂದಿದೆ. ನಾನು ಇತ್ತೀಚೆಗೆ ಕೆಲವು ಶಾಸಕರ ಬಳಿ ಮಾತಾನಾಡುವಾಗ “ಟಿಕೆಟ್‌ ಕೊಡಿಸಿ’ ಎಂದು ಜನರು ಬರುತ್ತಿದ್ದಾರೆ ಎಂದರು!. ಇದು ಇಂದಿನ ಪಂಚಾಯತ್‌ನ ಪರಿಸ್ಥಿತಿ. ಇವೆಲ್ಲದರ ಪರಿಣಾಮವಾಗಿ ಯೋಗ್ಯರು ಸ್ಪರ್ಧೆಯಿಂದ ಹಿಂದೆ ಉಳಿಯಬೇಕಾಗುತ್ತದೆ. ಇದು ಸಹಜ ವಾಗಿಯೇ ಪಂಚಾಯತ್‌ ಆಡಳಿತದ ಮೇಲೆ ದುಷ್ಟಪರಿಣಾಮವನ್ನು ಬೀರುತ್ತದೆ.
ಇನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷ-ಉಪಾ ಧ್ಯಕ್ಷರ ಮೀಸಲಾತಿ ಚುನಾವಣೆಗೆ ಮೊದಲೇ ಪ್ರಕಟವಾಗಬೇಕು. ಇಲ್ಲದೇ ಇದ್ದರೆ ರಾಜ ಕೀಯ ಲಾಭಕ್ಕಾಗಿ ಮೀಸಲಾತಿ ಬಂದು ನಿಜ ವಾದ ಸೇವಾಕಾಂಕ್ಷಿಗಳು ಅವಕಾಶ ವಂಚಿತರಾಗ ಬೇಕಾಗುತ್ತದೆ. ಚುನಾವಣೆ ಬಳಿಕ ಅಧ್ಯಕ್ಷ ಮೀಸ ಲಾತಿ ಪ್ರಕಟ ಮಾಡುವುದು ಒಳ್ಳೆಯ ವ್ಯವಸ್ಥೆ ಅಲ್ಲ.

ಪಂಚಾಯತ್‌ ಅಧ್ಯಕ್ಷನಿಗೆ ಊರಿನ ಸಮಸ್ತ ಪರಿಚಯ ಇರಬೇಕು. ಭೌಗೋಳಿಕ ಪರಿಚಯ ಹಾಗೂ ಪ್ರಮುಖ ಸಮುದಾಯಗಳ ಕುರಿತು ತಿಳಿದಿರಬೇಕಾದುದು ಅತೀ ಮುಖ್ಯ.

ಪಂಚಾಯತ್‌ಗಳಿಗೆ ಸಣ್ಣ ಮೊತ್ತದ ಅನುದಾನ ಬರುವುದು. ಇದನ್ನು ಎಲ್ಲ ಸದಸ್ಯರೂ ಅವರ ವಾರ್ಡ್‌ಗಳಿಗೆ ಹಂಚಿಕೊಂಡರೆ ಯಾವುದೇ ಪ್ರಮುಖ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಊರಿನ ಪ್ರಮುಖ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದಿಲ್ಲ. ನೀರು, ದೀಪ, ರಸ್ತೆ ವಿಚಾರದಲ್ಲಿ ಇಂತಹ ಹಂಚಿಕೆ ಸಲ್ಲದು. ಸನಿಹದ ಗ್ರಾಮಗಳ ಜತೆಗೂ ಇಂತಹ ವಿಚಾರದಲ್ಲಿ ಸ್ಪರ್ಧೆ, ಜಿದ್ದು, ದ್ವೇಷ ಮಾಡದೇ ಹೊಂದಾಣಿಕೆ ಅಗತ್ಯ. ನಾನು ಜಿಲ್ಲಾ ಪರಿಷತ್‌ ಸದಸ್ಯನಾಗಿದ್ದಾಗ ಉಳ್ಳಾಲ-ಸೋಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆಯೊಂದು ಇಂತಹ ದ್ವೇಷಕ್ಕೆ ಎಡೆ ಮಾಡಿತ್ತು. ಎಲ್ಲರೂ ನಮ್ಮ ಸಹೋದರರೇ ಎನ್ನುವುದನ್ನು ಅರಿತರೆ ಇಂತಹ ಸಂಕುಚಿತ ಸ್ವಭಾವ ಇರುವುದಿಲ್ಲ.

Advertisement

ನಾನು ಮಂಡಲ ಪಂಚಾಯತ್‌ನಲ್ಲಿದ್ದಾಗ ಗ್ರಾಮ ಕರಣಿಕರೇ ಪಂಚಾಯತ್‌ ಕಾರ್ಯ ದರ್ಶಿಯಾಗಿದ್ದರು. ಭೂಕಂದಾಯದ ಮೂರನೇ ಒಂದಂಶ ಅನುದಾನವಾಗಿ ದೊರೆಯುತ್ತಿತ್ತು. ಊರಿನಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚಾದರೆ ವಿಭಾಗೀಯ ಕಮಿಷನರ್‌ ಹೆಚ್ಚು ಸಹಾಯಧನ ನೀಡುತ್ತಿದ್ದರು. ಅಷ್ಟಲ್ಲದೇ ಕಟ್ಟಡ ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಸಾಲ ರೂಪದಲ್ಲಿ ಹಣ ದೊರೆಯುತ್ತಿತ್ತು. 20 ವರ್ಷಗಳಲ್ಲಿ ಸಂದಾಯ ಮಾಡಬೇಕಿತ್ತು. ಆಗ ಹೆಚ್ಚಿನ ಕಡೆ ಅಭಿವೃದ್ಧಿಯಾಗಿದೆ. ಕೆಲವೆಡೆ ಅಭಿವೃದ್ಧಿಯಾಗದೇ ಇದ್ದರೂ ಹಣ ಪೋಲಾಗಲಿಲ್ಲ. ಈಗ ಅಂತಹ ನಿಯಂತ್ರಣ ಇಲ್ಲದೇ ಅನುದಾನ ಬರುವ ಕಾರಣ ಸದ್ಬಳಕೆ ಕಡಿಮೆಯಾಗುತ್ತದೆ. ಕೆಲವೆಡೆ ಅನುದಾನದಲ್ಲೂ ಭ್ರಷ್ಟಾಚಾರದ ಆರೋಪವಿದೆ. ಜನಸೇವೆಯಲ್ಲಿ ಇದು ಸರಿಯಲ್ಲ.

ಯೋಜನೆಗಳು ಸರಕಾರದ ಹಂತದಲ್ಲಿ ಮಂಜೂ ರಾಗಬೇಕಾದ ಕಾರಣ ಕಷ್ಟ. ಎಲ್ಲ ಪಂಚಾಯತ್‌ಗಳ ಭೌಗೋಳಿಕ, ಸಾಮಾಜಿಕ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ರಾಜ್ಯಾದ್ಯಂತ ಏಕರೂಪದ ಯೋಜನೆ ಜಾರಿ ಕಷ್ಟ. ಗ್ರಾಮದ ವಿಸ್ತೀರ್ಣ, ಜನಸಂಖ್ಯೆ ಮೇಲೆ ಅನುದಾನ ವಿಂಗಡಿಸಿದರೂ ಅಭಿವೃದ್ಧಿಗೆ ತೊಡಕು.

ಏನಾದರೂ ಕೆಲಸ ಆಗಬೇಕಾದರೆ ಯುವ ಜನತೆಯಿಂದಲೇ ಅದು ಸಾಧ್ಯ. ಪಂಚಾಯತ್‌ ಚುನಾವಣೆಯನ್ನು ಅವರಿಗೇ ಬಿಟ್ಟುಬಿಡಿ. ಇದು ನಮ್ಮೂರಿನ ಚುನಾವಣೆ. ಇದರಲ್ಲಿ ನಾಚುವಂತಹ ರಾಜಕೀಯ ಬೇಡ. ದ್ವೇಷದಿಂದ ನೆರೆಮನೆಯವರನ್ನೇ ನೋಡುವಂತಾಗಬಾರದು. ರಾಜಕೀಯ ರಹಿತವಾಗಿ ಊರಿನ ಅಭಿವೃದ್ಧಿಗೆ ಯಾರು ಉತ್ತಮ ಎಂದು ತುಲನೆ ಮಾಡಿ ಆಯ್ಕೆ ಮಾಡಿ. ಆಗ ಗ್ರಾಮಗಳ ಅಭಿವೃದ್ಧಿ ಆಗುತ್ತದೆ.
ಹಳಿ ತಪ್ಪಿದ ರೈಲನ್ನು ಮತ್ತೆ ಹಳಿಗೆ ತಂದು ಕೂರಿಸುವ ಕೆಲಸ ಆಗಬೇಕು. ಸಂವಿಧಾನ ನಮಗೆ ನೀಡಿದ ಹಕ್ಕುಗಳನ್ನು ಚಲಾಯಿಸುವ ಜತೆಗೇ ಸಂವಿಧಾನವೇ ನೀಡಿದ ಜವಾಬ್ದಾರಿ, ಹೊಣೆಗಾರಿಕೆಯನ್ನೂ ನಿಭಾಯಿಸಬೇಕು. ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಮಾತ್ರ ಯುವಜನತೆಯನ್ನು ಸೀಮಿತಗೊಳಿಸದೇ ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗುವ ಯೋಜನೆಗಳ ರೂಪಣೆ, ಅನುಷ್ಠಾನದಲ್ಲೂ ಅವರನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು. ಇದನ್ನು ಹಳ್ಳಿಯಿಂದ ದಿಲ್ಲಿವರೆಗೆ ಪಾಲಿಸಬೇಕು.

ನಮ್ಮ ಹಳ್ಳಿ ಕಡೆ ಒಂದು ಮಾತಿದೆ; “ಮಕ್ಕಳು ಮಾಡಿದ ಕೆಲಸ ಗೊತ್ತಾಗುವುದಿಲ್ಲ, ಕೋಳಿ ತಿಂದದ್ದು ಗೊತ್ತಾಗುವುದಿಲ್ಲ’ ಎಂದು. ಹಾಗೆಯೇ ಯುವಜನತೆಯ ಶಕ್ತಿ. ಅದು ಪ್ರಕಟ ವಾಗುವುದಿಲ್ಲ. ಸೂಕ್ತ ಅವಕಾಶ ದೊರೆಯುವುದಿಲ್ಲ. ಯುವಜನತೆಯಲ್ಲಿ ಅದಮ್ಯವಾದ ಚೈತನ್ಯ ಇರುತ್ತದೆ. ಆದರೆ ಸದ್ಬಳಕೆಯೇ ಆಗುತ್ತಿಲ್ಲ. ಕೆಲವು ಕಡೆ ಪಟ್ಟಭದ್ರ ಹಿತಾಸಕ್ತಿಗಳು ಅವರದ್ದೇ ಯೋಚನೆಗಳನ್ನು ಇತರರ ಮೇಲೆ ಹೇರಿ ಒಪ್ಪುವಂತೆ ಪ್ರಭಾವ ಬೀರುತ್ತಾರೆ. ಇಂತಹ ವಾತಾವರಣ ಮರೆಯಾಗಬೇಕು. ಯುವಕರಿಗೆ ಆದ್ಯತೆ ದೊರೆಯಬೇಕು. ಯುವಜನತೆಗೆ ಅವಕಾಶ ನೀಡುವ ಮೂಲಕ ಅವರ ಶಕ್ತಿಯನ್ನು ಬಳಸಿಕೊಂಡು ಗ್ರಾಮದ ಏಳಿಗೆ ಮಾಡಬೇಕು.
 ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next